‘ಹಾಸ್ಯ ಸಾಹಿತ್ಯ, ಕಲೆಯ ಕಂಪು ಹರಡಿದ ನಗೆಮಲ್ಲಿಗೆ’

ತುಮಕೂರು: ಹಾಸ್ಯವು ಅಪಹಾಸ್ಯವಾಗಬಾರದು, ಕೇಳುಗರಿಗೆ ಮುಜುಗರ ಉಂಟು ಮಾಡುವಂತಿರಬಾರದು. ಎಲ್ಲಾ ವಯೋಮಾನದವರೂ ನಕ್ಕು ಆನಂದಿಸುವ ಹಾಸ್ಯ ಹೊರಬರಲಿ, ಶುದ್ಧ ಹಾಸ್ಯಕ್ಕೆ ಯಾವತ್ತೂ ಬೆಲೆ ಇರುತ್ತದೆ ಎಂದು ಸ್ವದೇಶಿ ಚಿಂತಕ ಎಸ್. ವಿಶ್ವನಾಥ್ ಸ್ವದೇಶಿ ಹೇಳಿದರು.

ನಗೆಮಲ್ಲಿಗೆ ಬಳಗ ನಗರದಲ್ಲಿ ಹಮ್ಮಿಕೊಂಡಿದ್ದ ಯುಗಾದಿ ಹಾಸ್ಯಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಹಿರಿಯ ಹಾಸ್ಯ ಸಾಹಿತಿ ದಿ. ಗೌಡನಕಟ್ಟೆ ತಿಮ್ಮಯ್ಯನವರು ಸ್ಥಾಪಿಸಿದ ನಗೆಮಲ್ಲಿಗೆ ಸಂಸ್ಥೆ ಹಲವಾರು ವರ್ಷಗಳ ಕಾಲ ನಗರದಲ್ಲಿ ಏಪ್ರಿಲ್ 1ರಂದು ಮೂರ್ಖರ ದಿನಾಚರಣೆ ಮೂಲಕ ಹಾಸ್ಯ ಕಾರ್ಯಕ್ರಮ ಆಯೋಜಿಸಿ ನಗೆರಸದೌತಣ ನೀಡಿ ಹೆಸರಾಗಿದೆ. ಗೌಡನಕಟ್ಟೆ ತಿಮ್ಮಯ್ಯನವರ ನಂತರ ಅವರ ಆಶಯವನ್ನು ನಗೆಮಲ್ಲಿಗೆ ಬಳಗ ಮುಂದುವರೆಸಿಕೊಂಡು ಹೋಗುತ್ತಿದೆ ಎಂದರು.

ನಗೆಮಲ್ಲಿಗೆ ಮೂರ್ಖರ ದಿನಾಚರಣೆಯಲ್ಲಿ ನಾಡಿನ ಹೆಸರಾಂತ ಸಾಹಿತಿಗಳು, ಪ್ರಸಿದ್ಧ ಹಾಸ್ಯ ಕಲಾವಿದರೂ ಭಾಗವಹಿಸಿ ಜನರನ್ನು ರಂಜಿಸಿದ್ದರು. ಮೂರ್ಖರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಯಾವುದೇ ಸಾಹಿತಿ, ಕಲಾವಿದರಿಗೆ ಹೆಮ್ಮೆಯ ವಿಚಾರವಾಗಿತ್ತು. ನಗೆಮಲ್ಲಿಗೆ ಹಾಸ್ಯರಂಜನೆ ಕಾರ್ಯಕ್ರಮಗಳಿಂದ ಪ್ರೇರಣೆಗೊಂಡು ಹೊಸ ಹಾಸ್ಯ ಬರಹಗಾರರು, ಹಾಸ್ಯ ಕಲಾವಿದರೂ ರೂಪುಗೊಂಡಿದ್ದಾರೆ, ಹಲವು ಹಾಸ್ಯ ಸಂಸ್ಥೆಗಳೂ ಹುಟ್ಟಿಕೊಂಡಿವೆ. ಈ ಮೂಲಕ ನಗೆಮಲ್ಲಿಗೆ ಸಂಸ್ಥೆ ಹೊಸ ಹಾಸ್ಯ ಬರಹಗಾರರು, ಹಾಸ್ಯ ಕಲಾವಿದರ ಹುಟ್ಟಿಗೂ ಕಾರಣವಾಗಿದೆ ಎಂದು ವಿಶ್ವನಾಥ್ ಸ್ವದೇಶಿ ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಡಾ. ಶೈಲಾ ನಾಗರಾಜ್ ಮಾತನಾಡಿ, ನಾನು ವಿದ್ಯಾರ್ಥಿಯಾಗಿದ್ದಾಗ ಗೌಡನಕಟ್ಟೆ ತಿಮ್ಮಯ್ಯನವರ ಅಭಿಮಾನಿಯಾಗಿ ಅವರ ಒಡನಾಟ ಹೊಂದಿದೆ. ಆಗಿನ ಸಂದರ್ಭದಲ್ಲಿ ಹಾಸ್ಯ ಎಂದರೆ ಗೌಡನಕಟ್ಟೆ ತಿಮ್ಮಯ್ಯನವರು ಹಾಗೂ ಅವರು ಕಟ್ಟಿಬೆಳೆಸಿದ ನಗೆಮಲ್ಲಿಗೆ ಸಂಸ್ಥೆ ಯಾರಿಗಾದರೂ ನೆನಪಾಗುತ್ತಿತ್ತು, ಆ ಮಟ್ಟಿಗೆ ತಿಮ್ಮಯ್ಯನವರು ಹಾಗೂ ಸಂಸ್ಥೆ ಹೆಸರಾಗಿತ್ತು ಎಂದು ಹೇಳಿದರು.

ಗೌಡನಕಟ್ಟೆ ತಿಮ್ಮಯ್ಯನವರು ಸ್ವತ: ಹಾಸ್ಯ ಸಾಹಿತಿಯಾಗಿ, ಸಜ್ಜನಿಕೆಯಿಂದ ಎಲ್ಲರೊಂದಿಗೆ ಹಾಸ್ಯಮಯವಾಗಿ ಬೆರೆಯುತ್ತಿದ್ದರು. ನಗೆಮಲ್ಲಿಗೆಯಿಂದ ಹಾಸ್ಯ ಪ್ರಾಕಾರಕ್ಕೆ ಸಂಬಂಧಿಸಿದ ಸಂವಾದ ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸಿ, ಹಾಸ್ಯ ಸಾಹಿತ್ಯ ಹಾಗೂ ಹಾಸ್ಯ ಕಲೆಯನ್ನು ಜನಮನಗೊಳಿಸುವ ಸಾರ್ಥಕ ಕೆಲಸ ಮಾಡಿದರು ಎಂದು ನೆನಪು ಮಾಡಿಕೊಂಡರು.

ಆಶಯ ನುಡಿಗಳನ್ನಾಡಿದ ಸಂಶೋಧನಾ ಮಾರ್ಗದರ್ಶಕಿ ಡಾ. ಪ್ರಿಯಾಂಕ ಎಂ.ಜಿ, ಇಂದಿನ ಒತ್ತಡದ ಬದುಕಿನಲ್ಲಿ ನಗು, ನೆಮ್ಮದಿ ಮಾಯವಾಗಿದೆ. ದುಡ್ಡು ಕೊಟ್ಟು ಕೊಳ್ಳುವುದಕ್ಕೂ ಆಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಜನರು ನಗಬೇಕು, ನಕ್ಕು ನಲಿಯಬೇಕು, ನಲಿದು ಹಗುರಾಗಬೇಕು ಎಂದು ನಗೆಮಲ್ಲಿಗೆ ಬಳಗ ಯುಗಾದಿ ಹಾಸ್ಯಗೋಷ್ಠಿ ಏರ್ಪಡಿಸಿರುವುದು ಶ್ಲಾಘನೀಯ. ಹೆಚ್ಚು ಜನರು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂಭ್ರಮಿಸಬೇಕು ಎಂದು ಹೇಳಿದರು.

ನಗೆಮಲ್ಲಿಗೆ ಬಳಗದ ಎಂ.ಕೆ. ನಾಗರಾಜ ರಾವ್, ಅಬ್ಬಿನಹೊಳೆ ಸುರೇಶ್, ಜಿ.ಎನ್. ರಾಧಾಕೃಷ್ಣ, ಗೌ.ತಿ. ರಂಗನಾಥ್, ಡಿ.ವಿ. ಶೇಷಾಚಲ, ದೊಂಬರನಹಳ್ಳಿ ನಾಗರಾಜ್, ಗೌ.ತಿ. ಸೋಮನಾಥ್, ವೆನ್ನೆಲ ಕೃಷ್ಣ ಮೊದಲಾದವರು ಭಾಗವಹಿಸಿದ್ದರು.

ವಿವಿಧೆಡೆಗಳಿಂದ ಆಗಮಿಸಿದ್ದ 25ಕ್ಕೂ ಹೆಚ್ಚು ಹಾಸ್ಯಪಟುಗಳು ಪ್ರದರ್ಶನ ನೀಡಿ ವೀಕ್ಷಕರನ್ನು ರಂಜಿಸಿದರು.

Leave a Reply

Your email address will not be published. Required fields are marked *