ತುಮಕೂರು: ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಯಾವುದೇ ಜಾತಿಗೆ ಸೀಮಿತವಾದ ಕಾರ್ಯಕ್ರಮ ರೂಪಿಸಲ್ಲಿಲ್ಲ. ಎಲ್ಲಾ ವರ್ಗದ ಬಡವರಿಗೆ, ರೈತರಿಗೆ, ಹೆಣ್ಣು ಮಕ್ಕಳಿಗೆ ಅನುಕೂಲ ಆಗುವಂತಹ ಯೋಜನೆಗಳನ್ನು ಜಾರಿಗೆ ತಂದು ನೆರವಾದರು. ತಮ್ಮ ಹೋರಾಟ, ಕಾರ್ಯಕ್ರಮಗಳ ಮೂಲಕ ಯಡಿಯೂರಪ್ಪನವರು ಸಮಾಜದ ಎಲ್ಲಾ ಜಾತಿ ಜನಾಂಗದವರ ಮನಸ್ಸನ್ನು ಗೆದ್ದಿದ್ದಾರೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಅಭಿಮಾನ ವ್ಯಕ್ತಪಡಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ 82ನೇ ಹುಟ್ಟು ಹಬ್ಬದ ಅಂಗವಾಗಿ ಗುರುವಾರ ಜಿಲ್ಲಾ ಬಿಜೆಪಿಯಿಂದ ನಗರದಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ಹೆಣ್ಣು ಮಕ್ಕಳ ಸಬಲೀಕರಣ ಆಶಯದ ಮಹತ್ವದ ಭಾಗ್ಯಲಕ್ಷ್ಮಿ ಯೋಜನೆಯನ್ನು ಯಡಿಯೂರಪ್ಪನವರು ಜಾರಿಗೆ ತಂದರು. ಪ್ರಧಾನಿ ನರೇಂದ್ರ ಮೋದಿಯವರ ಕಿಸಾನ್ ಸಮ್ಮಾನ್ ಯೋಜನೆಯ 6 ಸಾವಿರ ರೂ. ಜೊತೆಗೆ ರಾಜ್ಯ ಸರ್ಕಾರದ 4 ಸಾವಿರ ರೂ.ಗಳನ್ನು ರೈತ ಫಲಾನುಭವಿಗಳಿಗೆ ನೀಡಿ ನೆರವಾದರು. ಇದಲ್ಲದೇ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದು ಜನರಿಗೆ ನೆರವಾಗಿ, ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದರು ಎಂದು ಹೇಳಿದರು.
ಬಿಜೆಪಿ ಒಂದೆರಡು ಸ್ಥಾನ ಪಡೆಯುತ್ತಿದ್ದ ಕಾಲದಲ್ಲಿ ತಮ್ಮ ಹೋರಾಟದ ಮೂಲಕ ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸಿ, ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾರಣರಾದರು. ತಾವು ಶಾಸಕರಾಗಿರುವುದೂ ಅವರ ಹೋರಾಟದ ಫಲ. ಇಂದು ಅವರ 82ನೇ ಹಟ್ಟುಹಬ್ಬ ಆಚರಿಸುತ್ತಿದ್ದು, ಅವರಿಗೆ ಶುಭವಾಗಲಿ, ಅವರ ಹೋರಾಟ ಮನೋಭಾವವನ್ನು ನಾವೂ ಅಳವಡಿಸಿಕೊಂಡು ಪಕ್ಷವನ್ನು ಮುನ್ನಡೆಸೋಣ ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ ಮಾತನಾಡಿ, ಎಲ್ಲೆಡೆ ಇಂದು ಪಕ್ಷದ ಮುಖಂಡರು ಯಡಿಯೂರಪ್ಪನವರ ಜನ್ಮದಿನವನ್ನು ಉತ್ಸಾಹ, ಸಡಗರದಿಂದ ಆಚರಿಸುತ್ತಿದ್ದಾರೆ. ಆವರು ನಾಡಿಗೆ ಕೊಟ್ಟ ಕೊಡುಗೆ, ಪಕ್ಷಕ್ಕೆ ಮಾಡಿದ ಸೇವೆ,ಅವರ ಹೋರಾಟ ಎಲ್ಲಾ ಕಾರ್ಯಕರ್ತರಿಗೂ ಸ್ಫೂರ್ತಿಯಾಗಲಿ ಎಂದು ಆಶಿಸಿದರು.
ರಾಜ್ಯ ಬಿಜೆಪಿ ಕಾರ್ಯದರ್ಶಿ ಅಂಬಿಕಾ ಹುಲಿನಾಯ್ಕರ್ ಅವರು, ಯಡಿಯೂರಪ್ಪನವರು ರೈತ ನಾಯಕರಾಗಿ ರಾಜ್ಯದ ರೈತರ ಮನೆಮಾತಾಗಿದ್ದಾರೆ. ಅವರ ಮುಂದಾಳತ್ವ, ಮುಂದಾಲೋಚನೆಯ ಯೋಜನೆಗಳು ರಾಜ್ಯದ ಅಭಿವೃದ್ಧಿಗೆ ಪೂರಕವಾಗಿವೆ. ಸತತ ಹೋರಾಟದ ಮೂಲಕ ಜನರ ಸೇವೆಗೆ ತಮ್ಮ ಬದುಕನ್ನು ಮೀಸಲಿಟ್ಟ ಧೀಮಂತ ನಾಯಕ ಎಂದು ಹೇಳಿದರು.
ನಗರ ಬಿಜೆಪಿ ಅಧ್ಯಕ್ಷ ಧನುಷ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ್ಗೌಡ, ಕಾರ್ಯದರ್ಶಿ ಹೆಚ್.ಎಂ.ರವೀಶಯ್ಯ, ಉಪಾಧ್ಯಕ್ಷರಾದ ಸಾಗರನಹಳ್ಳಿ ವಿಜಯಕುಮಾರ್, ಊರ್ಡಿಗೆರೆ ರವಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಚೇತನ್, ಮುಖಂಡರಾದ ಸ್ಫೂರ್ತಿ ಚಿದಾನಂದ್, ಟಿ.ಹೆಚ್.ಹನುಮಂತರಾಜು, ಮಾಜಿ ಮೇಯರ್ ಬಿ.ಜಿ.ಕೃಷ್ಣಪ್ಪ, ಸತ್ಯಮಂಗಲ ಜಗಣ್ಣ, ಸದಾಶಿವಯ್ಯ, ನಾಗೇಂದ್ರ ಸೇರಿದಂತೆ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

ವಿಶೇಷ ಪೂಜೆ
ಇದಕ್ಕೂ ಮುನ್ನ ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ ಅವರ ನೇತೃತ್ವದಲ್ಲಿ ವಿವಿಧ ಮುಖಂಡರು ನಗರದ ಶೆಟ್ಟಿಹಳ್ಳಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಗೋ ಪೂಜೆ ಹಾಗೂ ಹುಟ್ಟುಹಬ್ಬದ ಅಂಗವಾಗಿ ಯಡಿಯೂರಪ್ಪನವರ ಹೆಸರಿನಲ್ಲಿ ಅರ್ಚನೆ, ವಿಶೇಷ ಪೂಜೆ ಸಲ್ಲಿಸಿದರು.
ನಗರ ಬಿಜೆಪಿ ಅಧ್ಯಕ್ಷ ಧನುಷ್, ಹೆಚ್.ಎಂ.ರವೀಶಯ್ಯ, ಮಾಜಿ ಮೇಯರ್ ಬಿ.ಜಿ.ಕೃಷ್ಣಪ್ಪ, ಮಾಜಿ ಸದಸ್ಯರಾದ ಸಿ.ಎನ್.ರಮೇಶ್, ವಿಷ್ಣುವರ್ಧನ್, ಮಲ್ಲಿಕಾರ್ಜುನ್ ಮೊದಲಾದವರು ಭಾಗವಹಿಸಿದ್ದರು.
ನಂತರ ವಿವಿಧ ಬಿಜೆಪಿ ಮುಖಂಡರು, ಕಾರ್ಯಕರ್ತರು, ಬಿಎಸ್ವೈ ಅಭಿಮಾನಿಗಳು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಿ ತಮ್ಮ ನಾಯಕನ ಜನ್ಮದಿನವನ್ನು ಸ್ಮರಣೀಯವಾಗಿಸಿದರು.

ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕೀಯ ಮುತ್ಸದಿ ಬಿ.ಎಸ್.ಯಡಿಯೂರಪ್ಪ ನವರ 82ನೇ ಹುಟ್ಟು ಹಬ್ಬದ ಪ್ರಯುಕ್ತ ಬೆಂಗಳೂರಿನ ಅವರ ನಿವಾಸಕ್ಕೆ ತೆರಳಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ರವರು ಶುಭ ಕೋರಿದರು.