ಇಜ್ಜಿಲಿಗೆ ಚಿನ್ನದ ಹೊಳಪು ಕೊಟ್ಟ ರಮ್ಯ ಗಣಿತಶಾಸ್ತ್ರದ ಲ್ಲಿ 5 ಬಂಗಾರದ ಪದಕ ಪಡೆದ ತುಮಕೂರು ವಿವಿ ವಿದ್ಯಾರ್ಥಿನಿ


ತುಮಕೂರು : ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಗಣಿತ ಶಾಸ್ತ್ರದಲ್ಲಿ 5 ಚಿನ್ನದ ಪದಕಗಳನ್ನು ಪಡೆದಿರುವ ರಮ್ಯ.ಜಿ. ಅವರು, ಅವರ ತಂದೆ ಮಾಡುವ ಉದ್ಯೋಗಕ್ಕೆ ಚಿನ್ನದ ಹೊಳಪನ್ನು ಕೊಟ್ಟು ಅವರ ತಂದೆ-ತಾಯಿ ಮತ್ತು ವಿ.ವಿ.ಗೆ ಹೆಸರು ತಂದಿದ್ದಾರೆ. ಈ ಸಾಧನೆ ಮಾಡಲು ನನಗೆ ನನ್ನ ತಂದೆ-ತಾಯಿ ಮತ್ತು ಅಧ್ಯಾಪಕರುಗಳ ಪ್ರೋತ್ಸಾಹವೇ ಕಾರಣ ಎಂದು ಸಂತೋಷ ವ್ಯಕ್ತಪಡಿಸಿದರು.

ಮೈತ್ರಿನ್ಯೂಸ್ ಪತ್ರಿಕೆಯೊಂದಿಗೆ ಸಂತೋಷ ಹಂಚಿಕೊಂಡ ರಮ್ಯ.ಜಿ ಅವರು, ನಾನು ಯಾವಾಗಲೂ ಏನು ಓದುತ್ತಿರಲಿಲ್ಲ, ತರಗತಿಗಳಲ್ಲಿ ಮಾಡುತ್ತಿದ್ದ ಪಾಠವನ್ನು ಗಮನವಿಟ್ಟು ಕೇಳುತ್ತಿದ್ದೆ, ಪರೀಕ್ಷೆ ಒಂದು ತಿಂಗಳು ಇದೆ ಎನ್ನುವಾಗ ಮಾಮೂಲಿಯಂತೆ ತಯಾರಿ ನಡೆಸುತ್ತಿದೆ, ನಾನು ಈ ಸಾಧನೆ ಮಾಡಲು ನನ್ನ ಅಧ್ಯಾಪಕರುಗಳಾದ ಪ್ರೊ.ಟಿ.ಆರ್.ರಂಗನಾಥ್, ಪ್ರೊ.ಪಾಟೀಲ್ ಮಲ್ಲಿಕಾರ್ಜುನಯ್ಯನವರು, ಪ್ರೊ.ಬೋರೆಗೌಡರವರು, ಹಾಗೂ ಶ್ರೀಮತಿ ಚಂದ್ರಾಣಿ ಭಾಷ್ಯ ಅವರುಗಳೇ ಕಾರಣವಾಗಿದ್ದಾರೆ ಎನ್ನುತ್ತಾರೆ.

