ಬೆಂಗಳೂರು : ಗಾಂಧೀಜಿಯವರ ‘ಗ್ರಾಮ ಸ್ವರಾಜ್ಯದ ಕನಸು ನನಸು’ ಮಾಡಲು ನೆನೆಗುದಿಗೆ ಬಿದ್ದಿರುವ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಕೂಡಲೇ ನಡೆಸಲು ಕ್ರಮಕೈಗೊಳ್ಳಬೇಕೆಂದು ಕರ್ನಾಟಕ ಗ್ರಾಮ ಪಂಚಾಯತಿ ಸದಸ್ಯರ ಮಹಾ ಒಕ್ಕೂಟ ಒತ್ತಾಯಿಸಿದೆ.

ಬೆಂಗಳೂರಿನ ಪ್ರೆಸ್ ಕ್ಲಬ್ನಲ್ಲಿಂದು ಪತ್ರಿಕಾಗೋóಷ್ಠಿಯಲ್ಲಿ ಈ ಒತ್ತಾಯ ಮಾಡಿ, ಗ್ರಾಮ ಸ್ವರಾಜ್ಯದ ಪರಿಕಲ್ಪನೆಯ ಮೂಲಕ ಭಾರತದಲ್ಲಿ ಸ್ವಾವಲಂಬಿ ಗ್ರಾಮಗಳ ಸ್ಥಾಪನೆ ಗಾಂಧೀಜಿಯವರ ಕನಸಾಗಿತ್ತು. ಅದಕ್ಕಾಗಿ ಅವರು ಪ್ರತಿ ಗ್ರಾಮಗಳಲ್ಲಿ ಗ್ರಾಮ ಪಂಚಾಯಿತಿಗಳ ಸ್ಥಾಪನೆಗೆ ಕರೆ ನೀಡಿದ್ದರು. “ಪಂಚಾಯತ್ ರಾಜ್ ವ್ಯವಸ್ಥೆಯ ಮೂಲಕ ದೇಶದ ಕಟ್ಟಕಡೆಯ ಪ್ರಜೆಯನ್ನು ಈ ದೇಶದ ಪ್ರಭುವನ್ನಾಗಿಸುತ್ತೇನೆ” ಎನ್ನುತ್ತಿದ್ದರು.
ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸನ್ನು ನನಸು ಮಾಡಲು ಸಂವಿಧಾನದ ಪ್ರಕರಣ 40 ರಲ್ಲಿ ಗ್ರಾಮ ಪಂಚಾಯಿತಿಗಳ ಸ್ಥಾಪನೆಗೆ ಒತ್ತು ನೀಡಲಾಯಿತು. ಮುಂದೆ 1992 ರಲ್ಲಿ ಸಂವಿಧಾನದ 73ನೇ ಮತ್ತು 74ನೇ ತಿದ್ದುಪಡಿಯ ಮೂಲಕ ಸ್ಥಳೀಯ ಸ್ವಯಂ ಸರ್ಕಾರಗಳಾದ ಪಂಚಾಯತ್ ರಾಜ್ ಸಂಸ್ಥೆಗಳನ್ನು ಹಾಗೂ ನಗರ ಸ್ಥಳೀಯ ಸಂಸ್ಥೆಗಳನ್ನು ಸಂವಿಧಾನದ ಅಧಿಕೃತ ಭಾಗವನ್ನಾಗಿಸಲಾಯಿತು ಎಂದು ಒಕ್ಕೂಟದ ಅಧ್ಯಕ್ಷರಾದ ಕಾಡಶೆಟ್ಟಿಹಳ್ಳಿ ಸತೀಶ್ ತಿಳಿಸಿದರು.
1993 ರಲ್ಲಿ ಸಂವಿಧಾನದ ತಿದ್ದುಪಡಿಯ ನಂತರದಲ್ಲಿ ಪಂಚಾಯತ್ ರಾಜ್ ಕಾಯ್ದೆಯನ್ನು ಅಧಿಕೃತವಾಗಿ ದೇಶದಲ್ಲೇ ಮೊದಲು ಜಾರಿಗೆ ತಂದ ರಾಜ್ಯ ಕರ್ನಾಟಕ. ನಂತರ 2016 ರಲ್ಲಿ ಮಾನ್ಯ ಸಿದ್ದರಾಮಯ್ಯನವರ ನೇತೃತ್ವದ ಅಂದಿನ ಕಾಂಗ್ರೆಸ್ ಸರ್ಕಾರ ಕೆ. ಆರ್. ರಮೇಶ್ ಕುಮಾರ್ ರವರ ನೇತೃತ್ವದಲ್ಲಿ ಸಮಿತಿ ರಚಿಸಿ, ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸನ್ನು ಸಂಪೂರ್ಣವಾಗಿ ಕರ್ನಾಟಕದ ನೆಲದಲ್ಲಿ ಜಾರಿಗೊಳಿಸಲು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರನ್ನು ಜಾರಿಗೆ ತಂದಿತು. ಇದು ದೇಶದಲ್ಲೇ ಮಾದರಿ ಮತ್ತು ಕ್ರಾಂತಿಕಾರಿ ಕಾಯ್ದೆಯಾಗಿದೆ. ಕಾಯ್ದೆ ಕೇವಲ ಪುಸ್ತಕದಲ್ಲೇ ಉಳಿದಿದ್ದು ಕಾಯ್ದೆಯ ಅನುಷ್ಠಾನ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ಹೇಳಿದರು.
ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಬೇಕಾದ ಜವಾಬ್ದಾರಿ ನಕ್ಷೆ ರಚನೆ, ವಿವಿಧ ಸ್ಥಾಯಿ ಸಮಿತಿಗಳ ನಿಯಮಗಳು ಜನರ ಬೇಡಿಕೆಗನುಗುಣವಾಗಿ ಯೋಜನೆ ರೂಪಿಸಲು ಬೇಕಾದ ಪ್ರಕರಣ 3 ಇ ಅನ್ವಯ ಗ್ರಾಮ ಸಭಾ ನಿಯಮಗಳ ರಚನೆ, ಸ್ಥಳೀಯ ಸ್ವಯಂ ಸರ್ಕಾರಗಳಾದ ಪಂಚಾಯತ್ ರಾಜ್ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಮೇಲಿನ ಸರ್ಕಾರಗಳ ಹಸ್ತಕ್ಷೇಪ ತಡೆಯಲು ಬೇಕಾದ ಕಛೇರಿ ನಿರ್ವಾಹಣಾ ಕೈಪಿಡಿ ರಚನೆ, ಜನಪ್ರತಿನಿಧಿಗಳಿಗೆ ಬೇಕಾದ ಶಿಷ್ಟಾಚಾರ ರಚನೆ, ಮುಂತಾದ ಕ್ರಮಗಳನ್ನು ಕೈಗೊಳ್ಳುವಲ್ಲಿ ಪಂಚಾಯತ್ ರಾಜ್ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ. ಪಂಚಾಯತ್ ರಾಜ್ ಇಲಾಖೆಯ ಆಡಳಿತ ಅಧಿಕಾರಿ ಕೇಂದ್ರಿತವಾಗಿದೆ. ಪಂಚಾಯತ್ ರಾಜ್ ಸಂಸ್ಥೆಗಳು ಸ್ಥಳೀಯ ಸ್ವಯಂ ಸರ್ಕಾರಗಳಾಗಿ ಕಾರ್ಯನಿರ್ವಹಿಸುವ ಮೂಲಕ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸು ನನಸು ಮಾಡುವಂತ ಪೂರಕ ವಾತಾವರಣವನ್ನು ಸೃಷ್ಟಿ ಮಾಡಬೇಕಾದ ಪಂಚಾಯತ್ ರಾಜ್ ಇಲಾಖೆ ಅಧಿಕಾರಿಯೋರ್ವರ ಕನಸಿನ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವ ಇಲಾಖೆಯಾಗಿ ಮಾರ್ಪಟ್ಟಿದೆ ಎಂದರು.
ಗಾಂಧೀಜಿಯವರು ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದ ಶತಮಾನೋತ್ಸವವನ್ನು “ಗಾಂಧಿ ಭಾರತ” ಎಂಬ ಹೆಸರಿನಲ್ಲಿ ಸರ್ಕಾರ ಆಚರಿಸುತ್ತಿದೆ. ಹಾಗೂ ಗಾಂಧಿ ಕನಸಿನ ಗ್ರಾಮ ಸ್ವರಾಜ್ಯವನ್ನು ಕರ್ನಾಟಕದಲ್ಲಿ ಸಾಕಾರಗೊಳಿಸಲಾಗುವುದೆಂದು ಘೋಷಿಸಿದೆ. ಆದ್ದರಿಂದ ಸರ್ಕಾರವು ಘೋಷಣೆಗಳಿಗೆ ಬದ್ಧವಾಗಿರಬೇಕು. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆಯ ಎಲ್ಲಾ ಅಂಶಗಳನ್ನು ಕಡ್ಡಾಯವಾಗಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ರಾಜ್ಯದ ಅಭಿವೃದ್ಧಿ ಆಯುಕ್ತರಾಗಿ ರಾಜ್ಯದ ಎಲ್ಲಾ ಅಭಿವೃದ್ಧಿ ಇಲಾಖೆಗಳ ನಿರ್ವಹಣೆ ಮಾಡುತ್ತಿರುವ ಹಿರಿಯ ಅಧಿಕಾರಿಗಳೇ ಪಂಚಾಯತ್ ರಾಜ್ ಇಲಾಖೆಯ ಮುಖ್ಯಸ್ಥರಾಗಿಯೇ ಕಾರ್ಯನಿರ್ವಹಿಸುತ್ತಿರುವುದು ಪಂಚಾಯತ್ ರಾಜ್ ಇಲಾಖೆಯ ಸಮರ್ಪಕ ಕಾರ್ಯನಿರ್ವಹಣೆಗೆ ತೊಡಕಾಗಿದ್ದು, ಕೂಡಲೇ ಸರ್ಕಾರ ಪಂಚಾಯತ್ ರಾಜ್ ಇಲಾಖೆಗೆ ಪೂರ್ಣಾವಧಿ ಅಧಿಕಾರಿಯೊಬ್ಬರನ್ನು ನೇಮಿಸಬೇಕು ಎಂದು ಒತ್ತಾಯಿಸಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎ.ಎಂ.ಚಲಪತಿ, ಉಪಾಧ್ಯಕ್ಷರಾದ ಪಂಪಯ್ಯ, ಖಜಾಂಚಿ ಹೇಮ ಮಂಜುನಾಥ ಉಪಸ್ಥಿತರಿದ್ದರು.