ದೇಶದ ಜಿಡಿಪಿಯ ಬೆಳವಣಿಗೆಯಲ್ಲಿ ಸಾಫ್ಟ್ ವೇರ್ ಕ್ಷೇತ್ರದ ಕೊಡುಗೆ ಅಪಾರ

ತುಮಕೂರು: ನಮ್ಮ ದೇಶದ ಜಿಡಿಪಿಯ ಬೆಳವಣಿಗೆಯಲ್ಲಿ ಸಾಫ್ಟ್ ವೇರ್ ಕ್ಷೇತ್ರದ ಕೊಡುಗೆ ಸಾಕಷ್ಟಿದೆ, ಅಭಿವೃದ್ಧಿಯ ಸ್ಫರ್ಧೆಯಲ್ಲಿರುವ ಪ್ರಪಂಚದಲ್ಲಿ ನಮ್ಮ ದೇಶ ಬೇರೆ ದೇಶಗಳೊಂದಿಗೆ ಸ್ಫರ್ಧೆಯ ಮುಂಚೂಣೆಯಲ್ಲಿ ಇದೆ ಎಂದರೆ ಅದಕ್ಕೆ ಮುಖ್ಯ ಕಾರಣ ಭಾರತದಲ್ಲಾದ ತಂತ್ರಜ್ಞಾನದ ಕ್ಷೇತ್ರದಲ್ಲಾದ ಬೆಳವಣಿಗೆಯಿಂದ ಎಂದು ಸಾಹೇ ವಿವಿಯ ಕುಲಾಧಿಪತಿಗಳು ಹಾಗೂ ರಾಜ್ಯದ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ತಿಳಿಸಿದರು.

ನಗರದ ಹೊರವಲಯದಲ್ಲಿರುವ ಕ್ಯಾತ್ಸಂತ್ರದ ಶ್ರೀ ಸಿದ್ಧಾರ್ಥ ಸ್ಕೂಲ್ ಆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಿದ್ದ ಹಳೇ ವಿದ್ಯಾರ್ಥಿಗಳ ಸಮಾಗಮ “ಐಕ್ಯಂ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಇಂಜಿನಿಯರ್‍ಗಳು ಭಾರತವನ್ನು ಬಲಿಷ್ಟ ಭಾರತವನ್ನಾಗಿ ಮಾಡಲು ಬಹಳಷ್ಟು ಶ್ರಮಿಸುತ್ತಿದ್ದಾರೆ. ಇಂಜಿನಿಯರ್ಸ್ ಗಳು ಅಭಿವೃದ್ಧಿಯ ಯೋಜನೆಯ ಕನಸನ್ನು ಕಂಡು ಅದನ್ನು ನನಸಾಗಿಸಲು ಪ್ರತಿನಿತ್ಯ ದುಡಿಯುತ್ತಿದ್ದಾರೆ. ಇಂದು ಹೆಚ್ಚಾಗುತ್ತಿರುವ ಕೃತಕ ಬುದ್ದಿಮತ್ತೆಯು ಜಗತ್ತನ್ನು ಆಳುತ್ತವೆ, ಇದನ್ನು ನಮ್ಮೊಂದಿಗೆ ಅಳವಡಿಸಿಕೊಂಡು ಮುಂದೆ ಸಾಗಿದರೆ ನಮ್ಮ ವೇಗ ಹೆಚ್ಚುತ್ತದೆ ಎಂದು ಹೇಳಿದರು.

ಸರ್ಕಾರಗಳು ಯೋಜನೆಗಳನ್ನು ಸಿದ್ದಗೊಳಿಸುವಾಗ ಯಾವಾಗಲೂ ಮುಂದಿನ ತಲೆಮಾರುಗಳನ್ನು ಗಮನದಲ್ಲಿ ಇಟ್ಟುಕೊಂಡು ಯೋಜನೆಯನ್ನು ಸಿದ್ದಪಡಿಸುತ್ತದೆ. ಆದರೆ ಇಂದು ಯುವಜನತೆ ಚಿಂತನೆಗಳು ಸಾಕಷ್ಟು ರೀತಿಯಲ್ಲಿ ಬದಲಾವಣೆಯಾಗುತ್ತಿದೆ ಯುವಜನತೆ ಅತೀ ವೇಗವಾಗಿ ಕೆಟ್ಟ ಕೆಲಸಗಳಿಗೆ ಆಕರ್ಷಿತರಾಗುತ್ತಿರುವುದು ವಿಪರ್ಯಾಸ. ಇವರನ್ನು ತಿದ್ದಿ ತೀಡಿ ಸರಿದಾರಿಗೆ ತರುವ ಕೆಲಸಗಳಾಗಬೇಕು ಇಲ್ಲವಾದರೆ ಮುಂದಿನ ಜನಾಂಗ ತೊಂದರೆಯಾಗುತ್ತದೆ ಎಂದು ಡಾ. ಜಿ. ಪರಮೇಶ್ವರ್ ಕಳವಳ ವ್ಯಕ್ತಪಡಿಸಿದರು.

ಹಳೇ ವಿದ್ಯಾರ್ಥಿಗಳು ನಮ್ಮ ಕಾಲೇಜಿನ ರಾಯಬಾರಿಗಳು, ಹಳೇ ವಿದ್ಯಾರ್ಥಿಗಳು ಕಾಲೇಜಿನ ಹೆಸರನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ನಿಲ್ಲುವಂತೆ ನೋಡಿಕೊಳ್ಳುವವರು. ಹಳೇ ವಿದ್ಯಾರ್ಥಿಗಳು ಪ್ರತೀ ವರ್ಷವೂ ಕಾಲೇಜಿಗೆ ಹಿಂತಿರುಗಿ ತಮ್ಮ ಶೈಕ್ಷಣಿಕ ಸಲಹೆಗಳನ್ನು ನೀಡುವುದರ ಮೂಲಕ ಕಾಲೇಜಿನ ಬೆಳವಣಿಗೆಗೆ ಸಹಕಾರಿಯಾಗಿರಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಹಳೇವಿದ್ಯಾರ್ಥಿಗಳು ತಮ್ಮ ಕಾಲೇಜಿನ ಹಳೇ ನೆನಪುಗಳನ್ನು ಹಂಚಿಕೊಂಡು ಸಂಭ್ರಮಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಜೀವ್ ಕುಮಾರ್, ಹಳೇ ವಿದ್ಯಾರ್ಥಿಗಳಾದ ನವ್ದೀಪ್ ಕೌರ್, ಚಂದ್ರಶೇಖರ್, ಚೇತನ್, ಕಿರಣ್, ಶ್ರೀನಿವಾಸ್‍ಮೂರ್ತಿ, ಸಂಯೋಜಕರಾದ ರೇಖಾ, ಹಾಗೂ ಎಲ್ಲಾ ವಿಭಾಗದ ಪ್ರಾಧ್ಯಾಪಕರು, ಆಡಳಿತ ವರ್ಗದವರು, ಕಾಲೇಜಿನ ಹಳೇ ವಿದ್ಯಾರ್ಥಿಗಳು ಹಾಜರಿದ್ದರು.

Leave a Reply

Your email address will not be published. Required fields are marked *