ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಶಿಕ್ಷಣ, ಸಂಸ್ಕøತಿ, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳ ಮೇಲೆ ನಡೆಯುತ್ತಿರುವ ಅಸಂವಿಧಾನಿಕ ದಬ್ಬಾಳಿಕೆಗಳನ್ನು ಖಂಡಿಸಿ ‘ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಪ್ರತಿಷ್ಠಾನದ ಅಧ್ಯಕ್ಷ ಸ್ಥಾನಕ್ಕೆ ಮತ್ತು ಸದಸ್ಯ ಸ್ಥಾನಗಳಿಗೆ ರಾಜೀನಾಮೆ ನೀಡುತ್ತಿರುವುದಾಗಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರಿಗೆ ರಾಜೀನಾಮೆ ಪತ್ರ ಬರೆದಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ ದಬ್ಬಾಳಿಕೆಗಳನ್ನು ಕಂಡು ಆತಂಕ ಮತ್ತು ಭಯ ಉಂಟಾಗಿದೆ, ಕೋಮು ದ್ವೇಷವನ್ನು ರಾಜಾರೋಷವಾಗಿ ಮಾತನಾಡುತ್ತಾ ಆಟಾಟೋಪ ಮೆರೆಯುತ್ತಾ ಪ್ರಜಾಪ್ರಭುತ್ವದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಉಂಟು ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳದೆ ಸರ್ಕಾರ ಮೌನವಹಿಸಿರುವುದು ಇನ್ನೂ ಹೆಚ್ಚಿನ ಆತಂತ-ಭಯ ಉಂಟು ಮಾಡುತ್ತಿದೆ ಎಂದಿದ್ದಾರೆ.

ಇವೆಲ್ಲಾ ಬೆಳವಣಿಗೆಗಳಿಂದ ಬೇಸತ್ತು ನಾವುಗಳು “ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಪ್ರತಿಷ್ಠಾನ”ದ ಅಧ್ಯಕ್ಷನಾದ ನಾನು ಮತ್ತು ಸದಸ್ಯರುಗಳಾದ ಡಾ.ಹೆಚ್.ಎಸ್.ರಾಘವೇಂದ್ರರಾವ್, ಡಾ.ಚಂದ್ರಶೇಖರ ನಂಗಲಿ, ಮತ್ತು ಡಾ.ನಟರಾಜ ಬೂದಾಳು ರಾಜೀನಾಮೆ ನೀಡುತ್ತಿರುವುದಾಗಿ ಎಸ್.ಜಿ.ಸಿದ್ದರಾಮಯ್ಯ ರಾಜೀನಾಮೆ ಪತ್ರ ಕಳಿಸಿದ್ದು, ರಾಜೀನಾಮೆ ಸ್ವೀಕರಿಸಿ ಜವಾಬ್ದಾರಿಯಿಂದ ಬಿಡುಗಡೆಗೊಳಿಸುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಕಳಿಸಿದ್ದಾರೆ.