ತುಮಕೂರು : ಕೇಂದ್ರದ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಮನೆ ಮುಂಭಾಗದ ರಸ್ತೆ ಇಂದು ಟ್ರಾಫಿಕ್ ಜಾಮ್ ಆಗಿ ಶಾಲಾ ಬಸ್ಗಳು ಮುಂದಕ್ಕೆ ಚಲಿಸಲು ಸಾಧ್ಯವಾಗದೆ ಪರದಾಡುವಂತಾಯಿತು.
ವಿ.ಸೋಮಣ್ಣ ಅವರು ಕೇಂದ್ರ ಸಚಿವರಾದ ನಂತರ ಮೊದಲ ಬಾರಿಗೆ ತುಮಕೂರಿನ ಮಾರುತಿ ನಗರದ 40 ಅಡಿ ಮುಖ್ಯರಸ್ತೆಯ ಮನೆಗೆ ಇಂದು ಜನಸ್ತೋಮ ಕಾರು, ಇತರೆ ವಾಹನಗಳಲ್ಲಿ ಬಂದು ರಸ್ತೆ, ರಸ್ತೆ ಬದಿಗಳಲ್ಲಿ ವಾಹನಗಳನ್ನು ನಿಲ್ಲಿಸಿದ್ದರಿಂದ ಬೆಳಗ್ಗೆ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವ ಶಾಲಾ ಬಸ್ಗಳು ಎರಡೂ ಕಡೆಯಿಂದ ಬಂದು ಇಡೀ 40 ಅಡಿ ರಸ್ತೆ ಟ್ರಾಫಿಕ್ ಜಾಮ್ ಆಗಿ ಶಾಲಾ ಬಸ್ಸುಗಳು ಚಲಿಸಲು ಪರದಾಡುವಂತಾಯಿತು.
ಕೇಂದ್ರ ಸಚಿವರು ಇರುವುದರಿಂದ ಮತ್ತು ರಸ್ತೆ ಚಿಕ್ಕದಾಗಿರುವುದರಿಂದ ವಾಹನಗಳ ಓಡಾಟಕ್ಕೆ ತೊಂದರೆಯಾಗದಂತೆ ಬದಲಿ ವ್ಯವಸ್ಥೆಯಗಾಲಿ ಅಥವಾ ವಾಹನಗಳನ್ನು ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸದಂತೆ ಪೊಲೀಸರು ಮುನ್ನಚ್ಚರಿಕೆ ಕ್ರಮ ಕೈಗೊಳ್ಳಬೇಕಿತ್ತು.
ಇಲ್ಲವೇ ಸಚಿವರ ಕಾರ್ಯಾಲಯದವರಾಗಲಿ ವಾಹನಗಳ ಓಡಾಟಕ್ಕೆ ತೊಂದರೆಯಾಗದಂತೆ ವಾಹನಗಳು ಚಲಿಸುವಂತೆ ನೋಡಿಕೊಳ್ಳುವ ವ್ಯವಸ್ಥಯನ್ನಾದರೂ ಮಾಡಬೇಕಿತ್ತು, ಯಾವುದನ್ನೂ ಮಾಡದೆ ಹತ್ತಾರು ಶಾಲಾ ವಾಹನಗಳು ಒಂದಕ್ಕೊಂದು ಜಾಮ್ ಆಗಿ ಟ್ರಾಫಿಕ್ ಆಗಿದ್ದರೂ ಯಾರೂ ತಲೆಯನ್ನೇ ಕೆಡಿಸಿಕೊಳ್ಳಲಿಲ್ಲ.
ದ್ವಿಚಕ್ರ ವಾಹನ ಸವಾರರು, ಆಟೋಗಳಲ್ಲಿ ಶಾಲಾ ಮಕ್ಕಳನ್ನು ಕರೆದಕೊಂಡು ಹೋಗುವವರು ಇಂದು ಪರಾದುವಂತಾಗಿತ್ತಲ್ಲದೆ, ಮಕ್ಕಳನ್ನು ಸುರಕ್ಷಿತವಾಗಿ ಹೇಗಪ್ಪ ಎಂದು ಪರದಾಡುತ್ತಿದ್ದದ್ದು ಕಂಡು ಬಂದಿತು.