ತುಮಕೂರು:ಪ್ರಪಂಚದಲ್ಲಿ ಡಾಕ್ಟರ್,ಇಂಜಿನಿಯರ್,ವಿಜ್ಞಾನಿ,ವಕೀಲರಾಗಲು ಕಾಲೇಜುಗಳಿವೆ.ಆದರೆ ಮಾನವೀಯತೆ, ಸಹೋದರತೆ,ಪರಸ್ವರ ಪ್ರೀತಿಯಿಂದ ಸತ್ಪ್ರಜೆಯಾಗಿ ಬದುಕುವುದನ್ನು ಕಲಿಸುವ ಯಾವ ಕಾಲೇಜುಗಳು ಇಲ್ಲ.ಹಾಗಾಗಿಯೇ ಸಾಂಪ್ರದಾಯಕ ಶಿಕ್ಷಣದ ಜೊತೆಗೆ ಧಾರ್ಮಿಕ ಮತ್ತು ಲೌಕಿಕ ಜ್ಞಾನದ ಶಿಕ್ಷಣವೂ ಅಗತ್ಯವಿದೆ ಎಂದು ವಿಧಾನಸಭೆಯ ಸಭಾಪತಿ ಯು.ಟಿ.ಖಾದರ್ ಅಭಿಪ್ರಾಯಟ್ಟರು.
ನಗರದ ಧ್ಹಾನ್ ಪ್ಯಾಲೇಸ್ನಲ್ಲಿ ಸ್ಟೂಡೆಂಟ್ ಇಸ್ಲಾಮಿಕ್ ಅರ್ಗೈನೇಜೇಷನ್ ಅಫ್ ಇಂಡಿಯಾ ವತಿಯಿಂದ ಆಯೋಜಿಸಿದ್ದ 18ನೇ ವರ್ಷದ ಪ್ರತಿಭಾಪುರಸ್ಕಾರ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದಿಸಿ ಮಾತನಾಡಿದ ಅವರು, ಶಿಕ್ಷಣವೆಂದರೆ ಬದುಕಿನ ಎಲ್ಲಾ ಸಮಸ್ಯೆಗಳನ್ನು ಎದುರಿಸಿ,ಎಲ್ಲರಲ್ಲಿಯೂ ಸಂತೋಷವನ್ನು ಉದ್ದೀಪನಗೊಳಿಸುವುದೇ ಆಗಿದೆ. ಈ ನಿಟ್ಟಿನಲ್ಲಿ ಎಸ್.ಐ.ಓ ಕೆಲಸ ಶ್ಲಾಘನೀಯ ಎಂದರು.
ಸಮಸ್ಯೆಯನ್ನು ಸೃಷ್ಟಿಸುವವನು ನಿಜವಾದ ನಾಯಕನಲ್ಲ. ಸಮಸ್ಯೆಯ ಮೂಲ ತಿಳಿದು ಅದನ್ನು ಹೋಗಲಾಡಿಸುವವನೇ ನಿಜವಾದ ನಾಯಕ.ಇಂದು ಸಮಾಜವನ್ನು ಒಡೆಯುವವರ ಸಂಖ್ಯೆಯೇ ಹೆಚ್ಚಾಗಿದೆ.ಅವುಗಳ ನಡುವೆ ಇಂತಹ ಕಾರ್ಯಕ್ರಮಗಳ ಮೂಲಕ ಎಸ್.ಐ.ಓ ಸಮಾಜ ಕಟ್ಟುವ ಕೆಲಸ ಮಾಡುತ್ತಿದೆ. ಭವಿಷ್ಯದ ಪ್ರಜೆಗಳಾದ ಮಕ್ಕಳ ಮುಂದಿರುವ ಗುರಿಗಳೇನು,ಅವುಗಳನ್ನು ತಲುಪಲು ಇರುವ ದಾರಿಗಳೇನು ಎಂಬುದನ್ನು ಮನವರಿಕೆ ಮಾಡಿಕೊಡುವ ಕೆಲಸ ಮಾಡುತ್ತಿದೆ.ಇದು ವಿದ್ಯಾರ್ಥಿಯ ಕನಸು ಈಡೇರುವುದರ ಜೊತೆಗೆ,ಆತ ಸತ್ಪಜೆಯಾಗಿ ಸಹ ರೂಪಗೊಳ್ಳಲು ಸಾಧ್ಯವಾಗು ತ್ತದೆ ಎಂದು ಯು.ಟಿ.ಖಾದರ್ ನುಡಿದರು.
ಇಡೀ ವಿಶ್ವದಲ್ಲಿಯೇ ಭಾರತದ ಸಂವಿಧಾನಕ್ಕೆ ಮಹತ್ವವಿದೆ.ಬಡವ-ಬಲ್ಲಿದ ಎಲ್ಲರೂ ಸಹ ಇದರ ಅಡಿಯಲ್ಲಿ ರಕ್ಷಣೆ ಪಡೆಯಬಹುದು.ಯಾವುದೇ ವ್ಯಕ್ತಿ ತಾನಾಡುವ ಮಾತು ಮತ್ತು ಮಾಡುವ ಕೆಲಸ ದೇಶದ ಅಭಿವೃದ್ದಿಗೆ ಪೂರಕವಾಗಿದ್ದರೆ ಆತ ದೇಶಪ್ರೇಮಿ.ದೇಶ ಅಭಿವೃದ್ದಿಗೆ ಮಾರಕವಾಗಿದ್ದರೆ ಆತನ ದೇಶದ್ರೋಹಿ.ವಿದ್ಯಾವಂತರೇ ಇಂತಹ ಸಮಸ್ಯೆ ಸೃಷ್ಟಿ ಮಾಡುತಿದ್ದಾರೆ.ಹೆಚ್ಚು ವಿದ್ಯಾವಂತರೇ ಅತಿಹೆಚ್ಚು ಕೋಮವಾದಿ,ಭ್ರಷ್ಟಾಚಾರಿ,,ಭಯೋತ್ಪಾಧಕನಾಗಿ ಬದಲಾಗುತ್ತಿದ್ದಾನೆ. ಹಾಗಾಗಿ ಶಿಕ್ಷಣದ ಜೊತೆಗೆ, ವ್ಯಕ್ತಿತ್ವ ರೂಪಿಸುವ ಕೆಲಸವೂ ಆಗಬೇಕಾಗಿದೆ ಎಂದು ಖಾದರ್ ನುಡಿದರು.
ವಿದ್ಯಾರ್ಥಿ ಯುವಜನರು ಈ ದೇಶದ ಭವಿಷ್ಯ.ನಿಮ್ಮ ಪೋಷಕರು,ಗುರು,ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಮುನ್ನೆಡೆಯಿರಿ.ತಾಳ್ಮೆಯ ಜೊತೆಗೆ,ಧೃಡ ಸಂಕಲ್ಪವಿದ್ದರೆ ಯಶಸ್ಸು ತಾನಾಗಿಯೇ ದೊರೆಯುತ್ತದೆ.ನಿಮ್ಮೆಲ್ಲರೂ ಸೇರಿ ಸಮಾಜದಲ್ಲಿ ಸಂಘರ್ಷ ಸೃಷ್ಟಿಸುವ ವಿಚಿದ್ರಕಾರಿ ಶಕ್ತಿಗಳ ವಿರುದ್ದ ಹೋರಾಡಬೇಕಾಗಿದೆ.ನೀವು ಶಾಂತಿಯನ್ನು ನಮಗೆ ನೀಡಿದರೆ, ನಾವು ಅಭಿವೃದ್ದಿಯನ್ನು ನಿಮ್ಮ ಕಾಲ ಬುಡಕ್ಕೆ ತರುತ್ತೇವೆ ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಎಸ್.ಐ.ಓ ರಾಜ್ಯ ಕಾರ್ಯದರ್ಶಿ ಮಹಮದ್ ನಾಸೀರ್, ಕಳೆದ 40ವರ್ಷಗಳಿಂದ ಶಿಕ್ಷಣ ಮತ್ತು ಸಮಾಜಸೇವೆಯಲ್ಲಿ ಎಸ್.ಐ.ಓ ತೊಡಗಿಕೊಂಡಿದೆ. ಕಳೆದ 22 ವರ್ಷಗಳಿಂದ ಪ್ರತಿಭಾನ್ವಿತ ಮಕ್ಕಳನ್ನು ಗುರುತಿಸಿ, ಅವರನ್ನು ಪ್ರೋತ್ಸಾಹಿಸುವ ಕೆಲಸವನ್ನು ಮಾಡುತ್ತಾ ಬಂದಿದೆ.ಕೋವಿಡ್ನಿಂದಾಗಿ ನಾಲ್ಕು ವರ್ಷಗಳ ಕಾಲ ಪ್ರತಿಭಾ ಪುರಸ್ಕಾರ ಮಾಡಲು ಸಾಧ್ಯವಾಗಲಿಲ್ಲ.ಮಕ್ಕಳಿಗೆ ಶಿಕ್ಷಣದ ಜೊತೆಗೆ, ಲೋಕಜ್ಞಾನದ ಅರಿವು ಮೂಡಿಸುವುದೇ ಎಸ್.ಐ.ಓ ಉದ್ದೇಶವೆಂದರು.
ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಹಿರೇಮಠದ ಡಾ.ಶ್ರೀಶಿವಾನಂದ ಶಿವಾಚಾರ್ಯಸ್ವಾಮೀಜಿ ವಹಿಸಿದ್ದರು.ವೇದಿಕೆಯಲ್ಲಿ
ಮಾಜಿ ಶಾಸಕರಾದ ಎಸ್.ಷಪಿ ಅಹಮದ್, ಡಾ.ರಫೀಕ್ ಅಹಮದ್, ಮುಖಂಡರಾದ ಇಕ್ಬಾಲ್ ಅಹಮದ್ ಮಾತನಾಡಿದರು. ವೇದಿಕೆಯಲ್ಲಿ ಎಸ್ಪಿ ಅಶೋಕ.ಕೆ.ವಿ, ಶಾಹೀನ್ ಗ್ರೂಫ್ ಅಫ್ ಎಜುಕೇಷನ್ನ ಅಧ್ಯಕ್ಷ ಡಾ.ಅಬ್ದುಲ್ ಖದೀರ್,ಜಿಲ್ಲಾ ಅಲ್ಪಸಂಖ್ಯಾತ ಅಧಿಕಾರಿ ಶಬ್ಬೀರ್ ಅಹಮದ್, ಪ್ರೊ.ಅಸಾದುಲ್ಲಾ ಖಾನ್, ತಾಜುದ್ದೀನ್ ಷರೀಫ್,ಅಬ್ದುಲ್ ಜಬ್ಬರ ಸಾಬ್, ಪಿಯುಡಿಡಿಪಿಐ ಡಾ.ಬಾಲ ಗುರುಮೂರ್ತಿ, ಎಸ್.ಐ.ಓ ಜಿಲ್ಲಾಧ್ಯಕ್ಷ ಖಲೀಲ್ ಅವರುಗಳು ಉಪಸ್ಥಿತರಿದ್ದರು.
ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮಕ್ಕಳನ್ನು ಪುರಸ್ಕರಿಸಲಾಯಿತು.