“ಗ್ರಾಮ ಸ್ವರಾಜ್ಯದ ಸಾಕಾರ, ಜನರ ಕೈಗೆ ಅಧಿಕಾರ, ಜನರ ಸಮಸ್ಯೆಗೆ ಪರಿಹಾರ “

ಗಾಂಧೀಜಿ “ಗ್ರಾಮಗಳು ಗ್ರಾಮಸ್ವರಾಜ್ಯಗಳಾಗಬೇಕು, ಅದನ್ನು ಪಂಚಾಯತಿಗಳ ಮೂಲಕ ಸಾಕಾರಗೊಳಿಸಬೇಕು. ಪಂಚಾಯತಿಗಳ ಮೂಲಕ ಕಟ್ಟಕಡೆಯ ಮನುಷ್ಯನನ್ನು ದೇಶದ ಪ್ರಭುವನ್ನಾಗಿಸಬೇಕು” ಎನ್ನುತ್ತಿದ್ದರು. ಗಾಂಧೀಜಿಯವರ ಆಶಯವನ್ನು ಸಾಕಾರಗೊಳಿಸಲು ಸಂವಿಧಾನದ ರಾಜ್ಯ ನಿರ್ದೇಶಕ ತತ್ವಗಳಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರಗಳಿಗೆ ಜವಾಬ್ದಾರಿ ನೀಡಲಾಯಿತು.  ಆದರೆ ಬಹುತೇಕ  ರಾಜ್ಯಗಳು  ತಮ್ಮದೇ ಆದ ಪಂಚಾಯತ್ ರಾಜ್ ಕಾಯ್ದೆಗಳನ್ನು ರೂಪಿಸಿದರೂ, ಅನುಷ್ಠಾನ ಮಾಡುಲು ಆಸಕ್ತಿ ತೋರಲಿಲ್ಲ. ದೇಶದ ಮೊದಲ ಪ್ರಧಾನಿ ಆಧುನಿಕ ಭಾರತದ ಶಿಲ್ಪಿ ಪಂಡಿತ್ ಜವಾಹರಲಾಲ್ ನೆಹರುರವರು ಸಮುದಾಯ ಅಭಿವೃದ್ಧಿ ಯೋಜನೆ ಮತ್ತು ರಾಷ್ಟ್ರೀಯ ವಿಸ್ತರಣಾ ಕಾರ್ಯಕ್ರಮಗಳ ಮೂಲಕ ದೇಶದ ಹಳ್ಳಿಗಳ ಅಭಿವೃದ್ಧಿಗೆ ಪ್ರಯತ್ನಿಸಿದರು. ಆದರೆ ಆ ಯೋಜನೆಗಳು ನಿರೀಕ್ಷಿತ ಫಲವನ್ನ ಕೊಡುವಲ್ಲಿ ವಿಫಲವಾದವು. ಯೋಜನೆಗಳ ವಿಫಲತೆಗೆ ಕಾರಣಗಳನ್ನು ಹುಡುಕುವ ಮುತ್ತಿನಲ್ಲಿ ಹಿರಿಯ ಗಾಂಧಿ ವಾದಿ ಬಲವಂತರಾಯ ಮೆಹತಾ ರವರ ಅಧ್ಯಕ್ಷತೆಯಲ್ಲಿ ಸಮಿತಿ ಒಂದನ್ನು 1957ರಲ್ಲಿ ರಚಿಸಲಾಯಿತು. ಸಮಿತಿಯು ತನ್ನ ವರದಿಯಲ್ಲಿ ಯಾವುದೇ ಯೋಜನೆಯನ್ನು ರೂಪಿಸುವಾಗ, ಅನುಷ್ಠಾನ ಮಾಡುವಾಗ ಮೇಲುಸ್ತುವಾರಿ ಮಾಡುವಾಗ ಹಾಗೂ ಮೌಲ್ಯಮಾಪನ ಮಾಡುವಲ್ಲಿ ಅದರ ಫಲಾನುಭವಿ ನೇರವಾಗಿ ಭಾಗಿಯಾಗದಿದ್ದರೆ, ಯಾವುದೇ ಯೋಜನೆಗಳು ನಿರೀಕ್ಷಿತ ಫಲ ನೀಡುವುದಿಲ್ಲ. ಅದಕ್ಕಾಗಿ ಸ್ಥಳೀಯ ಮಟ್ಟದಲ್ಲಿ ಜನರು ನೇರವಾಗಿ ಭಾಗವಹಿಸುವ ಅವಕಾಶವಿರುವ ಆಡಳಿತ ಸಂಸ್ಥೆಗಳನ್ನು ಸ್ಥಾಪಿಸಬೇಕು, ಜನರು ತಮ್ಮ ಸಮಸ್ಯೆಗಳನ್ನು ತಾವೇ ಪರಿಹರಿಸಿಕೊಳ್ಳುವಂತಾಗಬೇಕು, ಅದಕ್ಕಾಗಿ ಸ್ಥಳೀಯ ಸರ್ಕಾರಗಳಾಗಿ ಪಂಚಾಯತಿಗಳನ್ನು ಸ್ಥಾಪಿಸಬೇಕು ಎಂದು ಶಿಫಾರಸ್ಸು ಮಾಡಿದರು. ಶಿಫಾರಸಿನ ಅನ್ವಯ 1959 ಅಕ್ಟೋಬರ್ 2 ರಂದು ರಾಜಸ್ಥಾನದ ನಾಗುರಿನಲ್ಲಿ ದೇಶದ ಮೊದಲ ಪಂಚಾಯತ್ ಅನ್ನು ನೆಹರುರವರು ಉದ್ಘಾಟಿಸಿದರು. ತಮ್ಮ ಉದ್ಘಾಟನಾ ಭಾಷಣದಲ್ಲಿ ಪಂಚಾಯತ್ ಒಂದನ್ನು ಉದ್ಘಾಟನೆ ಮಾಡುವ ಮೂಲಕ ಈ ದೇಶದ ಪ್ರಜಾಪ್ರಭುತ್ವಕ್ಕೆ ಭದ್ರವಾದ ಬುನಾದಿಯನ್ನು ಹಾಕುತ್ತಿದ್ದೇನೆ ಎಂದು ಘೋಷಿಸಿದರು.

1959  ರಿಂದ 1993 ರವರೆಗೆ ಪಂಚಾಯತ್ ರಾಜ್ ವ್ಯವಸ್ಥೆ ಎಲ್ಲಾ ರಾಜ್ಯಗಳಲ್ಲೂ ಸರಿಯಾಗಿ ಸಮಯಕ್ಕೆ ಚುನಾವಣೆಗಳು ನಡೆಯದೆ, ಅವುಗಳಿಗೆ ಸೂಕ್ತ ಜವಾಬ್ದಾರಿಗಳನ್ನು ವಹಿಸದೆ, ಸೂಕ್ತವಾದ ಹಣಕಾಸಿನ ಬೆಂಬಲ ದೊರೆಯದೆ ಸ್ಥಳೀಯ ಸ್ವಯಂ ಸರ್ಕಾರಗಳಾಗಿ ಕಾರ್ಯನಿರ್ವಹಿಸುವಲ್ಲಿ ವಿಫಲವಾದವು.

1987 ರಲ್ಲಿ ಕರ್ನಾಟಕದಲ್ಲಿ ಶ್ರೀ ರಾಮಕೃಷ್ಣ ಹೆಗಡೆ ಹಾಗೂ ಅಬ್ದುಲ್ ನಜೀರ್ ಸಾಬ್ ರವರ ನೇತೃತ್ವದಲ್ಲಿ ನಡೆದ ವಿಕೇಂದ್ರೀಕರಣದ ಪ್ರಯೋಗದಿಂದ ಪ್ರಭಾವಿತರಾದ ಅಂದಿನ ಪ್ರಧಾನಿಗಳಾದ ಶ್ರೀ ರಾಜೀವ್ ಗಾಂಧಿ ರವರು ಎಲ್ ಎಂ ಸಿಂಗ್ ವಿ ಸಮಿತಿಯ ಶಿಫಾರಸಿನ ಮೇಲೆ ಪಂಚಾಯತ್ ರಾಜ್ ಸಂಸ್ಥೆಗಳನ್ನು ಸಂವಿಧಾನ ಬದ್ಧಗೊಳಿಸುವ ಪ್ರಯತ್ನವನ್ನು ಮಾಡಿದರು. ಆದರೆ ರಾಜಕೀಯ ಕಾರಣಗಳಿಂದಾಗಿ ಅವರು ಯಶಸ್ವಿಯಾಗಲಿಲ್ಲ. ಮುಂದೆ 1993ರಲ್ಲಿ ಪಿವಿ ನರಸಿಂಹರಾವ್ ರವರು ಪ್ರಧಾನ ಮಂತ್ರಿಗಳಾಗಿ ಸಂವಿಧಾನದ 73 ಮತ್ತು 74ನೇ ತಿದ್ದುಪಡಿಗಳ ಮೂಲಕ ಸ್ಥಳೀಯ ಸರ್ಕಾರಗಳಾದ ಪಂಚಾಯತ್ ರಾಜ್ ಸಂಸ್ಥೆಗಳನ್ನು ಹಾಗೂ ನಗರ ಸ್ಥಳೀಯ ಸರ್ಕಾರಗಳನ್ನು ಸಂವಿಧಾನ ಬದ್ಧ ಗೊಳಿಸುವಲ್ಲಿ ಯಶಸ್ವಿಯಾದರು.

