ತುಮಕೂರು:ಬಲಿಜ ಸಮುದಾಯ ವ್ಯಾಪಾರ, ವ್ಯವಹಾರ, ರಾಜಕೀಯ ಕ್ಷೇತ್ರಗಳಲ್ಲಿ ಮುಂದಿದ್ದು, ಅತ್ಯಂತ ಸಂಘಟಿತ ಸಮುದಾಯವಾಗಿದೆ ಎಂದು ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದರು.
ನಗರದ ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ,ಕನ್ನಡ ಸಾಹಿತ್ಯ ಪರಿಷತ್ ಹಾಗೂ ಜಿಲ್ಲಾ ಬಲಿಜ ಸಂಘ ಆಯೋಜಿಸಿದ್ದ ಕಾಲಜ್ಞಾನಿ ಶ್ರೀಯೋಗಿ ನಾರೇಯಣ ಯತೀಂದ್ರರ 300ನೇ ಜಯಂತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,ಸಮುದಾಯದ ಹಿರಿಯರ ಜಯಂತಿಗಳು ಜನರನ್ನು ಒಗ್ಗೂಡಿಸಲು ಸಹಕಾರಿಯಾಗಲಿವೆ ಎಂದರು.
ಕೈವಾರ ತಾತಯ್ಯ ಮಹಾನ್ ಕಾಲಜ್ಞಾನಿಗಳು, ತಮ್ಮ ಆಧ್ಯಾತ್ಮ ಶಕ್ತಿಯಿಂದಲೇ ಇಹ, ಪರದ ಬಗ್ಗೆ ಅವಲೋಕಿಸಿ, ಭೂತ, ವರ್ತಮಾನ ಮತ್ತು ಭವಿಷ್ಯ ಕುರಿತು ನಿಖರವಾಗಿ ತಮ್ಮ ಕಾಲಜ್ಞಾನ ಕೃತಿಯಲ್ಲಿ ಬರೆದಿದ್ದಾರೆ.ಆವರ ಆದರ್ಶಗಳನ್ನು ನಾವುಗಳು ಪಾಲಿಸುವ ಮೂಲಕ ಸಮಾಜದಲ್ಲಿ ಬೆಳೆಯಬೇಕಿದೆ. ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗುತಿದ್ದು, ಅದಕ್ಕೆ ತಕ್ಕಂತೆ ನಾವುಗಳು ಬದಲಾಗುವ ಮೂಲಕ ಇಂದಿನ ಪೈಪೊಟಿ ಯುಗಕ್ಕೆ ನಮ್ಮ ಮಕ್ಕಳನ್ನು ಸಜ್ಜುಗೊಳಿಸಬೇಕಾಗಿದೆ ಎಂದು ಜಿ.ಬಿ.ಜೋತಿಗಣೇಶ್ ತಿಳಿಸಿದರು.
ಬಿಜೆಪಿ ಓಬಿಸಿ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾದ ಸ್ಪೂರ್ತಿ ಚಿದಾನಂದ್ ಮಾತನಾಡಿ,ಕೈವಾರ ತಾತಯ್ಯ ಎಂದು ಕರೆಯುವ ಶ್ರೀಯೋಗಿ ನಾರೇಯಣ ಅವರು ತಮ್ಮ ಆದ್ಯಾತ್ಮ ಶಕ್ತಿಯಿಂದ ದೇಶದಲ್ಲಿ ಹೆಸರಾದವರು. ಇಂದಿಗೂ ಆ ಪರಂಪರೆ ನಮ್ಮ ಸಮುದಾಯದಲ್ಲಿ ಮುಂದುವರೆದುಕೊಂಡು ಬಂದಿದೆ.ಬಲಿಜ ಸಮುದಾಯವಿರುವ ಪ್ರತಿ ಹಳ್ಳಿಗಳಲ್ಲಿಯೂ ಭಜನಾ ಮಂದಿರಗಳಿವೆ, ತಂಡಗಳಿವೆ. ನಮ್ಮ ಸಮುದಾಯದಲ್ಲಿ ಯೋಗಿ ನಾರೇಯಣ ಅವರಷ್ಟೇ ಅಲ್ಲದೆ, ವಿಜಯ ನಗರ ಸಾಮ್ರಾಜ್ಯದ ಪ್ರಮುಖ ಅರಸನಾದ ಶ್ರೀಕೃಷ್ಣ ದೇವರಾಯ ನಮ್ಮವರು. ಅವರ ಕಾಲದಲ್ಲಿ ಕರ್ನಾಟಕದ ಆಡಳಿತ ಉಚ್ರಾಯ ಸ್ಥಿತಿಯಲ್ಲಿದ್ದು, ಮುತ್ತುರತ್ನಗಳನ್ನು ಬೀದಿಯಲ್ಲಿ ಮಾರುವಂತಹ ಸಮೃದ್ದ ನಾಡು ಕಟ್ಟಿದವರು ನಮ್ಮವರು ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಭಾರತದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿ ಬಾಯಿ ಪುಲೆ ನಮ್ಮವರು. ಅವರು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿದವರು. ಇಂತಹ ಮಹನೀಯರನ್ನು ನಾವು ಸ್ಮರಿಸುವ ಕೆಲಸ ಮಾಡಬೇಕಾಗಿದೆ. ಇಂತಹ ಜಯಂತಿಯನ್ನು ಮತ್ತಷ್ಟು ವಿಜೃಂಭಣೆಯಿಂದ ಆಚರಿಸಲು ನಾವೆಲ್ಲರೂ ಒಗ್ಗೂಡಬೇಕಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ,ಕಾಲಜ್ಞಾನಿ ಶ್ರೀಯತೀಂದ್ರ ನಾರೇಯಣ ಅವರು, ಜಾತಿ, ಭೇಧ ಬಿಟ್ಟು, ದ್ವೇಷ ಅಸೂಯೆ ಹೊರತಾಗಿ ನಾವು ಬಾಳಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅವರ ಆದರ್ಶಗಳನ್ನು ನಾವೆಲ್ಲರೂ ಪಾಲಿಸುವ ಮೂಲಕ ನಮ್ಮ ಮಕ್ಕಳಿಗೆ ಇದನ್ನು ತಿಳಿ ಹೇಳಬೇಕಿದೆ ಎಂದರು.
ವಿಶೇಷ ಉಪನ್ಯಾಸ ನೀಡಿದ ಉಪನ್ಯಾಸ ನೀಡಿದ ನಿವೃತ್ತ ಪ್ರಾಂಶುಪಾಲ ಹೆಚ್.ಬಿ.ಪ್ರಕಾಶ್,ಕಾಲಜ್ಞಾನಿ ಯತೀಂದ್ರ ಯೋಗಿ ನಾರೇಯಣ ಅವರಿಗೂ ಮಹಾಭಾರತ ಕಥೆಗೂ ಸಂಬಂಧವಿದೆ.ಆಷ್ಟಾಕ್ಷರಿ ಮಂತ್ರದ ಮೂಲಕ ದೀಕ್ಷೆ ಪಡೆದ ಮೊದಲ ಯತೀಂದ್ರರು. ಬಾಹ್ಯ ಪೂಜೆಗಿಂತ ಅಂತಃಕರಣದ ಪೂಜೆಗೆ ಹೆಚ್ಚು ಗೌರವವಿದೆ ಎಂಬುದುನ್ನು ಯತೀಂದ್ರರು ಸಾರಿದ್ದರು. ಇಂತಹ ಜಯಂತಿಗಳು ಜನರಲ್ಲಿನ ಪ್ರಜ್ಞೆಯನ್ನು ಜಾಗೃತಗೊಳಿಸುವಂತಾಗಬೇಕು ಎಂದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಈಶ್ವರ್ ಕು.ಮಿರ್ಜಿ, ಯೋಗಿ ಯತೀಂದ್ರ ನಾರಾಯಣೆ ಅವರ ಆದರ್ಶಗಳನ್ನು ನಾವೆಲ್ಲರೂ ಪಾಲಿಸುವ ಮೂಲಕ ಒಳ್ಳೆಯ ಸಮಾಜ ಕಟ್ಟುವ ಕಡೆಗೆ ಹೆಜ್ಜೆ ಹಾಕೋಣ ಎಂದರು.
ಕಾರ್ಯಕ್ರಮದ ಉಪಸ್ಥಿತರಿದ್ದ ಜಿಲ್ಲಾ ಬಲಿಜ ಸಂಘದ ಅಧ್ಯಕ್ಷರಾದ ಟಿ.ಆರ್.ಅಂಜನಪ್ಪ ಮಾತನಾಡಿ,ಆದ್ಯಾತ್ಮದಲ್ಲಿ ಮೇಲು, ಕೀಳು ಎಂಬುದಿಲ್ಲ. ಭಗವಂತನನ್ನು ಯಾರು ಬೇಕಾದರೆ ಒಲಿಸಿಕೊಳ್ಳಬಹುದು ಎಂಬುದಕ್ಕೆ ಶ್ರೀಯೋಗಿನಾರೇಯಣ ಯತೀಂದ್ರರ ಬದುಕೇ ಸಾಕ್ಷಿ. ವ್ಯಕ್ತಿ ಜಾತಿ ಮೀರಿ ಬೆಳೆದಾಗ, ಜಾತ್ಯಾತೀತನಾಗುತ್ತಾನೆ. ಸಣ್ಣ ಸಮುದಾಯಗಳು ದೊಡ್ಡದನ್ನು ಸಾಧಿಸಿರುವ ಅನೇಕ ಉದಾಹರಣೆಗಳು ನಮ್ಮಲ್ಲಿವೆ. ಸಮುದಾಯದ ಶೈಕ್ಷಣಿಕ ಅಭಿವೃದ್ದಿಗಾಗಿ ಸಂಘ ಶ್ರಮಿಸುತ್ತಿದೆ. ಹೆಣ್ಣು ಮಕ್ಕಳ ಹಾಸ್ಟಲ್ ನಿರ್ಮಾಣಕಾರ್ಯ ಪ್ರಗತಿಯಲ್ಲಿದೆ. ಅಲ್ಲದೆ ಸಮುದಾಯ ಭವನ ನಿರ್ಮಾಣಕ್ಕೂ ಮುಂದಿನ ದಿನಗಳಲ್ಲಿ ಯೋಜನೆ ರೂಪಿಸಲಾಗುತ್ತಿದೆ.ನಗರದಲ್ಲಿ ಅಲ್ಲದೆ, ಗ್ರಾಮೀಣ ಭಾಗದ ಪ್ರತಿ ತಾಲೂಕಿನಲ್ಲಿಯೂ ಯೋಗಿ ನಾರೇಯಣ ಯತೀಂದ್ರ ದೇವಾಲಯ, ಸಮುದಾಯಭವನ ನಿರ್ಮಾಣಕ್ಕೆ ಕ್ರಮವಹಿಸಲಾಗುತ್ತಿದೆ. ಮಧುಗಿರಿ ತಾಲೂಕು ವಿಠಲಾಪುರದಲ್ಲಿ ಯೋಗಿ ನಾರೇಯಣ ಅವರ ದೇವಾಲಯ ಮತ್ತು ಸಮುದಾಯ ಭವನ ನಿರ್ಮಾಣ ಕಾರ್ಯ ಆರಂಭವಾಗಿರುವುದು ಸಂತೊಷದ ವಿಚಾರ ಎಂದರು.
ಇದೇ ವೇಳೆ ಎನ್.ಸಿ.ಸಿ.ಯಲ್ಲಿ ವಿಶೇಷ ಸಾಧನೆ ಮಾಡಿದ ಡಾ.ಕಿಶೋರ್ .ವಿ.ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಜಿಲ್ಲಾ ಬಲಿಜ ಸಂಘದ ಮಹಿಳಾ ಅಧ್ಯಕ್ಷರಾದ ಗಿರಿಜಾಂಭ ಮಾತನಾಡಿದರು.ವೇದಿಕೆಯಲ್ಲಿ ಶ್ರೀಯೋಗಿ ನಾರೇಯಣ ಸೇವಾ ಸಮಿತಿಯ ಅಧ್ಯಕ್ಷರಾದ ಎಸ್.ಪಿ. ಶಿವಕುಮಾರ್, ಅಬ್ಬಿನ ಹೊಳೆ ಸುರೇಶ್,ಪತ್ರಕರ್ತ ಟಿ.ಸಿ.ಬಾಲರಾಜು, ಕುಮುದಾ ಹರೀಶ್, ಕ.ಎನ್.ಗುರುಲಿಂಗಯ್ಯ, ಮಂಜುನಾಥ್, ಲಕ್ಷ್ಮಿನಾರಾಯಣಶೆಟ್ಟಿ, ಎಸ್.ಎಸ್.ರಂಗನಾಥ್ ಮತ್ತಿತರರು ಉಪಸ್ಥಿತರಿದ್ದರು.