ತುಮಕೂರು: ನಗರದ ಪ್ರೆಸ್ ಕ್ಲಬ್ ಆವರಣದ ಆಲದಮರದ ಪಾರ್ಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮತ್ತು ಹಾಲಪ್ಪ ಪ್ರತಿಷ್ಠಾನ ದವತಿಯಿಂದ ಪ್ರತಿμÁ್ಠಪಿಸಿರುವ ದತ್ತಿ ನಿಧಿಯಲ್ಲಿ 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ರೈತರ ಮಕ್ಕಳಾದ ತಿಪಟೂರಿನ ಹರ್ಷಿಕ ಮತ್ತು ಮಧುಗಿರಿಯ ಪಲ್ಲವಿ ಇವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷರು,ಕೌಶಲ್ಯಾಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷರು ಹಾಗೂ ಕೆಪಿಸಿಸಿ ಉಪಾಧ್ಯಕ್ಷರಾದ ಮುರುಳೀಧರ ಹಾಲಪ್ಪ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ತಮ್ಮ ತಂದೆ ಡಾ.ಹಾಲಪ್ಪ ಅವರ ಹೆಸರಿನಲ್ಲಿ ಸ್ಥಾಪಿಸಿರುವ ದತ್ತಿ ನಿಧಿಯಿಂದ ಅತಿ ಹೆಚ್ಚು ಅಂಕ ಪಡೆಯುವ ರೈತರ ಮಕ್ಕಳಿಗೆ ಪ್ರತಿಭಾಪುರಸ್ಕಾರ ನಡೆಸುವಂತೆ ಕೋರಿದ್ದರು.ಅವರ ಕೋರಿಕೆಯಿಂದ ಕಸಾಪ ವತಿಯಿಂದ ಇಂದು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625ಕ್ಕೆ 600 ಅಂಕ ಪಡೆದ ತಿಪಟೂರು ತಾಲ್ಲೂಕು ಬೊಮ್ಮೆನಹಳ್ಳಿಯ ದಾಕ್ಷಾಯಿಣಿ, ದಿವಾಕರ್ ದಂಪತಿಗಳ ಪುತ್ರಿಯಾದ ಹರ್ಷೀಕ ಡಿ. ಹಾಗೂ 625 ಅಂಕಗಳಿಗೆ 601 ಅಂಕ ಪಡೆದ ಮಧುಗಿರಿ ತಾಲ್ಲೂಕು ತಗ್ಗಿಹಳ್ಳಿಯ ಪ್ರಸನ್ನಕುಮಾರ್ ಅವರ ಮಗಳು ಪಲ್ಲವಿ ಅವರುಗಳಿಗೆ ನಗದು ಪುರಸ್ಕಾರದ ಜೊತೆಗೆ ಗೌರವಿಸಲಾಯಿತು.

ಈ ವೇಳೆ ಮಾತನಾಡಿದ ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರುಳೀಧರ ಹಾಲಪ್ಪ,ರೈತರು ಹಾಗೂ ರೈತರ ಮಕ್ಕಳನ್ನು ಪ್ರೋತ್ಸಾಹಿಸಬೇಕೆಂಬ ಉದ್ದೇಶದಿಂದ ಕಸಾಪದಲ್ಲಿ ಒಂದು ದತ್ತಿ ನಿಧಿ ಸ್ಥಾಪಿಸಿದ್ದೇವೆ.ಅಲ್ಲದೆ ಇಂದಿನ ಪ್ರತಿಭಾ ಪುರಸ್ಕಾರದ ಜೊತೆಗೆ, ಕೃಷಿ, ತೋಟಗಾರಿಕೆ, ಮೀನುಗಾರಿಕೆ, ರೇಷ್ಮೆ, ಪಶುಸಂಗೋಪನೆ, ಹೈನುಗಾರಿಕೆ, ಸಹಕಾರ ಹಾಗೂ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಗಳ ಮೂಲಕ ರೈತರು ಮತ್ತು ರೈತರ ಮಕ್ಕಳಿಗೆ ಇರುವ ಸರಕಾರದ ಸವಲತ್ತುಗಳು ಹಾಗೂ ಅವುಗಳನ್ನು ಪಡೆಯುವ ವಿಧಾನಗಳ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಹಿರಿಯ ಅಧಿಕಾರಿಗಳ ಮೂಲಕ ಸಮಗ್ರ ಮಾಹಿತಿ ದೊರಕಿಸುವ ಕೆಲಸವನ್ನು ಹಮ್ಮಿಕೊಳ್ಳಲಾಗಿದೆ.ನಮ್ಮ ಮಕ್ಕಳು ಸಹ ಹೆಮ್ಮೆಯಿಂದ ನಾವು ರೈತರ ಮಕ್ಕಳು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವಂತಹ ಕಾಲ ಬರಬೇಕೆಂಬುದು ನಮ್ಮ ಆಶಯವಾಗಿದೆ ಎಂದರು.
ಕೃಷಿ ಇಂದು ಲಾಭದಾಯಕ ಕೆಲಸವಾಗಿ ಉಳಿದಿಲ್ಲ.ಹಾಗಿದ್ದೂ ನಾವು ಅನುಭವಿಸಿದ ನೋವು ಸಂಕಟಗಳನ್ನು ನಮ್ಮ ಮಕ್ಕಳು ಅನುಭವಿಸುವುದು ಬೇಡ ಎಂದು ನಿಮ್ಮನ್ನು ಒಳ್ಳೆಯ ಶಾಲೆ, ಕಾಲೇಜುಗಳಿಗೆ ಸೇರಿಸುತ್ತಾರೆ.ಹಾಗಾಗಿ ಮೊದಲು ರೈತರ ಮಕ್ಕಳಿಗೆ ತಮ್ಮ ಪ್ರೋಷಕರು ತಮಗಾಗಿ ಎಷ್ಟು ಕಷ್ಟ ಪಡುತ್ತಾರೆ ಎಂಬ ಅರಿವು ಬರಬೇಕು. ಜೊತೆಗೆ ಇತರೆ ಮಕ್ಕಳಿಗೂ, ರೈತರ ಮಕ್ಕಳಿಗೂ ಇರುವ ವೆತ್ಯಾಸಗಳೇನು? ರೈತರು ಮಕ್ಕಳು ಪ್ರತಿದಿನ ದೈನಂದಿನ ಕೆಲಸದ ಜೊತೆಗೆ, ತಂದೆ ತಾಯಿಯರಿಗೆ ಸಹಾಯ ಮಾಡಿ, ಬಸ್ ಹಿಡಿದು ಶಾಲೆ, ಕಾಲೇಜಿಗೆ ಹೋಗಿ ಇತರೆ ಮಕ್ಕಳಂತೆ ಕಲಿಯಬೇಕಾಗುತ್ತದೆ. ಈ ಎಲ್ಲಾ ಅಂಶಗಳನ್ನು ಜನತೆ ತಿಳಿಸುವುದೇ ಇದರ ಹಿಂದಿನ ಉದ್ದೇಶವಾಗಿದೆ ಎಂದು ಮುರುಳೀಧರ ಹಾಲಪ್ಪ ನುಡಿದರು.
ರಾಜ್ಯದಲ್ಲಿ 70-80ರ ದಶಕದಲ್ಲಿ ರೈತ ಸಂಘ ಗಟ್ಟಿಯಾಗಿತ್ತು.ಪ್ರೊ.ನಂಜುಂಡಸ್ವಾಮಿ, ಎಂ.ಡಿ.ಸುಂದರೇಶನ್ ಅವರಂತಹ ನಾಯಕರು ಒಂದು ಕರೆ ಕೊಟ್ಟರೆ ಇಡೀ ರಾಜ್ಯದ ರೈತರು ಹಿಂದು,ಮುಂದು ನೋಡದೆ ಅವರ ಜೊತೆಗೆ ನಿಲ್ಲುತ್ತಿದ್ದರೂ, ಆದರೆ ಈಗ ರೈತ ಸಂಘ ತನ್ನ ಶಕ್ತಿ ಕಳೆದುಕೊಂಡಿದೆ.ಮೊದಲಿನ ಆ ಗತ್ತು, ಗಮ್ಮತ್ತು ರೈತ ಸಂಘಕ್ಕೆ ಬರಬೇಕೆಂದರೆ,ರೈತ ಸಂಘದ ಪದಾಧಿಕಾರಿಗಳು ಯಾವುದೇ ಲಾಭಿಗೆ ಬಲಿಯಾಗದೆ ರೈತರ ಪರ ನಿಂತಾಗ ಸಾಧ್ಯ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ರೈತ ಸಂಘ ಮತ್ತಷ್ಟು ಬಲವಾಗಬೇಕೆಂಬುದು ನಮ್ಮ ಆಶಯವಾಗಿದೆ ಎಂದು ಮುರುಳೀಧರ ಹಾಲಪ್ಪ ನುಡಿದರು.
ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ,ನಾಲ್ವಡಿ ಕೃಷ್ಣ ರಾಜ ಒಡೆಯರ್ ಅವರಿಂದ ಸ್ಥಾಪನೆಯಾದ ಕನ್ನಡ ಸಾಹಿತ್ಯ ಪರಿಷತ್, ನಾಡು,ನುಡಿ, ನೆಲ, ಜಲದ ವಿಚಾರದಲ್ಲಿ ಕೆಲಸ ಮಾಡುತ್ತಾ ಬಂದಿದೆ.ಕನ್ನಡ ಭಾಷೆಯಲ್ಲಿ ಅತಿ ಹೆಚ್ಚು ಪಡೆಯುವ ಮಕ್ಕಳನ್ನು ಪ್ರೋತ್ಸಾಹಿಸುವ ಕೆಲಸವನ್ನು ಮಾಡಲಾಗುತ್ತಿದೆ.ಮುರುಳೀಧರ ಹಾಲಪ್ಪ ಅವರ ರೀತಿಯಲ್ಲಿಯೇ ಹಲವರು ತುಮಕೂರು ಕಸಾಪದಲ್ಲಿ 22ಕ್ಕೂ ಹೆಚ್ಚು ದತ್ತಿ ನಿಧಿ ಸ್ಥಾಪಿಸಿದ್ದು,ವಿದ್ಯಾರ್ಥಿಗಳ ಪ್ರೋತ್ಸಾಹಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ.ಕನ್ನಡ ಭಾಷೆಯಲ್ಲಿಯೂ ಕಲಿತವರನ್ನು ಗೌರವಿಸುತ್ತಾರೆ ಎಂಬ ಭಾವನೆ ಮಕ್ಕಳಲ್ಲಿ ಮೂಡಿಸುವುದೇ ನಮ್ಮ ಉದ್ದೇಶವಾಗಿದೆ ಎಂದರು.
ಹಾಲಪ್ಪ ಪ್ರತಿಷ್ಠಾನನದ ದತ್ತಿ ನಿಧಿ ಪ್ರಶಸ್ತಿ ಪಡೆದ ಹರ್ಷೀತ ಮತ್ತು ಪಲ್ಲವಿ ಇಬ್ಬರು ವಿದ್ಯಾರ್ಥಿನಿಯರು ತಮ್ಮನ್ನು ರೈತರ ಮಕ್ಕಳೆಂದು ಗುರುತಿಸಿದ್ದಕ್ಕಾಗಿ ಕಸಾಪಗೆ ಧನ್ಯವಾದ ತಿಳಿಸಿದರಲ್ಲದೆ, ಮುಂದೆ ವೈದ್ಯರಾಗುವ ಕನಸು ಹೊಂದಿರುವುದಾಗಿ ತಮ್ಮ ಮನದಾಳದ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಪ್ರತಿಭಾಪುರಸ್ಕಾರದ ನಂತರ ಕೃಷಿ ಇಲಾಖೆಯ ಎಡಿಎ ದಿವಾಕರ್, ತೋಟಗಾರಿಕೆಯ ಎಡಿಎಚ್ ಸ್ವಾಮಿ, ಪಶುಸಂಗೋಪನಾ ಇಲಾಖೆಯ ಡಾ.ವಿಜಯಲಕ್ಷ್ಮಿ, ಕೆವಿಕೆ ಕೊನೆಹಳ್ಳಿಯ ಡಾ.ಶಂಕರ್, ಜಿಕೆವಿಕೆಯ ಹಿರೇಹಳ್ಳಿಯ ಡಾ.ಸೋಮಶೇಖರ್, ರೇಷ್ಮೆ ಇಲಾಖೆಯ ವಿಸ್ತರಣಾಧಿಕಾರಿ ಪೂಜಾ, ಸಾವಯುವ ಕೃಷಿ ಮತ್ತು ಸಿರಿಧಾನ್ಯದ ಕುರಿತು ನಾಗೇನಹಳ್ಳಿ ನಾಗಣ್ಣ ಇವರುಗಳು ತಮ್ಮ ಇಲಾಖೆಯ ಅಡಿಯಲ್ಲಿ ದೊರೆಯುವ ಸೌಲಭ್ಯಗಳ ಮಾಹಿತಿ ನೀಡಿದಲ್ಲದೆ, ರೈತರೊಂದಿಗೆ ಸಂವಾದ ನಡೆಸಿದರು.
ವೇದಿಕೆಯಲ್ಲಿ ಮಾಜಿ ಶಾಸಕರಾದ ಗಂಗಹನುಮಯ್ಯ, ಎಲ್.ಲಕ್ಕಪ್ಪ,ರೈತ ಸಂಘದ ಜಿ.ಎಸ್.ಶಂಕರಪ್ಪ, ಚಿಕ್ಕಬೋರೇಗೌಡ, ಲೋಕೇಶ್,ಜಿ.ಪಂ.ಸದಸ್ಯ ಕೆಂಚಮಾರಯ್ಯ, ಪ್ರೊ.ಕೆ.ಚಂದ್ರಣ್ಣ,ಡಿಸಿಸಿ ಮಹಿಳಾ ಘಟಕದ ಸುಮತಿ, ಕಸಾಪ ಗೌರವ ಕಾರ್ಯದರ್ಶಿಗಳಾದ ಡಾ.ಡಿ.ಎನ್.ಯೋಗೀಶ್ವರಪ್ಪ, ಡಾ.ಸಣ್ಣಹೊನ್ನಯ್ಯ ಕಂಟಲಗೆರೆ,ನಟರಾಜಶೆಟ್ಟಿ ಸೇರಿದಂತೆ ಹಲವು ಉಪಸ್ಥಿತರಿದ್ದರು.