ದಲಿತರ ಪ್ರತಿಭಟನೆಗೆ ಹೆದರಿ ಪೊಲೀಸರ ಬೆಂಗಾವಲಿನಲ್ಲಿ ತೆರಳಿದ ಗೃಹ ಸಚಿವರು

ದಲಿತ ಮುಖಂಡ ನರಸಿಂಹಮೂರ್ತಿ(ಕುರಿಮೂರ್ತಿ) ಕೊಲೆ ಸಂಬಂಧ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವರಾದ ಅರಗ ಜ್ಞಾನೇಂದ್ರ ಅವರು ಸಭೆ ಮುಗಿಸಿ ಹೊರ ಬಂದಾಗ, ದಲಿತರ ಪ್ರತಿಭಟನೆಯನ್ನು ಎದುರಿಸದೆ ಹಾಗೂ ಅವರ ಮನವಿಯನ್ನೂ ಆಲಿಸದೆ ಪೊಲೀಸರ ಬೆಂಗಾವಿಲಿನಲ್ಲಿ ತೆರಳಿದ ಘಟನೆ ನಡೆಯಿತು.

ಗುಬ್ಬಿ ತಾಲ್ಲೂಕಿನಲ್ಲಿ ಕಳೆದ ಎರಡು ತಿಂಗಳಿನಿಂದೀಚೆಗೆ ಮೂವರು ದಲಿತರ ಕೊಲೆಯಾಗಿದ್ದು, ಇಂದು ಗುಬ್ಬಿಯಲ್ಲಿ ಕುರಿಮೂರ್ತಿಯನ್ನು ಹಾಡಹಗಲಿನಲ್ಲೇ ಕೊಚ್ಚಿ ಕೊಲೆ ಮಾಡಲಾಗಿದ್ದು, ಈ ಸಂಬಂಧ ಗೃಹ ಸಚಿವರಿಗೆ ಮನವಿ ಸಲ್ಲಿಸಲು ಮತ್ತು ದಲಿತರಿಗೆ ರಕ್ಷಣೆಗೆ ಮನವಿ ಮಾಡಲು ಕಾದು ನಿಂತಿದ್ದರೂ, ಗೃಹ ಸಚಿವರು ಪತ್ರಕರ್ತರ ಜೊತೆ ಮಾತನಾಡಿ, ಸ್ಥಳದಲ್ಲಿದ್ದ ದಲಿತರ ಜೊತೆ ಮಾತನಾಡದೆ ಪೊಲೀಸರ ಬೆಂಗಾವಲಿನಲ್ಲಿ ತೆರಳಿದಾಗ, ಸಚಿವರ ಕಾರಿನ ಹಿಂದೆಯೇ ಓಡಿ ಹೋಗಿ ಗೃಹ ಸಚಿವರಿಗೆ ದಿಕ್ಕಾರ ಕೂಗಲಾಯಿತು.

ಕೊಲೆಗಾರರ ಸುಳಿವು ಪತ್ತೆ: ಇದಕ್ಕೂ ಮುನ್ನ ಪತ್ರಕರ್ತರ ಜೊತೆ ಮಾತನಾಡಿದ ಗೃಹಸಚಿವ ಅರಗಜ್ಞಾನೇಂದ್ರ ಅವರು ಕೊಲೆಗಾರರ ಸುಳಿವು ದೊರೆತಿದ್ದು, ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ಕೈಗೊಂಡಿದ್ದಾರೆ, ಶೀಘ್ರದಲ್ಲೆ ಕೊಲೆಗಾರರನ್ನು ಬಂದಿಸಲಾಗುವುದು ಎಂದು ತಿಳಿಸಿದರು.

ಗೃಹ ಸಚಿವರು ಜಿಲ್ಲಾ ಆಸ್ಪತ್ರೆಗೆ ತೆರಳಿ ಕೊಲೆಯಾದ ನರಸಿಂಹಮೂರ್ತಿ ಕುಟುಂಬ ವರ್ಗಕ್ಕೆ ಸಾಂತ್ವಾನ ಹೇಳಿದರು.

Leave a Reply

Your email address will not be published. Required fields are marked *