ಅನರ್ಹ ಪಡಿತರ ಚೀಟಿಗಳ ರದ್ದು: ತುಮಕೂರು ತಹಶೀಲ್ದಾರ್ ಸೂಚನೆ

ತುಮಕೂರು : ತುಮಕೂರು ತಾಲ್ಲೂಕಿನ ಗ್ರಾಮಾಂತರ ವ್ಯಾಪ್ತಿಯ ಎಎವೈ(ಅಂತ್ಯೋದಯ) ಹಾಗೂ ಪಿ.ಹೆಚ್.ಹೆಚ್(ಆದ್ಯತಾ/ಬಿಪಿಎಲ್) ಪಡಿತರ ಚೀಟಿಗಳನ್ನು ಹೊಂದಿರುವ ಕುಟುಂಬಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದ್ದು, ಮಾನದಂಡಗಳನ್ನು ಮೀರಿ ಎಎವೈ ಹಾಗೂ ಪಿಹೆಚ್‍ಹೆಚ್ ಪಡಿತರ ಕಾರ್ಡುಗಳನ್ನು ಹೊಂದಿರುವವರು ಸ್ವಯಂ ಪ್ರೇರಿತವಾಗಿ ತಾಲ್ಲೂಕು ಕಚೇರಿಯ ಆಹಾರ ಶಾಖೆಗೆ ಪಡಿತರ ಚೀಟಿಗಳನ್ನು ಹಿಂದಿರುಗಿಸುವಂತೆ ತುಮಕೂರು ತಹಶೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಹಿಂದೆ ತನಿಖಾ ಸಮಯದಲ್ಲಿ ಸುಳ್ಳು ಮಾಹಿತಿ ನೀಡಿ ಇಲಾಖೆ ಮಾನದಂಡಗಳನ್ನು ಮರೆಮಾಚಿ ಎಎವೈ ಹಾಗೂ ಬಿಪಿಎಲ್ ಪಡಿತರ ಚೀಟಿಯನ್ನು ಪಡೆದುಕೊಂಡಿರುವವರು ಈ ಪಡಿತರ ಕಾರ್ಡುಗಳನ್ನು ಹಿಂದಿರುಗಿಸಿ ಆದ್ಯತೇತರ ಕಾರ್ಡುಗಳನ್ನು ಪಡೆಯುವಂತೆ ತಪ್ಪಿದಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ರೀತ್ಯಾ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಖಾಯಂ ನೌಕರರು ಅಂದರೆ ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಸಂಸ್ಥೆಗಳು, ಸರ್ಕಾರಿ ಪ್ರಾಯೋಜಿತ, ಸರ್ಕಾರಿ ಸೌಮ್ಯದ ಸಂಸ್ಥೆ/ಮಂಡಳಿ, ನಿಗಮ, ಸ್ವಾಯತ್ತ ಸಂಸ್ಥೆಗಳಲ್ಲಿ ನೌಕರಿಯಲ್ಲಿರುವವರು, ಆದಾಯ ತೆರಿಗೆ, ಸೇವಾ ತೆರಿಗೆ, ವ್ಯಾಟ್, ವೃತ್ತಿ ತೆರಿಗೆಯನ್ನು ಪಾವತಿಸುವ ಕುಟುಂಬಗಳು, ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್‍ಗಿಂತ ಹೆಚ್ಚಿನ ಒಣ ಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವುದು ಅಥವಾ ನಗರ ಪ್ರದೇಶದಲ್ಲಿ 1000 ಚದರ ಅಡಿಗಿಂತ ಹೆಚ್ಚು ವಿಸ್ತೀರ್ಣ ಸ್ವಂತ ಮನೆಯನ್ನು ಹೊಂದಿರುವ ಕುಟುಂಬಗಳು, ಕುಟುಂಬದ ವಾರ್ಷಿಕ 1.20 ಲಕ್ಷ ರೂ.ಗಳಿಂತ ಹೆಚ್ಚು ಆದಾಯ ಹೊಂದಿರುವ ಕುಟುಂಬಗಳು, ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ಒಂದು ವಾಣಿಜ್ಯ ವಾಹನವನ್ನು ಅಂದರೆ ಟ್ರಾಕ್ಟರ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ಇತ್ಯಾದಿಗಳನ್ನು ಹೊಂದಿದ ಕುಟುಂಬವನ್ನು ಹೊರತುಪಡಿಸಿ 4 ಚಕ್ರದ ವಾಹನವನ್ನು ಹೊಂದಿರುವುದು, ಒಂದೇ ಮನೆಯಲ್ಲಿ ವಾಸವಿದ್ದು ಒಂದಕ್ಕಿಂತ ಹೆಚ್ಚು ಪಡಿತರ ಚೀಟಿಗಳನ್ನು ಹೊಂದಿರುವುದು, ಕುಟುಂಬವು ಸದರಿ ವಿಳಾಸದಲ್ಲಿ ವಾಸವಿಲ್ಲದಿರುವುದು, ಮರಣ ಹೊಂದಿರುವ ಹೆಸರನ್ನು ಪಡಿತರ ಚೀಟಿಯಿಂದ ತೆಗೆಯದೇ ಇರುವುದು/ಪಡಿತರ ಚೀಟಿಯನ್ನು ರದ್ದುಗೊಳಿಸದೇ ಇರುವುದು ಇಂತಹ ಮಾನದಂಡಗಳನ್ನು ಮೀರಿ ಎಎವೈ(ಅಂತ್ಯೋದಯ) ಹಾಗೂ ಪಿ.ಹೆಚ್.ಹೆಚ್(ಆದ್ಯತಾ/ಬಿಪಿಎಲ್) ಪಡಿತರ ಚೀಟಿಗಳನ್ನು ಹೊಂದಿರುವ ಕುಟುಂಬಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಇಂತಹ ಪಡಿತರ ಚೀಟಿದಾರರು ಸ್ವಯಂ ಪ್ರೇರಿತವಾಗಿ ತಾಲೂಕು ಕಚೇರಿಯ ಆಹಾರ ಶಾಖೆಗೆ ಎಎವೈ(ಅಂತ್ಯೋದಯ) ಹಾಗೂ ಪಿ.ಹೆಚ್.ಹೆಚ್(ಆದ್ಯತಾ/ಬಿಪಿಎಲ್) ಪಡಿತರ ಚೀಟಿಗಳನ್ನು ಕೂಡಲೇ ಹಿಂದಿರುಗಿಸಿ ರದ್ದು ಅಥವಾ ಆದ್ಯತೇತರ (ಎಪಿಎಲ್)ಪಡಿತರ ಚೀಟಿಯನ್ನು ಕಚೇರಿಯಿಂದ ತಕ್ಷಣವೇ ಪಡೆಯಬಹುದಾಗಿದೆ. ತಪ್ಪಿದಲ್ಲಿ ಸಂಬಂಧಪಟ್ಟವರ ವಿರುದ್ದ ಕಾನೂನು ರೀತ್ಯಾ ಅಗತ್ಯ ಕ್ರಮಕೈಗೊಳ್ಳಲಾಗುವುದು.

ತಪ್ಪು ಮಾಹಿತಿ ನೀಡಿ ಎಎವೈ(ಅಂತ್ಯೋದಯ) ಹಾಗೂ ಪಿ.ಹೆಚ್.ಹೆಚ್(ಆದ್ಯತಾ/ಬಿಪಿಎಲ್) ಪಡಿತರ ಚೀಟಿ ಪಡೆದುಕೊಂಡ ಫಲಾನುಭವಿಗಳ ಮಾಹಿತಿಯನ್ನು ಸೂಕ್ತ ದಾಖಲೆ ಸಹಿತ ಆಹಾರ ಶಾಖೆಯಲ್ಲಿ ನೀಡಬಹುದಾಗಿದ್ದು, ಇಂತಹ ದೂರುದಾರರ ವಿವರವನ್ನು ಗೌಪ್ಯವಾಗಿಡಲಾಗುವುದು ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *