ನಗೆಮಲ್ಲಿಗೆಯ ಮೂರ್ಖರ ದಿನಾಚರಣೆ; ನಗೆರಂಜನೆನಾಗರಾಜರಾವ್‍ಗೆ ಗೌತಿ ದತ್ತಿ: ವೈ.ವಿ.ಗುಂಡೂರಾವ್‍ರಿಂದ ನಗೆಬುತ್ತಿ

ತುಮಕೂರು: ಕಳೆದ 31 ವರ್ಷಗಳಿಂದ ಪ್ರತಿ ಏಪ್ರಿಲ್ 1ರಂದು ಮೂರ್ಖರ ದಿನಾಚರಣೆ ಮೂಲಕ ಸದಭಿರುಚಿ ಹಾಸ್ಯ, ರಂಜನೆ ಕಾರ್ಯಕ್ರಮಗಳನ್ನು ಏರ್ಪಡಿಸಿ ಜನಪ್ರೀತಿಗಳಿಸಿರುವ ನಗೆಮಲ್ಲಿಗೆ ಬಳಗ ಈ ಬಾರಿ ಬುಧವಾರ ನಗರದ ಕನ್ನಡ ಭವನದಲ್ಲಿ ಆಯೋಜಿಸಿದ್ದ ಹಾಸ್ಯಪ್ರಧಾನ ಕಾರ್ಯಕ್ರಮ ಯಶಸ್ವಿಯಾಯಿತು.

ನಗೆಮಲ್ಲಿಗೆ ಬಳಗ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ, ಯೋಗಗುರು ಎಂ.ಕೆ. ನಾಗರಾಜರಾವ್ ಅವರಿಗೆ ಪರಿಷತ್ತನಿಂದ 5 ಸಾವಿರ ರೂ. ನಗದು ಒಳಗೊಂಡ ಗೌಡನಕಟ್ಟೆ ತಿಮ್ಮಯ್ಯ ದತ್ತಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಹಿರಿಯ ಹಾಸ್ಯ ಸಾಹಿತಿ ದಿ. ಗೌಡನಕಟ್ಟೆ ತಿಮ್ಮಯ್ಯನವರು ಸಂಸ್ಥಾಪಿಸಿದ ನಗೆಮಲ್ಲಿಗೆ ಸಂಸ್ಥೆಯ ಕಾರ್ಯಕ್ರಮಗಳನ್ನು ನಗೆಮಲ್ಲಿಗೆ ಬಳಗ ಮುಂದುವರೆಸಿಕೊಂಡು ಹೋಗುತ್ತಿದೆ. ಬಳಗದ ಅಧ್ಯಕ್ಷೆ ಬಾ.ಹ. ರಮಾಕುಮಾರಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಸಂಜೆ 31ನೇ ವರ್ಷದ ಮೂರ್ಖರ ದಿನಾಚರಣೆ, ಗೌ.ತಿ. ದತ್ತಿ ಪ್ರಶಸ್ತಿ ಪ್ರದಾನ ಹಾಗೂ ಹಾಸ್ಯಗೋಷ್ಠಿ ಹಮ್ಮಿಕೊಳ್ಳಲಾಗಿತ್ತು.

ನಗೆಬರಹಗಾರ ಮಣ್ಣೆ ರಾಜು ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಅವರು ಎಂ.ಕೆ. ನಾಗರಾಜರಾವ್ ಅವರಿಗೆ ದತ್ತಿ ಪ್ರಶಸ್ತಿ ಪ್ರದಾನ ಮಾಡಿದರು. ನಂತರ ಮಾತನಾಡಿದ ಕೆ.ಎಸ್. ಸಿದ್ಧಲಿಂಗಪ್ಪ, ಸಾಹಿತ್ಯ ಪರಿಷತ್ತಿನ ಸಾಹಿತ್ಯ ಚಟುವಟಿಕೆಗಳಿಗೆ ಸಹಕಾರಿಯಾಗಿ ದತ್ತಿನಿಧಿ ಸ್ಥಾಪನೆ ಮಾಡುವುದು ಸ್ವಾಗತಾರ್ಹ. ನಗೆಮಲ್ಲಿಗೆ ಬಳಗದವರು ಪರಿಷತ್ತಿನಲ್ಲಿ ಗೌಡನಕಟ್ಟೆ ತಿಮ್ಮಯ್ಯನವರ ಹೆಸರಿನಲ್ಲಿ ದತ್ತಿನಿಧಿ ಸ್ಥಾಪಿಸಿ ಅವರ ಸ್ಮರಣೆ ಹಾಗೂ ಹಾಸ್ಯ ಕಾರ್ಯಕ್ರಮಗಳು ಪ್ರತಿ ವರ್ಷ ನಡೆದುಕೊಂಡು ಹೋಗಲು ನೆರವಾಗಿದ್ದಾರೆ. ಸಾಹಿತ್ಯ, ಸಾಂಸ್ಕøತಿಕ ಚಟುವಟಿಕೆಗಳಿಗೆ ಪೂರಕವಾಗಿ ಸಾರ್ವಜನಿಕರು ಪರಿಷತ್ತಿನಲ್ಲಿ ದತ್ತಿ ಸ್ಥಾಪನೆ ಮಾಡಬೇಕು ಎಂದು ಮನವಿ ಮಾಡಿದರು.

ಹಾಸ್ಯ ಸಾಹಿತಿ ವೈ.ವಿ. ಗುಂಡೂರಾವ್ ಅವರು ತಮ್ಮ ಹಾಸ್ಯ ಭಾಷಣದ ಮೂಲಕ ಸಭಿಕರನ್ನು ರಂಜಿಸಿದರು. ಕ್ರಿಯಾಶೀಲತೆ ಬೆಳೆಸಿಕೊಂಡು ದೈನಂದಿನ ಬದುಕಿನಲ್ಲಿ ಹಾಸ್ಯ ಹುಡುಕಿ ಆನಂದಿಸಬೇಕು. ಎಲ್ಲವನ್ನೂ ವಕ್ರ ದೃಷ್ಟಿಯಲ್ಲಿ ನೋಡಿದರೆ ಹಾಸ್ಯ ಹುಟ್ಟುತ್ತದೆ. ಆದರೆ ಬದುಕನ್ನು ವಕ್ರವಾಗಿ ನೋಡಿದರೆ ತತ್ವಶಾಸ್ತ್ರ ಹುಟ್ಟುತ್ತದೆ ಎಂದು ಹೇಳಿದರು.

ಹಾಸ್ಯ ಮನೋಭಾವ, ಹೊಂದಾಣಿಕೆ ಮನಸ್ಥಿತಿ ಬೆಳೆಸಿಕೊಂಡರೆ ಜೀವನದಲ್ಲಿ ಶಾಂತಿ, ನೆಮ್ಮದಿ, ಆರೋಗ್ಯದಿಂದ ಬಾಳಲು ಸಾಧ್ಯವಿದೆ ಎಂದ ಅವರು, ಅನೇಕ ಹಾಸ್ಯ ಪ್ರಸಂಗ, ಅಣಕವಾಡುಗಳನ್ನು ಹೇಳಿ ಸುಮಾರು ಒಂದೂವರೆ ಗಂಟೆ ಕಾಲ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿ ಹಗುರಾಗಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಗೆಮಲ್ಲಿಗೆ ಬಳಗ ಅಧ್ಯಕ್ಷೆ ಬಾ.ಹ. ರಮಾಕುಮಾರಿ ಹಾಗೂ ಪ್ರಾಸ್ತಾವಿಕ ನುಡಿ ನುಡಿದ ಹಿರಿಯ ಸಾಹಿತಿ ಡಾ. ಶೈಲಾ ನಾಗರಾಜ್ ಅವರು ನಗೆಮಲ್ಲಿಗೆಯೊಂದಿಗಿನ ತಮ್ಮ ಒಡನಾಟ, ಪ್ರಯಾಣವನ್ನು ಸಂಭ್ರಮದಿಂದ ನೆನಪು ಮಾಡಿಕೊಂಡರು.

ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘದ ಅಧ್ಯಕ್ಷ ವೈ.ಎಸ್. ನಂಜುಂಡಸ್ವಾಮಿ, ಜಿಲ್ಲಾ ಆಸ್ಪತ್ರೆಯ ತಜ್ಞವೈದ್ಯ ಡಾ. ಜಿ.ನಾಗರಾಜು ಅತಿಥಿಗಳಾಗಿ ಭಾಗವಹಿಸಿದ್ದರು.

ಜಿಲ್ಲಾ ಇಂಜಿನಿಯರ್ಸ್ ಸೇವಾ ಸಂಘದ ಅಧ್ಯಕ್ಷ, ನಗೆಮಲ್ಲಿಗೆ ಬಳಗದ ಜಿ.ಎನ್. ರಾಧಾಕೃಷ್ಣ ರಂಜನೀಯವಾಗಿ ಕಾರ್ಯಕ್ರಮ ನಿರೂಪಿಸಿದರು. ಬಳಗದ ಅಬ್ಬಿನಹೊಳೆ ಸುರೇಶ್, ವಿಶ್ವನಾಥ್ ಸ್ವದೇಶಿ, ಡಿ.ವಿ.ಶೇಷಾಚಲ, ಗೌ.ತಿ. ರಂಗನಾಥ್, ಗೌ.ತಿ. ವೆಂಕಟಾಚಲ, ಸಂಕೇತ್ ಗುರುದತ್, ದೊಂಬರನಹಳ್ಳಿ ನಾಗರಾಜ್, ವೆನ್ನಲ ಕೃಷ್ಣ ಮೊದಲಾದವರು ಭಾಗವಹಿಸಿದ್ದರು.

ಇದಕ್ಕೂ ಮೊದಲು ನಡೆದ ಹಾಸ್ಯಗೋಷ್ಠಿಯಲ್ಲಿ ಕಲಾ ಮಂಜುನಾಥ್, ಜಗನ್ನಾಥ್, ಎಲ್.ಆರ್. ಚಂದ್ರಶೇಖರ್, ಓ.ಕೆ. ವೀಣಾ ಚೆನ್ನಬಸಪ್ಪ, ಶೈಲಜಾ ಬಾಬು, ಸಿಹಿಜೀವಿ ವೆಂಕಟೇಶ್ವರ, ಮಾರುತೇಶ್ ಕಸಾಪುರ, ದೊಂಬರನಹಳ್ಳಿ ನಾಗರಾಜ್ ಅವರು ಪ್ರೇಕ್ಷಕರನ್ನು ರಂಜಿಸಿದರು.

Leave a Reply

Your email address will not be published. Required fields are marked *