ತುಮಕೂರು : ಲೇಖಕರಿಗೆ ಒಂದು ಸಾಮಾಜಿಕ ಜವಾಬ್ದಾರಿ ಇರಬೇಕು. ದಂತ ಗೋಪುರದಲ್ಲಿ ಕುಳಿತಿರುವುದು ಲೇಖಕರ ಮುಖ್ಯವಾದ ಲಕ್ಷಣ ಅಲ್ಲ. ಇದರ ಅರ್ಥ ಲೇಖಕರು ಹೇಗೆ ಪ್ರತಿಕ್ರಿಯಿಸಬೇಕು. ಸಾಮಾಜಿಕ ಜವಾಬ್ದಾರಿ ಅಂದ್ರೆ ಏನು? ಸಮಾಜದ ಆಗುಹೋಗುಗಳು ಮತ್ತು ವಿದ್ಯಮಾನಗಳನ್ನು ಕುರಿತಂತೆ ಯಾವುದೇ ಒಬ್ಬ ಸಾಹಿತಿ ಕುರುಡಾಗಿರಬಾರದು, ಕಿವುಡಾಗಿರಬಾರದು. ಅದಕ್ಕೆ ಪ್ರತಿಕ್ರಿಯಿಸದೇ ಇರಬಹುದು. ಅದರಲ್ಲಿ ಕೆಲವರು ನೇರವಾಗಿ ತೊಡಗಿಸಿಕೊಳ್ಳಬಹುದು. ಇನ್ನು ಕೆಲವರು ನೇರವಾಗಿ ತೊಡಗಿಸಿಕೊಳ್ಳದೆಯೂ ಅದಕ್ಕೆ ಪೂರಕವಾದ ಆಶಯವನ್ನು ಇಟ್ಟುಕೊಂಡು ಬರವಣಿಗೆಯನ್ನು ಮಾಡುತ್ತ ಬರಬಹುದು. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಪ್ರತಿಕ್ರಿಯಿಸಲು ಸಾಧ್ಯವಿರುತ್ತದೆ ಎಂದು ನಾಡೋಜ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.
ಬಂಡಾಯ ಸಾಹಿತ್ಯ ಸಂಘಟನೆ ತುಮಕೂರು ಜಿಲ್ಲಾ ಘಟಕದ ವತಿಯಿಂದ ತುಮಕೂರಿನ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ‘ಬಂಡಾಯ ಸಾಹಿತ್ಯ: ಹೊಸ ತಲೆಮಾರು ಅಭಿಯಾನದ ಅಂಗವಾಗಿ ‘ಕನ್ನಡ ಸಾಹಿತ್ಯದಲ್ಲಿ ಚರಿತ್ರೆ ಪುರಾಣ ಪಯಣ: ಸಾಮಾಜಿಕ ನೆಲೆಗಳು ವಿಷಯ ಕುರಿತು ರಾಜ್ಯಮಟ್ಟದ ವಿಚಾರ ಗೋಷ್ಠಿಯಲ್ಲಿ ದಿಕ್ಸೂಚಿ ನುಡಿಗಳನ್ನಾಡಿ ಅವರು ಮಾತನಾಡಿದರು.
