ತುಮಕೂರು:ಭಾರತೀಯ ಚರಿತ್ರೆಯಲ್ಲಿ 1818ರ ಜನವರಿ 01ರಂದು ನಡೆದ ಭೀಮ ಕೋರಗಾಂವ್ ಯುದ್ದ ಈ ದೇಶದ ದಲಿತರು,ಶೋಷಿತ ಪಾಲಿಕೆಗೆ ಮಹತ್ವದ ಮೈಲಿಗಲ್ಲು ಮತ್ತು ಅವರ ಸ್ವಾಭಿಮಾನಕ್ಕೆ ದಕ್ಕಿದ ಗೌರವ ಎಂದು ನಗರಪಾಲಿಕೆ ವಿರೋಧಪಕ್ಷದ ಮಾಜಿ ನಾಯಕ ಜೆ.ಕುಮಾರ್ ತಿಳಿಸಿದ್ದಾರೆ.
ನಗರದ ಟೌನ್ಹಾಲ್ ಮುಂಭಾಗದಲ್ಲಿ ಅಂಬೇಡ್ಕರ್ ಯುವ ಸೇನೆವತಿಯಿಂದ ಆಯೋಜಿಸಿದ್ದ ಭೀಮ ಕೋರಗಾಂವ್ 207ನೇ ವಿಜಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತಿದ್ದ ಅವರು,ಮಹಾರ್ ಸಮುದಾಯಕ್ಕೆ ಸೇರಿದ ದಲಿತ ಸೈನ್ಯಕ್ಕೆ ಮರಾಠರ ಪೇಶ್ವೆಗಳು ಮಾಡಿದ ಅಪಮಾನದ ವಿರುದ್ದ ಸಿಡ್ಡಿದೆದ್ದು,28000 ಶಸ್ತ್ರಸಜ್ಜಿತ ಸೈನಿಕರನ್ನು 500 ಜನ ಮಹಾರ್ ಸೈನಿಕರು ಸದೆಬಡಿದ ತಳಸಮುದಾಯದ ಸ್ವಾಭಿಮಾನಕ್ಕೆ ಪೆಟ್ಟಾದರೆ ಸಹಿಸುವುದಿಲ್ಲ ಎಂಬುದನ್ನು 200 ವರ್ಷಗಳ ಹಿಂದೆಯೇ ತೋರಿಸಿಕೊಟ್ಟಿದ್ದಾರೆ ಎಂದರು.
ಚರಿತ್ರೆ ಪುಟಗಳಲ್ಲಿ ದಾಖಲಾಗದೆ ಮುಚ್ಚಿ ಹೋಗಿದ್ದ ಭೀಮ ಕೋರಗಾಂವ್ ಯುದ್ದದ ಕಥೆಯನ್ನು ಇಂಗ್ಲೇಡಿನಲ್ಲಿ ಓದಿದ ಅಂಬೇಡ್ಕರ್,ಈ ಕುರಿತು ಆಳವಾದ ಅಧ್ಯಯನ ನಡೆಸಿ,ದಲಿತರ ಸ್ವಾಭಿಮಾನದ ಚರಿತ್ರೆಯನ್ನು ಜಗತ್ತಿಗೆ ತಿಳಿಯುವಂತೆ ಮಾಡಿದಲ್ಲದೆ, ಪ್ರತಿವರ್ಷ ಜನವರಿ 01ರಂದು ಇಂಗ್ಲೇಡಿನ ರಾಣಿ ಎಲಿಜಬೆತ್ ನಿರ್ಮಿಸಿದ ಭೀಮ ಕೋರಗಾಂವ್ ವಿಜಯ ಸ್ತಂಭ ಸ್ಥಳಕ್ಕೆ ಭೇಟಿ ನೀಡಿ, ಸ್ಮಾರಕಕ್ಕೆ ನಮನ ಸಲ್ಲಿಸುವ ಮೂಲಕ ಹೊಸ ಅಧ್ಯಾಯ ಬರೆದಿದ್ದಾರೆ.ಈ ದಿನವನ್ನು ನೆನಪು ಮಾಡಿಕೊಂಡು ಮತ್ತಷ್ಟು ಸ್ವಾಭಿಮಾನವನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕಾಗಿದೆ ಎಂದು ಜೆ.ಕುಮಾರ್ ನುಡಿದರು.
ಅಂಬೇಡ್ಕರ್ ಯುವ ಸೇನೆ ಜಿಲ್ಲಾಧ್ಯಕ್ಷ ಗಣೇಶ ಮಾತನಾಡಿ,ಇಂದು ನಾವೆಲ್ಲರೂ ಹೆಮ್ಮೆ ಪಡುವಂತಹ ದಿನ. ಭಾರತದ ರಕ್ತ ಚರಿತ್ರೆಯಲ್ಲಿ ಸ್ವಾಭಿಮಾನಕ್ಕಾಗಿ ನಡೆದ ಯುದ್ದ ಭೀಮ ಕೋರಗಾಂವ್ ಕದನವಾಗಿದೆ.ಮರಾಠರ ಪೇಶ್ವೆ ಎರಡನೇ ಬಾಜಿರಾಯ ಮಹಾರ್ ಸೈನಿಕರಿಗೆ ಅಪಮಾನ ಮಾಡಿ,ಆಸ್ಥಾನಕ್ಕೆ ಹೋಗಲು ಅವಕಾಶ ಮಾಡಿಕೊಟ್ಟ ದ್ವಾರಪಾಲಕನ ಶಿರಶ್ಚೇದನ ಮಾಡಿದಲ್ಲದೆ,ಸೈನ್ಯದಲ್ಲಿ ಮಹತ್ವದ ಸ್ಥಾನ ನೀಡಿದ್ದ ದಂಡನಾಯಕನ್ನು ವಜಾ ಮಾಡಿದ ಪ್ರಸಂಗದಿಂದ ತೀರ ಅವಮಾನಕ್ಕೆ ಒಳಗಾದ ಸೈನಿಕರು ಸಾವಿರಾರು ಸಂಖ್ಯೆಯಲ್ಲಿದ್ದ ಮರಾಠರ ಸೈನಿಕರನ್ನು ಸದೆ ಬಡಿದು, ತಮ್ಮ ಸ್ವಾಭಿಮಾನವನ್ನು ಎತ್ತಿ ಹಿಡಿದ ದಿನವಾಗಿದೆ.ಬ್ರಿಟಿಷರು ಮರಾಠರು ಆಳ್ವಿಕೆ ಮಾಡುತ್ತಿದ್ದ ಪ್ರದೇಶವನ್ನು ನಿಮಗೆ ಬಿಟ್ಟುಕೊಡು ತ್ತೇವೆಂದರೂ ಒಪ್ಪದೆ,ಭಾರತದ ಶೋಷಿತ ಸಮುದಾಯಗಳಿಗೆ ವಿದ್ಯೆ ನೀಡಿ ಎಂಬ ಕ್ರಾಂತಿಕಾರಿ ಬೇಡಿಕೆಯನ್ನ ಬ್ರಿಟಿಷರ್ ಆಡಳಿತದ ಮುಂದಿಟ್ಟು,ಅಕ್ಷರ ವಂಚಿತ ಸಮುದಾಯಗಳಿಗೆ ಅಕ್ಷರ ದಕ್ಕುವಂತೆ ಮಾಡಿದ ಭೀಮ ಕೋರಗಾಂವ್ ಯುದ್ದ ಭಾರತದ ದಲಿತರ ಪಾಲಿಗೆ ಒಂದು ದೊಡ್ಡ ಮೈಲಿಗಲ್ಲು.ಇದನ್ನು ನಾವೆಲ್ಲರೂ ಅರ್ಥ ಮಾಡಿಕೊಂಡು, ಒಡೆದು ಆಳುವ ನೀತಿಗಳ ವಿರುದ್ದ ಒಂದಾಗಿ ಹೋರಾಟ ಮಾಡಬೇಕಾಗಿದೆ ಎಂದರು.
ಈ ವೇಳೆ ಮುಖಂಡರಾದ ಬೈರೇಶ್,ಕಿರಣ್ ಕೀರ್ತಿ, ಸಂಜಯಕುಮಾರ್, ವಿನೋಧಕುಮಾರ್,ನಾಗರಾಜು, ಸ್ವಾಮಿ, ತಾಹಿರಾಭಾನು, ಅಡವೀಶಪ್ಪ, ಕೆ.ನಾಗರಾಜು, ಮಹಾದೇವ,ಶಾಂತಕುಮಾರ್,ಕುಮಾರಣ್ಣ ಮತ್ತಿತರರು ಪಾಲ್ಗೊಂಡಿದ್ದರು.