ಯುವ ಕವಿ, ಸಾಹಿತಿಗಳಿಗೆ ಕುವೆಂಪು ಆದರ್ಶವಾಗಲಿ-‘ಅಂಬಲಿ’ ಬಿಡುಗಡೆಯಲ್ಲಿ ಸಾಹಿತಿ ಎಲ್.ಹನುಮಂತಯ್ಯ

ತುಮಕೂರು: ಸಾಹಿತಿಗಳು ಮತ್ತು ಲೇಖಕರು ಮೂರ್ಖತನದ ಮೂಢನಂಬಿಕೆಗಳನ್ನು ಬಿಟ್ಟು, ವೈಚಾರಿಕತೆಯ ಮೂಲಕ ಸಾಹಿತ್ಯವನ್ನು ರಚಿಸಿ ಸಮಾಜವನ್ನು ಸದೃಢವಾಗಿ ಕಟ್ಟಬೇಕು ಎನ್ನುವ ಕುವೆಂಪು ಅವರ ಆಶಯವನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಅವರೇ ಆದರ್ಶವಾಗಬೇಕು ಎಂದು ಮಾಜಿ ರಾಜ್ಯಸಭಾ ಸದಸ್ಯರು ಹಾಗೂ ಹಿರಿಯ ಸಾಹಿತಿಗಳಾದ ಎಲ್. ಹನುಮಂತಯ್ಯ ಎಂದರು.

ತುಮಕೂರು ವಿಶ್ವವಿದ್ಯಾನಿಲಯದ ಕಲಾ ಕಾಲೇಜು ಮತ್ತು ತುಮಕೂರು ವಿಶ್ವವಿದ್ಯಾನಿಲಯದ ವತಿಯಿಂದ ಶನಿವಾರ ಸೆ.19 ರಂದು ಹಮ್ಮಿಕೊಳ್ಳಲಾಗಿದ್ದ ಡಾ. ನಾಗರಾಜು ಎನ್. ಅವರ ಚೊಚ್ಚಲ ಕವನ ಸಂಕಲನ “ಅಂಬಲಿ” ಪುಸ್ತಕ ಬಿಡುಗಡೆ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಯುವ ಸಾಹಿತಿಗಳಿಗೆ ರಾಷ್ಟ್ರಕವಿ ಕುವೆಂಪು ಅವರು ಸದಾ ಮಾರ್ಗದರ್ಶಕರಾಗಬೇಕು. ಅವರಲ್ಲಿದ್ದ ಬಂಡಾಯದ ಮನೋಭಾವ ಹಾಗೂ ಸ್ಫೂರ್ತಿದಾಯಕ ಪದಗಳನ್ನು ಯುವ ಬರಹಗಾರರು ತಮ್ಮಲ್ಲಿ ಅಳವಡಿಸಿಕೊಳ್ಳಬೇಕು. ಕುವೆಂಪು ಕೇವಲ ಮನರಂಜನೆಗಾಗಿ ಸಾಹಿತ್ಯ ಬರೆದವರಲ್ಲ, ಬದಲಾಗಿ ಅತ್ಯಂತ ಸಂವೇದನಾಶೀಲರಾಗಿ ಕೃತಿಗಳನ್ನು ರಚಿಸಿದವರು ಎಂದರು.

ಕೇವಲ ಶೇ. 20ರಷ್ಟು ಸಾಕ್ಷರತೆ ಇದ್ದ ಹಾಗೂ ಚಾತುರ್ವರ್ಣ ಪದ್ಧತಿ ಬೇರೂರಿದ್ದ ಕಾಲಘಟ್ಟದಲ್ಲಿ, ಸಮಾಜದ ಕಟ್ಟಕಡೆಯ ಹಾಗೂ ಅದಕ್ಕಿಂತ ಕೆಳಮಟ್ಟದಲ್ಲಿದ್ದ ಜನರ ಬಗ್ಗೆ ಪ್ರಥಮವಾಗಿ ಧ್ವನಿ ಎತ್ತಿದ ಮಹಾನ್ ಚೇತನ ಕುವೆಂಪು. ಕನ್ನಡದಲ್ಲಿ ಬಂಡಾಯದ ಕಿಚ್ಚು ಮೊದಲು ಹುಟ್ಟಿಕೊಂಡಿದ್ದು ವಚನಕಾರರಿಂದ; ಸೂಳೆ ಸಂಕವ್ವ, ಮಾದರ ಚೆನ್ನಯ್ಯ, ಉರಿಲಿಂಗ ಪೆದ್ದಿ ಹಾಗೂ ಅಲ್ಲಮಪ್ರಭು ಮುಂತಾದವರ ವಚನಗಳಲ್ಲಿ ಇದು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದರು.

ಪುರಾಣದ ಕತೆಗಳನ್ನು ತಮ್ಮ ವೈಚಾರಿಕ ದೃಷ್ಟಿಕೋನದಿಂದ ಮರುಕಟ್ಟುವ ಕೆಲಸವನ್ನು ಕುವೆಂಪು ಮಾಡಿದ್ದರು. ಅಂದಿನ ಕಾಲದಲ್ಲಿ ಇದನ್ನು ಪ್ರಶ್ನಿಸಿದವರಿಗೆ ಅವರು ನೀಡಿದ ಉತ್ತರವೇ ಇಂದಿನ ಲೇಖಕರಿಗೆ ದಾರಿದೀಪವಾಗಬೇಕು ಎಂದರು.

ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಹಸ್ತಪ್ರತಿಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ವಿರೇಶ ಬಡಿಗೇರ ಅವರು ‘ಅಂಬಲಿ’ ಕೃತಿಯನ್ನು ಪರಿಚಯಿಸಿದರು. ಕೃತಿಯ ರಚನೆಕಾರರಾದ ಡಾ. ನಾಗರಾಜು ಎನ್. ತಮ್ಮ ಸಾಹಿತ್ಯಿಕ ಅನುಭವಗಳನ್ನು ಹಂಚಿಕೊಂಡರು. ತುಮಕೂರು ವಿವಿ ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ. ದಾಕ್ಷಾಯಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ರೇಣುಕ ಹೆಚ್.ಆರ್ ಸ್ವಾಗತಿಸಿದರು. ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರಾದ ಡಾ. ಸುಲೋಚನ ಜಿ. ಎಸ್. ನಿರೂಪಿಸಿದರು. ಪ್ರಾಧ್ಯಾಪಕರಾದ ಪ್ರೊ.ಕರಿಯಣ್ಣ ಬಿ. ಹಾಗೂ ಡಾ. ಎಸ್. ಶಿವಣ್ಣಬೆಳವಾಡಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *