ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಅಭಿವೃದ್ಧಿಪರ್ವ ಪ್ರಾರಂಭವಾಗಿದೆ. ತಾವು ವಿರೋಧ ಪಕ್ಷದಲ್ಲಿದ್ದರೂ ಹೋರಾಟ ಮಾಡಿ ಸರ್ಕಾರದಿಂದ ಹೆಚ್ಚು ಅನುದಾನ ತಂದು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಮಾಡುತ್ತೇನೆ. ಕೇಂದ್ರ ಸಚಿವ ವಿ.ಸೋಮಣ್ಣ, ಜಿಲ್ಲಾ ಸಚಿವ ಡಾ.ಜಿ.ಪರಮೇಶ್ವರ್ ಅವರು ವಿವಿಧ ಇಲಾಖೆಗಳ ಅನುದಾನ ಕೊಡಿಸಲು ಸಹಕರಿಸುತ್ತಿದ್ದಾರೆ ಎಂದು ಶಾಸಕ ಬಿ.ಸುರೇಶ್ಗೌಡರು ಹೇಳಿದರು.
ಕ್ಷೇತ್ರದ ಹೆತ್ತೇನಹಳ್ಳಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುಮಾರು 10 ಕೋಟಿ ರೂ. ಅಂದಾಜು ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಶಾಸಕರು, ಕ್ಷೇತ್ರದಲ್ಲಿ ಶಾಲಾಕಾಲೇಜು, ಆಸ್ಪತ್ರೆ, ರಸ್ತೆ, ಕೆರೆಗಳಿಗೆ ನೀರು ತುಂಬಿಸುವುದು, ದೇವಸ್ಥಾನಗಳ ಜೀರ್ಣೋದ್ಧಾರ ಮತ್ತಿತರ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಲಾಗಿದೆ. ಅಮರಶಿಲ್ಪಿ ಜಕಣಾಚಾರಿಯವರ ಹುಟ್ಟೂರು ಕೈದಾಳದ ಚನ್ನಕೇಶವ ದೇವಸ್ಥಾನ, ಗೂಳೂರು ಗಣಪತಿ ದೇವಸ್ಥಾನ, ಹೆತ್ತೆನಹಳ್ಳಿ ಮಾರಮ್ಮ ದೇವಸ್ಥಾನಗಳು ಒಳಗೊಂಡ ಈ ಭಾಗವನ್ನು ಆಕರ್ಷಕ ಪ್ರವಾಸಿ ಕೇಂದ್ರವನ್ನಾಗಿ ರೂಪಿಸಲು ಅಗತ್ಯ ಸೌಲಭ್ಯ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ ನಮ್ಮ ಪಕ್ಷದ ಸರ್ಕಾರ ಅಧಿಕಾರದಲ್ಲಿಲ್ಲದಿದ್ದರೂ ಅಗತ್ಯವಿರುವ ಅನುದಾನ ತರುವ ಪ್ರಯತ್ನ ಮಾಡುತ್ತಿದ್ದೇನೆ. ಎಲ್ಲಾ ವಿಚಾರಗಳಿಗೂ ಆಡಳಿತ ಪಕ್ಷವನ್ನು ವಿರೋಧ ಮಾಡುವುದು ಸರಿಯಲ್ಲ, ಅಭಿವೃದ್ಧಿ ಕಾರ್ಯದಲ್ಲಿ ರಾಜಕಾರಣ ಮಾಡಬಾರದು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಅವರೊಂದಿಗೆ ವಿಶ್ವಾಸದಿಂದ ಅವರ ಸಹಕಾರದಿಂದ ಹೆಚ್ಚು ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ. ತಮಗೆ ಸಹಕರಿಸುತ್ತಿರುವ ಸಚಿವ ಡಾ.ಪರಮೇಶ್ವರ್ ಅವರಿಗೆ ಅಭಿನಂದನೆಗಳು ಎಂದರು.
ಹೆತ್ತೇನಹಳ್ಳಿ ದೇವಸ್ಥಾನ ರಸ್ತೆಯನ್ನು ವಿಸ್ತರಿಸಿ ಅಭಿವೃದ್ಧಿ ಮಾಡಲಾಗುತ್ತಿದೆ. ಈ ಕಾರ್ಯದಲ್ಲಿ ರಸ್ತೆ ಬದಿ ಅಂಗಡಿಯವರು ಜಾಗ ಕೊಟ್ಟು ಸಹಕರಿಸಬೇಕು. ನಿಮಗೆ ತೊಂದರೆ ಕೊಡದಂತೆ, ನಿಮ್ಮ ವಿಶ್ವಾಸ ಗಳಿಸಿ ರಸ್ತೆ ಕಾಮಗಾರಿ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ವ್ಯಾಪಾರವನ್ನೇ ಜೀವನಾಧಾರ ಮಾಡಿಕೊಂಡಿರುವ ನಿಮ್ಮನ್ನು ಎತ್ತಂಗಡಿ ಮಾಡಿಸುವ ಉದ್ದೇಶವಿಲ್ಲ, ರಸ್ತೆ ಅಗಲೀಕರಣ ಸಂದರ್ಭದಲ್ಲಿ ತೊಂದರೆಯಾದರೆ ಶಾಸಕರ ಅನುದಾನದಲ್ಲಿ ನಿಮಗೆ ಸಹಾಯ ಮಾಡುತ್ತೇನೆ. ಹೆತ್ತೇನಹಳ್ಳಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಹೆಚ್ಚಿನ ಸೌಕರ್ಯ ಒದಗಿಸಬೇಕಾಗಿರುವುದರಿಂದ ಇಂತಹ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕಾಗಿದೆ ಎಂದು ಹೇಳಿದರು.
ಕೈದಾಳ ಗ್ರಾಮದಲ್ಲಿ ಅಮರಶಿಲ್ಪಿ ಜಕಣಾಚಾರಿ ಸಮುದಾಯ ಭವನದ ಮುಂದುವರೆದ ಕಾಮಗಾರಿ, ಚನ್ನಕೇಶವ ದೇವಸ್ಥಾನ ಆವರಣದಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಪಾರ್ಕ್ ನಿರ್ಮಾಣ ಕಾಮಗಾರಿಕೆ ಈ ಸಂದರ್ಭದಲ್ಲಿ ಚಾಲನೆ ನೀಡಿದ ಶಾಸಕ ಸುರೇಶ್ಗೌಡರು, ಇಂದು ಚಾಲನೆಗೊಂಡ ಎಲ್ಲಾ ಕಾಮಗಾರಿಗಳನ್ನು ಯುಗಾದಿ ವೇಳೆಗೆ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡುವ ಗುರಿ ಇದೆ. ಆ ಸಂದರ್ಭದಲ್ಲಿ ನೂರು ಜೋಡಿಗಳ ಸಾಮೂಹಿಕ ವಿವಾಹ ಸಮಾರಂಭ ಏರ್ಪಡಿಸುವ ಉದ್ದೇಶವಿದೆ ಎಂದು ತಿಳಿಸಿದರು.
ಗೂಳೂರು ಕೆರೆಗೆ ಹೇಮಾವತಿ ನೀರು ತುಂಬಿಸುವ ಯೋಜನೆ ರೂಪಿಸಲು ಮರಳೂರು ಕೆರೆಯಿಂದ ಗೂಳೂರು ಕೆರೆಗೆ ಸಂಪರ್ಕ ಒದಗಿಸುವ ಯೋಜನೆಗೆ ಮನವಿ ಮಾಡಲಾಗಿದೆ. ಈ ವರ್ಷ ಹೆತ್ತೇನಹಳ್ಳಿ ಕೆರೆ ತುಂಬಿಸಿ ಮಾರಮ್ಮ ದೇವಿಯ ತೆಪ್ಪೋತ್ಸವ ಮಾಡಲಾಗುವುದು. ಸೂಲದ ಆಂಜನೇಯ ದೇವಸ್ಥಾನ ಸಮೀಪ ಎರಡು ಎಕರೆ ಜಾಗ ಕೇಳಿದ್ದೇನೆ, ಜಾಗ ನೀಡಿದರೆ ಅಲ್ಲಿ 24/7 ಸೇವೆಯ 30 ಹಾಸಿಗೆಗಳ ಆಸ್ಪತ್ರೆ ಸ್ಥಾಪನೆ ಮಾಡಲಾಗುವುದು. ಇದರಿಂದ ಈ ಭಾಗದ ಜನರಿಗೆ ಅನುಕೂಲವಾಗುತ್ತದೆ ಎಂದರು.
ಇದೇ ವೇಳೆ ಸುರೇಶ್ಗೌಡರು ಹೆತ್ತೇನಹಳ್ಳಿ ಮಾರಮ್ಮ ದೇವಸ್ಥಾನದ ಕಾಂಪೌಂಡ್, ನೆಲಹಾಸು, ದೇವಸ್ಥಾನದ ಸಮುದಾಯ ಭವನ, ಕಲ್ಯಾಣಿ ಅಭಿವೃದ್ಧಿ ಕಾಮಗಾರಿ, ಆಂಜನೇಯ, ತಿರುಮಲ ದೇವಸ್ಥಾನದ ಅಭಿವೃದ್ಧಿ, ಹಾಲನೂರು-ಗೂಳೂರು-ಹರಳೂರು ರಸ್ತೆ ಕಾಮಗಾರಿ, ಕೈದಾಳ ಅಣೆಯ ಕೋಡಿ ದುರಸ್ತಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಧನಲಕ್ಷ್ಮಿ, ಉಪಾಧ್ಯಕ್ಷೆ ಮಮತಾ, ತಾಲ್ಲೂಕು ಬಿಜೆಪಿ ಅಧ್ಯಕ್ಷ ರಾಜಶೇಖರ್, ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಮಾಜಿ ಸದಸ್ಯ ಗೂಳೂರು ಶಿವಕುಮಾರ್, ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅಣ್ಣಪ್ಪ, ಉಪಾಧ್ಯಕ್ಷ ಸುಭಾಷ್ ಚಂದ್ರಣ್ಣ, ಜಿಲ್ಲಾ ಬಿಜೆಪಿ ಎಸ್.ಸಿ.ಮೋರ್ಚಾ ಅಧ್ಯಕ್ಷ ಹೆಚ್.ಎ.ಆಂಜನಪ್ಪ, ಮುಖಂಡರಾದ ಸಿದ್ಧೇಗೌಡರು, ಶಂಕರಣ್ಣ, ನರಸಿಂಹಮೂರ್ತಿ, ವೆಂಕಟೇಶ್, ಗಂಗಣ್ಣ, ಶೇಷಕುಮಾರ್, ಕೆಂಪಹನುಮಯ್ಯ, ರೇಣುಕಮ್ಮ, ಶಿವರಾಜು, ಗೋವಿಂದರಾವ್, ಇಂಜಿನಿಯರ್ ನಂಜರಾಜ್, ಭಾನುಪ್ರಕಾಶ್, ಗುತ್ತಿಗೆದಾರ ಪ್ರದೀಪ್ ಪದ್ಮರಾಜ್ ಮೊದಲಾದವರು ಭಾಗವಹಿಸಿದ್ದರು.