ದೇಶದಲ್ಲಿ ಗಾಂಧಿ ವಿಚಾರಧಾರೆಗಳನ್ನು ಕೊಲ್ಲುವ ಪ್ರಯತ್ನ- ವೋಡೆ.ಪಿ.ಕೃಷ್ಣ

ತುಮಕೂರು:ಇಡೀ ವಿಶ್ವ ಮಹಾತ್ಮಗಾಂಧಿಯವರನ್ನು ಸತ್ಯ ಮತ್ತು ಅಹಿಂಸೆಯ ಪ್ರತಿರೂಪವಾಗಿ ನೋಡುತ್ತಿದೆ. ಆದರೆ ನಮ್ಮ ದೇಶ ಕೆಲ ಸೋಷಿಯಲ್ ಮೀಡಿಯಾಗಳು ಗಾಂಧಿಯ ವಿರುದ್ದ ನಿರಂತರ ಅಪಪ್ರಚಾರ ಮಾಡುತ್ತಾ, ಗಾಂಧಿಯನ್ನು ಕೊಂದಂತೆ, ಗಾಂಧೀಜೀ ವಿಚಾರ ಧಾರೆಗಳನ್ನು ಕೊಲ್ಲುವ ಪ್ರಯತ್ನ ನಡೆಸುತ್ತಿರುವುದು ವಿಷಾದದ ಸಂಗತಿಯಾಗಿದೆ ಎಂದು ಬೆಂಗಳೂರು ಗಾಂಧಿ ಭವನ ಅಧ್ಯಕ್ಷರಾದ ನಾಡೋಜ ವೋಡೆ.ಪಿ.ಕೃಷ್ಣ ಬೇಸರ ವ್ಯಕ್ತಪಡಿಸಿದ್ದಾರೆ.

ನಗರದ ಬಾಪೂಜಿ ವಿದ್ಯಾಸಂಸ್ಥೆಯ ರವೀಂದ್ರ ಕಲಾನೀಕೇತನದ ಹೆಚ್.ಎಂ.ಗಂಗಾಧರಯ್ಯ ಆರ್ಟ್‍ಗ್ಯಾಲರಿಯಲ್ಲಿ ಆಯೋಜಿಸಿದ್ದ ಸರ್ವೋದಯ ದಿನಾಚರಣೆ, ಮಹಾತ್ಮಗಾಂಧಿ ಆತ್ಮಕಥನ ನನ್ನ ಸತ್ಯಾನ್ವೇಷಣೆ ಮಹಾ ಕೃತಿಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಗಾಂಧಿವಾದಿ ಎಂ.ಬಸವಯ್ಯ ವಿರಚಿತ “ಸತ್ಯಾನ್ವೇಷಣೆ” ಹಾಗೂ “ಫಾತಕ ಲೋಕದಿಂದ ಗಾಂಧಿಯಾನದೆಡೆಗೆ” ಕೃತಿಗಳನ್ನು ಬಿಡುಡಗೆ ಮಾಡಿ ಮಾತನಾಡುತಿದ್ದ ಅವರು,ಯುವಜನರು ಸಹ ಏಕಾಗ್ರತೆಯ ಕೊರತೆಯಿಂದ ಸತ್ಯ, ಸುಳ್ಳುಗಳ ವಿಮರ್ಶೆ ಮಾಡದೆ ನಡೆದು ಕೊಳ್ಳುತ್ತಿದ್ದಾರೆ.ಇಂತಹ ಯುವ ಜನರಿಗೆ ಎಂ.ಬಸವಯ್ಯ ಅವರು ಬರೆದಿರುವ ನನ್ನ ಸತ್ಯಾನ್ವೇಷಣೆ ಕೃತಿ ಗಾಂಧಿಜೀಯ ಬದುಕಿನ ವಿವಿಧ ಮಜಲುಗಳನ್ನು ತೋರಿಸಲಿದೆ ಎಂದರು.

