ಮತ್ತೆ ಸಂಭ್ರಮಿಸಲು ರೈತ-ದಲಿತ ಚಳವಳಿಗಳು ಮರು ಹುಟ್ಟು ಪಡೆಯಬೇಕಿದೆ-ದಿನೇಶ್ ಅಮೀನ್ ಮಟ್ಟು

ತುಮಕೂರು : ಮತ್ತೆ ನಮ್ಮಂತಹವರು ಸಂಭ್ರಮಿಸಬೇಕೆಂದರೆ ರೈತ ಚಳವಳಿ ಮತ್ತು ದಲಿತ ಚಳವಳಿಗಳು ಹೊಸ ಅಲೋಚನೆಗಳೊಂದಿಗೆ ಮತ್ತೆ ಮರು ಹುಟ್ಟು ಪಡೆಯುವ ಮೂಲಕ ಪರ್ಯಾಯ ರಾಜಕೀಯವನ್ನು ಕಟ್ಟಬೇಕಾಗಿದೆ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅಭಿಪ್ರಾಯಪಟ್ಟರು.

ಅವರು ಮಾಚ್ 1ರ ಭಾನುವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಚರಕ ಚಾರಿಟಬಲ್ ಟ್ರಸ್ಟ್ ವತಿಯಿಂದ ತುಮಕೂರು ನಗರದ ನಗರ ಕೇಂದ್ರ ಗ್ರಂಥಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಹಾಗೂ ವಿಚಾರಗೋಷ್ಠಿಯಲ್ಲಿ ಅವರು ‘ಸಮಕಾಲೀನ ಸಾಮಾಜಿಕ, ರಾಜಕೀಯ, ಸಾಂಸ್ಕøತಿಕ ತಲ್ಲಣಗಳು’ ವಿಷಯದ ಕುರಿತು ಮಾತನಾಡಿದರು.

80ರ ದಶಕದಲ್ಲಿ ರೈತ ಮತ್ತು ದಲಿತ ಚಳವಳಿಯ ಪರಿಣಾಮವಾಗಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರವನ್ನು ಕಳೆದುಕೊಂಡಿತು,ಈ ಹಿನ್ನೆಲೆಯಲ್ಲಿ ರೈತ ಮತ್ತು ದಲಿತ ಚಳವಳು ಹೊಸ ರೂಪ ಪಡೆದುಕೊಂಡು ಬಂದಲ್ಲಿ ರಾಜ್ಯ ಮತ್ತು ದೇಶದಲ್ಲಿ ಬದಲಾವಣೆಯನ್ನು ಕಾಣಬಹುದು ಎಂದು ಹೇಳಿದ ಅವರು, 80ರ ದಶಕದಲ್ಲಿ ಪಿ.ಲಂಕೇಶ್, ತೇಜಸ್ವಿ, ಎಂ.ಡಿ.ನಂಜುಂಡಸ್ವಾಮಿ ಅವರುಗಳು ತೃತೀಯ ರಂಗ ಕಟ್ಟಲು ಹೋಗಿ ತಮ್ಮ ಭಿನ್ನಾಭಿಪ್ರಾಯಗಳಿಂದ ಸಾಧ್ಯವಾಗಲಿಲ್ಲ, ಆದರೆ ಇವರು ಸಾಂಸ್ಕøತಿಕ ಚಳುವಳಿಗೆ ಒಟ್ಟಾಗಿ ಕೆಲಸ ಮಾಡಿದರು, ಇವರು ಹೇಳಿದ್ದನ್ನೇ ಹೇಳಿದ ಗೌರಿ ಲಂಕೇಶ್, ದಾಬೋಲ್ಕರ್ ಮತ್ತು ಎಂ.ಎಂ.ಕಲ್ಬುರ್ಗಿಯವರನ್ನು ಹತ್ಯೆ ಮಾಡಲಾಯಿತು ಎಂದರು.

1991ರಲ್ಲಿ ಹೊಸ ಆರ್ಥಿಕ ನೀತಿ ಬಂತು, 1992ರಲ್ಲಿ ಬಾಬರಿ ಮಸೀದಿ ದ್ವಂಸವಾಯಿತು ಈ 34 ವರ್ಷಗಳಲ್ಲಿ ಕೋಮುವಾದ ಮತ್ತು ಬಂಡವಾಳಶಾಹಿ ತಲೆಯೆತ್ತಿದವು ಇದರ ವಿರುದ್ಧ ಎಷ್ಟು ಪ್ರತಿಭಟನೆಗಳು ನಡೆದಿವೆ, ಪತ್ರಿಕಾಗೋಷ್ಠಿಗಳು ನಡೆದಿವೆ ಎಂದು ಹಿಂತಿರುಗಿ ನೋಡಿದರೆ ಅದ್ಯಾವುದು ಆಗಿಲ್ಲ, ಇಂದು ಸಮಸ್ಯೆ ಏನಾಗಿದೆ ಎಂದರೆ ಮೀಸಲಾತಿ ಪಡೆದು ಮುಂದೆ ಬಂದವರೆ ನಾವು ಅರ್ಹತೆ ಪರವಾಗಿ ಇರುವವರು ಮೀಸಲಾತಿ ಯಾಕೆ ಬೇಕೆ ಎಂದು ಮಾತನಾಡುತ್ತಿದ್ದಾರೆ, ಅಂದರೆ ನಮ್ಮ ವಿರುದ್ಧ ನಾವೇ ಮಾತನಾಡಿಕೊಳ್ಳುವಂತಹ ಸನ್ನಿವೇಶವನ್ನು ತಂದುಕೊಂಡಿದ್ದೇವೆ ಎಂದರು.

ಧರ್ಮ ಮತ್ತು ಕೋಮುವಾದ ಬೇರೆ ಬೇರೆ ಇದಕ್ಕೆ ಉದಾಹರಣೆ ತಮುಳುನಾಡಿನಲ್ಲಿ ಪೆರಿಯಾರ್ ಒಂದು ಮಾಡಲ್ ಇದೆ, ತಮುಳುನಾಡಿನಲ್ಲಿ ಬಿಜೆಪಿ ಅಧಿಕಾರ ಪಡೆಯಲು ಯಾಕೆ ಸಾಧ್ಯವಾಗಿಲ್ಲ ಎಂದರೆ ಪೆರಿಯಾರ್ ಹಾಕಿ ಕೊಟ್ಟ ಸ್ಥಳೀಯ ಸಾಂಸ್ಕøತಿಕ ರಾಜಕಾರಣದಿಂದ ಅಲ್ಲಿ ಕೋಮುವಾದ ಬೇರೂರಲು ಸಾಧ್ಯವಾಗಿಲ್ಲ, ಯಾಕೆಂದರೆ ಅವರಿಗೆ ಧರ್ಮ ಎಂದರೇನು, ಕೋಮುವಾದ ಎಂದರೇನು ಎಂಬ ವ್ಯತ್ಯಾಸ ಗೊತ್ತಿದೆ ಈ ಹಿನ್ನೆಲೆಯಲ್ಲಿ ಅಲ್ಲಿ ಬಿಜೆಪಿ ಅಧಿಕಾರ ಹಿಡಿಯಲು ಸಾಧ್ಯವಿಲ್ಲ ಎಂದು ಹೇಳಿದರು.

ತಮಿಳುನಾಡಿನಲ್ಲಿ ದೇವಸ್ಥಾನಗಳನ್ನು ಬಳಸಿಕೊಂಡು ಬಿಜೆಪಿ ರಾಜಕೀಯ ಮಾಡಲು ಸಾಧ್ಯವಾಗಿಲ್ಲ, ಅಲ್ಲಿ ಇ.ವಿ.ರಾಮಸ್ವಾಮಿಯಂತಹವರು ನಾಯಕರಿದ್ದಾರೆ, ಕರ್ನಾಟಕದಲ್ಲೂ ಜಾತ್ಯತೀತರು, ಪ್ರಗತಿಪರರು ಧರ್ಮಬೇರೆ, ಕೋಮುವಾದ ಬೇರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ, ಅಂತಿಮವಾಗಿ ಈ ತಲ್ಲಣಗಳಿಂದ ಸಂಭ್ರಮಿಸಿಕೊಳ್ಳಬೇಕಾದರೆ ಮತ್ತೆ ಚಳವಳಿಗಳು ಹುಟ್ಟಬೇಕು ಎಂದು ಅಭಿಪ್ರಾಯಪಟ್ಟರು.

ಇಂದು ಎಲ್ಲಾ ರಂಗಗಳಂತೆ ನ್ಯಾಯಾಂಗ, ಮಾಧ್ಯಮ ರಂಗ ಸಹ ಭ್ರಷ್ಟವಾಗಿವೆ, ಸಾಮಜಿಕ ಬದ್ಧತೆಯನ್ನು ಎತ್ತಿ ಹಿಡಿಯಬೇಕಿದ್ದ ಮಾಧ್ಯಮ ರಂಗ ಸಹ ಇತರೆ ರಂಗಗಳು ಕೆಟ್ಟು ಹೋದಂತೆ ಮಾಧ್ಯಮ ರಂಗವೂ ಕೆಟ್ಟು ಹೋಗಿದೆ, ಒಂದು ಕಾಲದಲ್ಲಿ ಎಲ್ಲಾ ರಂಗಗಳು ಕೈ ಬಿಟ್ಟಾಗ ಮಾಧ್ಯಮ ರಂಗದತ್ತ ಜನ ನೋಡುತ್ತಿದ್ದರು, ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದಾಗ ಮಾಧ್ಯಮ ರಂಗ ಪ್ರಬಲವಾಗಿ ಖಂಡಿಸಿತು, ಆದರೆ ಇವತ್ತು ಮಾಧ್ಯಮ ಕ್ಷೇತ್ರ ಕೂಡ ಗೋದಿ ಮೀಡಿಯಾ ಆಗಿದೆ, ಆಳುವವರ ಕಾವಲು ನಾಯಿ ಆಗುವ ಬದಲು ಆಳುವವರ ಕಾಲು ನೆಕ್ಕುವ ನಾಯಿಯಾಗಿದೆ, ಸಾಮಾಜಿಕ, ರಾಜಕೀಯ, ಸಾಂಸ್ಕøತಿಕ ನ್ಯಾಯ ಯಾಕೆ ವಿಫಲವಾಗಿವೆ ಎಂದರೆ ನ್ಯಾಯಾಂಗ, ಸಂವಿಧಾನವೂ ವಿಫಲವಾಗಿದೆ ಇದಕ್ಕೆ ಪರ್ಯಾಯ ಏನು ಎಂಬುದನ್ನು ಯೋಚನೆ ಮಾಡಬೇಕು, ಅಂತಹ ಮಾಡೆಲ್ 80ರ ದಶಕದಲ್ಲಿ ಚಳವಳಿಗಳ ಮೂಲಕ ಕಂಡುಕೊಳ್ಳಲಾಗಿತ್ತು, ಇಂತಹ ಚಳವಳಿಗಳನ್ನು ಸಹ ರಾಮಕೃಷ್ಣ ಹೆಗಡೆ ಹೇಗೆ ಮುಗಿಸಿದರು ಎಂಬುದೇ ಒಂದು ಇತಿಹಾಸ ಎಂದು ಹೇಳಿದರು.

ನಮ್ಮ ಸಂವಿಧಾನದಲ್ಲಿ ಎರಡು ಲಕ್ಷದ ನಲವತ್ತು ಸಾವಿರ ಶಬ್ದಗಳಿವೆ, ಇವುಗಳನ್ನು ಹೊಸ ಹೊಸ ತಿದ್ದುಪಡಿಗಳನ್ನು ಮಾಡಿ ಸಂವಿಧಾನವನ್ನು ದುರ್ಬಲಗೊಳಿಸಲಾಗುತ್ತಿದೆ, ಸಂವಿಧಾನ ಪ್ರಬಲವಾಗಿದೆ ಎಂದು ನಾವಂದುಕೊಂಡಿದ್ದೇವೆ ಅದನ್ನು ದುರ್ಬಲಗೊಳಿಸಲು ಒಂದಲ್ಲ ಒಂದು ರೀತಿಯಲ್ಲಿ ಕೆಲಸ ನಡೆಯುತ್ತಲೇ ಇದೆ, ಮೀಸಲಾತಿಯ ಹೆಸರಿನಲ್ಲಿ ಮೀಸಲಾತಿಯನ್ನು ಪಡೆಯುವವರನ್ನೆ ಪರಸ್ಪರ ಹೊಡೆದಾಡುವಂತೆ ಮಾಡಿ, ಸಂಘಟನೆಗಳನ್ನು ಹೊಡೆದಾಕಿ ವಿಘಟನೆ ಮಾಡಲಾಗಿದೆ, ಹೊಸ ಆರ್ಥಿಕ ನೀತಿ ಬಂದ ನಂತರ ಶೇಕಡ 98ರಷ್ಟು ಉದ್ಯೋಗ ಖಾಸಗಿ ಕ್ಷೇತ್ರದಲ್ಲಿದ್ದು, ಶೇಕಡ 2ರಷ್ಟಿರುವ ಸರ್ಕಾರಿ ಉದ್ಯೋಗದ ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದೇವೆ, ನಿಜವಾಗಿ ಈಗ ಖಾಸಗಿ ಕ್ಷೇತ್ರದಲ್ಲಿನ ಉದ್ಯೋಗದಲ್ಲೂ ಮೀಸಲಾತಿಗಾಗಿ ಹೋರಾಡಬೇಕಾಗಿದೆ, ಈಗ ಸರ್ಕಾರಿ ಉದ್ಯೋಗದ ಮೀಸಲಾತಿ ನೀರಿಲ್ಲದ ಕೆರೆಯಲ್ಲಿ ಮೀನು ಹಿಡಿಯಲು ಹೊರಟಂತಾಗಿದೆ ಎಂದರು.

ಕರ್ನಾಟಕವು ಮೀಸಲಾತಿಯನ್ನು ಶೇಕಡ 50 ಮೀರುವುದಿಲ್ಲ ಎಂದು ನ್ಯಾಯಾಲಯದಲ್ಲಿ ಹೇಳಿಕೆ ನೀಡಿದೆ, ಹಾಗಾದರೆ ಈಗ ಸರ್ಕಾರವು ಶೇಕಡ 56ರಷ್ಟು ಮೀಸಲಾತಿ ನೀಡುತ್ತೇವೆ ಎಂದು ಹೇಳುತ್ತಿದೆ, 1993ರಲ್ಲಿ ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದಾಗ ಮೀಸಲಾತಿಯನ್ನು ಶೇಕಡ 73ರಷ್ಟು ಏರಿಸಿ ಒಂದು ಆದೇಶವನ್ನೇ ಮಾಡಿದರು. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಶೇಕಡ 75 ಮೀಸಲಾತಿ ನೀಡುವುದಾಗಿ ಹೇಳಿದೆ ಇದನ್ನು ಜಾರಿ ಮಾಡಿದರೆ ಎಲ್ಲಾ ಕಷ್ಟಗಳು ತೀರಲಿವೆ, ಆಗ ನಾವು ಶೇಕಡ 25ರಷ್ಟು ಮೀಸಲಾತಿಗೆ ಹೋರಾಟ ತಪ್ಪುತ್ತದೆ, ಶೇಕಡ 75 ರಷ್ಟು ಮೀಸಲಾತಿ ತರಲು ಹೊರಟರೆ, ಹಾಗಯೇ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ತರಲು ಹೊರಟರೆ ಆಗ ಏನು ಪರಿಣಾಮ ಆಗಲಿದೆ ಎಂಬುದು ತಿಳಿಯಲಿದೆ, ಇನ್ಫೋಸಿಸ್ ನಾರಾಯನಮೂರ್ತಿಗಳು ಜಾತಿ ಆಧಾರಿತ ಜಾತಿ ಗಣತಿಗೆ ಯಾಕೆ ವಿರೋಧ ಮಾಡುತ್ತಾರೆ ಎಂದರೆ ಅವರ ಸಂಸ್ಥೆಯಲ್ಲಿನ ಉದ್ಯೋಗಿಗಳ ಜಾತಿ ತಿಳಿಯಲಿದೆ ಎಂಬುದಕ್ಕೆ, ಈ ಹಿನ್ನಲೆಯಲ್ಲಿಯೇ ಸಾಮಾಜಿಕ ನ್ಯಾಯದ ಕತ್ತಿಗಳನ್ನು ಮೊಂಡು ಮಾಡಲಾಗುತ್ತಿದೆ ಎಂದರು.

ಈ ಹಿನ್ನಲೆಯಲ್ಲಿಯೇ ಬಾಬಾ ಸಾಹೇಬ ಅಂಬೇಡ್ಕರ್ ಅವರು ಪರಿವರ್ತನೆಯ ರಥವನ್ನು ಇಷ್ಟು ದೂರ ಎಳೆದು ತಂದಿದ್ದೇನೆ, ಸಾಧ್ಯವಾದರೆ ಮುಂದಕ್ಕೆ ಎಳೆಯಿರಿ ಆದರೆ ಹಿಂದಕ್ಕೆ ತಗೊಂಡು ಹೋಗಬೇಡಿ ಎಂದು ಹೇಳಿದ್ದಾರೆ, ಆದರೆ ಇವತ್ತು ಪರಿವರ್ತನೆಯ ರಥ ಹಿಂದಕ್ಕೆ ಹೋಗುತ್ತಾ ಇದೆ ಈ ಹಿನ್ನೆಯಲ್ಲಿಯೇ ಸಾಮಾಜಿಕ, ರಾಜಕೀಯ, ಸಾಂಸ್ಕøತಿಕ ತಲ್ಲಣಗಳಿಗೆ ಹೊಸ ಚಳವಳುಗಳು ಹುಟ್ಟಬೇಕಿದೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ಚರಕ ಚಾರಿಟಬಲ್ ಮುಖ್ಯಸ್ಥ ಡಾ.ಬಸವರಾಜು ವಹಿಸಿ ಮಾತನಾಡಿದರು. ಎ.ರಾಮಚಂದ್ರ ಪ್ರಾಸ್ತಾವಿಕ ಮಾತನಾಡಿದರು. ಕುಂದೂರು ಮುರಳಿ ಸ್ವಾಗತಿಸಿದರು. ಅಧ್ಯಾಪಕ ಡಾ.ಶಿವಣ್ಣ ತಿಮ್ಲಾಪುರ ಕಾರ್ಯಕ್ರಮ ನಿರೂಪಿಸಿದರು. ತುಮಕೂರು ಉಪ ವಿಭಾಗಾಧಿಕಾರಿ ನಾಹಿದಾ ಜಮ್ ಜಮ್, ಸಾಮಾಜಿಕ ಹೋರಾಟಗಾರ ಶ್ರೀಪಾದ ಭಟ್, ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಡಾ.ಆಶಾ ಬಗ್ಗನಡು, ವಿರೂಪಾಕ್ಷ ಡ್ಯಾಗೇರಹಳ್ಳಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *