ವಿಎ ಜೀವಕ್ಕೆ ಕೋಟಿ ರೂ.-ಜನ ಸಾಮಾನ್ಯರ ಸಾವಿಗೆ..! ಕಾರಣವಾಗಿರುವ ಕಂದಾಯ ನೌಕರರು ಪರಿಹಾರ ನೀಡುವರೇ? ಜನ ಸಾಮಾನ್ಯರ ಆಕ್ರೋಶ, ಜಿಲ್ಲಾ ದಂಡಾಧಿಕಾರಿಗಳೇ ಈಗಲಾದರೂ ಕೈಗೆ ದಂಡ ತಗೊಳ್ಳಿ…!…?

ತುಮಕೂರು : ಇತ್ತೀಚೆಗೆ ಎಸ್‍ಐಆರ್ ಕರ್ತವ್ಯಕ್ಕೆ ತೆರಳುತ್ತಿದ್ದ ಗ್ರಾಮಪಂಚಾಯಿತಿ ವಿಲೇಜ್ ಅಕೌಂಟೆಂಟ್‍ರೊಬ್ಬರು ಅಪಘಾತದಲ್ಲಿ ಮೃತಪಟ್ಟಿದ್ದಕ್ಕೆ ಕಂದಾಯ ಇಲಾಖೆಯ ನೌಕರರು ಕೆಲ ಸೋಕಾಲ್ಡ್ ರಾಜಕಾರಣಿಗಳ ಕುಮ್ಮಕ್ಕಿನಿಂದ ಜಿಲ್ಲಾಧಿಕಾರಿಗಳ ವಿರುದ್ದ ಪ್ರತಿಭಟನೆ ನಡೆಸಿ, ಉಪಮುಖ್ಯಮಂತ್ರಿಗಳು ಸ್ಥಳಕ್ಕೆ ಆಗಮಿಸಿ ಮೃತ ವಿಎಗೆ 1ಕೋಟಿ ಪರಿಹಾರ ಮತ್ತು ಸಂಬಂಧಿಕರಿಗೆ ನೌಕರಿ ನೀಡುವಂತೆ ಆದೇಶ ಮಾಡಿಸಿದ್ರಲ್ಲ, ಕಂದಾಯಾಧಿಕಾರಿಗಳು ಜನ ಸಾಮಾನ್ಯರ ಕೆಲಸವನ್ನು ವರ್ಷಾನುಗಟ್ಟಲೆಯಾದರೂ ಮಾಡದೆ ಸಾವಿರಾರು ಜನರ ಸಾವಿಗೆ ಕಾರಣವಾಗಿದ್ದು, ಇವರ ಸಾವಿಗೆ ಎಷ್ಟು ಕೋಟಿ ಹಣ ಕಂದಾಯ ನೌಕರರು ನೀಡುತ್ತಾರೆ ಎಂದು ಸಾಮಾನ್ಯ ಜನರು, ರೈತ ಸಮುದಾಯ ಆಕ್ರೋಶ ವ್ಯಕ್ತಪಡಿಸಿದೆ.

ಅಪಘಾತದಲ್ಲಿ ಮೃತಪಟ್ಟ ವಿಎ ಭುವನ

ಹೀಗೊಂದು ನಾಲ್ಕೈದು ತಿಂಗಳ ಹಿಂದೆ ಅಂದಿನ ಗೃಹಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಜನ ಸಂಪರ್ಕ ಸಭೆಯಲ್ಲಿ ಕೆಆರ್‍ಎಸ್ ಪಕ್ಷದವರ ಮನವಿಯನ್ನು ಸ್ವೀಕರಿಸಲಿಲ್ಲವೆಂದು ಪರಮೇಶ್ವರ್ ಅವರಿಗೆ ಗೆರಾವ್ ಹಾಕಿ, ಜಿಲ್ಲಾಧಿಕಾರಿ ಹಠಾವೋ ಚಳುವಳಿ ಪ್ರಾರಂಭಿಸಿದಾಗ ಇಡೀ ಕಂದಾಯ ಇಲಾಖೆಯ ನೌಕರರು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಪರ ಧ್ವನಿ ಎತ್ತಿದ್ದರು.

ಆದರೆ ತಮ್ಮ ಇಲಾಖೆಯ ವಿಎ ಒಬ್ಬರು ಕೇಂದ್ರ ಚುನಾವಣಾ ಆಯೋಗದಂತೆ ರಾಜ್ಯ ಚುನಾವಣಾ ಆಯೋಗವು ಎಸ್‍ಐಆರ್ ಸರ್ವೆಯನ್ನು ಒಂದು ತಿಂಗಳಲ್ಲಿ ಮಾಡಿ ಮುಗಿಸುವಂತೆ ಆದೇಶವನ್ನು ಆಯಾ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾಗಳಿಗೆ ಕಟ್ಟು ನಿಟ್ಟು ಆದೇಶವನ್ನು ಮಾಡಿದೆ.

ಕೆಲವು ವೇಳೆ ಚುನಾವಣಾ ಆಯೋಗವು ಜಿಲ್ಲೆಗಳಲ್ಲಿ ನಡೆಯುತ್ತಿರುವ ಎಸ್‍ಐಆರ್ ಬಗ್ಗೆ ಮೇಲಿಂದ ಮೇಲೆ ಸಂಜೆಯ ವೇಲೆ ಕಾನ್ಫರೆನ್ಸ್ ಮೀಟಿಂಗ್ ಗಳನ್ನು ನಡೆಸಿ ಜಿಲ್ಲಾಧಿಕಾರಿಗಳಿಗೆ ನಾಳೆ ಇಂತಹ ಕೆಲಸವಾಗಬೇಕೆಂದು ನಿರ್ದೇಶನ ನೀಡುತ್ತಾರೆ, ಚುನಾವಣೆ ಆಯೋಗದಂತೆ ಜಿಲ್ಲಾಧಿಕಾರಿಗಳು ಎಸ್‍ಐಆರ್ ಪ್ರಕ್ರಿಯೆಯಲ್ಲಿ ಪಾಳ್ಗೊಂಡಿರುವ ನೌಕರರ ಸಭೆಯನ್ನು ನಡೆಸುವಾಗ ರಾತ್ರಿ ಕೂಡ ಆಗಿರುತ್ತದೆ.
ಜಿಲ್ಲಾಧಿಕಾರಿಗಳು, ತಾಲ್ಲೂಕು ತಹಶೀಲ್ದಾರ್‍ಗಳು ತುಂಬಾ ಒತ್ತಡದಲ್ಲಿ ಕಾರ್ಯವನ್ನು ನಿರ್ವಹಿಸಬೇಕಾಗುತ್ತದೆ, ಇವರ ಕೆಳ ನೌಕರರಿಗಿಂತ ಮೇಲಾಧಿಕಾರಗಳಿಗೆ ವಿಪರೀತ ಒತ್ತಡವಿರುತ್ತದೆ, ಹಲವಾರು ಸಲ ಕಛೇರಿಯಲ್ಲೇ ಸರಿ ರಾತ್ರಿಯವರೆಗೂ ಕಾರ್ಯಾಭಾರದ ಒತ್ತಡವಿರುತ್ತದೆ.
ಕೆಳ ಹಂತದ ಮತ್ತು ಕಂದಾಯ ಇಲಾಖೆಯ ನೌಕರರು ಮೇಲಾಧಿಕಾರಿಗಳ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲೇ ಬೇಕಾಗುತ್ತದೆ, ಆಗ ಮನೆಯಲ್ಲಿ ಮಕ್ಕಳನ್ನು ಶಾಲೆಗೆ ಬಿಡುವುದು, ಹಿರಿಯರ ಯೋಗಕ್ಷೇಮ, ಯಾರಾದರೂ ಕಾಯಿಲೆ ಬಿದ್ದಿದ್ದರೂ ಸಮಯಕ್ಕೆ ಸರಿಯಾಗಿ ಈ ರೀತಿಯ ಒತ್ತಡ ಕೆಲಸದಿಂದ ಸ್ಪಂದಿಸಲು ಸಾಧ್ಯವಾಗದೆ ಮಾನಸಿಕ ಕಿನ್ನತೆ, ಬೇಜಾರ ಮತ್ತು ಎಸ್‍ಐಆರ್ ಅಂತಹ ಕಠಿಣ ಕೆಲಸ ಮಾಡುವಾಗ 50 ವರ್ಷ ದಾಟಿದವರು ಅನಾರೋಗ್ಯಕ್ಕೆ ತುತ್ತಾದರೂ ಆಗಬಹುದು.
ಆದರೆ ಚುನಾವಣಾ ಕಾರ್ಯವನ್ನು ಚುನಾವಣಾ ಆಯೋಗ ರಾಷ್ಟ್ರೀಯ ತುರ್ತು ಕರ್ತವ್ಯ ಎಂಬ ಘೋಷಣೆಯೊಂದಿಗೆ ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ಸೂಚಿಸುವುದರಿಂದ ಮೇಲಾಧಿಕಾರಿಗಳು, ತಮ್ಮ ಕೆಳ ಹಂತದ ಅಧಿಕಾರಿಗಳು ಮತ್ತು ನೌಕರರಿಗೆ ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗಿ, ಶಿಸ್ತು ಮತ್ತು ಸಮರ್ಪಪ ಕಾರ್ಯ ನಿರ್ವಹಿಸುವಂತೆ ನಿರ್ದೇಶನ ನೀಡಿರುತ್ತಾರೆ.

ಒಟ್ಟಿನಲ್ಲಿ ಎಲ್ಲರೂ ಒಂದಲ್ಲ ಒಂದು ಒತ್ತಡದಲ್ಲಿ ಇರುತ್ತಾರೆ, ಈ ಒತ್ತಡವು ಹಲವಾರು ಘಟನೆಗಳಿಗೆ ಕಾರಣವಾಗಬಹುದು, ಎಸ್‍ಐಆರ್ ಕೇಂದ್ರ ಸರ್ಕಾರವು ಕೇಂದ್ರ ಚುನಾವಣಾ ಆಯೋಗದ ಮೂಲಕ ಮಾಡಿಸುತ್ತಿರುವುದರಿಂದ ಎಲ್ಲಾ ಜವಾಬ್ದಾರಿಯು ಕೇಂದ್ರ ಸರ್ಕಾರದ್ದೇ ಆಗಿರುತ್ತದೆ.