ನಮ್ಮ ಅಧ್ಯಾಪಕರುಗಳು ಉತ್ತಮ ಭೋದನೆ, ನೋಟ್ಸ್, ಮತ್ತು ಕಾಲ ಕಾಲಕ್ಕೆ ಹೇಗೆ ಓದಬೇಕೆಂದು ನಮಗೆ ಮನದಟ್ಟು ಮಾಡುತ್ತಿದ್ದರು, ಪರೀಕ್ಷೆಗಿಂತ ಒಂದು ತಿಂಗಳು ಮುಂಚೆಯೆ ಪಾಠ ಪ್ರವಚನಗಳನ್ನು ಮುಗಿಸಿ ನಮಗೆ ಓದಲು ಅನುವು ಮಾಡಿಕೊಡುತ್ತಿದ್ದರು. ಇದರಿಂದ ಪರೀಕ್ಷೆಗೆ ತಯಾರಿ ನಡೆಸಲು ತುಂಬಾ ಅನುಕೂಲವಾಗುತ್ತಿತ್ತು ಎನ್ನುತ್ತಾರೆ.
ಮುಂದೆ ನಾನು ಪಿ.ಹೆಚ್.ಡಿ. ಮಾಡುವ ಅಭಿಲಾಸೆ ಇದ್ದು, ಈಗಿನಿಂದಲೇ ನೀಟ್ ಪರೀಕೆಗೆ ತಯಾರಿ ನಡೆಸಿದ್ದೇನೆ ಎನ್ನುತ್ತಾರೆ ರಮ್ಯಾ ಅವರು.
ರಮ್ಯಾ ತಂದೆಯವರಾದ ಗಿರೀಶ್ ಅವರು ಡಿಪ್ಲೋಮಾ ಓದಿದ್ದು. ಗುಬ್ಬಿಯಲ್ಲಿ ತೆಂಗಿನ ಕಾಯಿ ಚಿಪ್ಪನ್ನು ಸುಟ್ಟು ಇಜ್ಜಿಲು ಮಾಡುವ ವೃತ್ತಿಯನ್ನು ಗುಬ್ಬಿಯಲ್ಲಿ ಮಾಡುತ್ತಿದ್ದಾರೆ. ತಾಯಿ ಉಷಾರಾಣಿಯವರು ಪಿ.ಯು.ಸಿ ಓದಿದವರಾಗಿದ್ದು, ಮಗಳು ಗಣಿತ ಶಾಸ್ತ್ರದ ಸ್ನಾತಕೋತ್ತರ ಪದವಿಯಲ್ಲಿ ಐದು ಚಿನ್ನದ ಪದಕಗಳನ್ನು ಪಡೆದಿರುವುದನ್ನು ನಂಬಲೇ ಆಗುತ್ತಿಲ್ಲ, ಮಗಳ ಓದಿಗೆ ನಾವುಗಳು ಎಲ್ಲಾ ಪ್ರೋತ್ಸಾಹವನ್ನು ನೀಡಿದ್ದೇವೆ ಎಂದು ಸಂತೋಷ ವ್ಯಕ್ತ ಪಡಿಸುತ್ತಾರೆ.

ಜುಲೈ 5ರಂದು ಘಟಿಕೋತ್ಸವ : ವಿಶ್ವವಿದ್ಯಾನಿಲಯದ 15ನೇ ವಾರ್ಷಿಕ ಘಟಿಕೋತ್ಸವವು ಜುಲೈ 5 ರ ಮಂಗಳವಾರ ಬೆಳಗ್ಗೆ 11-30 ಗಂಟೆಗೆ ವಿಶ್ವವಿದ್ಯಾನಿಲಯದ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿ ಸಭಾಂಗಣದಲ್ಲಿ ಜರುಗಲಿದೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ (ಪ್ರಭಾರ) ಪ್ರೊ. ಕೇಶವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.


ರಾಜ್ಯಪಾಲರೂ ತುಮಕೂರು ವಿಶ್ವವಿದ್ಯಾನಿಲಯದ ಕುಲಾಧಿಪತಿಗಳೂ ಆಗಿರುವ ಸನ್ಮಾನ್ಯ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ಸಿ. ಎನ್. ಅಶ್ವತ್ಥನಾರಾಯಣ, ಮಾನ್ಯ ಉನ್ನತ ಶಿಕ್ಷಣ ಮತ್ತು ಐಟಿ-ಬಿಟಿ, ವಿಜ್ಞಾನ-ತಂತ್ರಜ್ಞಾನ ಮತ್ತು ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಗಳ ಸಚಿವರು, ಹಾಗೂ ತುಮಕೂರು ವಿಶ್ವವಿದ್ಯಾನಿಲಯದ ಸಹಕುಲಾಧಿಪತಿಗಳು, ಇವರು ಉಪಸ್ಥಿತರಿರುವರು.


ಪ್ರೊ. ಸುಷ್ಮಾ ಯಾದವ್, ಸದಸ್ಯರು, ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ), ಹಾಗೂ ವಿಶ್ರಾಂತ ಸಹ ಕುಲಪತಿಗಳು, ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯ, ನವದೆಹಲಿ, ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು ಘಟಿಕೋತ್ಸವ ಭಾಷಣ ಮಾಡಲಿರುವರು. ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ (ಪ್ರಭಾರ) ಪ್ರೊ. ಕೇಶವ ವಿಶ್ವವಿದ್ಯಾನಿಲಯದ ವಾರ್ಷಿಕ ವರದಿ ಮಂಡಿಸಲಿರುವರು.


ಈ ಬಾರಿಯ ಘಟಿಕೋತ್ಸವದಲ್ಲಿ ಒಟ್ಟು ಒಟ್ಟು 10,386 ಅಭ್ಯರ್ಥಿಗಳು ಪದವಿ ಸ್ವೀಕರಿಸಲು ಅರ್ಹರಾಗಿದ್ದಾರೆ. ಇವರಲ್ಲಿ 03 ಅಭ್ಯರ್ಥಿಗಳು ಡಿ.ಲಿಟ್ ಪದವಿ, 74 ಅಭ್ಯರ್ಥಿಗಳು ಪಿಎಚ್.ಡಿ. ಪದವಿ, 1,522 ಅಭ್ಯರ್ಥಿಗಳು ಸ್ನಾತಕೋತ್ತರ ಹಾಗೂ 8,787 ಅಭ್ಯರ್ಥಿಗಳು ಸ್ನಾತಕ ಪದವಿಗೆ ಅರ್ಹರಾಗಿರುತ್ತಾರೆ. ವಿಶ್ವವಿದ್ಯಾನಿಲಯವು ಎಲ್ಲಾ ಸ್ನಾತಕೋತ್ತರ ಪದವಿಗಳಿಗೆ ತಲಾ ಐದು ರ್ಯಾಂಕುಗಳನ್ನು (ಎಂಸಿಎ ಪದವಿ-03 ರ್ಯಾಂಕ್), ಬಿಎ,ಬಿಎಸ್‍ಸಿ,ಬಿಕಾಂ, ಬಿಬಿಎಂ,ಬಿಇಡಿ,ಬಿಎಸ್‍ಡಬ್ಲ್ಯೂ (ಸೆಮಿಸ್ಟರ್ ಪದ್ಧತಿ)ಗಳಿಗೆ ತಲಾ ಹತ್ತು ರ್ಯಾಂಕುಗಳನ್ನು, ಬಿಎಫ್‍ಎ-01 ರ್ಯಾಂಕ್, ಬಿ.ವೋಕ್. -03, ಹಾಗೂ ಬಿಎ ಇಂಟಗ್ರೇಟೆಡ್ ಕನ್ನಡ ಪಂಡಿತ್‍ಗೆ 01 ರ್ಯಾಂಕ್ ಘೋಷಿಸಿದೆ. ಒಟ್ಟು 72 ವಿದ್ಯಾರ್ಥಿಗಳಿಗೆ 96 ಚಿನ್ನದ ಪದಕಗಳನ್ನು ಹಾಗೂ ಆರು ನಗದು ಬಹುಮಾನಗಳನ್ನು ವಿಶ್ವವಿದ್ಯಾನಿಲಯವು ಈ ಬಾರಿಯ ಘಟಿಕೋತ್ಸವದಲ್ಲಿ ಪ್ರದಾನಮಾಡಲಿದೆ.


ಪತ್ರಿಕಾಗೋಷ್ಠಿಯಲ್ಲಿ ಪರೀಕ್ಷಾಂಗ ಕುಲಪತಿಗಳಾದ ಪ್ರೊ. ನಿರ್ಮಲರಾಜು, ಕುಲಸಚಿವರಾದ ಪ್ರೊ.ಕೆ.ಚಿತ್ತಪ್ಪ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *