ತುಮಕೂರು: ಉಕ್ಕಿನ ಮನುಷ್ಯ ಸರದಾರ್ ವಲ್ಲಭಾಭಾಯಿ ಪಟೇಲ್ ಅವರ 150ನೇ ಜನ್ಮ ವಾರ್ಷಿಕೋತ್ಸವದ ಸ್ಮರಣಾರ್ಥ ದೇಶಾದ್ಯಂತ ರಾಷ್ಟ್ರೀಯ ಏಕತಾ ದಿವಸ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ಜಿಲ್ಲಾ ಬಿಜೆಪಿಯಿಂದ ಇದೇ ಶುಕ್ರವಾರ ನಗರದಲ್ಲಿ ಏಕತಾ ಮೆರವಣಿಗೆ ಆಯೋಜಸಿದ್ದು, ಬೆಳಿಗ್ಗೆ 9 ಗಂಟೆಗೆ ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ವಿಶ್ವವಿದ್ಯಾಲಯ ಬಳಿ ಏಕತಾ ಮೆರವಣಿಗೆಗೆ ಚಾಲನೆ ನೀಡುವರು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.
ನಗರದ ಸಂಸದರ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಸಕರು, ಕೇಂದ್ರ ಸಚಿವ ವಿ.ಸೋಮಣ್ಣನವರು ಸರದಾರ್ ವಲ್ಲಭಭಾಯಿ ಪಟೇಲ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಏಕತಾ ಮೆರವಣಿಗೆಗೆ ಚಾಲನೆ ನೀಡುವರು. ಮೆರವಣಿಗೆಯು ವಿಶ್ವವದ್ಯಾಲಯ ಬಳಿಯಿಂದ ಶಿವಕುಮಾರ ಸ್ವಾಮೀಜಿ ವೃತ್ತ, ಭದ್ರಮ್ಮ ವೃತ್ತ, ಚಾಮುಂಡೇಶ್ವರಿ ರಸ್ತೆ, ಕೆಇಬಿ ರಸ್ತೆ ಮೂಲಕ ಸಾಗಿ ವಿಶ್ವವಿದ್ಯಾಲಯದ ಬಳಿ ಸಮಾಪ್ತಿಗೊಳ್ಳಲಿದೆ. ಯುವಜನರು, ಸಾರ್ವಜನಿಕರು, ಸಂಘಸಂಸ್ಥೆಯ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಈ ಮೆರವಣಿಗೆಯಲ್ಲಿ ಪಾಲ್ಗೊಳ್ಳಬೇಕೆಂದು ಶಾಸಕ ಜ್ಯೋತಿಗಣೇಶ್ ಮನವಿ ಮಾಡಿದರು.
ಸರದಾರ್ ವಲ್ಲಭಭಾಯಿ ಪಟೆಲರ 150ನೇ ಜನ್ಮ ವಾರ್ಷಿಕೋತ್ಸವವನ್ನು ದೇಶಾದ್ಯಂತ ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತದೆ. ಈ ಅಭಿಯಾನವು ಯುವಕರಲ್ಲಿ ಏಕತೆ, ದೇಶಭಕ್ತಿ ಮತ್ತು ನಾಗರೀಕ ಜವಾಬ್ದಾರಿಯ ಮನೋಭಾವವನ್ನು ಉಂಟುಮಾಡುವುದರೊಂದಿಗೆ ಭಾರತದ ವಿಭಜಿತ ಪ್ರದೇಶಗಳನ್ನು ಒಂದೇ ರಾಷ್ಟ್ರವಾಗಿ ಏಕೀಕೃತಗೊಳಿಸಿದ ಪಟೇಲ್ ಅವರ ಪರಂಪರೆಯನ್ನು ಗೌರವಿಸಲಾಗುವುದು. ಈ ಅಭಿಯಾನದ ಮೂಲಕ ಯುವಕರನ್ನು ತಮ್ಮ ದೈನಂದಿನ ಜೀವನದಲ್ಲಿ ಸಾಮಾಜಿಕವಾಗಿ ಪಾಲ್ಗೊಳ್ಳುವಿಕೆಯಲ್ಲಿ ಏಕ ಭಾರತ್ ಆತ್ಮನಿರ್ಭರ ಭಾರತ್ ಎಂಬ ಆದರ್ಶಗಳನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸಲಾಗಿದೆ ಎಂದರು.
ಈ ಅಭಿಯಾನದ ಪ್ರಯುಕ್ತ ಜಿಲ್ಲಾ ಬಿಜೆಪಿಯಿಂದ ಜಿಲ್ಲೆಯಾದ್ಯಂತ ಈ ತಿಂಗಳ 31ರಿಂದ ನವೆಂಬರ್ 25ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳಲ್ಲಿ ಜಾಗೃತಿ ಮತ್ತು ಉತ್ಸಾಹ ಹೆಚ್ಚಿಸಲು ಶಾಲಾಕಾಲೇಜುಗಳಲ್ಲಿ ಪ್ರಬಂಧ ಮತ್ತು ಚರ್ಚಾ ಸ್ಪರ್ಧೆಗಳು, ಸರದಾರ ವಲ್ಲಭಭಾಯಿ ಪಟೇಲರ ಜೀವನ ಕುರಿತ ವಿಚಾರಗೋಷ್ಠಿಗಳು, ಬೀದಿನಾಟಕಗಳು, ಯುವಕರಿಗೆ ನಶಾ ಮುಕ್ತ ಭಾರತ್ ಪ್ರತಿಜ್ಞೆ ಮಾಡಿಸುವುದು, ಸ್ವದೇಶಿ ಮೇಳಗಳನ್ನು ಆಯೋಜಿಸಿ, ಸ್ವದೇಶಿ ವಸ್ತುಗಳ ಬಗ್ಗೆ ಅಭಿಮಾನ ಮೂಡಿಸುವುದು, ಯೋಗ, ಆರೋಗ್ಯ ಶಿಬಿರ, ಸ್ವಚ್ಛತಾ ಅಭಿಯಾನ ಆಯೋಜಿಸಲಾಗುವುದು ಎಂದು ಶಾಸಕ ಜ್ಯೋತಿಗಣೇಶ್ ಹೇಳಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ, ಜಿಲ್ಲಾ ಕಾರ್ಯದರ್ಶಿ ಹೆಚ್.ಎಂ.ರವೀಶಯ್ಯ, ಮುಖಂಡ ಟಿ.ಹೆಚ್.ಹನುಮಂತರಾಜು, ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷ ಕೆ.ವೇದಮೂರ್ತಿ, ನಗರ ಅಧ್ಯಕ್ಷ ಟಿ.ಕೆ.ಧನುಷ್, ಪ್ರಧಾನ ಕಾರ್ಯದರ್ಶಿಗಳಾದ ವಿರೂಪಾಕ್ಷಪ್ಪ, ಹನುಮಂತರಾಜು, ಖಜಾಂಚಿ ಅಕ್ಷಯ್ ಚೌಧರಿ ಹಾಜರಿದ್ದರು.