ಆದರೆ ಈಗ ಕೇಂದ್ರ ಸರ್ಕಾರ ತಮ್ಮ ಪಕ್ಷದÀ ಸರ್ಕಾರಗಳಿಲ್ಲದ ರಾಜ್ಯಗಳಲ್ಲಿ ಎಸ್‍ಐಆರ್ ಮಾಡಿಸುವುದರಿಂದ ತಮ್ಮ ಪಕ್ಷಕ್ಕೆ ಬರಬೇಕಾದ ಮತಗಳನ್ನು, ಮತದಾರರನ್ನು ತೆಗೆದು ಹಾಕಲಾಗುತ್ತಿದೆ ಎಂಬ ಭೂತ ಕಾಡಲಾರಂಭಿಸುತ್ತದೆ. ಆಗ ರಾಜಕಾರಣಿಗಳು ಈ ಎಸ್‍ಐಆರ್ ಪ್ರಕ್ರಿಯೆಯಲ್ಲಿ ಮೂಗು ತೂರಿಸಲು ಪ್ರಾರಂಭಿಸುತ್ತಾರೆ, ಇದರಿಂದ ಅಧಿಕಾರಿಗಳು ಮತ್ತು ನೌಕರರು ಎರಡೆರಡು ಸರ್ಕಾರಗಳ ಆದೇಶವನ್ನು ಪಾಲಿಸಬೇಕಾಗುತ್ತದೆ, ಒಂದು ರಾಜ್ಯ ಸರ್ಕಾರದ ರಾಜಕಾರಣಿಗಳು, ಮತ್ತೊಂದು ಕೇಂದ್ರ ಸರ್ಕಾರ ಪಕ್ಷದ ರಾಜಕಾರಣಿಗಳ ಮೌಖಿಕ ಆದೇಶವನ್ನು ಅಧಿಕಾರಿಗಳು, ಜಿಲ್ಲಾಧಿಕಾರಿ, ತಹಶೀಲ್ದಾರ್ ಅವರುಗಳ ಮೇಲೆ ಒತ್ತಡ ತಂದು ಮತ್ತು ಪಕ್ಷದ ಮತಗಳನ್ನು ತೆಗೆದು ಹಾಕದಂತೆ ನೋಡಿಕೊಳ್ಳಬೇಕೆಂದು ಇಲ್ಲಸಲ್ಲದಂತೆ ತಾವೇ ಚುನಾವಣಾ ಆಯೋಗವೆಂಬತೆ ಒತ್ತಡ ಹೇರುತ್ತಾರೆ.

ಜಿಲ್ಲಾಧಿಕಾರಿ ಶುಭ ಕಲ್ಯಾಣ್

ಅಧಿಕಾರಿಗಳು ಇಲ್ಲಾರಿ ಚುನಾವಣಾ ಆದೇಶದಂತೆ ನಮ್ಮ ನೌಕರರು ಕರ್ತವ್ಯ ನಿರ್ವಹಿಸುತ್ತಾರೆ ಎಂದ ಕೂಡಲೇ ರಾಜಕಾರಣಿಗಳ ಕಣ್ಣು ಕೆಂಪಗಾಗಿರುತ್ತದೆ, ಏನಾದರೂ ಸ್ವಲ್ಪ ಸಿಗಲಿ ಆ ಅಧಿಕಾರಿ ಗಲ್ಲಿಗೇರಿಸುವಂತಹ ತಪ್ಪು ಮಾಡಿದ್ದಾರೆಂಬ ಮಟ್ಟಕ್ಕೆ ತಮ್ಮ ಬೆಂಬಲಿಗರನ್ನು ಕರೆ ತಂದು ಪ್ರತಿಭಟನೆಗೆ ಕೂರಿಸುತ್ತಾರೆ.

ಕಳೆದ ವಾರ ಅಪಘಾತದಲ್ಲಿ ವಿಎ ಮೃತ ಪಟ್ಟಾಗಲೂ ಕೆಲ ಸೋಕಾಲ್ಡ್ ರಾಜಕಾರಿಣಿಗಳು ಅಧಿಕಾರಿಗಳು ನಾವು ಹೇಳಿದಂತೆ ಕರ್ತವ್ಯ ನಿರ್ವಹಿಸುತ್ತಿಲ್ಲ, ನಾವು ಹೇಳಿದ ಕಡತಗಳಿಗೆ ಸಹಿ ಹಾಕಿಲ್ಲ, ನಮ್ಮ ಬೆಂಬಲಿಗರಿಗೆ ಕಂಟ್ರಾಕ್ಟ್ ಸಿಗುತ್ತಿಲ್ಲ ಹೀಗೆ ಹಲವಾರು ವಿಷಯಗಳನ್ನು ಇಟ್ಟುಕೊಂಡು ಮೇಲಾಧಿಕಾರಿಗಳ ತಪ್ಪಿಲ್ಲದಿದ್ದರೂ ಯಾವುದಾದರೂ ಘಟನೆಯನ್ನು ಕಾಯುತ್ತಿರುತ್ತಾರೆ.

ವಿಎ ಅಪಘಾತದಲ್ಲೂ ಇದೇ ಆಗಿದ್ದು, ಕೆಲ ಸೋಕಾಲ್ಡ್ ರಾಜಕಾರಿಗಳು ಅಪಘಾತವಾಗುತ್ತಲೇ ಅಕಾಡಕ್ಕಿಳಿದು ತಮ್ಮನ್ನು ದಿನವೂ ಹೊತ್ತು ತಿರುಗುವ, ಅವರ ಬಾಲಂಗೋಚಿಗಳಾಗಿ ಕಛೇರಿಗಳಲ್ಲಿ ಕಾರ್ಯ ನಿರ್ವಹಿಸದೇ ಒಂದಲ್ಲ ಒಂದು ರೀತಿಯಲ್ಲಿ ಮೇಲಾಧಿಕಾರಿಗಳಿಂದ ಬೈಯಿಸಿಕೊಳ್ಳುವುದೋ, ನೋಟೀಸ್ ತೆಗದುಕೊಳ್ಳುವುದೋ ಮಾಡಿಕೊಂಡಿರುತ್ತಾರೆ, ಇದನ್ನೆಲ್ಲಾ ತಮ್ಮ ರಾಜಕೀಯ ಗುರುಗಳಿಗೆ ಹೇಳಿಕೊಂಡು ಅಲವತ್ತುಕೊಂಡಿರುತ್ತಾರೆ, ಇದನ್ನೇ ಕಾಯುತ್ತಿದ್ದ ಸೋಕಾಲ್ಡ್ ರಾಜಕಾರಣಿಗಳು ಬೆಂದ ಮನೆಯಲ್ಲಿ ಗಳ ಇರಿದರು ಎಂಬಂತೆ ನಡೆದುಕೊಳ್ಳುತ್ತಾರೆ.

ವಿಎ ಸತ್ತಾಗ ಕೆಲ ರಾಜಕಾರಿಣಿಗಳು ಕಂದಾಯ ಇಲಾಖೆಯ ತಮ್ಮ ಮಾನಸ ನೌಕರರನ್ನು ಉರಿದುಂಬಿಸಿ ಜಿಲ್ಲಾಧಿಕಾರಿಗಳ ವಿರುದ್ಧ ಎತ್ತಿ ಕಟ್ಟಿ ಪ್ರತಿಭಟನೆಗೆ ಇಳಿಸಿದ್ದಲ್ಲದೆ, ಸಮಯ ಕಾದು ಬೆಂಕಿ ಕಾಯಿಸಿಕೊಂಡರು ಎನ್ನುವಂತೆ ತಾವೂ ಪ್ರತಿಭಟನೆಯಲ್ಲಿ ಪಾಲ್ಗೊಂಡು ಜಿಲ್ಲಾಧಿಕಾರಿಗಳೇ ಈ ಅಪಘಾತಕ್ಕೆ ನೇರ ಕಾರಣ, ಅವರೇ ಜವಾಬ್ದಾರರು ಅವರನ್ನು ವರ್ಗಾವಣೆ ಮಾಡಿ, ವಜಾ ಮಾಡಿ ಎಂದು ಬಾಯಿಗೆ ಬಂದಂತೆ ಒಬ್ಬ ಮಹಿಳಾ ಜಿಲ್ಲಾ ದಂಡಧಾಕಾರಿಯ ವಿರುದ್ಧ ತಮ್ಮ ನಾಲಿಗೆಯನ್ನು ಹರಿಬಿಟ್ಟಿಲ್ಲದೆ, ತಮ್ಮ ಬೆಂಬಲಿತ ಕಂದಾಯ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಇಡೀ ರಾಜ್ಯವೇ ನೋಡುವಂತೆ ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರ್ ಅವರದೇ ತಪ್ಪು ಎಂಬಂತೆ ಪ್ರತಿಭಟನೆ ಮೂಲಕ ಬಿಂಬಿಸಿದರು.

ಆದರೆ ಈ ಸೋಕಾಲ್ಡ್ ರಾಜಕಾರಣಿಗಳಾಗಲಿ, ಕಂದಾಯ ನೌಕರರಾಗಲಿ ಚುನಾವಣಾ ಆಯೋಗವನ್ನು ದೂರಲಿಲ್ಲ, ಬೈಯಲಿಲ್ಲ, ಒಬ್ಬ ಮಹಿಳಾ ಜಿಲ್ಲಾಧಿಕಾರಿಗೆ ಬಾಯಿಗೆ ಬಂದಂತೆ ಬೈಯ್ದರಲ್ಲ ಹಾಗೆ ಬೈಯುವಾಗ ಇವರ ಮನೆಯ ಹೆಣ್ಣು ಮಕ್ಕಳಾಗಲಿ, ಇವರ ಸಹೋದರಿಯರು, ತಾಯಿ ನೆನಪಿಗೆ ಬರಲಿಲ್ಲವೇ, ಒಕ್ಕೂಟ ವ್ಯವಸ್ಥೆಯ ಭಾರತದಲ್ಲಿ ಹೊರ ರಾಜ್ಯದವರೊಬ್ಬರು ಜಿಲ್ಲಾಧಿಕಾರಿಯಾಗಿ ಬೇರೆ ರಾಜ್ಯದಲ್ಲಿ ಕೆಲಸ ಮಾಡುವುದೇ ತಪ್ಪು ಎನ್ನುವಂತೆ ನಡೆದುಕೊಂಡಿದ್ದು ಎಷ್ಟು ಸರಿ, ಅಷ್ಟಕ್ಕೂ ಜಿಲ್ಲಾಧಿಕಾರಿಗಳು ತಮ್ಮ ಕೆಳ ಹಂತದ ನೌಕರರು ಸಾಯಲಿ ಎಂದು ಎಂದೂ ಭಯಸುವುದಿಲ್ಲ, ಅವರದು ಎಷ್ಟೇ ಒತ್ತಡವಿದ್ದರೂ ಕೆಳ ಹಂತದ ನೌಕರರನ್ನು ಕಾಪಾಡುವ ಜವಾಬ್ದಾರಿ ಮೇಲಾಧಿಕಾರಿಗಳ ಮೇಲಿರುತ್ತದೆ.

ಈ ಕಂದಾಯಾಧಿಕಾರಿಗಳು ಈಗ ವಿಎ ಅಪಘಾತದಲ್ಲಿ ಮೃತಪಟ್ಟಿದ್ದಕ್ಕೆ ಒಂದು ಕೋಟಿ ಪರಿಹಾರ, ವಿಎ ಕುಟುಂಬಸ್ಥರೊಬ್ಬರಿಗೆ ಅನುಕಂಪದ ನೌಕರಿ ನೀಡುವಂತೆ ಕಂದಾಯ ಸಚಿವ ಡಾ.ಜಿ.ಪರಮೇಶ್ವರ್ ಸಮುಖದಲ್ಲಿ ಘೋಷಣೆ ಮಾಡಿಸಿದ್ರಲ್ಲ ಇದು ಎಷ್ಟು ಸರಿ-ತಪ್ಪು ಎಂಬುದನ್ನು ಸಾರ್ವಜನಿಕರು ಪ್ರಶ್ನೆ ಎತ್ತಿದ್ದಾರೆ.

ಕಂದಾಯ ನೌಕರರು ದೂರದ ಊರುಗಳಿಂದ ಬರುವ ರೈತ, ಬಡವ, ಕುರುಡ, ಕುಂಟ, ಮೂಗ, ಮಹಿಳೆ, ವೃದ್ಧ, ಕೈಗಲಾಗದವ, ಅವನು ಪಾವಗಡದ ಗಡಿ, ಚಿಕ್ಕನಾಯಕನಹಳ್ಳಿ ಗಡಿ, ತಿಪಟೂರು, ಕುಣಿಗಲ್ ಗಡಿ ಭಾಗದಿಂದ ನೂರಾರು ಕಿ.ಮೀ.ಗಳಿಂದ ತಾಲ್ಲೂಕು ಕಛೇರಿ, ಜಿಲ್ಲಾಧಿಕಾರಗಳ ಕಛೇರಿಗಳಿಗೆ ಬಂದಾಗ ಒಂದು ದಿನದಲ್ಲಿ ಆಗುವ ಕೆಲಸವನ್ನು ಆರು ತಿಂಗಳು, ಒಂದು ವರ್ಷ, ಎರಡು ವರ್ಷ ಮಾಡುತ್ತೀರಲ್ಲ ನಿಮ್ಮ ಆತ್ಮ ಸಾಕ್ಷಿಗೆ ಅನುಗುಣವಾಗಿ ಕೆಲನಿರ್ವಸುತ್ತಿದ್ದೀರ ಎಂದು ಎದೆಯನ್ನೊಮ್ಮೆ ಮುಟ್ಟಿ ನೋಡಿಕೊಳ್ಳಿ ಎಂದು ಜನರು ಕೇಳುತ್ತಿದ್ದಾರೆ.

ತಮ್ಮ ಒಂದು ಸಣ್ಣ ಕೆಲಸಗಳಾದ ವೃದ್ದಾಪ್ಯವೇತನ, ಪಡಿತರ ಚೀಟಿ ಪಡೆಯಲು, ತಿದ್ದುಪಡಿ, ಜಾತಿ ಪ್ರಮಾಣಪತ್ರ ಪಡೆಯಲು, ಒಂದು ಪಹಣಿ, ಆರ್‍ಟಿಸಿ ಪಡೆಯಲು ಬಂದವರನ್ನು ಲಂಚಕ್ಕಾಗಿ ಬ್ರಹ್ಮ ರಾಕ್ಷಸರಂತೆ ಪೀಡಿಸಿ, ತಿಂಗಳು, ಆರು ತಿಂಗಳು, ವರ್ಷಾನುಘಟ್ಟಲೇ ಅಲೆಸಿ ಈ ಕೊರಗಿನಲ್ಲೇ ಜನ ಸಾಮಾನ್ಯರು, ರೈತರು, ವೃದ್ಧರು, ಅಂಗವಿಕಲರು ಸಾಯುತ್ತಿದ್ದಾರಲ್ಲ, ಇವರಿಗೆ ಎಷ್ಟು ಕೋಟಿ ಪರಿಹಾರವನ್ನು ಕೊಡುತ್ತೀರ ಅಧಿಕಾರಿಗಳೇ, ನೌಕರರೇ, ಕಂದಾಯ ಇಲಾಖೆ ನೌಕರರೇ, ಬಡಜನ, ವೃದ್ಧರು, ಕುರುಡರು, ಅಂಗವಿಕಲರು, ಬುದ್ಧಿಮಾಂದರು ಬಂದಾಗ ನಿಮ್ಮ ಹೃದಯ ಕಲಕದೆ ಹೃದಯ ಹೀನರಾಗಿ, ಹೃದಯವನ್ನು ಕಲ್ಲು ಮಾಡಿಕೊಂಡು ಲಂಚಕ್ಕಾಗಿ ಅಲೆಸುತ್ತೀರಲ್ಲ ನಿಮಗೆ ಹೃದಯ, ಮನಸ್ಸುಗಳಿವೆಯೇ ಎಂದು ಜನರು ಆಕ್ರೋಶದಿಂದ ಪ್ರಶ್ನಿಸುತ್ತಿದ್ದಾರೆ.

ನೀವು ಹತ್ತು ಗಂಟೆಗೆ ಕಛೇರಿಗೆ ಬಂದು ಇನ್ನೂ ಅರ್ಧಗಂಟೆ ಆಗಿರುವುದಿಲ್ಲ, ನಿಮ್ಮ ಕೊರಳಲ್ಲಿರುವ ಐಡಿ ಕಾರ್ಡನ್ನು ತಮ್ಮ ಕಂಪ್ಯೂಟರ್ ಕೊರಳಿಗೆ ನೇತಾಕಿ ಕಾಫಿ ಕುಡಿದು ಬರುತ್ತೇನೆಂದು ಸೋಕಾಲ್ಡ್ ರಾಜಕಾರಿಗಳ ಹಿಂದೆ ಹಂಡಲೆದು ಮಧ್ಯಾಹ್ನ ನಾಲ್ಕು ಗಂಟೆಗೆ ಬಂದು ಕಾಸು ಬಂದಿರುವ ಕೆಲ ಕಡತಗಳನ್ನು ನೋಡಿದರೆ ಅಂದಿನ ಕೆಲಸ ಮುಗಿಯಿತು, ಮತ್ತೆ ನಿಮ್ಮ ಹೆಬ್ಬಟ್ಟಿಟ್ಟು ರಾಜಕಾರಣಿಗಳ ಹಿಂದೆಯೋ ಅಥವಾ ಬಾರಿಗೋ ಹೋಗುತ್ತೀರಲ್ಲ, ಜನ ಸಾಮಾನ್ಯರ ಕೆಲಸ ಯಾವಾಗ ಮಾಡಿದ್ರಿ ಸ್ವಾಮಿ.

ವಿಎಯ ಜೀವಕ್ಕೆ ಮಾತ್ರ ಬೆಲೆ ಇದೆ, ಹಾಗಾದರೆ ಜನ ಸಾಮಾನ್ಯರ ಜೀವಕ್ಕೆ ಬೆಲೆ ಇಲ್ಲವೇ ಕಂದಾಯ ನೌಕರರೇ, ಅವರು ಕೇವಲ ಒಂದು ರೇಷನ್ ಕಾರ್ಡಿಗಾಗಿ 600 ರೂಪಾಯಿ ವೃದ್ದಾಪ್ಯ ವೇತನಕ್ಕಾಗಿ ನಿಮ್ಮ ಟೇಬಲ್ ಗೆ ಅಲೆದು ಅಲೆದು ನರಳಾಡಿ ಪ್ರಾಣ ಬಿಟ್ರಲ್ಲ ಅವರಿಗೆ ಎಷ್ಟು ಕೋಟಿ ಪರಿಹಾರ ನೀಡಿದ್ದೀರಿ, ನೀಡುತ್ತೀರ ಇದಕ್ಕೆ ನಿಮ್ಮಲ್ಲಿ ಉತ್ತರವಿದೆಯೇ, ತಪ್ಪಲ್ಲದ ಜಿಲ್ಲಾಧಿಕಾರಿಗಳ ವಿರುದ್ಧ ದಿಕ್ಕಾರ ಕೂಗಿ ಡೌನ್ ಡೌನ್, ಜಿಲ್ಲಾಧಿಕಾರಿ ಹಠಾವೋ ಎಂದು ಕೂಗಿದ್ರಲ್ಲ, ಹೀಗೆ ಕೂಗಲು ನಿಮಗೆ ಬೆಂಬಲ ನೀಡಿದ ಸೋಕಾಲ್ಡ್ ರಾಜಕಾರಿಗಳೇ ಇದು ಪ್ರಜಾಪ್ರಭುತ್ವ ರಾಷ್ಟ್ರ, ಇಂದಲ್ಲ ನಾಳೆ ಪ್ರಜೆಗಳ ಮುಂದೆ, ಜನ ಸಾಮಾನ್ಯರ ಮುಂದೆ ಬರಲೇ ಬೇಕು, ಇಂದು ಜಿಲ್ಲಾಧಿಕಾರಿಗಳನ್ನು ಡೌನ್ ಡೌನ್ ಅಂದ್ರಲ್ಲ ಅವರಿಗೆ 30 ವರ್ಷ ಸರ್ಕಾರದ ಅಧಿಕಾರವಿರುತ್ತದೆ, ನಿಮ್ಮದು 5 ವರ್ಷ ಅಧಿಕಾರ, 5 ವರ್ಷದ ನಂತರ ಮತದಾರ ಪ್ರಭು ನಿಮ್ಮೆಲ್ಲಾ ಆಟ-ಟೋಪಟವನ್ನು ನೋಡಿರುತ್ತಾನೆ, ಮತದಾನ ಎಂಬ ಹಕ್ಕಿನಿಂದ ನಿಮ್ಮನ್ನು ಪರ್ಮನೆಂಟ್ ಡೌನ್ ಡೌನ್ ಮಾಡಿ ಮನೆ ಕಡೆಗೆ ಕಳಿಸುತ್ತಾನೆ, ಈಗ ನಿಮ್ಮ ಬಾಲಂಗೋಚಿ ಕಂದಾಯ ನೌಕರರ, ಅಧಿಕಾರಿಗಳ ಪಾಡೇನು.

ಅಧಿಕಾರಿಗಳಿಗೆ, ನೌಕರರಿಗೆ ಈ ಊರಲ್ಲದಿದ್ದರೆ ಮುಂದಿನ ಊರು, ನೀವು ಸೋತಾಗ ನಿಮ್ಮ ಮಾಸಲು ಮುಖ ಇಟ್ಟುಕೊಂಡು ನಿಮ್ಮ ಊರಿಗೇ ಹೋಗಬೇಕು, ಚುನಾವಣೆ ಬಂದಾಗ ಯಾವ ಅಧಿಕಾರಿಗಳ ವಿರುದ್ಧ ನೀವು ಡೌನ್ ಡೌನ್ ಎಂದು ಕೂಗಿದ್ದಿರೋ ಅವರೇ ನಿಮ್ಮನ್ನು ಡೌನ್ ಮಾಡಿ ಮನೆಗೆ ಕಳಿಸಲು ನೀಲಿ ನಕ್ಷೆ ತಯಾರು ಮಾಡಿರುತ್ತಾರೆ.

ಜಿಲ್ಲಾಧಿಕಾರಿಗಳೇ ದಂಡ (ಕೋಲು) ನಿಮ್ಮ ಕೈಯಲ್ಲೇ ಇದೆ.

ಜಿಲ್ಲಾಧಿಕಾರಿಗಳೇ ನಿಮ್ಮ ಕಂದಾಯ ಇಲಾಖೆಯ ಯಾವ ನೌಕರರು ಪ್ರತಿಭಟನೆಗೆ ಇಳಿದಿದ್ದರು, ನಿಮಗೆ ಡೌನ್ ಡೌನ್ ಡಿಸಿ, ಡೌನ್ ಡೌನ್ ಡಿಸಿ ಅಂತ ದಿಕ್ಕಾರ ಕೂಗಿದ್ರಲ್ಲ ಅವರು ಯಾರು ಅಂತ ನಿಮಗೆ ಗೊತ್ತು, ನೀವೇ ಅವರೆಲ್ಲರ ದಂಡಾಧಿಕಾರಿ, ದಂಡ(ಕೋಲು), ಪೆನ್ನು, ಅಧಿಕಾರ ಎಲ್ಲಾ ನಿಮ್ಮ ಕೈಯಲ್ಲೇ ಇದೆ, ಈಗ ಅದನ್ನು ಕೈಗೆತ್ತಿಕೊಂಡು ಯಾವ ಯಾವ ಕಂದಾಯ ಅಧಿಕಾರಿಗಳು ಹಲವಾರು ವರ್ಷಗಳಿಂದ ಕಡತ ವಿಲೇವಾರಿ ಮಾಡದೆ ಪೆಂಡಿಂಗ್ ಇಟ್ಟಿದ್ದಾರೆ ಅವರ ಟೇಬಲ್‍ಗೆ ಹೋಗಿ ತಪಾಷಣೆ ಮಾಡಿ, ಯಾಕೆ ಅರ್ಜಿಗಳು, ಕಡತಗಳು ಬಾಕಿ ಉಳಿದಿವೆ, ಉಳಿಸಿಕೊಳ್ಳಲು ಯಾರು ಹೇಳಿದ್ದು, ಇಂತಹ ಕಡತ, ಇಂತಹ ಫೈಲ್ ಎಷ್ಟು ದಿನದಲ್ಲಿ ವಿಲೇವಾರಿ ಮಾಡದಿದ್ದಕ್ಕೆ ಇಂತಿಂತಹ ಸೆಕ್ಷನ್ ಅಡಿ ಇಷ್ಟು ಇನ್ ಕ್ರಿಮೆಂಟ್ ಕಟ್, ಎಸ್‍ಆರ್‍ಬುಕ್‍ನಲ್ಲಿ ಕರ್ತವ್ಯ ಲೋಪ, ಕಡತ ವಿಲೇವಾರಿ ವಿಳಂಬ ಎಂದು ಬರೆಯಿರಿ.

ಹೀಗ ಅವರನ್ನು, ಅವರ ಅಧಿಕಾರವನ್ನು ಡೌನ್ ಮಾಡುವುದು ಬಿಟ್ಟು, ಸುದ್ದಿ ಬರೆದ ಪತ್ರಕರ್ತ ವಿರುದ್ದ ಸಿಟ್ಟು ಮಾಡಿಕೊಳ್ಳುವುದು, ದೂರುವುದನ್ನು ಮಾಡಿದರೆ, ಪತ್ರಕರ್ತರು ಸುದ್ದಿಯನ್ನು ಸುದ್ದಿಯಾಗಿ ಬರೆಯುತ್ತಾರೆ, ನಿಮಗೆ ಪತ್ರಕರ್ತರು ನಿಜವಾಗಿ ತಪ್ಪು ಮಾಡಿದ್ದರೆ ಅವರನ್ನೂ ದಂಡಿಸುವ ಅಧಿಕಾರವಿದೆ ದಂಡಿಸಿ, ಅದನ್ನು ಬಿಟ್ಟು ಇಡೀ ಪತ್ರಕರ್ತರು ಸರಿಯಿಲ್ಲ ಎಂಬ ತೀರ್ಮಾನ ಸರಿಯಿಲ್ಲ, ನಿಮ್ಮ ವಿರುದ್ಧ ಪ್ರತಿಭಟನೆಗಳು ನಡೆದಾಗ ಹೆಚ್ಚು ಪತ್ರಕರ್ತರು ನಿಮ್ಮ ಬೆಂಬಲಕ್ಕೆ ನಿಂತಿದ್ದಾರೆ, ಅದೂ ನಿಮಗೆ ತಿಳಿದಿರಬೇಕು.

ಮೊದಲು ನಿಮ್ಮ ಕೈಕೆಳಗಿನ ಅಧಿಕಾರಿಗಳಿಗೆ ಭ್ರಷ್ಟಚಾರ, ಲಂಚವಿಲ್ಲದೆ ಕೆಲಸ, ಕರ್ತವ್ಯ ಮಾಡಲು ತಿಳಿಸಿ, ಹೀಗೆ ತಿಳಿಸಿದ ಕೂಡಲೇ ನೀವೇ ಅವರ ಮೊದಲ ಶತ್ರು, ಅವರು ಹಣ ಪಡೆದು ತಂದ ಕಡತ, ಫೈಲ್ ಗಳನ್ನು ತಿರಸ್ಕರಿಸಿದ್ದನ್ನು ಮನಸ್ಸಿನಲ್ಲಿಟ್ಟುಕೊಂಡು ಇಂತಹ ಸಂದರ್ಭದಲ್ಲಿ ಸಿಕ್ಕದ್ದೇ ಚಾನ್ಸ್ ಎಂದು ಧಿಕ್ಕಾರ ಕೂಗಿ, ಡೌನ್ ಡೌನ್ ಡಿಸಿ ಎಂದು ಕೂಗಿ ಮನಸ್ಸಿಗೆ ಸಮದಾನ ಮಾಡಿಕೊಳ್ಳುತ್ತಾರೆ, ಇದನ್ನೇ ಮೇಲಾಧಿಕಾರಿಗಳು ಮನಸ್ಸಿಗೆ ತಗೊಂಡು ಕೊರಗುವುದೇಕೆ, ಬನ್ನಿ ಕಛೇರಿಗೆ ಹೇಗೆ ಚಾಟಿ ಬೀಸುತ್ತೇವೆ ಅಂತ ತೋರಿಸಿ, ಚಾಟಿ ಬೀಸುವುದನ್ನು ಬಿಟ್ಟು ಸುದ್ದಿ ಮಾಡಿದ ಸುದ್ದಿ ಮಾಧ್ಯಮದವರ ಮೇಲೆ ಸಿಟ್ಟು, ಮುನಿಸು ತಾತ್ವಿಕವಾಗಿರದೆ ದ್ವೇಷವಾಗಬಾರದು. ಬಹಳಷ್ಟು ಸಲ ಅಧಿಕಾರಿಗಳ ಬೆಂಬಲಕ್ಕೆ ನಿಲ್ಲುವುದೇ ಪತ್ರಕರ್ತರು, ಈ ಪತ್ರಕರ್ತರಲ್ಲೂ ಎರಡು ವಿಧ, ಕೆಲವರು ಅಧಿಕಾರಿಗಳನ್ನು ಇಂದ್ರ-ಚಂದ್ರ ಅನ್ನುವವವರು, ಕೆಲವರು ಪ್ರಮಾಣಿಕವಾಗಿ ಸುದ್ದಿ ಮಾಡಿಕೊಂಡು ಅವರ ಪಾಡಿಗೆ ಅವರು ಇರುವವರು.

ಅಧಿಕಾರಿಗಳಿಗೆ ಪ್ರಾಮಾಣಿಕ ಪತ್ರಕರ್ತರಿಗಿಂತ ಇಂದ್ರ-ಚಂದ್ರ ಎನ್ನುವ ಪತ್ರಕರ್ತರು ಡೇಂಜರ್ ಎಂಬುದು ತಿಳಿದಿರಬೇಕು. ಈಗಲಾದರೂ ದಂಡ ಕೈಗೆತ್ತಿಕೊಳ್ಳಿ ನಿಮ್ಮ ನೌಕರರಿಗಾದರೂ ಝಳಿಪಿಸಿ, ಪತ್ರಕರ್ತರಿಗಾದರೂ ಝಳಿಪಿಸಿ ಬಡವರ ಕಣ್ಣಿರು ಒರಸಿ ಹಲವಾರು ವರ್ಷಗಳಿಂದ ಕಂದಾಯ ನೌಕರರ ಬಳಿ ಕೊಳೆಯುತ್ತಿರುವ ಫೈಲ್‍ಗಳಿಂದ, ಕಡತಗಳಿಂದ ದೂರದ ಊರಿನಿಂದ ಬಂದು ಉಪವಾಸವಿದ್ದು, ಕಣ್ಣಿರು ಹಾಕಿಕೊಂಡು ಬಸ್ ಟಿಕೆಟ್ ಹಣವನ್ನೂ ಇನ್ನೊಂದು ವಾರದಲ್ಲಿ ಬರುತ್ತೇನೆ ನನ್ನ ಕೆಲಸ ಮಾಡಿಕೊಡಪ್ಪ ಅಂತ ಕೊಟ್ಟು ಹೋಗುತ್ತಾರಲ್ಲ ಅಂತಹವರ ಕೆಲಸ ಮಾಡಿ ಒಂದೇ ವಾರದಲ್ಲಿ ಸಾವಿರಾರು ಬಡವರು, ಜನಸಾಮಾನ್ಯರು, ವೃದ್ಧರು, ಕುರುಡರು, ಅಂಗವಿಕಲರು ನೀವೆ ದೇವರು ಎಂದು ಪೂಜಿಸುತ್ತಾರೆ, ನೀವೇ ಬೇಕು ಎಂದು ಬಾಚಿ ತಬ್ಬಿಕೊಳ್ಳುತ್ತಾರೆ. ಇದನ್ನು ಮೊದಲು ಮಾಡಿ, ಡೌನ್ ಡೌನ್ ಎಂಬುದು ತಾತ್ಕಾಲಿಕ, ಪ್ರೀತಿಯಿಂದ ಬಡವರ ಕೆಲಸ ಮಾಡಿದ್ದು ಬದುಕಿನ ಬಂಗಾರದಂತೆ ಶಾಶ್ವತವಾಗಿ ನೆನಪಿರುತ್ತದೆ.

-ವೆಂಕಟಾಚಲ.ಹೆಚ್.ವಿ.

Leave a Reply

Your email address will not be published. Required fields are marked *