ತುಮಕೂರು:ದೇವರಾಜ ಅರಸು,ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಂತರ ಅಹಿಂದ ವರ್ಗಗಳ ನಾಯಕರ ಸ್ಥಾನ ತುಂಬಿರುವ ಕೆ.ಎನ್.ರಾಜಣ್ಣ ಅವರ 75ನೇ ಹುಟ್ಟು ಹಬ್ಬ ಹಾಗೂ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭ,ಅಹಿಂದ ಮತ್ತು ಶೋಷಿತ ಸಮುದಾಯಗಳ ಪಾಲಿಗೆ ಸ್ವಾಭಿಮಾನದ ಹಬ್ಬವಾಗಿದ್ದು, ಎಲ್ಲಾ ಶೋಷಿತ ಸಮುದಾಯಗಳ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಜಾತ್ಯಾತೀತ ಯುವ ವೇದಿಕೆ ಅಧ್ಯಕ್ಷ ವಿರೂಪಾಕ್ಷ ಡ್ಯಾಗೇರಹಳ್ಳಿ ಕರೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕೆ.ಎನ್.ರಾಜಣ್ಣ ಅವರು ತಮ್ಮ 50 ವರ್ಷಗಳ ರಾಜಕೀಯ ಜೀವನದಲ್ಲಿ ತಬ್ಬಲಿ ಸಮುದಾಯಗಳ ನೋವು, ನಲಿವುಗಳಲ್ಲಿ ಭಾಗಿಯಾಗಿದ್ದಾರೆ.ದ್ವನಿಯಿಲ್ಲದ ಸಮುದಾಯಗಳ ದ್ವನಿಯಾಗಿ ಕೆಲಸ ಮಾಡಿದ್ದಾರೆ. ಹಾಗಾಗಿ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ನೋಡಲು ಅಹಿಂದ ವರ್ಗಗಳು ಬಯಸುತ್ತೇವೆ. ರಾಜಕಾರಣದ ಹೊರತಾಗಿಯೂ ದಲಿತ, ಅಲ್ಪಸಂಖ್ಯಾತ,ಹಿಂದುಳಿದ ಮತ್ತು ಬಡವರ ಪರವಾಗಿ ಕೆಲಸ ಮಾಡಿದ್ದಾರೆ.ಹಾಗಾಗಿ ಅವರ ಹುಟ್ಟು ಹಬ್ಬದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಅಹಿಂದ ವರ್ಗ ಹಬ್ಬದ ರೀತಿಯಲ್ಲಿ ಆಚರಿಸಬೇಕಿದೆ ಎಂದರು.

ದಲಿತ ಹೋರಾಟಗಾರರಾದ ಕುಂದೂರು ತಿಮ್ಮಯ್ಯ ಮಾತನಾಡಿ,ಸಹಕಾರ ಸಚಿವರಾಗಿರುವ ಕೆ.ಎನ್.ರಾಜಣ್ಣ ವ್ಯಕ್ತಿಯಲ್ಲ. ಅವರು ಅಹಿಂದ ವರ್ಗದ ಶಕ್ತಿ. ನೊಂದವರ, ಅಳುವವರ ಕಣ್ಣೀರು ಒರೆಸಿ, ಬಿದ್ದವರನ್ನು ಮೇಲೆತ್ತುವ ಕೆಲಸವನ್ನು ಅವರ ರಾಜಕೀಯ ಜೀವನದುದ್ದಕ್ಕೂ ಮಾಡಿಕೊಂಡು ಬಂದಿದ್ದಾರೆ.ಎಲ್ಲಾ ವರ್ಗಗಳ ನಾಡಿ ಮಿಡಿತ ಅರಿತು ಕೆಲಸ ಮಾಡಿದವರು. ಹಾಗಾಗಿ ಅವರ ಹುಟ್ಟು ಹಬ್ಬದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದರು.
ಮುಖಂಡರಾದ ವೀರಣ್ಣ ಸಿದ್ದಾಪುರ ಮಾತನಾಡಿ,ಸಹಕಾರ ಸಚಿವರಾಗಿರುವ ಕೆ.ಎನ್.ರಾಜಣ್ಣ ಅವರು ಜಾತ್ಯಾತೀತ, ಪಕ್ಷಾತೀತವಾಗಿ ಅಭಿಮಾನಿಗಳನ್ನು ಹೊಂದಿದ್ದಾರೆ.ಸಮಾಜದಲ್ಲಿ ಅತ್ಯಂತ ಕಡಿಮೆ ಜನಸಂಖ್ಯೆ ಹೊಂದಿರುವ ಸಮುದಾಯಗಳಿಗೆ ಅಫೆಕ್ಸ್ ಮತ್ತು ಡಿಸಿಸಿ ಬ್ಯಾಂಕ್ ಮೂಲಕ ಸಾಲ ಸೌಲಭ್ಯ ನೀಡಿ, ಅವರು ಸಹ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ್ದಾರೆ.ಹಾಗಾಗಿ ಎಲ್ಲಾ ಶೋಷಿತ ಸಮುದಾಯಗಳು ತಮ್ಮ ಮನೆಯ ಹಬ್ಬದಂತೆ ಈ ಕಾರ್ಯಕ್ರಮವನ್ನು ಸಂಭ್ರಮಿಸಬೇಕು ಎಂದರು.
ಕುಳುವ ಮಹಾಸಭಾದ ಲೋಕೇಶಸ್ವಾಮಿ ಮಾತನಾಡಿ, ಕುಳುವ ಸಮಾಜಕ್ಕೆ ಸೇರಿದ ಕೊರಮ, ಕೊರಚ, ಕೊರವ ಸಮುದಾಯಗಳಿಗೆ ಅರ್ಥಿಕ ನೆರವು ನೀಡುವ ಮೂಲಕ ಆ ಸಮುದಾಯಗಳ ಏಳಿಗೆಗೆ ಕೆ.ಎನ್.ಆರ್.ದುಡಿದಿದ್ದಾರೆ. ಹಾಗಾಗಿ ಕುಳುವ ಸಮಾಜದ ಎಲ್ಲಾ ಬಂಧುಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.
ದರೈಸ್ತ್ರಿ ಕಲ್ಚರಲ್ ಟ್ರಸ್ಟ್ನ ಅಧ್ಯಕ್ಷ ಎ.ರಾಮಚಂದ್ರಪ್ಪ ಮಾತನಾಡಿ,ದೇವರಾಜ ಅರಸು, ಸಿದ್ದರಾಮಯ್ಯ ನಂತರದಲ್ಲಿ ಸಾಮಾಜಿಕ ನ್ಯಾಯದ ಪರವಾಗಿ ಕೆಲಸ ಮಾಡುತ್ತಿರುವ ಕೆ.ಎನ್.ರಾಜಣ್ಣ, ಎಲ್ಲ ಶೋಷಿತ ವರ್ಗಗಳ ಶಕ್ತಿಯಾಗಿದ್ದಾರೆ.ಹಾಗಾಗಿ ಇವರ ಅಮೃತ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ನಮ್ಮನ್ನು ನಾವು ಗೌರವಿಸಿಕೊಳ್ಳುವ ಕೆಲಸ ಆಗಲಿದೆ ಎಂದರು.
ವಾಲ್ಮೀಕಿ ಸಮಾಜದ ಕುಪ್ಪೂರು ಶ್ರೀಧರ್, ಪುಟ್ಟಣ್ಣ ಯಾದವ್,ಜಾತ್ಯಾತೀತ ಯುವ ವೇದಿಕೆ ಕಾರ್ಯಾಧ್ಯಕ್ಷ ಮುರುಳಿ ಕುಂದೂರು ಮಾತನಾಡಿದರು.ಸುದ್ದಿಗೋಷ್ಠಿಯಲ್ಲಿ ಜಾತ್ಯಾತೀತ ಯುವ ವೇದಿಕೆಯ ಕಾರ್ಯದರ್ಶಿ ಕೆಸ್ತೂರು ಮೂರ್ತಿ, ಮನುಚಕ್ರವರ್ತಿ, ಡಾ.ಹೆಚ್.ಪಿ.ಗುಂಡಣ್ಣ, ಶಿವಕುಮಾರ್, ಡಾ.ಲಕ್ಷ್ಮಿರಂಗಯ್ಯ, ಸಂಜು.ಬಿ, ರಾಜು, ಕಾರ್ತಿಕ್ ನಾಯಕ್, ರಮೇಶ್ ಯರೇಕಟ್ಟೆ, ಮಂಜುನಾಥ್ ವಡ್ಡೆ, ಮೋಹನಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.