ತುಮಕೂರು:ಹೇಮಾವತಿ ಲಿಂಕ್ ಕೆನಾಲ್ ಮೂಲಕ ತುಮಕೂರು ಜಿಲ್ಲೆಯ ಪಾಲಿನ ನೀರನ್ನು ಬೇರೊಂದು ಜಿಲ್ಲೆಗೆ ತೆಗದುಕೊಂಡು ಹೋಗುತ್ತಿದ್ದರೂ ಜಿಲ್ಲೆಯ ಜನಪ್ರತಿನಿಧಿಗಳು ಮೌನಕ್ಕೆ ಶರಣಾಗಿರುವುದು ದುರಂತವೇ ಸರಿ.ನಿಮ್ಮನ್ನು ಈ ಜಿಲ್ಲೆಯ ಜನ ಎಂದಿಗೂ ಕ್ಷಮಿಸುವುದಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಆಕ್ರೋಶ ವ್ಯಕ್ತಪಡಿಸಿದರು.
ಸಂಯುಕ್ತ ಹೋರಾಟ-ಕರ್ನಾಟಕದ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ,ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘ,ಎಐಕೆಕೆಎಂಎಸ್,ಅಖಿಲಭಾರತ ಕಿಸಾನ್ ಸಭಾ, ಮಾಜಿಸೈನಿಕರ ಸಂಘ ಹಾಗೂ ಇನ್ನಿತರ ಸಂಘಟನೆಗಳು ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ವಿರೋಧಿ ಕರೆ ನೀಡಿದ್ದ ಹೇಮಾವತಿ ಚೀಪ್ ಇಂಜಿನಿಯರ್ ಕಚೇರಿ ಮುತ್ತಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತಿದ್ದ ಅವರು,ಕಳೆದ ಒಂದು ತಿಂಗಳಿನಿಂದ ಹೇಮಾವತಿ ಲಿಂಕ್ ಕೆನಾಲ್ ವಿರೋಧಿಸಿ ಪ್ರತಿಭಟನೆ ನಡೆಯುತ್ತಿದ್ದರೂ ಆಡಳಿತ ಪಕ್ಷದ ಮಂತ್ರಿಗಳಾದ ಡಾ.ಜಿ.ಪರಮೇಶ್ವರ್, ಸಹಕಾರ ಸಚಿವ ಕೆ.ಎನ್.ರಾಜಣ್ಣ, ಗುಬ್ಬಿ ಶಾಸಕರಾದ ವಾಸು,ಶಿರಾದ ಟಿ.ಬಿ.ಜಯಚಂದ್ರ ಸೇರಿದಂತೆ ಆಡಳಿತ ಪಕ್ಷದವರು ಸರಕಾರದೊಂದಿಗೆ ಮಾತನಾಡಿ, ಲಿಂಕ್ ಕೆನಾಲ್ ರದ್ದು ಪಡಿಸಲು ಕ್ರಮ ಕೈಗೊಳ್ಳದೆ, ಜಾಣ ಕಿವುಡು, ಕುರುಡುತನ ಪ್ರದರ್ಶಸಿರುತ್ತಿರುವುದು ತರವಲ್ಲ. ಈ ಕೂಡಲೇ ಸರಕಾರ ಮಧ್ಯ ಪ್ರವೇಶಿಸುವಂತೆ ಒತ್ತಡ ತರಬೇಕೆಂದು ಒತ್ತಾಯಿಸಿದರು.

ಹೇಮಾವತಿಯಿಂದ ಮೂಲದಲ್ಲಿ ತುಮಕೂರು ಜಿಲ್ಲೆಗೆ 24.05 ಟಿ.ಎಂ. ನೀರು ಹಂಚಿಕೆಯಾಗಿದ್ದು, ಇದರ ಜೊತೆಗೆ 11-07-2019ರಲ್ಲಿ ಅಂದಿನ ಸರಕಾರ ನೀರಿನ ಹಂಚಿಕೆಯನ್ನು 25.03 ಟಿ.ಎಂ.ಸಿಗೆ ಹೆಚ್ಚಿಗೆ ಮಾಡಿ, ಶ್ರೀರಂಗ ಏತನೀರಾವರಿಯ ಮೂಲಕ ಮಾಗಡಿ ತಾಲೂಕಿನ 66 ಕೆರೆಗಳಿಗೆ ಹೇಮಾವತಿ ನೀರು ಹರಿಸಲು ಯೋಜನೆ ರೂಪಿಸಿದೆ.ಹೇಮಾವತಿ ಯೋಜನೆ ಆರಂಭವಾದ ಇಲ್ಲಿಯವರೆಗೆ ಹಂಚಿಕೆಯಾಗಿರುವ ಅಷ್ಟು ಪ್ರಮಾಣದ ನೀರು ಜಿಲ್ಲೆಗೆ ಹರಿದಿಲ್ಲ.ಈಗಿರುವಾಗ ಹೆಸರಿಗೆ ಮಾತ್ರ ಹೆಚ್ಚುವರಿ ಅಲೋಕೇಷನ್ ಮಾಡಿ, ತುಮಕೂರು ನಾಲೆಗಿಂತ 35 ಮೀಟರ್ ಕೆಳಹಂತದಲ್ಲಿರುವ 169ನೇ ಕಿ.ಮಿ.ಗೆ ಪೈಫ್ ಲೈನ್ ಮೂಲಕ ತೆಗೆದುಕೊಂಡು ಹೋಗಲು ಹೊರಟಿರುವುದು ಅವೈe್ಞÁನಿಕ. ಮಾಗಡಿಗೆ ನೀರು ತೆಗೆದುಕೊಂಡು ಹೋಗಲು ನಮ್ಮ ಅಭ್ಯಂತರವಿಲ್ಲ. ಆದರೆ ಹಾಲಿ ಇರುವ ನಾಲೆಯ ಮೂಲಕವೇ ನೀರು ತೆಗೆದುಕೊಂಡು ಹೋಗಲಿ, ಯಾವುದೇ ಕಾರಣಕ್ಕೆ ಏಕ್ಸ್ಪ್ರೆಸ್ ಲಿಂಕ್ ಕೆನಾಲ್ಗೆ ಅವಕಾಶ ನೀಡುವು ದಿಲ್ಲ.ಈಗಾಗಲೇ ನೀರಿಲ್ಲದ ಬಿಕ್ಕೆಗುಡ್ಡ ಹಾಗೂ ಹಾಗಲವಾಡಿ ಏತ ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಮುಂದಿನ ದಿನಗಳಲ್ಲಿ ಬಹುಗ್ರಾಮ ಕುಡಿಯುವ ನೀರು ಸೇರಿದಂತೆ ಎಲ್ಲಾ ಯೋಜನೆಗಳು ತನ್ನ ಅಸ್ಥಿತ್ವ ಕಳೆದುಕೊಳ್ಳಿವೆ ಎಂದು ಗೋವಿಂದರಾಜು ಆಂತಕ ವ್ಯಕ್ತಪಡಿಸಿದರು.
ರಾಜ್ಯ ಸರಕಾರ ಮತ್ತು ಅಧಿಕಾರಿಗಳು ಹೇಮಾವತಿ ಲಿಂಕ್ ಕೆನಾಲ್ ಕುರಿತು ಜನರಲ್ಲಿ ಉಂಟಾಗಿರುವ ಗೊಂದಲವನ್ನು ಬಗೆಹರಿಸಲು ಮೊದಲು ಮುಂದಾಗಬೇಕು. 10 ಅಡಿ ಸುತ್ತಳತೆಯ ಪೈಪ್ಲೈನ್ ಮೂಲಕ ನಾಲೆಯ ವಿನ್ಯಾಸಕ್ಕಿಂತ 15-20 ಅಡಿ ಅಳದಿಂದ ನೀರು ಡ್ರಾ ಮಾಡಿದರೆ ನಾಲೆಯ ಮುಂದಿನ ಪ್ರದೇಶಗಳಿಗೆ ಸರಾಗವಾಗಿ ನೀರು ಹರಿಯಲು ಸಾಧ್ಯವಿಲ್ಲ. ಇದರಿಂದ ಹೇಮಾವತಿ ನಾಲಾ ಯೋಜನೆಯೇ ನಿಷ್ಪಪ್ರಯೋಜಕವಾಗಲಿದೆ. ರಾಜಕಾರಣಿಗಳ ಸ್ವಹಿತಾಸಕ್ತಿಗೆ ತುಮಕೂರು ಮತ್ತು ರಾಮನಗರ ಜಿಲ್ಲೆಯ ಜನರು ಶಾಸ್ವತವಾಗಿ ವೈರಿಗಳಂತೆ ಬದುಕಬೇಕಾಗುತ್ತದೆ. ಹಾಗಾಗಿ ಸರಕಾರ ಮದ್ಯಪ್ರವೇಶಿಸಿ,ರೈತರು,ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆ ನಡೆಸಿ, ಗೊಂದಲ ಬಗೆಹರಿಸುವುದರ ಜೊತೆಗೆ, ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಯೋಜನೆಯನ್ನು ರದ್ದುಪಡಿಸಬೇಕು.ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಅನಿವಾರ್ಯ ಎಂದು ಎ.ಗೋವಿಂದರಾಜು ಸ್ಪಷ್ಟಪಡಿಸಿದರು.
ಎಐಕೆಕೆಎಂಎಸ್ನ ಎಸ್.ಎನ್.ಸ್ವಾಮಿ ಮಾತನಾಡಿ,ನೀರು ರಾಷ್ಟ್ರೀಯ ಸಂಪತ್ತು. ಅದನ್ನು ಎಲ್ಲರಿಗೂ ಸಮನಾಗಿ ಹಂಚಬೇಕಾಗಿರುವುದು ಸರಕಾರದ ಕರ್ತವ್ಯ. ಆದರೆ ಪ್ರಭಾವಿಗಳು ಎಂಬ ಕಾರಣಕ್ಕೆ, ಒಂದು ಜಿಲ್ಲೆಗೆ ಹಂಚಿಕೆಯಾದ ನೀರನ್ನು ಅವೈe್ಞÁನಿಕವಾಗಿ ಪೈಪ್ಲೈನ್ ಮೂಲಕ ತೆಗೆದುಕೊಂಡು ಹೋಗುವುದು ತರವಲ್ಲ. ರಾಮನಗರ ಜಿಲ್ಲೆಯಲ್ಲಿರುವ ರೈತರು ನಮ್ಮವರೇ ಆಗಿದ್ದಾರೆ.ಹಾಗಾಗಿ ಹಾಲಿ ಇರುವ ನಾಲೆಯ ಮೂಲಕ ರಾಮನಗರ ಜಿಲ್ಲೆಗೆ ನೀರು ತೆಗೆದುಕೊಂಡು ಹೋಗಲಿ. ಇಷ್ಟೊಂದು ತರಾತುರಿಯಲ್ಲಿ ನೀರು ತೆಗೆದುಕೊಂಡು ಹೋಗುತ್ತಿರುವುದರ ಹಿಂದೆ ರೈತರ ಹಿತಕ್ಕಿಂತ ಗುತ್ತಿಗೆದಾರರು ಮತ್ತು ನೀರು ಮಾರಾಟಗಾರರ ಲಾಬಿ ಇರುವ ಸಾಧ್ಯತೆ ಇದೆ.ಒಂದು ವೇಳೆ ಹಾಗಾದರೆ ತುಮಕೂರು ಜಿಲ್ಲೆಯ ಜನರಿಗೆ ಹೇಮಾವತಿ ಲಿಂಕ್ ಕೆನಾಲ್ ಮರಣ ಶಾಸನವಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಮಾಜಿ ಸೈನಿಕರಾದ ನಂಜುಂಡಯ್ಯ ಮಾತನಾಡಿ,ಹೇಮಾವತಿ ನೀರನ್ನು ಅತಿ ಹೆಚ್ಚು ಬಳಕೆ ಮಾಡುತ್ತಿರುವ ಪ್ರದೇಶಗಳಲ್ಲಿ ತುಮಕೂರು ನಗರವೂ ಸೇರಿದೆ. ಆದರೆ ಹೋರಾಟಕ್ಕೆ ನಗರದ ಜನರು ಬೆಂಬಲ ನೀಡಿಲ್ಲ ಎಂದರೆ, ಕುಡಿಯಲು ನೀರನ್ನು ಎಲ್ಲಿಂದ ತರುತ್ತಾರೆ ಎಂಬ ಪ್ರಜ್ಞೆ ಜನರಿಗೆ ಬೇಡವೇ. ಈಗ ಮೈಮರೆತರೆ ಮುಂದೊಂದು ದಿನ ನೀರಿಗಾಗಿ ಹೊಡೆದಾಡಬೇಕಾದಿತ್ತು. ಎಲ್ಲರೂ ಹೋರಾಟದಲ್ಲಿ ಪಾಲ್ಗೊಂಡು ನಮ್ಮ ನೀರನ್ನು ನಮ್ಮಲ್ಲಿಯೇ ಉಳಿಸಿಕೊಳ್ಳೊಣ ಎಂದು ಕರೆ ನೀಡಿದರು.
ಈ ಸಂಬಂಧ ಹೇಮಾವತಿ ನಾಲಾ ವಲಯದ ಮುಖ್ಯ ಇಂಜಿನಿಯರ್ ಫಣಿರಾಜು ಅವರಿಗೆ ಮನವಿ ಸಲ್ಲಿಸಲಾಯಿತು.ಪ್ರಾಂತ ರೈತ ಸಂಘದ ಅಜ್ಜಪ್ಪ, ಬಿ.ಉಮೇಶ್, ಸಿಐಟಿಯುನ ಸೈಯದ್ ಮುಜೀಬ್,ರೈತ ಸಂಘದ ಹನುಮಂತೇಗೌಡ.ಎಐಕೆಎಸ್ನ ಕಂಬೇಗೌಡ ಅವರುಗಳು ಪ್ರತಿಭಟನಾ ನಿರತರ ರೈತರನ್ನು ಉದ್ದೇಶಿಸಿ ಮಾತನಾಡಿದರು.ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಜಿ.ಶಂಕರಪ್ಪ,ವೆಂಕಟೇಗೌಡ, ಚಿಕ್ಕಬೋರೆಗೌಡ, ಕೆಂಪಣ್ಣ, ಸಿಪಿಐ(ಎಂ)ನ ಎನ್.ಕೆ.ಸುಬ್ರಮಣ್ಯ, ರೈತ ಸಂಘದ ಶಬ್ಬೀರ್,ಸಿ.ಜಿ.ಲೋಕೇಶ್, ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಬಿ.ಲಿಂಗಣ್ಣ, ತಾಲೂಕು ಅಧ್ಯಕ್ಷರುಗಳಾದ ಲೋಕೇಶ್,ಪಟ್ಟಬಾಲಯ್ಯ,ನಂಜುಂಡಯ್ಯ,ನವೀನ್, ಶ್ರೀರಂಗಯ್ಯ ಸೇರಿದಂತೆ ಹಲವರು ನೂರಾರು ಜನ ರೈತರು, ಹೋರಾಟಗಾರರು ಪಾಲ್ಗೊಂಡಿದ್ದರು.