ಬರೆದಂತೆ ಬದುಕಿದವರು ಡಿವಿಜಿ: ನಾಹಿದಾ ಜಂಮ್ ಜಂಮ್

ತುಮಕೂರು: ಬರೆದಂತೆ ಬದುಕುವುದು ಎಲ್ಲರಿಗೂ ಸಾಧ್ಯವಿಲ್ಲ, ಆದರೆ ಡಿವಿಜಿ ಅವರು ಅಂತಹ ಅಪರೂಪದ ಸಾಧಕರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದಾರೆ. ಪತ್ರಿಕೋದ್ಯಮವನ್ನು ಕೇವಲ ವೃತ್ತಿಯನ್ನಾಗಿ ಮಾಡಿಕೊಳ್ಳದೆ, ಸಾರ್ವಜನಿಕರಿಗೆ ನಿಖರ ಮಾಹಿತಿ ನೀಡುವ ಸೇವೆಯನ್ನಾಗಿ ಅವರು ಪರಿಗಣಿಸಿದ್ದರು ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಸಚಿವೆ ನಾಹಿದಾ ಜóಮ್ ಜóಮ್ ಅವರು ಅಭಿಪ್ರಾಯಪಟ್ಟರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತುಮಕೂರು ಜಿಲ್ಲಾ ಘಟಕ, ತುಮಕೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಡಿವಿಜಿ ಕನ್ನಡ ಅಧ್ಯಯನ ಕೇಂದ್ರ ಇವುಗಳ ಸಹಯೋಗದಲ್ಲಿ ಮಾ. 17 ಮಂಗಳವಾರದಂದು ಆಯೋಜಿಸಲಾಗಿದ್ದ ಡಿವಿಜಿ ಅವರ ಜನ್ಮದಿನಾಚಾರಣೆ ಕಾರ್ಯಕ್ರಮದಲ್ಲಿ ಡಿವಿಜಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಡಿವಿಜಿಯವರ ತತ್ವಗಳು ಯುವಜನರ ಪಾಲಿಗೆ ಜ್ಞಾನ ತುಂಬುವ ದಾರಿದೀಪಗಳಾಗಿವೆ. ವಸ್ತುನಿಷ್ಠವಾಗಿ ಸಮಾಜಕ್ಕೆ ಮಾಹಿತಿ ನೀಡುವ ವಿಷಯದಲ್ಲಿ ಡಿವಿಜಿಯವರು ನಂಬಿದ್ದ ತತ್ವಗಳು ಇಂದಿನ ಮಾಧ್ಯಮಗಳಿಗೆ ಮಾರ್ಗದರ್ಶಿಸೂತ್ರಗಳಾಗಿವೆ ಎಂದರು.

ತುಮಕೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ. ಸಿಬಂತಿ ಪದ್ಮನಾಭ ಕೆ. ವಿ. ಮಾತನಾಡಿ, ಡಿವಿಜಿಯವರು ಪತ್ರಿಕಾ ಸ್ವಾತಂತ್ರ್ಯದ ಪರವಾದ ನಿಲುವು ಹೊಂದಿದ್ದರು. ಸಾಮಾನ್ಯ ಪ್ರಜೆಗಿಂತ ಹೆಚ್ಚಿನ ಸ್ಥಾನಮಾನವೇನೂ ಪತ್ರಕರ್ತನಿಗೆ ಬೇಕಾಗಿಲ್ಲ, ಆದರೆ ಅದಕ್ಕಿಂತ ಕಡಿಮೆಯೂ ಇರಬಾರದು ಎಂದು ನಂಬಿದ್ದರು. ಆದರೆ ಆ ಕಾರಣಕ್ಕೆ ಪತ್ರಕರ್ತರು ತಾವು ಸಮಾಜದ ಇತರರಿಗಿಂತ ಹೆಚ್ಚಿನವರೆಂದು ಭಾವಿಸಬಾರದೆಂದು ಡಿವಿಜಿ ಸ್ಪಷ್ಟವಾಗಿ ಅಭಿಪ್ರಾಯಪಟ್ಟಿದ್ದರು ಎಂದರು.

ಡಿವಿಜಿಯವರು ಕಾರ್ಯನಿರತ ಪತ್ರಕರ್ತರ ಸಂಘದ ಸಂಸ್ಥಾಪಕ ಅಧ್ಯಕ್ಷರು. ಸುಮಾರು ನೂರು ವರ್ಷಗಳ ಹಿಂದೆ ಸುಮಾರು ಹತ್ತು ಪತ್ರಿಕೆಗಳ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದ ಡಿ.ವಿ.ಜಿ ಅವರು, ಪತ್ರಿಕೋದ್ಯಮವು ಆಳುವವರ ಹತೋಟಿಯಲ್ಲಿರಬಾರದು ಎಂಬ ದೃಢ ನಿಲುವನ್ನು ಹೊಂದಿದ್ದರು. ಅವರ ಜನ್ಮದಿನವನ್ನು ಆಚರಿಸಲು ಪತ್ರಕರ್ತರ ಸಂಘ ನಿರ್ಧರಿಸಿರುವುದು ಅಭಿನಂದನೀಯ ಎಂದರು.

ಇಂದಿನ ಕೃತಕ ಬುದ್ಧಿಮತ್ತೆ ಕಾಲದಲ್ಲಿ ಮಾಧ್ಯಮಗಳಲ್ಲಿ ಬಿತ್ತರವಾಗುವ ಸುದ್ದಿಗಳ ಸತ್ಯಾಸತ್ಯತೆಯನ್ನು ಗುರುತಿಸುವುದು ದೊಡ್ಡ ಸವಾಲಾಗಿದೆ. ಸುದ್ದಿಗಳನ್ನು ವಸ್ತುನಿಷ್ಠವಾಗಿ ತಲುಪಿಸಬೇಕು ಎಂಬುದಕ್ಕಿಂತಲೂ ಸುಳ್ಳುಸುದ್ದಿಗಳ ಹಾವಳಿಯಿಂದ ತಮ್ಮ ವೃತ್ತಿಘನತೆಯನ್ನು ರಕ್ಷಿಸಿಕೊಳ್ಳವುದು ಹೇಗೆ ಎಂಬುದೇ ಮಾಧ್ಯಮರಂಗದ ಇಂದಿನ ಆತಂಕವಾಗಿದೆ ಎಂದರು.

ಕೆ.ಯು.ಡಬ್ಲ್ಯೂ.ಜೆ ತುಮಕೂರು ಜಿಲ್ಲಾಧ್ಯಕ್ಷರಾದ ಎಲ್. ಯೋಗೇಶ್ ಮಾತನಾಡಿ, ಪತ್ರಕರ್ತ ವೃತ್ತಿಯು ಒಂದು ಮಹತ್ವದ ಸಾಮಾಜಿಕ ಜವಾಬ್ದಾರಿಯಾಗಿದೆ. ಸಮಾಜದಲ್ಲಿ ವದಂತಿಗಳು ಮತ್ತು ಅಸತ್ಯ ಮಾಹಿತಿಗಳು ಹರಡುತ್ತಿರುವ ಈ ಸಂದರ್ಭದಲ್ಲಿ, ಪ್ರತಿಯೊಂದು ಸುದ್ದಿಯನ್ನೂ ಪೂರ್ವಾಪರ ಪರಿಶೀಲಿಸಿ ನಿಖರತೆಯನ್ನು ಕಾಪಾಡಿಕೊಳ್ಳುವುದು ಪತ್ರಕರ್ತರ ಪ್ರಮುಖ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಡಿವಿಜಿ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಪೆÇ್ರ. ಡಾ. ಅಣ್ಣಮ್ಮ, ವಿವಿ ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ. ದಾಕ್ಷಾಯಿಣಿ, ಪತ್ರಕರ್ತ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಇ. ರಘುರಾಮ್, ಪದಾಧಿಕಾರಿಗಳು, ಹಿರಿಯ ಪತ್ರಕರ್ತರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *