ತುಮಕೂರು : ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಗೊಳಿಸದೆ ಇರುವುದನ್ನು ಖಂಡಿಸಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಇಂದು ನಡೆದ ಡಾ.ಬಾಬುಜಗಜೀವನರಾಂ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಪೂರ್ವಭಾವಿ ಸಭೆಯನ್ನು ಬಹಿಷ್ಕರಿಸಿದ ಒಳಮೀಸಲಾತಿ ಹೋರಾಟಗಾರರು ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಕಳೆದ 35 ವರ್ಷಗಳಿಂದ ಪರಿಶಿಷ್ಠ ಜಾತಿಯಲ್ಲಿ ಒಳಮೀಸಲಾತಿ ಜಾರಿಗೊಳಿಸುವಂತೆ ಒತ್ತಾಯಿಸಿ ರಾಜ್ಯದಲ್ಲಿ ಸಂಘಟನೆಗಳು ನಡೆಸುತ್ತಿ ರುವ ಹೋರಾಟವನ್ನು ಕಡೆಗಣಿಸಿರುವ ಕಾಂಗ್ರೆಸ್ ಸರ್ಕಾರಕ್ಕೆ ದಲಿತ ಸಮುದಾಯದ ಎರಡು ಕಣ್ಣುಗಳಾದ ಡಾ.ಬಾಬು ಜಗಜೀವನರಾಂ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಗಳನ್ನು ಆಚರಿಸುವ ನೈತಿಕತೆಯೇ ಇಲ್ಲದಂತಾಗಿದ್ದು, ಮಾ.27ರಂದು ನಡೆಯಬೇಕಿದ್ದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ 56432 ಹುದ್ದೆಗಳ ನೇಮಕಾತಿಯಲ್ಲಿಒಳಮೀಸಲಾತಿ ಕಲ್ಪಿಸುವುದಾಗಿ ಮಾರ್ಚ್12ರಂದು ಬೆಂಗಳೂರಿನ ಫ್ರೀಡಂ ಪಾಕ್ರ್ನಲ್ಲಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಮುಖ್ಯಮಂತ್ರಿಗಳು, ಹೋರಾಟಗಾರರೊಂದಿಗೆ ಚರ್ಚಿಸಿ, ನಾಲ್ವರು ಸಚಿವರಗಳನ್ನು ಸಭೆಗೆ ಕಳುಹಿಸಿ ಆಶ್ವಾಸನೆ ನೀಡಿದ್ದರು. ಅದರಂತೆ ಪ್ರತಿಭಟನೆಯನ್ನು ಹಿಂಪಡೆಯಲಾಗಿತ್ತು.
ಆದರೆ ಮಾದಿಗ ಸಮುದಾಯಕ್ಕೆ ನೀಡಿದ್ದ ಮಾತಿಗೆ ತಪ್ಪಿರುವ ಮುಖ್ಯಮಂತ್ರಿಗಳು, ಮಾದಿಗ ಸಮುದಾಯವನ್ನು ಕಡೆಗಣಿಸುತ್ತಿರುವ ಕಾಂಗ್ರೆಸ್ ಸರ್ಕಾರದ ನಡೆಯನ್ನು ಖಂಡಿಸಿ ರಾಜ್ಯದಲ್ಲಿ ಸರ್ಕಾರದ ವತಿಯಿಂದ ನಡೆಯುವ ಡಾ.ಬಾಬು ಜಗಜೀವನರಾಂ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿಗಳನ್ನು ಬಹಿಷ್ಕರಿಸುವುದರ ಮೂಲಕ ರಾಜ್ಯದ ಒಳ ಮೀಸಲಾತಿ ಐಕ್ಯ ಹೋರಾಟ ಸಮಿತಿ ಪರ್ಯಾಯವಾಗಿ ಸಂಘಟನೆಗಳಿಂದಲೇ ಜಯಂತಿಗಳನ್ನು ಆಚರಿಸಲು ತೀರ್ಮಾನಿಸಲಾಗಿದೆ ಎಂದು ಒಳಮೀಸಲಾತಿ ಹೋರಾಟ ಸಮಿತಿ ತಿಳಿಸಿದೆ.
ಅದರಂತೆ ಏಪ್ರಿಲ್ 5ರಂದು ತುಮಕೂರು ನಗರದ ನಾಗಾರ್ಜುನ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಡಾ.ಬಾಬುಜಗಜೀವನರಾಂ ಜಯಂತಿ ಆಚರಿಸಲು ತೀರ್ಮಾನಿಸಿದ್ದು, ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಲಾಗಿದೆ.
ಈ ವೇಳೆ ಮಾತನಾಡಿದ ಒಳಮೀಸಲಾತಿ ಹೋರಾಟ ಸಮಿತಿ ರಾಜ್ಯ ಕಾರ್ಯಾಧ್ಯಕ್ಷರಾದ ಪಾವಗಡ ಶ್ರೀರಾಂ ಅವರು ಒಳ ಮೀಸಲಾತಿ ಜಾರಿಗೊಳಿಸದ ರಾಜ್ಯ ಸರ್ಕಾರಕ್ಕೆ ನೈತಿಕತೆ ಇಲ್ಲದೇ ಇರುವುದರಿಂದ ದಲಿತರ ಕಣ್ಮಣಿಗಳಾದ ಡಾ.ಬಾಬು ಜಗಜೀವನರಾಂ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯಲ್ಲಿ ಮಾಲಾರ್ಪಣೆ ಮಾಡಲು ಸಹ ರಾಜ್ಯದಲ್ಲಿ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
.
ಒಳಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಡಾ.ವೈ.ಕೆ.ಬಾಲಕೃಷ್ಣಪ್ಪ ಮಾತನಾಡಿ ಒಳ ಮೀಸಲಾತಿ ಜಾರಿಯಾಗುವವರೆಗೆ ರಾಜ್ಯ, ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ನಡೆಯುವ ಸರ್ಕಾರದ ಜಯಂತಿಗಳನ್ನು ಬಹಿಷ್ಕರಿಸಿ, ಪ್ರತ್ಯೇಕವಾಗಿ ಸಮು ದಾಯದಿಂದಲೇ ಜಯಂತಿ ಆಚರಣೆಗೆ ಮುಂದಾಗುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಬಿ.ಹೆಚ್.ಗಂಗಾಧರ್, ಕೇಬಲ್ ರಘು, ಟಿ.ಸಿ.ರಾಮಯ್ಯ, ರಂಜನ್, ಯೋಗೀಶ್ ಸೋರೆಕುಂಟೆ, ಬಿ.ಜಿ.ಸಾಗರ್, ಸಿದ್ದೇಶ್, ನಿಟ್ಟೂರು ರಂಗಸ್ವಾಮಿ, ಕೊಡಿಯಾಲ ಮಹಾದೇವ್, ನಾಗರಾಜು ಗೂಳಹರಿವೆ, ಶ್ರೀನಿವಾಸ್ ಅಯ್ಯನಪಾಳ್ಯ, ಕಿರಣ್, ಕ್ಯಾತ್ಸಂದ್ರ ಮೂರ್ತಿ, ರಾಮಾಂ ಜಿನಪ್ಪ, ದಂಡು ಕುಮಾರ್, ಜೆಡಿಎಸ್ ಚಂದ್ರಣ್ಣ, ಸಾಕ್ಷರತಾ ರಾಜಣ್ಣ ಸೇರಿದಂತೆ ಇತರರಿದ್ದರು.