ತುಮಕೂರು : ಸರ್ವೋಚ್ಛ ನ್ಯಾಯಾಲಯದ ಆದೇಶದ ಅನುಷ್ಠಾನಕ್ಕಾಗಿ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಮುಖ ರಸ್ತೆ ಬದಿಗಳಲ್ಲಿ ವ್ಯಾಪಾರ ಮಾಡುತ್ತಿದ್ದ ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಸಭೆ ನಡೆಸಿ ಕೈಗೊಂಡ ನಿರ್ಣಯದಂತೆ ಬೀದಿ ಬದಿ ವ್ಯಾಪಾರಿಗಳನ್ನು ಘೋಷಿತ ವ್ಯಾಪಾರ ವಲಯಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಪಾಲಿಕೆ ಆಯುಕ್ತೆ ಶುಭ ತಿಳಿಸಿದ್ದಾರೆ.
ತಾತ್ಕಾಲಿಕ ಪಟ್ಟಣ ಮಾರಾಟ ಸಮಿತಿಯ ಸದಸ್ಯರನ್ನೊಳಗೊಂಡಂತೆ ಬೀದಿ ಬದಿ ವ್ಯಾಪಾರಸ್ಥರ ಸಂಘ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ವ್ಯಾಪಾರವಲಯವೆಂದು ಘೋಷಿಸಿರುವ ಪ್ರದೇಶಕ್ಕೆ ಬೀದಿ ಬದಿ ವ್ಯಾಪಾರಿಗಳನ್ನು ಸ್ಥಳಾಂತರಿಸುವ ನಿರ್ಣಯವನ್ನು ಕೈಗೊಳ್ಳಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ನೋಂದಾಯಿತ ಬೀದಿ ಬದಿ ವ್ಯಾಪಾರಸ್ಥರು ಘೋಷಿತ ವ್ಯಾಪಾರ ವಲಯಗಳಲ್ಲಿ ವಹಿವಾಟು ನಡೆಸಲು ಪರ್ಯಾಯ ವ್ಯವಸ್ಥೆ ಮಾಡಿಕೊಡಲಾಗಿದೆ.
ಪಾದಚಾರಿ ಮಾರ್ಗಗಳ ಒತ್ತುವರಿ ತೆರವು, ನಿಯಮಿತ ನಿರ್ವಹಣೆ, ಸ್ವಚ್ಛತೆ ಹಾಗು ಸುರಕ್ಷತೆ, ಸಾರ್ವಜನಿಕ ಸಂಚಾರಕ್ಕೆ ಯಾವುದೇ ಅಡೆ-ತಡೆ ಇಲ್ಲದಂತೆ ಅವಕಾಶ ಮಾಡಿಕೊಡಲು ಬೀದಿ ಬದಿ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆಯಿಂದ ಸಾರ್ವಜನಿಕರಿಗೆ ವಿಶೇಷವಾಗಿ ಹಿರಿಯ ನಾಗರಿಕರು, ಮಹಿಳೆಯರು, ವಿಶೇಷ ಚೇತನರು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮುಕ್ತ ಹಾಗೂ ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದು, ಈ ಕಾರ್ಯಾಚರಣೆ ಕುರಿತಂತೆ ಸಾರ್ವಜನಿಕವಾಗಿ ಪ್ರಶಂಸೆ ವ್ಯಕ್ತವಾಗಿದೆ.
ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ ಅಧಿನಿಯಮ 2014ರನ್ವಯ ಸಾರ್ವಜನಿಕ ಸ್ಥಳ/ಸರ್ಕಾರಿ ಕಚೇರಿ/ಬಸ್-ರೈಲು ನಿಲ್ದಾಣ, ಆಸ್ಪತ್ರೆ ಆವರಣದಿಂದ 100 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಮಾರಾಟ ವಲಯವೆಂದು ಘೋಷಿಸಲು ಇರುವ ನಿಷೇಧ, ತೆರವುಗೊಳಿಸಲು ನೈರುತ್ಯ ರೈಲ್ವೆ ಉಪ ಮುಖ್ಯ ಅಭಿಯಂತರರ ಮನವಿ, ರೈಲ್ವೆ ಇಲಾಖೆ ಕಾಮಗಾರಿ ಪ್ರಗತಿಯಲ್ಲಿರುವ, ಪ್ರವಾಸಿ ಮಂದಿರಕ್ಕೆ ನಿಯಮಿತವಾಗಿ ಗಣ್ಯವ್ಯಕ್ತಿಗಳು ಭೇಟಿ ನೀಡುವ ಕಾರಣಗಳಿಂದ ಬೀದಿ ಬದಿ ವ್ಯಾಪಾರದಿಂದ ಸಂಚಾರ ದಟ್ಟಣೆ ಉಂಟಾಗುವ ಹಿನ್ನೆಲೆಯಲ್ಲಿ ನಗರದ ಪ್ರವಾಸಿ ಮಂದಿರದ ಮುಂಭಾಗ ಹಾಗೂ ರೈಲ್ವೆ ನಿಲ್ದಾಣದ ರಸ್ತೆಗಳ ಪಾದಚಾರಿ ಮಾರ್ಗಗಳಲ್ಲಿದ್ದ ಬೀದಿ ಬದಿ ವ್ಯಾಪಾರಿಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಘೋಷಿಸಿರುವ ಎಲ್ಲಾ ಮಾರಾಟ ವಲಯಗಳಲ್ಲಿ ವ್ಯಾಪಾರ ಮಾಡುತ್ತಿರುವ ಬೀದಿ ಬದಿ ವ್ಯಾಪಾರಸ್ಥರಿಗೆ ಗುರುತಿನ ಚೀಟಿ ನೀಡುವುದು ಸೇರಿದಂತೆ ವ್ಯಾಪಾರ ವಲಯಗಳಲ್ಲಿ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ತುರ್ತಾಗಿ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಬೀದಿ ಬದಿ ವ್ಯಾಪಾರಸ್ಥರನ್ನು ಸಾಮಾಜಿಕ ಹಾಗೂ ಆರ್ಥಿಕವಾಗಿ ಸದೃಢಗೊಳಿಸಲು ಕಾಯ್ದೆಯಡಿ ಕೈಗೊಳ್ಳಬೇಕಾದ ಎಲ್ಲಾ ಕ್ರಮಗಳನ್ನು ಪಾಲಿಕೆ ಕೈಗೊಳ್ಳಲು ಬದ್ಧವಾಗಿದೆ.
ಪರ್ಯಾಯ ವ್ಯವಸ್ಥೆ :-
ಬೀದಿ ಬದಿ ವ್ಯಾಪಾರಿಗಳಿಗೆ ಪ್ರಸ್ತುತ ವ್ಯಾಪಾರ ನಡೆಸುತ್ತಿರುವ ಪ್ರದೇಶದಿಂದ ವ್ಯಾಪಾರ ವಲಯವೆಂದು ಘೋಷಿಸಿರುವ ಪ್ರದೇಶದಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.
ಅಂತರಸನಹಳ್ಳಿ ಎಪಿಎಂಸಿ ಮಾರುಕಟ್ಟೆ ಸುತ್ತಮುತ್ತಲಿನ ಪ್ರದೇಶದಿಂದ ಅಂತರಸನಹಳ್ಳಿ ಎಪಿಎಂಸಿ ಮಾರುಕಟ್ಟೆ ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿ ಮುಂಭಾಗ; ಕುಣಿಗಲ್ ರಸ್ತೆಯ ಎರಡೂ ಬದಿಯ ಪ್ರದೇಶದಿಂದ ಕುಣಿಗಲ್ ರಸ್ತೆ ಕರ್ನಾಟಕ ಬ್ಯಾಂಕ್ ಪ್ರಾದೇಶಿಕ ಕಚೇರಿ ಮುಂಭಾಗದ ರಸ್ತೆಯ ಎಡಭಾಗ; ಕಾಲ್ಟೆಕ್ಸ್ ಸರ್ಕಲ್(ಲಕ್ಕಪ್ಪ ವೃತ್ತ) ಜೆ.ಸಿ.ರಸ್ತೆಯ ಪ್ರದೇಶದಿಂದ ಜೆ.ಸಿ.ರಸ್ತೆ ಮಾರಿಯಮ್ಮ ನಗರದ ಮಾರಾಟ ವಲಯ; ಅಶೋಕ ರಸ್ತೆಯ ಎರಡೂ ಬದಿಯ ಪ್ರದೇಶದಿಂದ ಖಾಸಗೀ ಬಸ್ ನಿಲ್ದಾಣದ ಬಳಿ ಇರುವ ಮಾರಾಟ ವಲಯ; ಎಂ.ಜಿ.ರಸ್ತೆ ಹಾಗೂ ವಿವೇಕಾನಂದ ರಸ್ತೆಯ ಪ್ರದೇಶದಿಂದ ಗುಬ್ಬಿ ವೀರಣ್ಣ ಕಲಾಕ್ಷೇತ್ರದ ಮುಂಭಾಗ(ಹಳೇ ಕೆ.ಎಸ್.ಆರ್.ಟಿ.ಸಿ. ಡಿಪೋ ಹಿಂಭಾಗ); ಬಿ.ಹೆಚ್.ರಸ್ತೆ, ಹೈಸ್ಕೂಲ್ ಮೈದಾನದ ಮುಂಭಾಗದಿಂದ ಡಿಡಿಪಿಐ ಕಚೇರಿ ಬಳಿ ಮೇಲ್ಸೆತುವೆ ಕೆಳಭಾಗದಲ್ಲಿನ ಮಾರಾಟ ವಲಯ; ರೈಲ್ವೆ ನಿಲ್ದಾಣ ಹಾಗೂ ಪ್ರವಾಸಿ ಮಂದಿರದ ಸುತ್ತ ಮುತ್ತಲಿನ ಪ್ರದೇಶದಿಂದ ಉಪ್ಪಾರಹಳ್ಳಿ ಅಂಡರ್ಪಾಸ್ ಕೆಳಭಾಗದಲ್ಲಿ ಸ್ಮಾರ್ಟ್ ಸಿಟಿಯಿಂದ ಅಭಿವೃದ್ಧಿಪಡಿಸಿರುವ ಮಾರಾಟ ವಲಯ; ಎಸ್.ಎಸ್.ವೃತ್ತದಿಂದ ಬಟವಾಡಿವರೆಗಿನ ಎರಡೂ ಬದಿಯ ಪ್ರದೇಶದಿಂದ ದೋಬಿ ಘಾಟ್ ಮಾರಾಟ ವಲಯ; ಶೆಟ್ಟಿಹಳ್ಳಿ ರಸ್ತೆಯಿಂದ ಎಸ್ಎಸ್ ಪುರಂವರೆಗಿನ ಎರಡೂ ಬದಿಯ ಪ್ರದೇಶದಿಂದ ಜಯನಗರ ಮಾರಾಟ ವಲಯ ಹಾಗೂ ಕೋತಿ ತೋಪು ರಸ್ತೆ ಬದಿಯ ಪ್ರದೇಶದಿಂದ ಎಸ್.ಎಸ್.ವೃತ್ತದ ಬಳಿ ಇರುವ ಫುಡ್ ಸ್ಟ್ರೀಟ್ನ ಉಳಿಕೆ ಜಾಗಕ್ಕೆ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.