ರಾಜಕುಮಾರರ ಜೊತೆ 20 ವರ್ಷಗಳ ಕಾಲ ಅವರ ಅತ್ಯಾಪ್ತನಾಗಿ ಇರುವ ಅವಕಾಶ ಸಿಕ್ಕಿದ್ದು ಸೌಭಾಗ್ಯ-ಬರಗೂರು ರಾಮಚಂದ್ರಪ್ಪ

ತುಮಕೂರು: ಡಾ.ರಾಜಕುಮಾರ್ ಅವರನ್ನು ಮೊದಲ ಬಾರಿಗೆ ನೋಡಿದ ನಾನು, ಅವರ ಕೊನೆಗಾಲದ 20 ವರ್ಷಗಳ ಕಾಲ ಅವರ ಅತ್ಯಾಪ್ತನಾಗಿ ಇರುವ ಅವಕಾಶ ಸಿಕ್ಕಿದ್ದು, ನಿಜಕ್ಕೂ ನನ್ನ ಸೌಭಾಗ್ಯ. ಸಿನಿಮಾವನ್ನು ಮೀರಿ ಬೆಳೆದ ವ್ಯಕ್ತಿತ್ವ ಡಾ.ರಾಜುಕುಮಾರ್ ಅವರದ್ದು ಎಂದು ಡಾ.ಬರಗೂರು ರಾಮಚಂದ್ರಪ್ಪ ಹೇಳಿದರು.

ನಗರದ ಕನ್ನಡಭವನದಲ್ಲಿ ಅಮರಜೋತಿ ಕಲಾವೃಂದದವತಿಯಿಂದ ಆಯೋಜಿಸಿದ್ದ“ಡಾ.ರಾಜ್‍ರತ್ನ”ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಹಿರಿಯ ಚಲನಚಿತ್ರ ನಟ ಸುಂದರ್‍ರಾಜ್ ಮತ್ತು ಡಾ.ಲಕ್ಷ್ಮಣದಾಸ್ ಅವರಿಗೆ ಡಾ.ರಾಜ್‍ರತ್ನ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದ ಅವರು,ಡಾ.ರಾಜಕುಮಾರ್ ವೃತ್ತಿ ರಂಗಭೂಮಿ ಮತ್ತು ಹವ್ಯಾಸಿ ರಂಗಭೂಮಿ,ಹಾಗೆಯೇ ಕಲಾತ್ಮಕ ಚಿತ್ರ ಮತ್ತು ವಾಣಿಜ್ಯಮಯ ಚಿತ್ರಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡ ಅತ್ಯಂತ ಸ್ನೇಹಮಯ ಜೀವಿ ಎಂದು ಬಣ್ಣಿಸಿದರು.

ಕಟ್ಟಡಗಳು,ಸೇತುವೆಗಳು ಕುಸಿಯುತ್ತಿರುವ ಇಂದಿನ ಕಾಲದಲ್ಲಿ, ಮನುಷ್ಯ, ಮನುಷ್ಯರ ನಡುವಿನ ಸ್ನೇಹ ಕುಸಿಯದಂತೆ ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ ಎಂದು ನುಡಿದಿದ್ದಾರೆ.

ಹಲವಾರು ಅವಮಾನಗಳನ್ನು ಸಹಿಸಿ,ರಂಗಭೂಮಿ ಮತ್ತು ಚಲನಚಿತ್ರ ರಂಗ ಎರಡರ ನಡುವೆ ಸೇತುವೆ ಕಟ್ಟಿದ ಸಾಮಾಜಿಕ ಸಾಧಕ ಡಾ.ರಾಜಕುಮಾರ್ ದಿಬ್ಬೂರು ಮಂಜು ಅವರಂತಹ ಕಲಾವಿದರಿಂದ ಜೀವಂತವಾಗಿದ್ದಾರೆ.ತನ್ನನ್ನು ದೇವರೆಂದು ನಂಬಿದ ಜನರನ್ನೇ ದೇವರೆಂದುಕೊಂಡು,ಅವರ ನಂಬಿಕೆಗೆ ಚ್ಯುತಿ ಬರದಂತೆ ತೆರೆಯ ಮೇಲೆ ಮತ್ತು ನಿಜ ಜೀವನದಲ್ಲಿ ನಡೆದು ಕೊಂಡು ಮೇರು ವ್ಯಕ್ತಿತ್ವ ಡಾ.ರಾಜ್‍ಕುಮಾರ್, ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದು ಹೆಮ್ಮೆಯ ವಿಚಾರ ಎಂದರು.

