ತುಮಕೂರು:ಪಕ್ಷ ಅಧಿಕಾರದಲ್ಲಿದ್ದ ಸಂದರ್ಭದಲ್ಲಿಯೂ ಪಕ್ಷದ ಗೆಲುವಿಗಾಗಿ ದುಡಿದ ಕಾರ್ಯಕರ್ತರಿಗೆ ಅಧಿಕಾರ ದೊರೆಯದಿರುವುದು ಸಹಜವಾಗಿಯೇ ಅಸಮಾಧಾನಕ್ಕೆ ಕಾರಣವಾಗಿದೆ. ಈ ವಿಚಾರವಾಗಿ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಪಕ್ಷದ ಹಿರಿಯರೊಂದಿಗೆ ಮಾತನಾಡುವುದಾಗಿ ಕರ್ನಾಟಕ ಸರಕಾರದ ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಶಿರಾ ಕ್ಷೇತ್ರದ ಶಾಸಕ ಟಿ.ಬಿ.ಜಯಚಂದ್ರ ಭರವಸೆ ನೀಡಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಹಿನ್ನೆಲೆಯಲ್ಲಿ ಕೆಪಿಸಿಸಿ ವೀಕ್ಷಕರಾದ ವೆಂಕಟರಮಣಯ್ಯ, ಹುಸೇನ್ ಸಾಬ್,ಇಬ್ರಾಹಿಂ ಖಲೀಂವುಲ್ಲಾ ಅವರುಗಳ ಸಮ್ಮುಖದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರ್ ಗೌಡ ಅವರ ನೇತೃತ್ವದಲ್ಲಿ ನಡೆದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು,ವಿವಿಧ ಮಂಚೂಣಿ ಘಟಕಗಳ ಅಧ್ಯಕ್ಷರು,ಪದಾಧಿಕಾರಿಗಳು, ಕಾರ್ಯಕರ್ತರುಗಳ ಸಭೆಯಲ್ಲಿ ಕಾರ್ಯಕರ್ತರ ಅಭಿಪ್ರಾಯ ಆಲಿಸಿದ ನಂತರ ಮಾತನಾಡಿದ ಅವರು,ಮುಂದಿನ ಮೇ-ಜೂನ್ನಲ್ಲಿ ಜಿ.ಪಂ., ತಾ.ಪಂ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಬರಲಿದೆ.ಹಾಗಾಗಿ ಕಾರ್ಯಕರ್ತರು ಪಕ್ಷದ ಗೆಲುವಿಗೆ ಶ್ರಮಿಸಬೇಕಾಗಿದೆ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯಕರ್ತರಿಗೆ ಎಂದಿಗೂ ಅನ್ಯಾಯ ಆಗಿಲ್ಲ. ಈ ಬಾರಿ ಕೊಂಚ ವಿಳಂಬವಾಗಿದೆ. ಸಹಜವಾಗಿಯೇ ಕಾರ್ಯಕರ್ತರಲ್ಲಿ ಅಸಮಾಧಾನವಿದೆ.ಎಲ್ಲವನ್ನು ಸರಿಪಡಿಸುತ್ತೇವೆ.ಮುಂಬರುವ ಚುನಾವಣೆಗಳ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿರುವ 7 ಶಾಸಕರು, ಜಿಲ್ಲೆಯ ಎಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮತ್ತು ಮಂಚೂಣಿ ಘಟಕಗಳ ಪದಾಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಿ,ಹೇಗೆ ಚುನಾವಣೆ ಎದುರಿಸಬೇಕು ಎಂಬ ಕುರಿತು ಚರ್ಚೆ ನಡೆಸುವ ಅಗತ್ಯವಿದೆ.ಶೀಘ್ರದಲ್ಲಿಯೇ ಸಭೆ ನಡೆಸಲಾಗುವುದು ಎಂದು ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ನುಡಿದರು.
ಕೆಪಿಸಿಸಿ ವೀಕ್ಷಕರಾದ ಮಾಜಿ ಶಾಸಕರಾದ ವೆಂಕಟರಮಣಯ್ಯ ಮಾತನಾಡಿ,ಮಹಾತ್ಮಗಾಂಧಿಯನ್ನು ಇಡೀ ವಿಶ್ವವೇ ಶಾಂತಿಯ ಧೂತ ಎಂದು ಕೊಂಡಾಡುತ್ತಿದೆ.ಆದರೆ ಬಿಜೆಪಿ ನಾಯಕರು ಮನ್ನರೇಗಾವನ್ನು ವಿಬಿ ಜೀ-ರಾಮ ಜೀ ಎಂದು ಹೆಸರು ಬದಲಾಯಿಸಿ, ದೆಹಲಿಯಿಂದ ಹಳ್ಳಿಗೆ ವರ್ಗಾಯಿಸಲ್ಟಟ್ಟ ಅಧಿಕಾರವನ್ನು ದೆಹಲಿಗೆ ಸೀಮಿತಗೊಳಿಸುವ ಮೂಲಕ ಗಾಂಧಿ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡಿದೆ.ಕೃಷಿ ಕಾರ್ಮಿಕರು, ಗ್ರಾಮೀಣ ಜನರನ್ನು ಮನಸ್ಸನಲ್ಲಿಟ್ಟುಕೊಂಡು ಜಾರಿಗೆ ಬಂದ ನರೇಗಾದಲ್ಲಿ ಗುತ್ತಿಗೆದಾರರಿಗೆ ಅವಕಾಶ ಕಲ್ಪಿಸುವ ಮೂಲಕ ಯಂತ್ರಗಳ ಬಳಕೆಗೆ ಒತ್ತು ನೀಡಲಾಗಿದೆ. ಇದರಿಂದ ಮನೆಯ ಬಳಿಯೇ ಉದ್ಯೋಗ ಸಿಗಬೇಕೆಂಬ ಬಹುದಿನದ ಯೋಜನೆಗೆ ಬಿಜೆಪಿ ಕಲ್ಲು ಹಾಕಿದೆ.ಹಾಗಾಗಿಯೇ ಇದರ ವಿರುದ್ದ ಕಾಂಗ್ರೆಸ್ ಪ್ರತಿಭಟಿಸುತ್ತಿದೆ ಎಂದರು.
ವೀಕ್ಷಕರಾದ ಹುಸೇನ್ ಸಾಬ್ ಮಾತನಾಡಿ,ನಾನು ಒಬ್ಬ ಕಾಂಗ್ರೆಸ್ನ ನಿಷ್ಠಾವಂತ ಕಾರ್ಯಕರ್ತ.2010ರಲ್ಲಿ ನನ್ನನ್ನು ಗುರುತಿಸಿ ಪಕ್ಷ ಹಲವು ಜವಾಬ್ದಾರಿ ನೀಡಿದೆ. ಒಮ್ಮೆ ವಕ್ಪ್ ಬೋರ್ಡ್ ಅಧ್ಯಕ್ಷನನ್ನಾಗಿಯೂ ಮಾಡಿದೆ.ಕಾರ್ಯಕರ್ತರು ನಿರಾಶರಾಗುವುದು ಬೇಡ. ನಿಮ್ಮ ಆಹವಾಲನ್ನು ಪಕ್ಷದ ಹಿರಿಯ ಮುಂದಿಡುತ್ತೇವೆ. ಪಕ್ಷದ ಸಂಘಟನೆಗೆ ಎಲ್ಲರೂ ಒತ್ತು ನೀಡೋಣ. ಮುಂಬರುವ ಚುನಾವಣೆಗಳಲ್ಲಿ ಗೆಲವು ನಮ್ಮದಾಗುವಂತೆ ದುಡಿಯೋಣ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಅಹಮದ್ ಮಾತನಾಡಿ,ಪಕ್ಷದಲ್ಲಿ ಅಧಿಕಾರ ಬೇರೆ, ಸಂಘಟನೆ ಬೇರೆ.ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ತುಮಕೂರನ್ನು ಗ್ರೇಟರ್ ತುಮಕೂರು ಮಾಡಲು ಪ್ರಯತ್ನಿಸುತ್ತಿದ್ದಾರೆ. ಸಾವಿರಾರು ಕೋಟಿ ರೂ ಅನುದಾನ ಹರಿದು ಬರುತ್ತಿದೆ.ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯನ್ನು ಬಹಳ ಗಂಭೀರವಾಗಿ ಪರಿಗಣಿಸಿ, ಪಕ್ಷವನ್ನು ಬಲಪಡಿಸಲು ನಾವೆಲ್ಲರೂ ಕೈಜೋಡಿಸಬೇಕಾಗಿದೆ.ಕಾಂಗ್ರೆಸ್ ಪಕ್ಷವನ್ನು ಸೋಲಿಸುವ ಉದ್ದೇಶದಿಂದಲೇ ಎಸ್.ಐ.ಆರ್. ತಂದು ಕಾಂಗ್ರೆಸ್ ಪಕ್ಷದ ಸಂಪ್ರದಾಯಕ ಮತದಾರರಾದ ದಲಿತರು, ಮುಸ್ಲಿಂರು, ಹಿಂದುಳಿದ ಸಮುದಾಯಗಳ ಓಟ್ಗಳನ್ನು ಡಿಲೀಟ್ ಮಾಡಿಸುವ ಕೆಲಸ ವ್ಯವಸ್ಥಿತವಾಗಿ ನಡೆಯುತಿದ್ದು, ಇಲ್ಲಿ ಪಕ್ಷದ ಬಿ.ಎಲ್.ಓ02ಗಳ ಪಾತ್ರ ದೊಡ್ಡದಿದೆ.ತಮ್ಮ ಬೂತ್ಗಳಲ್ಲಿ ಡಿಲೀಟ್ ಆಗಿರುವ ಮತದಾರರ ಪಟ್ಟಿ ಪಡೆದು,ಸಕಾರಣವಲ್ಲದ ಡಿಲೀಟ್ ವಿರುದ್ದ ಅಕ್ಷೇಪಣೆ ಸಲ್ಲಿಸಿ, ಅವರ ಹೆಸರು ಸೇರುವಂತೆ ಮಾಡಬೇಕು.ಒಬ್ಬ ಮತದಾರನ್ನು ತನ್ನ ಹಕ್ಕಿನಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರಗೌಡ,ಎಸ್.ಐ.ಆರ್.ಮೂಲಕ ಕಾಂಗ್ರೆಸ್ಪಕ್ಷದ ಹಿತೈಷಿಗಳ ಮತಗಳನ್ನು ಡಿಲೀಟ್ ಮಾಡಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಈಗಾಗಲೇ ಬಿಹಾರ,ಮುಂಬೈ ನಲ್ಲಿ ಇದೇ ಕುತಂತ್ರದಿಂದ ಬಿಜೆಪಿ ಗೆಲುವು ಸಾಧಿಸಿದೆ.ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಕರ್ನಾಟಕದಲ್ಲಿಯೂ ಈ ಪ್ರಕ್ರಿಯೆ ಚಾಲ್ತಿಯಲ್ಲಿದೆ.ಈಗಾಗಲೇ ತುಮಕೂರು ನಗರ ಎಂ.ಎಲ್.ಎ ಜೊತೆಗೆ,ಎಂ.ಪಿ. ಸ್ಥಾನವನ್ನು ಕಳೆದುಕೊಂಡಿದ್ದೇವೆ.ಹಾಗಾಗಿ ನಗರಪಾಲಿಕೆ ಅಧಿಕಾರ ಹಿಡಿಯಲು ಶತಾಯ, ಗತಾಯ ಹೋರಾಡಬೇಕಾಗಿದೆ ಎಂದರು.
ಸಭೆಯನ್ನು ಉದ್ದೇಶಿಸಿ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷರುಗಳಾದ ಎಸ್.ಷಪಿಅಹಮದ್,ಆರ್.ರಾಮಕೃಷ್ಣ, ಬಿ.ಎಂ.ಟಿ.ಸಿ ಉಪಾಧ್ಯಕ್ಷ ನಿಕೇತರಾಜ್ ಮೌರ್ಯ ಮತ್ತಿತರರು ಮಾತನಾಡಿದರು.ವೇದಿಕೆಯಲ್ಲಿ ಪಕ್ಷದ ಮುಖಂಡರಾದ ನರಸೀಯಪ್ಪ, ಎಸ್.ಟಿ.ಶ್ರೀನಿವಾಸ್, ಕೆಂಪಣ್ಣ, ಅನಿಲ್ಕುಮಾರ್, ರೂಪಾ ಶೆಟ್ಟಾಳಯ್ಯ,ಗೀತಾ ರಾಜಣ್ಣ, ನಯಾಜ್ ಅಹಮದ್, ಸುಜಾತ, ನಿಂಗರಾಜು, ಕುಮಾರಸ್ವಾಮಿ, ವಾಲೆಚಂದ್ರಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.