ತಂತ್ರಜ್ಞಾನ ಪ್ರಾಭಲ್ಯವಿರುವ ಯುಗದಲ್ಲಿ ಸರ್ವವ್ಯಾಪಿಯಾಗಿರುವ ಮೊಬೈಲ್ ಪೋನ್ ಗಳ ಅತಿಯಾದ ಬಳಕೆ ವಿದ್ಯಾರ್ಥಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂಬ ಆತಂಕವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಂ.ಎನ್. ಚೇತನಕುಮಾರ್ ವ್ಯಕ್ತಪಡಿಸಿದರು.
ಅವರು ತುಮಕೂರಿನ ಬಾಲಭವನದಲ್ಲಿ ಬಾಲಭವನ ಸಮಿತಿ ಹಾಗೂ ಝೆನ್ ಟೀಮ್ ವತಿಯಿಂದ ಆಯೋಜಿಸಿದ್ದ ಮೈಸೂರು ರಂಗಾಯಣದ ಮೈ ಫ್ಯಾಮಿಲಿ ನಾಟಕವನ್ನು ಚೆಂಡೆ ಬಾರಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮೊಬೈಲ್ ಪೋನ್ ಗಳಿಂದ ಸಿಗುವ ಮನರಂಜನೆಯ ಆಕರ್ಷಣೆಯು ಏಕಾಗ್ರತೆಗೆ ಭಂಗ ತರುತ್ತದೆ ಎಂದ ಅವರು ಇದರಿಂದಾಗಿ ಮಕ್ಕಳ ಕಡಿಮೆ ಶೈಕ್ಷಣಿಕ ಕಾರ್ಯಕ್ಷಮತೆಗೆ ಕಾರಣವಾಗುತ್ತದೆ ಎಂದು ವಿಷಾದಿಸಿದರು.
ಮೊಬೈಲ್ ಪೋನ್ ಗಳ ಅತಿಯಾದ ಬಳಕೆ ವ್ಯಸನದಂತಹ ನಡಾವಳಿಕೆಗೆ ಕಾರಣವಾಗುತ್ತದೆ. ಹೀಗಾಗಿ ಯಾವ ವಯಸ್ಸಿನಲ್ಲಿ ಮಕ್ಕಳಿಗೆ ಮೊಬೈಲ್ ಪೋನ್ ನೀಡಬೇಕು ಎಂಬುದನ್ನು ಪೆÇೀಷಕರು ನಿರ್ಧರಿಸಬೇಕು ಎಂದು ಸಲಹೆ ನೀಡಿದರು.
ಸಂವಹನಕ್ಕಾಗಿ ಅತಿಯಾದ ಮೊಬೈಲ್ ಅನ್ನು ಬಳಸುವುದರಿಂದ ಮಕ್ಕಳ ಮಾನಸಿಕ ಬೆಳವಣಿಗೆ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ವರ್ಚುವಲ್ ಸಂವಹನಗಳಲ್ಲಿ ಹೆಚ್ಚಿನ ಸಮಯವನ್ನು ಕಳೆಯುವುದರಿಂದ ಮುಖಾಮುಖಿ ಸಂವಹನದ ಅವಕಾಶಗಳನ್ನು ಮಕ್ಕಳು ಕಳೆದುಕೊಳ್ಳುತ್ತಿದ್ದಾರೆ ಎಂದರು.
ಮೊಬೈಲ್ ನ ಅತಿಯಾದ ಬಳಕೆ ಆತಂಕ, ಖಿನ್ನತೆ ಮತ್ತು ಒಂಟಿತನ ಸೇರಿದಂತೆ ವಿವಿಧ ಮಾನಸಿಕ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು ಎಂದರು. ಸ್ಮಾರ್ಟ್ ಪೋನ್ ಗಳ ವ್ಯಾಪಕ ಬಳಕೆ ಶೈಕ್ಷಣಿಕ ಪ್ರಗತಿಗೆ ಸವಾಲು ಒಡ್ಡುತ್ತಿದೆ ಎಂದರು.
ಕೆಲವು ವರ್ಷಗಳ ಹಿಂದೆ ಮೊಬೈಲ್ ಉಳ್ಳವರ ಸೊತ್ತಾಗಿತ್ತು. ಆದರೆ ಈಗ ಮೊಬೈಲ್ ಚಿಣ್ಣರ ಆಟಿಕೆಯ ವಸ್ತುವಾಗಿ ಯುವಕರೊಡಗೂಡಿ ವಯೋವೃದ್ಧರವರೆಗೆ ದಿನ ಬಳಕೆ ವಸ್ತುವಾಗಿದೆ ಎಂದರು. ಒಂದು ಮೊಬೈಲ್ ಬಳಸುವ ಕೆಲ ವಿದ್ಯಾರ್ಥಿಗಳು ಈಗ ಎರಡೆರೆಡು ಮೊಬೈಲï ಗಳನ್ನು ಬಳಸುತ್ತಿದ್ದಾರೆ ಎಂದರು.
ಈ ರೀತಿಯ ನಾಟಕಗಳನ್ನು ನೋಡುವುದರಿಂದ ಮಕ್ಕಳ ಮನೋವಿಕಾಸದ ಮೇಲೆ ಸಕಾರಾತ್ಮಕ ಪರಿಣಾಮ ಉಂಟು ಮಾಡಿ ಅವರ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗುತ್ತದೆ ಎಂದರು. ಮೈಸೂರಿನ ರಂಗಾಯಣದವರು ಬಹಳ ಅದ್ಭುತವಾದ ನಾಟಕವನ್ನು ರಂಗಕ್ಕೆ ತಂದಿದ್ದಾರೆ. ಮಕ್ಕಳಿಗೆ ಇಷ್ಟವಾಗುವ ಗೊಂಬೆಗಳನ್ನು ರಂಗದ ಮೇಲೆ ತರುವ ಮೂಲಕ ಮಕ್ಕಳು ಹಾಗೂ ಪ್ರೇಕ್ಷಕರಿಗೆ ರಸದೌತಣ ನೀಡಿದ್ದಾರೆ ಎಂದರು.
ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಹಾಗೂ ಝೆನ್ ಟೀಮ್ ಮುಖ್ಯಸ್ಥ ಉಗಮ ಶ್ರೀನಿವಾಸ್ ಮಾತನಾಡಿ ತುಮಕೂರಿನಲ್ಲಿ ಪಪೆಟ್ ಬಳಸಿ ಮಕ್ಕಳ ರಂಗಭೂಮಿಯನ್ನು ಮುಂದಿನ ದಿನಗಳಲ್ಲಿ ಸಶಕ್ತವಾಗಿ ಕಟ್ಟಲು ಪ್ರಯತ್ನಿಸುವುದಾಗಿ ತಿಳಿಸಿದರು.
ಈ ಹಿಂದೆ ಹಕ್ಕಿ ಕಥೆ ಎಂಬ ನಾಟಕವನ್ನು ಪ್ರದರ್ಶಿಸಲಾಗಿತ್ತು. ಶಿವಮೊಗ್ಗ ರಂಗಾಯಣದವರು ಪ್ರಸ್ತುತಪಡಿಸಿದ್ದ ಈ ನಾಟಕದಲ್ಲೂ ಕೂಡ ಪಪೆಟ್ ಗಳನ್ನು ಬಳಸಲಾಗುತ್ತಿತ್ತು. ಈಗ ಮೈಸೂರು ರಂಗಾಯಣದ ನಾಟಕದಲ್ಲೂ ಪಪೆಟ್ ಬಳಸಲಾಗಿದೆ. ಹಾಲಿವುಡ್ ಸಿನಿಮಾದ ರೀತಿ ಅನುಭವ ಕೊಡಲು ಪ್ರಯತ್ನಿಸುವುದಗಿ ತಿಳಿಸಿದರು.
ವೇದಿಕೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಪವಿತ್ರ ಆರ್, ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ದಿನೇಶ್ ಆರ್.ಎಂ. ಉಪಸ್ಥಿತರಿದ್ದರು.
ಬಳಿಕ ಗಣೇಶ ಮಂದಾರ್ತಿ ನಿರ್ದೇಶನದ ಮೈಸೂರು ರಂಗಾಯಣ ಪ್ರಸ್ತುತಪಡಿಸಿದ ಮೈ ಫ್ಯಾಮಿಲಿ ನಾಟಕ ಪ್ರದರ್ಶಿಸಲಾಯಿತು.