1962ರಲ್ಲಿ ನೆರೆ ಬಂದು ಅಪಾರ ನಷ್ಟ ಅನುಭವಿಸಿದಾಗ, ಕನ್ನಡ ಪತ್ರಿಕೆಗಳ ಕೋರಿಕೆಯಂತೆ ಕನ್ನಡ ಚಲನಚಿತ್ರದ ಎಲ್ಲಾ ಕಲಾವಿದರು ಡಾ.ರಾಜಕುಮಾರ್ ನೇತೃತ್ವದಲ್ಲಿ ಒಂದು ತಿಂಗಳ ಕಾಲ ಪ್ರವಾಸ ಮಾಡಿ, ಧನ ಸಂಗ್ರಹಿಸಿ ಸಂತ್ರಸ್ಥರಿಗೆ ನೆರವಾಗುವ ಸಂದರ್ಭದಲ್ಲಿ ಅವರನ್ನು ಮೊದಲ ಬಾರಿಗೆ ನೋಡಿದ ನಾನು, ಅವರ ಕೊನೆಗಾಲದ 20 ವರ್ಷಗಳ ಕಾಲ ಅವರ ಅತ್ಯಾಪ್ತನಾಗಿ ಇರುವ ಅವಕಾಶ ಸಿಕ್ಕಿದ್ದು, ನಿಜಕ್ಕೂ ನನ್ನ ಸೌಭಾಗ್ಯ. ಸಿನಿಮಾವನ್ನು ಮೀರಿ ಬೆಳೆದ ವ್ಯಕ್ತಿತ್ವ ಡಾ.ರಾಜುಕುಮಾರ್ ಅವರದ್ದು,ಬಲಗೈಯಲ್ಲಿ ನೀಡಿದ್ದು ಎಡಗೈಗೆ ಗೊತ್ತಾಗಬಾರದು ಎಂಬಂತೆ, ಅಶಕ್ತ ಕಲಾವಿದರಿಗೆ ನೆರವು ನೀಡಲು ಅನೇಕ ಸಂಗೀತ ಸಂಜೆ ಕಾರ್ಯಕ್ರಮಗಳನ್ನು ನಡೆಸಿದ್ದಾರೆ.ರಾಜ್ಯದಾದ್ಯಂತ ಇರುವ ರಂಗಮಂದಿರಗಳ ನಿರ್ಮಾಣಕ್ಕಾಗಿ 67 ಲಕ್ಷ ರೂ ಧೇಣಿಗೆ ಸಂಗ್ರಹಿಸಿ ನೀಡಿದವರು ಡಾ.ರಾಜ್,ವಿದ್ಯಾರ್ಥಿ ನಿಧಿ,ಕನ್ನಡ ಸಾಹಿತ್ಯ ಪರಿಷತ್ತಿಗೆ ಧೇಣಿಗೆ ಹೀಗೆ ಹಲವು ಸಮಾಜ ಕಾರ್ಯಗಳಲ್ಲಿಯೂ ತೊಡಗಿದವರು ಎಂದರು.

