ಬಜೆಟ್‍ನಲ್ಲಿ ಅಭಿವೃದ್ಧಿಗಿಂಥಾ ಸಾಲದ ಪ್ರಸ್ತಾಪವೇ ಹೆಚ್ಚು: ಶಾಸಕ ಸುರೇಶ್‍ಗೌಡ

ತುಮಕೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಅಭಿವೃದ್ಧಿ ಮಾದರಿ ಕುರಿತು ಈ ಬಾರಿಯ ತಮ್ಮ ಆಯವ್ಯಯ ಪತ್ರದಲ್ಲಿ ಪ್ರಸ್ತಾಪಿಸಿ ಖ್ಯಾತ ಆರ್ಥಿಕ ತಜ್ಞ ಅಮತ್ರ್ಯ ಸೇನ್ ಅವರ ಮಾತನ್ನು ಉಲ್ಲೇಖಿಸಿದ್ದಾರೆ. ಆದರೆ, ಅವರು ಮಂಡಿಸಿದ ದಾಖಲೆಯ 17 ನೇ ಬಜೆಟ್‍ನಲ್ಲಿ ದಾಖಲೆ ಸಾಲ ಮಾಡಿದ ಮಾಹಿತಿ ಬಿಟ್ಟು ಯಾವ ಅಭಿವೃದ್ಧಿ ಯೋಜನೆಯ ಪ್ರಸ್ತಾಪ ಇದೆ ಎಂದು ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಬಿ.ಸುರೇಶ್‍ಗೌಡರು ವಿಧಾನಸಭೆಯಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಬಜೆಟ್ ಮೇಲಿನ ಭಾಷಣದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್‍ನಲ್ಲಿ ಇರುವ ಲೋಪ ದೋಷಗಳನ್ನು ಎಳೆ ಎಳೆಯಾಗಿ ಬಿಡಿಸಿ ಇಟ್ಟರು. ಇದು ಅತ್ಯಂತ ನಿರಾಶಾದಾಯಕ ಬಜೆಟ್ ಎಂದು ಅವರು ಕೇಳಿದರು.

ಸರ್ಕಾರ ನಡೆಸುವುದು ಸಂಸಾರ ನಡೆಸುವುದು ಎರಡೂ ಒಂದೇ. ಯಾರಾದರೂ ತಮ್ಮ ಮನೆಯನ್ನು ಕೇವಲ ಸಾಲದಲ್ಲಿ ನಡೆಸಿದರೆ ಒಂದು ದಿನ ಸಾಲದ ಸುಳಿಯಲ್ಲಿ ಸಿಲುಕಿ ನೇಣು ಹಾಕಿಕೊಳ್ಳಬೇಕಾದ ಸ್ಥಿತಿಗೆ ಮುಟ್ಟಬೇಕಾಗುತ್ತದೆ. ಈಗ ಸರ್ಕಾರವೂ ಇದೇ ಸ್ಥಿತಿಗೆ ಮುಟ್ಟಿದೆ’ ಎಂದ ಅವರು ಸರ್ವಜ್ಞನ ಸಾಲವನು ಕೊಂಬಾಗ ಹಾಲೋಗರ ಉಂಡಂತೆ, ಸಾಲಿಗರು ಕೊಂಡು ಎಳೆವಾಗ ಕಿಬ್ಬದಿಯ ಕೀಲು ಮುರಿದಂತೆ ವಚನವನ್ನು ಉಲ್ಲೇಖಿಸಿದರು. ಅದೇ ರೀತಿ ಉಪವಾಸ ಇದ್ದರೂ ಪರವಾಗಿಲ್ಲ. ಸಾಲ ಮಾಡಬಾರದು ಎಂಬ ಬ್ರೆನ್ ಫ್ರೆಕ್ಲಿನ್ ದಾರ್ಶನಿಕರ ಮಾತನ್ನೂ ಪ್ರಸ್ತಾಪಿಸಿದರು.

ಮಾಡಿದ ಸಾಲವನ್ನು ಉಚಿತ ಯೋಜನೆಗಳ ಮೇಲೆ ವ್ಯಯ ಮಾಡಿದರೆ ಆಸ್ತಿ ನಿರ್ಮಾಣ ಮಾಡಲು ಆಗದು ಎಂಬ ಸತ್ಯವನ್ನು ಅವರು ಎತ್ತಿ ತೋರಿಸಿದರು. ಜನರನ್ನು ಸರ್ಕಾರ ಸಾಲದ ಸುಳಿಯಲ್ಲಿ ಸಿಲುಕಿಸುತ್ತಿದೆಯೇ ಹೊರತು ಅವರನ್ನು ಸಶಕ್ತಗೊಳಿಸುತ್ತಿಲ್ಲ ಎಂದು ವಿಷಾದಿಸಿದರು.

ತಾವು ಸಾಲದ ಮಿತಿಯನ್ನು ಜಿಎಸ್‍ಡಿಪಿಯ ಶೇಕಡ 25 ರ ಮಿತಿಯಲ್ಲಿಯೇ ಉಳಿಸಿಕೊಂಡಿರುವಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಈ ಬಜೆಟ್‍ನಲ್ಲಿ ಸರ್ಕಾರ ಮಾಡಲು ಹೊರಟಿರುವ ಒಟ್ಟು ಸಾಲ 8,24,389 ಲಕ್ಷ ಕೋಟಿ ರೂಪಾಯಿಗಳು. ಇದು ಜಿಎಸ್‍ಡಿಪಿಯ ಶೇಕಡ 24.94 ರಷ್ಟು ಎಂಬ ಅಂಶವೂ ಇದೇ ಬಜೆಟ್ ಪ್ರತಿಯಲ್ಲಿ ಇದೆ. ಅಂದರೆ, ಈ ಸರ್ಕಾರ ಮುಂದೆ ಬರುವ ನಮ್ಮ ಸರ್ಕಾರಕ್ಕೆ ಬಿಡಿ ತಾವೇ ಮುಂದೆ ಮಂಡಿಸಬಹುದಾದ ಬಜೆಟ್‍ನಲ್ಲಿ ಹೆಚ್ಚಿನ ಸಾಲ ಮಾಡುವ ಅವಕಾಶವನ್ನು ಕೇವಲ ಪಾಯಿಂಟ್ 6 ಕ್ಕೆ ಮಿತಿಗೊಳಿಸಿದೆ. ಇದು ಯಾವ ಆರ್ಥಿಕ ಶಿಸ್ತು, ಯಾವ ಆರ್ಥಿಕ ಮಾದರಿ ಎಂದು ಸುರೇಶ್‍ಗೌಡರು ಸರ್ಕಾರವನ್ನು ಕೆಣಕಿದರು.

ವಿಶ್ವಾಸಾರ್ಹತೆ ಕಳೆದುಕೊಂಡ ಕೆಪಿಎಸ್‍ಸಿ:

‘ಸರ್ಕಾರದಲ್ಲಿ ಹೆಚ್ಚ ಕಡಿಮೆ 3 ಲಕ್ಷ ಹುದ್ದೆಗಳು ಖಾಲಿ ಇವೆ. ಧಾರವಾಡದಲ್ಲಿ ಯುವಕರು ಬೀದಿಗೆ ಇಳಿದರು ಎಂದು 56,000 ಹುದ್ದೆಗಳನ್ನು ನೇರ ನೇಮಕಾತಿ ಮಾಡಲು ಹೊರಟಿದ್ದೀರಿ. ಆದರೆ, ನೇಮಕಾತಿ ಮಾಡುವ ಕೆಪಿಎಸ್ಸಿ ಸಂಸ್ಥೆ ತನ್ನ ವಿಶ್ವಾಸಾರ್ಹತೆಯನ್ನೇ ಕಳೆದುಕೊಂಡಿದೆ. ಹಿಂದಿನ ಅಧಿವೇಶನದಲ್ಲಿಯೂ ನಾನು ಈ ಕುರಿತು ಮಾತನಾಡಿದ್ದೆ. ಯುಪಿಎಸ್ಸಿ ಮಾದರಿಯಲ್ಲಿ ನಾವೂ ಕಾಲ ಕಾಲಕ್ಕೆ ನೇಮಕಾತಿ ಮಾಡಬೇಕು. ಅದಕ್ಕಾಗಿ ಪ್ರಾಮಾಣಿಕ ಮತ್ತು ಪಾರದರ್ಶಕವಾದ ಒಂದು ವ್ಯವಸ್ಥೆಯನ್ನು ರೂಪಿಸಬೇಕು. ಈಗ ಕೆಪಿಎಸ್ಸಿ ನೇಮಕಾತಿಯನ್ನೇ ಮಾಡುವುದಿಲ್ಲ. ಮಾಡಿದರೂ ಫಲಿತಾಂಶ ಪ್ರಕಟವಾದ ಕೂಡಲೇ ಇಡೀ ಕೆಪಿಎಸ್ಸಿ ವಿರುದ್ಧ ಭ್ರಷ್ಠಾಚಾರ ಮತ್ತು ಅಕ್ರಮದ ಆರೋಪಗಳು ಕೇಳಿ ಬರುತ್ತವೆ. ಈ ಸಾರಿಯೂ ಪ್ರಧಾನಿ ವರೆಗೆ ದೂರು ಹೋಗಿದೆ.

ಇದು ಕೇವಲ ಕೆಪಿಎಸ್ಸಿ ಕಥೆ ಮಾತ್ರವಲ್ಲ. ಇಡೀ ಸರ್ಕಾರವೇ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿರುವುದರ ಪರಿಣಾಮ ಇದು. ಸರ್ಕಾರಕ್ಕೆ ಆ ದಿಕ್ಕಿನಲ್ಲಿ ಗಮನವೇ ಇದ್ದಂತೆ ಕಾಣುವುದಿಲ್ಲ. ಕೆಪಿಎಸ್ಸಿ ಆಯ್ಕೆ ಮಾಡಿದ ಅಭ್ಯರ್ಥಿಗಳೇ ರಾಜ್ಯದ ಆಡಳಿತ ಯಂತ್ರವನ್ನು ಸೇರಿಕೊಳ್ಳುತ್ತಾರೆ. ಅವರ ನೇಮಕಾತಿಯ ಮೇಲೆಯೇ ಅನುಮಾನದ ಖಡ್ಗ ಇದ್ದರೆ ಅವರು ಯಾವ ಆಡಳಿತ ಕೊಡುತ್ತಾರೆ? ಅದರಲ್ಲಿ ಪ್ರಾಮಾಣಿಕತೆಯೂ ಇರುವುದಿಲ್ಲ. ಪಾರದರ್ಶಕತೆಯೂ ಇರುವುದಿಲ್ಲ. ಈ ದಿಸೆಯಲ್ಲಿ ನಾವು ಪಕ್ಷಾತೀತವಾಗಿ ಆಲೋಚನೆ ಮಾಡಬೇಕು. ಎಲ್ಲರೂ ಸೇರಿ ಈ ವ್ಯವಸ್ಥೆಯನ್ನು ಸರಿ ಮಾಡಬೇಕು’ ಎಂದು ಅವರು ಆಗ್ರಹಿಸಿದರು.

Leave a Reply

Your email address will not be published. Required fields are marked *