ಎಲ್ಲಾ ಪ್ರಗತಿಪರ ಮನಸುಗಳು ಎಂದರೆ ಎಡಪಂಥೀಯರು, ಪ್ರಗತಿಪರರು ಇರಬಹುದು. ಈ ಮಾತನ್ನು ಹೇಳುವಾಗ ಎಡಪಂಥೀಯರು ಬೇರೆ, ಪ್ರಗತಿಪರರು ಬೇರೆ ಎನ್ನುವ ಪ್ರಶ್ನೆ ಬರಬಹುದು. ಪ್ರಗತಿಪರರೆಲ್ಲರೂ ಎಡಪಂಥೀಯರೇ ಆಗಿರಬೇಕಿಲ್ಲ ಮತ್ತು ಆಗಿರೋದಿಲ್ಲ. ಆದರೆ ಎಡಪಂಥೀಯರೆಲ್ಲರೂ ಪ್ರಗತಿಪರರೇ ಆಗಿರುತ್ತಾರೆ. ಎಡಪಂಥೀಯರು ಸಮಾಜವಾದವನ್ನು ಪ್ರತಿಪಾದಿಸುತ್ತಾ ಬಂದವರು. ಈ ಪ್ರಗತಿಪರರಿದ್ದಾರಲ್ಲಾ, ಅವರು ಸಮತಾವಾದಿಗಳೇ ಆಗಿರಬೇಕಾಗಿಲ್ಲ. ಅಂಬೇಡ್ಕರ್ ವಾದಿಯಾಗಿರಬಹುದು. ಗಾಂಧೀ ವಾದಿಯಾಗಿರಬಹುದು, ಲೋಹಿಯಾವಾಧಿಯಾಗಿ ರಬಹುದು. ಯಾವುದೇ ವಾದಕ್ಕೂ ಸಂಬಂಧಪಡದೇನೆ ಈ ಸಮಾಜ ಬದಲಾವಣೆ ಆಗಬೇಕು, ಸಮಾನತೆ ಬರಬೇಕು ಎನ್ನುವ ಆಶಯವನ್ನು ಇಟ್ಟುಕೊಂಡವರಿರಬಹುದು, ಇವರೆಲ್ಲರೂ ಪ್ರಗತಿಪರರೇ ಆಗಿರುತ್ತಾರೆ ಎಂದು ಹೇಳಿದರು.
ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳನ್ನು ಸಾಂಸ್ಕೃತಿಕ ಕ್ಷೇತ್ರದಲ್ಲಿ ಒಂದೇ ವೇದಿಕೆಯ ಮೇಲೆ ತರಬೇಕು ಎಂಬ ಆಶಯದಿಂದ ಮತ್ತು ಉದ್ದೇಶದಿಂದ ಹುಟ್ಟಿದ್ದೇ ಬಂಡಾಯ ಸಾಹಿತ್ಯ ಸಂಘಟನೆ. ಎಲ್ಲಾ ಪ್ರಗತಿಪರ ಸಿದ್ದಾಂತಗಳಿಗೆ ಸಂಬಂಧಪಟ್ಟವರನ್ನು ಒಂದು ವೇದಿಕೆಯ ಮೇಲೆ ಸೇರಿಸುವ ಪ್ರಯತ್ನವೇ ಆಗಿದೆ ಎಂದು ತಿಳಿಸಿದರು.
70ರ ದಶಕದಲ್ಲಿ ಮೂರು ಪ್ರಮುಖ ಸಾಂಸ್ಕೃತಿಕ ಅಂಶಗಳನ್ನು ಗಮನಿಸಬೇಕು. ಅನೇಕ ಚಳವಳಿಗಳು ಬಂದವು. ರೈತ, ಮಹಿಳಾ ಚಳವಳಿ ಇತ್ತು. ಕಾರ್ಮಿಕ ಚಳವಳಿ, ದಲಿತ ಚಳವಳಿಯು ಇತ್ತು. ಮಹಿಳಾ ಚಳವಳಿಯೂ ಇತ್ತು. ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಗಮನಿಸಬೇಕಾದುದು ಸಮುದಾಯದಂತಹ ಸಂಘಟನೆ ಉಂಟು ಮಾಡಿದ ಪರಿಣಾಮ ಇರಬಹುದು. ದಲಿತ ಸಂಘರ್ಷ ಸಮಿತಿ ಉಂಟು ಮಾಡಿದ ಪರಿಣಾಮ ಇರಬಹುದು. ಆನಂತರದಲ್ಲಿ ಬಂಡಾಯ ಸಾಹಿತ್ಯ ಸಂಘಟನೆ ಹುಟ್ಟಿದ ನಂತರದಲ್ಲಿ ಅದು ಉಂಟು ಮಾಡಿದ ಪರಿಣಾಮ ಇರಬಹದು. ಇವೆಲ್ಲವೂ ಬಹಳ ಮುಖ್ಯವಾದಂಥವುಗಳಾಗಿವೆ ಎಂದು ಹೇಳಿದರು.
ಬಂಡಾಯ ಮತ್ತು ದಲಿತ ಚಳವಳಿ ಹುಟ್ಟುವ ಮೊದಲು ಸಮಾನತೆಯ ಆಶಯಗಳನ್ನು ಕುರಿತಂತೆ ಕನ್ನಡ ಸಾಹಿತ್ಯದಲ್ಲಿ ಏನೂ ಇರಲಿಲ್ಲವೇ ಅಂದರೆ, ಕ್ರಿ.ಶ.850ರಿಂದಲೇ ಕನ್ನಡ ಸಾಹಿತ್ಯದಲ್ಲಿ ಸಮಾನತೆಯ ಆಶಯಗಳಿವೆ. ಕವಿರಾಜ ಮಾರ್ಗಕಾರನಿಂದ ಹಿಡಿದು ಇಲ್ಲಿಯವರೆಗೆ ಅನೇಕ ಘಟ್ಟಗಳನ್ನು ನಾವು ನೋಡುತ್ತಾ ಬಂದಿದ್ದೇವೆ. ಕುಮಾರವ್ಯಾಸ ಆಹಾರ ಸಮಾನತೆಯ ಬಗ್ಗೆ ಮಾತನಾಡಿದ್ದಾನೆ. ಇದು ಇಂದಿಗೂ ಪ್ರಸ್ತುತವಾಗಿದೆ ಎಂದು ಹೇಳಿದರು.
ಆಧುನಿಕ ಕನ್ನಡ ಸಾಹಿತ್ಯಕ್ಕೆ ಬಂದಾಗ ಚಳವಳಿಯಲ್ಲಿ ನೇರವಾಗಿ ಭಾಗವಹಿಸದೆಯೂ ಚಳವಳಿಯ ಆಶಯಗಳನ್ನು ಪ್ರತಿನಿಧಿಸಿದಂತಹ ಕುವೆಂಪು, ಬೇಂದ್ರ ಮುಂತಾದವರನ್ನು ನೋಡಬಹುದು. ಚಳವಳಿಯನ್ನು ಸಾಮಾನ್ಯವಾಗಿ ಎರಡು ರೀತಿಯಲ್ಲಿ ವಿಂಗಡಿಸಲು ಪ್ರಯತ್ನಿಸುತ್ತೇನೆ. ಒಂದು ಮನಾತ್ಮಕ ಚಳವಳಿ, ಕ್ರಿಯಾತ್ಮಕ ಚಳವಳಿ. ಮನಾತ್ಮಕ ಚಳವಳಿ ಎಂದರೆ ತನ್ನ ಮನಸ್ಸಿನ ಒಳಗಡೆ ಚಳವಳಿಯನ್ನು ಇಟ್ಟುಕೊಂಡಿರುವುದು. ಕುವೆಂಪು ಬೀದಿಗೆ ಬರಬೇಕಾಗಿತ್ತಾ ಅಂದರೆ ಅದರ ಅಗತ್ಯವಿರಲಿಲ್ಲ. ಆದರೆ ಯಾರು ಹೋರಾಟಗಳನ್ನು ನಡೆಸುತ್ತಾರೆ. ಆ ಹೋರಾಟಗಳಿಗೆ ಪೂರಕವಾದ ಒಂದು ಸೈದ್ಧಾಂತಿಕವಾದ ತಿಳುವಳಿಕೆಯನ್ನು ಪ್ರತಿಪಾದನೆಯನ್ನ ಕೊಟ್ಟಂಥವರು ನಮ್ಮ ರಾಷ್ಟ್ರಕವಿ, ದಾರ್ಶನಿಕ ಕವಿ ಕುವೆಂಪು ಆಗಿದ್ದರು ಎಂದು ವಿವರಿಸಿದರು.
ಪ್ರಗತಿಪರ ಸಂಗಾತಿಗಳು ಎರಡು ನೆಲೆಯಲ್ಲಿ ಚಳವಳಿ ಮಾಡಿಕೊಂಡು ಬಂದವರು. ವಿಶೇಷ ಏನು ಅಂದ್ರೆ ದಲಿತ ಬಂಡಾಯ ಸಾಹಿತ್ಯ ಹುಟ್ಟಿದಂತಹ ಸಂದರ್ಭದಲ್ಲಿ ದಲಿತ ಸಂವೇದನೆ, ಸ್ತ್ರೀ ಸಂವೇದನೆ ಮತ್ತು ಮುಸ್ಲೀಂ ಸಂವೇದನೆ. ಒಡಮೂಡಿ ಬಂದವು. ಇವು ಮೂರು ಸಂವೇದನೆಗಳು ಮುಂಚೂಣಿಗೆ ಬಂದವು. ಇಂದು ನಾವು ಒಟ್ಟು ಚರಿತ್ರೆಯನ್ನು ಯುವ ಪೀಳಿಗೆಗೆ ದಾಟಿಸುವ ಜವಾಬ್ದಾರಿ ನಮ್ಮ ಮೇಲಿದೆ. ಇಲ್ಲದೇ ಇದ್ದರೆ ನಮ್ಮ ನಂತರ ಏನು ಎಂಬ ಪ್ರಶ್ನೆ ಮೂಡುತ್ತದೆ. ನಮ್ಮ ನಂತರ ಎಲ್ಲವೂ ಶೂನ್ಯವಾಗುತ್ತದೆ ಎನ್ನುವ ಅಸಹಾಯಕತೆ ಬೇಡ. ಆಶಾವಾದವನ್ನು ಇಟ್ಟುಕೊಂಡು ಹೋಗಬೇಕು ಎಂದರು.
ಲೇಖಕ ಸಚಿನ್ ಕುಂದಾಪುರ ಸಾಹಿತ್ಯದಲ್ಲಿ ಚರಿತ್ರೆ ಮತ್ತು ಪುರಾಣ ವಸ್ತುಗಳ ಸೃಜನಶೀಲ ನಿರ್ವಹಣೆ ಕುರಿತು ವಿಷಯ ಮಂಡಿಸಿದರು. ಬಳ್ಳಾರಿಯ ಡಾ.ದಸ್ತಗೀರ್ ಸಾಬ್ ದಿನ್ನಿ ಕನ್ನಡ ಸಾಹಿತ್ಯ : ಸಾಮಾಜಿಕ ಚರಿತ್ರೆಯ ಪಯಣ ಪ್ರಜ್ಞೆ ವಿಷಯ ಕುರಿತು ವಿಷಯ ಮಂಡಿಸಿದರು. ಲೇಖಕಿ ಬಾ.ಹ.ರಮಾಕುಮಾರಿ ವಿಚಾರ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.
ಉಪನ್ಯಾಸಕ ಎ.ರಾಮಚಂದ್ರಪ್ಪ ಸ್ವಾಗತಿಸಿ, ನವೀನ್ ಕುಮಾರ್ ನಿರೂಪಿಸಿದರು. ಜನಪರ ಚಿಂತಕ ಕೆ.ದೊರೈರಾಜ್, ಕಲಾವಿದ ಲಕ್ಷ್ಮಣ್ ದಾಸ್, ಪ್ರಾಧ್ಯಾಪಕ ಎಲ್.ಪಿ.ರಾಜು, ಎಚ್.ಗೋವಿಂದಯ್ಯ, ಡಾ.ನಾಗಭೂಷಣ್ ಬಗ್ಗನಡು, ಅಶ್ವತ್ಥನಾರಾಯಣ್ ಗುಟ್ಟೆ, ಎಸ್.ರಾಘವೇಂದ್ರ ಆಗಮಿಸಿದ್ದರು.