 ಸಂವಿಧಾನದ 73 ಮತ್ತು 74ನೆಯ ತಿದ್ದುಪಡಿಯ ಅನ್ವಯ ಸ್ಥಳೀಯ ಸರ್ಕಾರಗಳಿಗೆ ಪ್ರತಿ ಐದು ವರ್ಷಕ್ಕೊಮ್ಮೆ ಚುನಾವಣೆಗಳನ್ನ ಅವುಗಳ ಅವಧಿ ಮುಗಿಯುವ ಮುನ್ನವೇ ನಡೆಸುವುದು ಖಡ್ಡಾಯವಾಗಿರುತ್ತದೆ. ಜೊತೆಗೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಹಾಗೂ ಮಹಿಳೆಯರಿಗೆ ಸದಸ್ಯತ್ವ ಮತ್ತು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಲ್ಲಿ ಮೀಸಲಾತಿ ನೀಡುವುದು ಕಡ್ಡಾಯವಾಗಿರುತ್ತದೆ. ಆದರೆ ಕರ್ನಾಟಕದಲ್ಲಿ ಕಳೆದ ಆರು ವರ್ಷಗಳಿಂದ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಗಳಿಗೆ ಚುನಾವಣೆಗಳನ್ನು ನಡೆಸಿರುವುದಿಲ್ಲ. ಅಲ್ಲದೆ ಕಳೆದ ಫೆಬ್ರವರಿ ಮತ್ತು ಮಾರ್ಚ್ ನಲ್ಲಿ ಅವಧಿಯನ್ನು ಮುಗಿಸಿದ ಗ್ರಾಮ ಪಂಚಾಯಿತಿಗಳಿಗೂ ಇದುವರೆಗೂ ಚುನಾವಣೆಗಳನ್ನು ನಡೆಸಿರುವುದಿಲ್ಲ. ವಿವಿಧ ತಾಂತ್ರಿಕ ಕಾರಣಗಳನ್ನು ನೀಡುತ್ತಾ ರಾಜ್ಯ ಸರ್ಕಾರ ಚುನಾವಣೆಗಳನ್ನು ನಡೆಸಲು ರಾಜ್ಯದ ಚುನಾವಣಾ ಆಯೋಗಕ್ಕೆ ಸಹಕಾರವನ್ನು ನೀಡುತ್ತಿಲ್ಲ.  ಹಾಗೂ ಸೀಮಾ ನಿರ್ಣಯ ಮಾಡುವ ಮತ್ತು ಮೀಸಲಾತಿ ನಿಗದಿಪಡಿಸುವ ಅಧಿಕಾರವನ್ನು ರಾಜ್ಯ ಚುನಾವಣಾ ಆಯೋಗದಿಂದ ಹಿಂಪಡೆದು ಚುನಾವಣಾ ಆಯೋಗವನ್ನು ದುರ್ಬಲಗೊಳಿಸಲಾಗಿದೆ.ಇದು ಸಂವಿಧಾನ ವಿರೋಧಿ ಹಾಗೂ ಪ್ರಜಾಪ್ರಭುತ್ವವಿರೋಧಿ ನಡೆಯಾಗಿರುತ್ತದೆ.  ಈ ನಡೆಗೆ ಎಲ್ಲಾ ರಾಜಕೀಯ ಪಕ್ಷಗಳ ಬೆಂಬಲವಿರುವುದು ವಿಪರ್ಯಾಸ.

 ಇದರಿಂದಾಗಿ ಶೇಕಡ 50ರಷ್ಟು ಮೀಸಲಾತಿಯನ್ನು ಹೊಂದಿರುವ ಮಹಿಳೆಯರನ್ನ ಹಾಗೂ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಪಡೆದಿರುವ ಪರಿಶಿಷ್ಟ ಜಾತಿ ಮತ್ತು  ಪಂಗಡಗಳನ್ನು  ಮತ್ತು ಹಿಂದುಳಿದ ವರ್ಗಗಳನ್ನು ರಾಜಕೀಯ ಅಧಿಕಾರದಿಂದ ದೂರ ಇಡುವ ಮೂಲಕ ಸಾಮಾಜಿಕ ನ್ಯಾಯದ ವಿರೋಧಿ ನಡೆಯನ್ನು ನಡೆಯಲಾಗುತ್ತಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಆಶಯಗಳನ್ನು ಧಿಕ್ಕರಿಸಲಾಗಿದೆ.

ಕೇಂದ್ರ ಹಣಕಾಸು ಆಯೋಗಗಳು ಚುನಾವಣೆ ನಡೆಯದ ಸ್ಥಳೀಯ ಸರ್ಕಾರಗಳಿಗೆ ಅನುದಾನಗಳನ್ನು(ತೆರಿಗೆಯ ಪಾಲು) ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಕಾರಣ ರಾಜ್ಯದ ಜನರ ಅಭಿವೃದ್ಧಿಗೆ ಸ್ಥಳೀಯ ಸರ್ಕಾರಗಳ ಮೂಲಕ ದೊರೆಯಬೇಕಾದ ಕೇಂದ್ರ ಹಣಕಾಸು ಆಯೋಗದ  ಅನುದಾನ (ತೆರಿಗೆಯ ಪಾಲು)ದೊರೆಯುತ್ತಿಲ್ಲ.

ರಾಜ್ಯದಲ್ಲಿ ಗ್ರಾಮೀಣ ಸ್ಥಳೀಯ ಸರ್ಕಾರಗಳಾದ ಜಿಲ್ಲಾ ಪಂಚಾಯಿತಿ ತಾಲೂಕು ಪಂಚಾಯಿತಿ ಗ್ರಾಮ ಪಂಚಾಯತಿ ಹಾಗೂ ನಗರ ಸ್ಥಳೀಯ ಸರ್ಕಾರಗಳಾದ ಕಾರ್ಪೊರೇಷನ್ ಗಳು ನಗರಸಭೆಗಳು ಪುರಸಭೆಗಳು ಹಾಗೂ ಪಟ್ಟಣ ಪಂಚಾಯ್ತಿಗಳಿಗೆ ಚುನಾವಣೆಗಳು ನಡೆಯದೆ ಜನಾಧಿಕಾರ ಜನರಿಂದ ದೂರವಾಗಿ ಆಡಳಿತ ಅಧಿಕಾರಿಗಳ ಮೂಲಕ ಅಧಿಕಾರಶಾಹಿಯ ಪಾಲಾಗಿದೆ. ಮುಂದಿನ ಸೆಪ್ಟೆಂಬರ್ ಕೊನೆಯ ಹೊತ್ತಿಗೆ ರಾಜ್ಯದಲ್ಲಿ ಯಾವುದೇ ಸ್ಥಳೀಯ ಸರ್ಕಾರಗಳು ಇರುವುದಿಲ್ಲ, ಕೇವಲ 224 ಶಾಸಕರ ಆಡಳಿತ ಮಾತ್ರ ಉಳಿಯುತ್ತದೆ. ರಾಜ್ಯದ ಆಡಳಿತ ಶಾಸಕ ಕೇಂದ್ರಿತವಾಗುವ ಮೂಲಕ ಜನರಿಂದ ದೂರವಾಗುತ್ತದೆ.

ಆಡಳಿತಾಧಿಕಾರಿಗಳನ್ನಾಗಿ ತಾಲೂಕು ಮಟ್ಟದ ಮತ್ತು ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಮುಖ್ಯಸ್ಥರುಗಳನ್ನು ನೇಮಿಸಲಾಗಿದೆ. ಒಬ್ಬ ತಾಲೂಕು ಮಟ್ಟದ ಅಧಿಕಾರಿಗೆ ಮೂರರಿಂದ ನಾಲ್ಕು ಗ್ರಾಮ ಪಂಚಾಯಿತಿಗಳ ಜವಾಬ್ದಾರಿಯನ್ನು ನೀಡಲಾಗಿದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 8ರ ಅನ್ವಯ ಆಡಳಿತ ಅಧಿಕಾರಿಯು ಹಿಂದೆ ಚುನಾಯಿತ ಆಡಳಿತ ಸಮಿತಿಯು ನಿರ್ವಹಿಸುತ್ತಿದ್ದ ಎಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗಿರುತ್ತದೆ. ಇಲಾಖೆಯ ಜವಾಬ್ದಾರಿಗಳನ್ನು ನಿರ್ವಹಿಸಲು ಬೇಕಾದ ಸೂಕ್ತವಾದ ಮಾನವ ಸಂಪನ್ಮೂಲದ ಕೊರತೆಯಿಂದ ಈಗಾಗಲೇ ಒತ್ತಡದಲ್ಲಿರುವ  ಆ ಅಧಿಕಾರಿಯು ತನಗೆ ವಹಿಸಿರುವ ಮೂರರಿಂದ ನಾಲ್ಕು ಗ್ರಾಮ ಪಂಚಾಯಿತಿಗಳ ಸಂಪೂರ್ಣ ಜವಾಬ್ದಾರಿಯನ್ನು ನಿರ್ವಹಿಸುವುದು ಸಾಧ್ಯವೇ? ಇದರಿಂದಾಗಿ ಇಂದು ಗ್ರಾಮೀಣ ಸರ್ಕಾರಗಳಾದ ಗ್ರಾಮ ಪಂಚಾಯಿತಿಗಳ ಆಡಳಿತ ಸಂಪೂರ್ಣ ವಿಫಲವಾಗಿದೆ. ಬೇಸಿಗೆ ಸುಡು ಬಿಸಿಲಿನ ಕಾರಣದಿಂದಾಗಿ ಕುಡಿಯುವ ನೀರಿನ ಸಮಸ್ಯೆ ರಾಜ್ಯಾದ್ಯಂತ ಕಾಡುತ್ತಿದೆ. ಪಂಚಾಯತ್ ರಾಜ್ ಇಲಾಖೆ 15ನೇ ಹಣಕಾಸು ಆಯೋಗದ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸುವಲ್ಲಿ ವಿಫಲವಾಗಿ 2025 ಮತ್ತು 26ನೇ ಸಾಲಿಗೆ ಬರಬೇಕಾದ ಅನುದಾನವನ್ನು ರಾಜ್ಯಕ್ಕೆ ಪಡೆಯುವಲ್ಲಿ ಸೋತಿದೆ. ಇದರಿಂದಾಗಿ ರಾಜ್ಯದ ಸ್ಥಳೀಯ ಸರ್ಕಾರಗಳು ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸಲು ಬೇಕಾದ ಹಣಕಾಸಿನ ಕೊರತೆಯನ್ನು ಎದುರಿಸುತ್ತಿವೆ. ಕುಡಿಯುವ ನೀರು, ನೈರ್ಮಲ್ಯ, ಬೀದಿ ದೀಪ ಮುಂತಾದ ಅತ್ಯಂತ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸ್ಥಳೀಯ ಸ್ಥಳೀಯ ಸರ್ಕಾರಗಳಿಗೆ ಸಾಧ್ಯವಾಗುತ್ತಿಲ್ಲ. ರಾಜ್ಯದ ಬಹುತೇಕ ಗ್ರಾಮ ಪಂಚಾಯಿತಿಗಳ ಮುಂದೆ ಜನರು ಪ್ರತಿಭಟನೆಗಳನ್ನು ನಡೆಸುತ್ತಿರುವುದನ್ನು ನಾವು ಗಮನಿಸಬಹುದಾಗಿದೆ. ಹಣಕಾಸಿನ ಕೊರತೆಯಿಂದಾಗಿ ಜನರ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗದೆ ಆಡಳಿತ ಅಧಿಕಾರಿಗಳು ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯಿತಿಗಳ ಕಡೆಗೆ ತಲೆ ಹಾಕಿ ಮಲಗುತ್ತಿಲ್ಲ ಜನರ ಗೋಳನ್ನ ಕೇಳುವವರು ಇಲ್ಲವಾಗಿದೆ. ಜಿಲ್ಲಾ ಪಂಚಾಯತಿ ಹಾಗೂ ತಾಲ್ಲೂಕು ಪಂಚಾಯತಿಗಳು ಶಾಸಕರ ಹಾಗೂ ಅಧಿಕಾರಿಗಳ ಹಿಡಿತದಲ್ಲಿವೆ.

ಆದ್ದರಿಂದ ಕೂಡಲೇ ರಾಜ್ಯ ಸರ್ಕಾರ ಸ್ಥಳೀಯ ಸರ್ಕಾರಗಳಿಗೆ ಚುನಾವಣೆಗಳನ್ನು ನಡೆಸಲು ರಾಜ್ಯ ಚುನಾವಣಾ ಆಯೋಗಕ್ಕೆ ಸಂಪೂರ್ಣವಾದ ಬೆಂಬಲವನ್ನು ನೀಡುವ ಮೂಲಕ ಜನಾಧಿಕಾರವನ್ನು ಪುನರ್ ಸ್ಥಾಪಿಸಬೇಕು.  ಗ್ರಾಮ ಸ್ವರಾಜ್ಯದ ಮೂಲಕ ಜನರ ಕೈಗೆ ಅಧಿಕಾರವನ್ನು ನೀಡಿ ಜನರು ತಮ್ಮ ಸಮಸ್ಯೆಗಳನ್ನು ಸ್ಥಳೀಯವಾಗಿ ತಾವೇ ಬಗೆಹರಿಸಿಕೊಳ್ಳುವ ಅವಕಾಶವನ್ನು ಮಾಡಿಕೊಡಬೇಕೆಂದು, ಸಂವಿಧಾನವನ್ನು ಎತ್ತಿ ಹಿಡಿಯಬೇಕೆಂದು ಒತ್ತಾಯಿಸುತ್ತೇವೆ.

 

-ಕಾಡಶೆಟ್ಟಿಹಳ್ಳಿ ಸತೀಶ್

ಪ್ರದಾನ ಕಾರ್ಯದರ್ಶಿ,ಗ್ರಾಮ ಸ್ವರಾಜ್ಯ ಕರ್ನಾಟಕ

Leave a Reply

Your email address will not be published. Required fields are marked *