ಗಾಂಧೀಜಿಯ ಆತ್ಮಚರಿತ್ರೆ ಮೈ ಎಕ್ಸ್‍ಪೆರಿಮೆಂಟ್ ಅಫ್ ಟ್ರೂಥ್ ನಂತಹ ಮತ್ತೊಂದು ಕೃತಿ ಇದುವರೆಗೂ ಬಂದಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನ ಕಾನೂನಿನ ಪಾಠ ಮಾಡಿದರೆ, ಗಾಂಧೀಜಿ ಅವರ ಈ ಕೃತಿ ಜನರಿಗೆ ನೈತಿಕತೆಯ ಪಾಠ ಹೇಳಲಿದೆ. ಸತ್ಯಾಗ್ರಹವೆಂದರೆ ನ್ಯಾಯಕ್ಕಾಗಿ ನಿರಂತರ ಆಗ್ರಹ. ಗಾಂಧಿಯನ್ನು ದೈಹಿಕವಾಗಿ ಕೊಲ್ಲಲಾಗಿದೆಯೇ ಹೊರತು, ಗಾಂಧಿಯ ವಿಚಾರಧಾರೆಗಳಿಗೆ ಎಂದಿಗೂ ಸಾವಿಲ್ಲ.ಇಡೀ ಪ್ರಪಂಚವೇ ಗಾಂಧಿ ಮಾರ್ಗದಲ್ಲಿ ನಡೆಯಲು ಉತ್ಸುಕವಾಗಿದೆ. ಮೂಲಭೂತವಾದ, ಹಿಂಸಾವಾದ ಮತ್ತು ಕೋಮುವಾದ ಇವುಗಳ ವಿರುದ್ದ ಭಾರತೀಯರು ಹೋರಾಟ ರೂಪಿಸ ಬೇಕಿದೆ. ವಿಜ್ಞಾನ ಮತ್ತು ಆಧ್ಯಾತ್ಮವನ್ನು ಒಗ್ಗೂಡಿಸುವ ಕೆಲಸ ಆಗಬೇಕಿದೆ. ಆದ್ಯಾತ್ಮ ರಹಿತ ವಿಜ್ಞಾನ ಭೂಮಿಯ ನಾಶಕ್ಕೆ ಕಾರಣವಾಗಬಹುದು ಎಂಬ ಗಾಂಧಿಜೀಯ ಸಂದೇಶವನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ. ಸರ್ವೋದಯವೆಂದರೆ ಬಹುಜನ ಸುಖಿಃನೋಭವಂತು ಅಲ್ಲ, ಸರ್ವೆಜನ ಸುಖಿಃನೋಭವಂತು ಎಂದು ವೋಡೆ ಪಿ ಕೃಷ್ಣ ತಿಳಿಸಿದರು.

ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ, ಗಾಂಧೀಜಿಯನ್ನು ಯುವಜನರಿಗೆ ಪರಿಚಯಿಸುವ ನಿಟ್ಟಿನಲ್ಲಿ ಎಂ.ಬಸವಯ್ಯ ಅವರ ಬರೆದಿರುವ ಸತ್ಯಾನ್ವೇಷಣೆ ಹಾಗೂ ಡಾ.ಹೆಚ್.ಎಸ್.ಸುರೇಶ್ ಅವರು ಬರೆದಿರುವ ಘಾತಕ ಲೋಕದಿಂದ ಗಾಂಧಿಯಾನದೆಡೆಗೆ ಎರಡು ಪುಸ್ತಕಗಳನ್ನು ಜಿಲ್ಲೆಯ ಪ್ರತಿ ಶಾಲಾ, ಕಾಲೇಜುಗಳ ಗ್ರಂಥಾಲಯಗಳಲ್ಲಿ ದೊರೆಯುವಂತೆ ಮಾಡಲಿದ್ದೇವೆ. ಅಲ್ಲದೆ ಜಿಲ್ಲಾ ಕಾರಾಗೃಹದ ಖೈದಿಗಳಿಗೂ ನೀಡಲಾಗುವುದು. ಇಂತಹ ಕಾರ್ಯಕ್ರಮದಲ್ಲಿ ಹೆಚ್ಚು ಯುವಜನರು ಪಾಲ್ಗೊಳ್ಳುವಂತೆ ಮಾಡಲಾಗುವುದು. ಯುವಜನರನ್ನು ಮಹಾತ್ಮಗಾಂಧಿಜೀ ಸಂದೇಶದ ರಾಯಭಾರಿಗಳಾಗಿ ಕೆಲಸ ಮಾಡಬೇಕಾಗಿದೆ ಎಂದರು.

ಗಾಂಧಿ ಸ್ಮಾರಕ ನಿಧಿಯ ನಿರ್ದೇಶಕರಾದ ಪ್ರೊ.ಜಿ.ಬಿ.ಶಿವರಾಜು ಮಾತನಾಡಿ, ಗಾಂಧಿಯನ್ನು ಮುಂದಿನ ಪೀಳಿಗೆಗೆ ಪರಿಚಿಯಿಸುವ ನಿಟ್ಟಿನಲ್ಲಿ ಬಾಪೂಜಿ ವಿದ್ಯಾಸಂಸ್ಥೆಯ ಎಂ.ಬಸವಯ್ಯನವರ ಪಾತ್ರ ದೊಡ್ಡದು,ಇಳಿ ವಯಸ್ಸಿನಲ್ಲಿಯೂ ಇಂತಹ ಮೇರುಕೃತಿಯನ್ನು ರಚಿಸಿದ್ದಾರೆ.ಗಾಂಧಿ ಸ್ಮಾರಕ ನಿಧಿಯಿಂದ 200 ಪುಸ್ತಕಗಳನ್ನು ಕೊಂಡು, ಅದನ್ನು ಫೆ.11ರಿಂದ ಮಂಡ್ಯದಲ್ಲಿ ನಡೆಯುವ 78ನೇ ಸವೋರ್ದಯ ಮೇಳದಲ್ಲಿ ಹಂಚಲಾಗುವುದು. ಸಮಾಜಮುಖಿಯಾಗಿ ಚಿಂತಿಸದವ ಸದಾ ಗೃಹಸ್ಥನಾಗಿರಲು ಸಾಧ್ಯವಿಲ್ಲ ಎಂಬ ಗಾಂಧಿಯ ಮಾತುಗಳು ನಮಗೆಲ್ಲರಿಗೂ ಅನ್ವಯಿಸುತ್ತದೆ. ನಾನು ಈ ರಾಷ್ಟ್ರದ ಅಧ್ಯಕ್ಷನಾಗಿದ್ದೇನೆ. ಇದಕ್ಕೆ ಕಾರಣ ಮಹಾತ್ಮಗಾಂಧಿ ಎಂದ ಅಮೇರಿಕಾದ ಅಧ್ಯಕ್ಷನಾಗಿದ್ದ ಬರಾಕ್ ಓಬಾಮ ಅವರ ಮಾತನ್ನು ನಾವೆಲ್ಲರೂ ಮತ್ತೊಮ್ಮೆ ಅವಲೋಕಿಸುವ ಅಗತ್ಯವಿದೆ. ಕೆಲವರು ಗಾಂಧಿ, ಅಂಬೇಡ್ಕರ್, ಬುದ್ದ, ಬಸವಣ್ಣ ನಂತಹ ದೊಡ್ಡವರನ್ನು ಅಪಹಾಸ್ಯ ಮಾಡಿ, ನಾವು ದೊಡ್ಡವರು ಎಂಬ ಭ್ರಮೆಯಲ್ಲಿ ಬದುಕುತಿದ್ದಾರೆ ಎಂದು ಇತ್ತೀಚಿನ ಘಟನೆಗಳ ಕುರಿತು ವಿಷಾದ ವ್ಯಕ್ತಪಡಿಸಿದರು.

ಗಾಂಧಿ ಭವನದ ಕಾರ್ಯದರ್ಶಿ ನರೇಂದ್ರ ಮಾತನಾಡಿ, ಮೊಬೈಲ್‍ನಲ್ಲಿ ಮುಳುಗಿರುವ ನಮ್ಮ ಯುವ ಜನರಿಗೆ ಗಾಂಧೀ ಜೀವನ ಚರಿತೆ ಓದಲು ಸಮಯ ಇಲ್ಲದಂತಾಗಿದೆ. ಎಐ ನಂತಹ ತಂತ್ರಜ್ಞಾನದಿಂದ ಕೃಷಿ ಕೆಲಸಕ್ಕೂ ರೋಬೋಟಿಕ್‍ಗಳು ಬಂದಿರುವ ಕಾಲದಲ್ಲಿ, ವಿದ್ಯಾವಂತ ಯುವ ಜನರಿಗೆ ಕೆಲಸವಿಲ್ಲದೆ ಮನೆಯಲ್ಲಿಯೇ ಕುಳಿತಾಗ ಗಾಂಧಿ ನೆನಪಾಗುತ್ತಾರೆ ಎಂದು ಭವಿಷ್ಯದಲ್ಲಿ ಉಂಟಾಗಬಹುದಾದ ನಿರುದ್ಯೋಗ ಸಮಸ್ಯೆಯನ್ನು ಗಂಭೀರತೆ ಕುರಿತು ಎಚ್ಚರಿಸಿದರು.

Leave a Reply

Your email address will not be published. Required fields are marked *