ಡಾ.ರಾಜಕುಮಾರ್ ಅವರಿಗೆ ಜಾತಿ ಪ್ರಾಬಲ್ಯ,ಅರ್ಥಿಕ ಪ್ರಾಬಲ್ಯ,ಶಿಕ್ಷಣದ ಪ್ರಾಬಲ್ಯ ಇರಲಿಲ್ಲ.ಆದರೆ ಅವೆಲ್ಲಾ ನೂನ್ಯತೆಗಳನ್ನು ಮೀರಿ ಬೆಳೆದು ಕನ್ನಡ ನಾಡಿನ ಜನರ ಮನಸ್ಸಿನಲ್ಲಿ ತಮ್ಮ ವ್ಯಕ್ತಿತ್ವದಿಂದಲೇ ಅಚ್ಚಳಿಯದ ಉಳಿದವರು.ಇದು ಅವರ ನಿಜವಾದ ಸಾಮಾಜಿಕ ಸಾಧನೆ ಮತ್ತು ಸಾಂಸ್ಕøತಿಕ ರೂಪಕ ಎಂದು ಡಾ.ಬರಗೂರು ರಾಮಚಂದ್ರಪ್ಪ ಬಣ್ಣಿಸಿದರು.
ಡಾ.ರಾಜ್‍ರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಚಲನಚಿತ್ರ ನಟ ಸುಂದರರಾಜ್ ಮಾತನಾಡಿ,ಕನ್ನಡ ಸಿನಿಮಾರಂಗದಲ್ಲಿ ದುಡಿದ ನನಗೆ ಡಾ.ರಾಜ್‍ಕುಮಾರ್ ಪ್ರಶಸ್ತಿ ಬಂದರೆ ಹೇಗಿರುತ್ತೇ ಎಂದು ಕಲ್ಪನೆ ಮಾಡಿಕೊಳ್ಳುತಿದ್ದ ನನಗೆ ಅಮರಜೋತಿ ಕಲಾವೃಂದ ಡಾ.ರಾಜ್‍ರತ್ನ ಪ್ರಶಸ್ತಿ ನೀಡುವ ಮೂಲಕ ನನ್ನ ಕನಸನ್ನು ನನಸಾಗಿಸಿದೆ.ಇಂದೊಂದು ಸಾರ್ಥಕ ಕ್ಷಣ. ಕಲಾವಿದರಿಗೆ ಪ್ರೇಕ್ಷಕರ ಚಪ್ಪಾಳೆಯೇ ಬಹುಮಾನ.ಡಾ.ರಾಜಕುಮಾರ್ ಸಹಕಲಾವಿದರೊಂದಿಗೆ ಎಷ್ಟು ವಿನಮ್ರವಾಗಿ ನಡೆದುಕೊಳ್ಳುತ್ತಿದ್ದರು ಎಂಬುದನ್ನು ನಾನು ಕಣ್ಣಾರೆ ಕಂಡಿದ್ದೇನೆ.ಒಂದು ಮುತ್ತಿನ ಕಥೆ ನನ್ನ ವೃತ್ತಿ ಜೀವನದಲ್ಲಿಯೇ ಮರೆಯಲಾರದ ಸಿನಿಮಾ. ನಾನು ಅತ್ಯಂತ ಗೌರವದಿಂದ ಕಾಣುತ್ತಿದ್ದ ಶಂಕರ್‍ನಾಗ್ ಈ ಸಿನಿರ್ಮಾ ನಿರ್ದೇಶಿಸಿದರೆ, ಡಾ.ರಾಜಕುಮಾರ್ ಮುಖ್ಯಭೂಮಿಕೆಯಲ್ಲಿದ್ದರು.ಇಬ್ಬರು ವಿಭಿನ್ನ ಕನಸುಗಳನ್ನ ಹೊಂದಿದ್ದ ಕಲಾವಿದರು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಮಕೂರು ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ವಹಿಸಿದ್ದರು.ಡಾ.ಲಕ್ಷ್ಮಣದಾಸ್ ಡಾ.ರಾಜಕುಮಾರ್ ಅವರ ಕುರಿತು ಮಾತನಾಡುವ ಜೊತೆಗೆ, ಅವರ ಕಂದ ಪದ್ಯಗಳನ್ನು ಹಾಡಿ ನೆರೆದಿದ್ದವರನ್ನು ಮಂತ್ರ ಮುಗ್ಧಗೊಳಿಸಿದರು.ಇದೇ ವೇಳೆ ಡಾ.ಓ.ನಾಗರಾಜು,ಡಾ.ಎಲ್.ಸುಮನಡಾ.ಎಲ್.ಸುಧಾ ಮಂಜುನಾಥ್, ಡಾ.ಎ.ಎಸ್.ರಾಜ ಶೇಖರ್,ಡಾ.ಆದರ್ಶ ಅವರುಗಳನ್ನು ಅಭಿನಂದಿಸಲಾಯಿತು.

ಅಮರಜೋತಿ ಕಲಾವೃಂದದ ದಿಬ್ಬೂರು ಮಂಜುನಾಥ್ ಸುಮಾರು 2 ಗಂಟೆಗಳಿಗೂ ಹೆಚ್ಚು ಕಾಲ ಡಾ.ರಾಜ್ ಸಿನಿಮಾಗಳ ಹಾಡುಗಳನ್ನು ಹಾಡುವ ಮೂಲಕ ಮನರಂಜಿಸಿದರು.ವೇದಿಕೆಯಲ್ಲಿ ಡಾ.ನಾಗಭೂಷಣ್ ಬಗ್ಗನಡು, ಡಾ.ಲಕ್ಷ್ಮಿರಂಗಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *