ತುಮಕೂರು: ಅವೈಜ್ಞಾನಿಕ ವರದಿ ಸಿದ್ಧಪಡಿಸಿ ರೈತರ ಫಲವತ್ತಾದ ಜಮೀನು ವಶಪಡಿಸಿಕೊಂಡು ನಂದಿಹಳ್ಳಿ-ಮಲ್ಲಸಂದ್ರ-ವಸಂತನರಸಾಪುರ ರಿಂಗ್ ರಸ್ತೆ ನಿರ್ಮಾಣದ ಯೋಜನೆಯನ್ನು ವಿರೋಧಿಸಿರುವ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್, ಪ್ರಾಣ ಹೋದರೂ ಸರಿ ಈ ಯೋಜನೆಗೆ ರೈತರು ಭೂಮಿ ಕೊಡುವುದಿಲ್ಲ. ಯೋಜನೆ ವಿರುದ್ಧ ದೊಡ್ಡ ಹೋರಾಟ ನಡೆಸುವುದಾಗಿ ಹೇಳಿದರು.
ಶನಿವಾರ ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಸಂತ್ರಸ್ತ ರೈತರ ಸಭೆಯಲ್ಲಿ ಮಾತನಾಡಿದ ಗೌರಿಶಂಕರ್, ಈ ರಿಂಗ್ ರಸ್ತೆಯಿಂದ 26 ಹಳ್ಳಿಗಳ 750ಕ್ಕೂ ಹೆಚ್ಚು ಕುಟುಂಬದವರು ತಮ್ಮ ಜೀವನಾಧಾರವಾಗಿರುವ ಕೃಷಿ ಜಮೀನು ಕಳೆದುಕೊಳ್ಳಬೇಕಾಗುತ್ತದೆ. ಕೆಲವು ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗುತ್ತಿದೆ. ರೈಲ್ವೆ ಇಲಾಖೆಯಲ್ಲಿ ಉತ್ತಮ ಕೆಲಸ ಮಾಡುತ್ತಿರುವ ಕೇಂದ್ರ ಸಚಿವ ವಿ.ಸೋಮಣ್ಣನವರು ರೈತರ ವಿಚಾರದಲ್ಲಿ ನಿರ್ಲಕ್ಷ ಮಾಡುತ್ತಿರುವುದು ಸರಿಯಲ್ಲ ಎಂದರು.
ಯಾವುದೇ ಯೋಜನೆ ಆರಂಭಿಸುವ ಮುನ್ನ ಜಮೀನು ಸ್ವಾಧೀನಪಡಿಸಿಕೊಳ್ಳುವ ಸಂದರ್ಭದಲ್ಲಿ ಆಯಾ ಭಾಗದ ಗ್ರಾಮಸ್ಥರ ಸಭೆ ಕರೆದು ಅವರ ಮನವೊಲಿಸಿ, ಒಪ್ಪಿಗೆ ಪಡೆದು ರೂಪಿಸಿಬೇಕು. ಆದರೆ ರಿಂಗ್ ರಸ್ತೆ ನಿರ್ಮಾಣ ಯೋಜನೆಯಲ್ಲಿ ರೈತರಿಗೆ ಯಾವುದೇ ಮಾಹಿತಿ ನೀಡದೆ, ಜಮೀನು ಸ್ವಾಧೀನಕ್ಕೆ ಮುಂದಾಗಿರುವುದು ರೈತ ವಿರೋಧಿ ಕ್ರಮ. ನಿಮಗೆ ಮತ ಹಾಕಿ ಗೆಲ್ಲಿಸಿದ ಜನರ ಬದುಕನ್ನು ಕಸಿಯಬೇಡಿ, ಸಚಿವ ಸೋಮಣ್ಣ, ಈ ಭಾಗದ ಶಾಸಕ ಸುರೇಶ್ಗೌಡರು ರೈತರು ರೈತರಪರ ನಿಲ್ಲಬೇಕು. ರೈತರ ವಿರೋಧವಿದ್ದರೂ ಈ ಯೋಜನೆಯನ್ನು ಮಾಡುವ ಹಟ ಬಿಡಬೇಕು ಎಂದು ಒತ್ತಾಯಿಸಿದರು.
ನೀವು ರಸ್ತೆ ಮಾಡಬೇಕೆಂದರೆ ದಾಬಸ್ಪೇಟೆ-ಗುಬ್ಬಿ ನಡುವೆ 100 ಅಡಿ ರಸ್ತೆ ನಕಾಶೆ ಇದೆ. ಅಲ್ಲಿ ರಸ್ತೆ ಮಾಡಿ. ಈಗ ಉದ್ದೇಶಿಸಿರುವ ರಿಂಗ್ ರಸ್ತೆಗೆ ಸ್ವಾಧೀನ ಪಡೆಯಲು ಹೊರಟ ಜಮೀನಿನಲ್ಲಿ ರೈತರ ಜೀವನಾಧಾರಿತವಾದ ಶೇಕಡ 72ರಷ್ಟು ತೆಂಗು, ಅಡಿಕೆ, ಮಾವು, ಇತರೆ ಹಣ್ಣಿನ ಬೆಳೆ, ಬಾವಿ, ಬೋರ್ವೆಲ್ಗಳು ಹಾಗೂ ಫಲವತ್ತಾದ ಭೂಮಿ ಇದ್ದರೂ ವರದಿಯಲ್ಲಿ ಒಣಭೂಮಿ ಎಂದು ತಪ್ಪು ಮಾಹಿತಿ ನೀಡಲಾಗಿದೆ. ಸಂತ್ರಸ್ತ ಕುಟುಂಬಗಳೊಂದಿಗೆ ವಿವರವಾದ ಸಮೀಕ್ಷೆ, ಮಾತುಕತೆ, ಗುಂಪು ಚರ್ಚೆಗಳು ಹಾಗೂ ಹಳ್ಳಿ ಮಟ್ಟದಲ್ಲಿ ಅಧ್ಯಯನಗಳು ನಡೆದಿವೆ ಎಂದು ಸುಳ್ಳು ಮಾಹಿತಿ ನೀಡಲಾಗಿದೆ. ಈ ಯೋಜನೆಯಿಂದ ದೊಡ್ಡ ಪ್ರಮಾಣದಲ್ಲಿ ಮರಗಳು, ಸಸಿಗಳು ನಾಶವಾಗುತ್ತವೆ. ಜಮೀನು ಕಳೆದುಕೊಳ್ಳುವ ರೈತರು ಬದುಕನ್ನೂ ಕಳೆದುಕೊಳ್ಳಬೇಕಾಗುತ್ತದೆ ಎಂದು ಡಿ.ಸಿ.ಗೌರಿಶಂಕರ್ ಹೇಳಿದರು.
ರಿಂಗ್ ರಸ್ತೆ ನಿರ್ಮಾಣಕ್ಕೆ ಮಾಡಿರುವ ಅವೈಜ್ಞಾನಿಕ ಡಿಪಿಆರ್ ರೈತರ ಪಾಲಿಗೆ ಮರಣಶಾಸನವಾಗಿದೆ. ಯಾವುದೇ ಕಾರಣಕ್ಕೂ ಇಲ್ಲಿ ರಸ್ತೆ ಮಾಡಲು ಬಿಡುವುದಿಲ್ಲ, ರೈತರು, ಸಾಹಿತಿಗಳು, ಸಂಘಸಂಸ್ಥೆಗಳೊಂದಿಗೆ ಸೇರಿ ದೊಡ್ಡ ಮಟ್ಟದ ಹೋರಾಟ ರೂಪಿಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ರೈತ ಮುಖಂಡ ಭೈರಸಂದ್ರ ರಮೇಶ್ ಮಾತನಾಡಿ, ಉದ್ದೇಶಿತ ರಸ್ತೆಗೆ ಹೋಗುವ ಭಾಗದಲ್ಲಿ ಅಡಿಕೆ, ತೆಂಗು, ಮಾವು, ಬಾವಿ, ಕೆರೆ ಇವೆ ಇವೆಲ್ಲಾ ಸ್ವಾಧೀನಗೊಂಡು ರೈತರ ಬದುಕು ನಾಶವಾಗುತ್ತದೆ. ಅದೆಷ್ಟೇ ಹಣ ನೀಡಿದರೂ ಸರಿಯೆ ನಾವು ಜಮೀನು ನೀಡುವುದಿಲ್ಲ, ಪ್ರಾಣ ಕೊಟ್ಟಾದರೂ ಸರಿ ಜಮೀನು ಉಳಿಸಿಕೊಳ್ಳುತ್ತೇವೆ ಎಂದರು.
ಮತ್ತೊಬ್ಬ ಮುಖಂಡ ಚಿಕ್ಕಹೊಸೂರು ಲಿಂಗರಾಜು ಮಾತನಾಡಿ, ರೈತರೊಂದಿಗೆ ಯಾವುದೇ ಚರ್ಚೆ ಮಾಡದೆ ದಬಾಳಿಕೆಯಿಂದ ಜಮೀನು ಕಸಿಯಲು ಸರ್ಕಾರ ಹೊರಟಿದೆ. ಇದಕ್ಕೆ ಅವಕಾಶ ನೀಡುವುದಿಲ್ಲ. ನಮಗೆ ಕೃಷಿ ಬಿಟ್ಟರೆ ಬೇಕೆ ಕಸುಬು ಗೊತ್ತಿಲ್ಲ, ಕೃಷಿ ಜಮೀನು ಕಳೆದುಕೊಂಡು ನಾವು ಹೇಗೆ ಬದುಕುವುದು ಎಂದು ಸರ್ಕಾರವನ್ನು ಪ್ರಶ್ನಿಸಿದರು.
ರೈತ ಮುಖಂಡರಾದ ಭೈರಸಂದ್ರ ಸುರೇಶ್, ಪಾಲನೇತ್ರಯ್ಯ, ಪ್ರಕಾಶ್, ಕೌತಮಾರನಹಳ್ಳಿ ಧರ್ಮಯ್ಯ, ಹೆತ್ತೇನಹಳ್ಳಿ ಮಂಜುನಾಥ್, ಕೌತಮಾರನಹಳ್ಳಿ ಮಲ್ಲೇಶ್, ಕುಂಕುಮನಹಳ್ಳಿ ರಮೇಶ್ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು.