ತುಮಕೂರು: ಎಲ್ಲ ಜಾತಿ ಧರ್ಮಗಳನ್ನು ಒಗ್ಗೂಡಿಸುವ ದೇಶದ ಅಧ್ಯಾತ್ಮವನ್ನು ಮಹಾತ್ಮ ಗಾಂಧೀಜಿ ಹಾಗೂ ಸ್ವಾಮಿ ವಿವೇಕಾನಂದ ನಂಬಿದ್ದರು. ಮನುಷ್ಯತ್ವವನ್ನು, ಸಮಾನತೆಯ ರಾಷ್ಟ್ರವನ್ನು ನಿರ್ಮಿಸುವ ಶಿಕ್ಷಣದ ಅಗತ್ಯ ಭಾರತಕ್ಕಿದೆ ಎಂದು ಸಾರಿದರು ಎಂದು ಶಿಕ್ಷಣ ತಜ್ಞ ಡಾ. ವೂಡೇ ಪಿ. ಕೃಷ್ಣ ತಿಳಿಸಿದರು.
ತುಮಕೂರು ವಿವಿ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಘಟಕ, ಕೌಶಲ್ಯಾಭಿವೃದ್ಧಿ ಘಟಕ, ವಿವಿ ವಿಜ್ಞಾನ ಕಾಲೇಜು, ಕಲಾ ಕಾಲೇಜು ಹಾಗೂ ಸ್ನಾತಕೋತ್ತರ ವಿಭಾಗಗಳ ವತಿಯಿಂದ ಗುರುವಾರ ಆಯೋಜಿಸಿದ್ದ ಪ್ರೇರಣಾ ಉಪನ್ಯಾಸ ಮಾಲೆಯನ್ನು ಉದ್ಘಾಟಿಸಿ ‘ಮಹಾತ್ಮ ಗಾಂಧಿ ಮತ್ತು ಸ್ವಾಮಿ ವಿವೇಕಾನಂದರ ಚಿಂತನೆಗಳ ಸಾಮ್ಯತೆ’ ಕುರಿತು ಮಾತನಾಡಿದರು.
ಗಾಂಧೀಜಿ ಹಾಗೂ ವಿವೇಕಾನಂದರು ವಿರೋಧಿಸಿದ ಜಾತೀಯತೆ ಮತ್ತು ಮತೀಯ ಬೇದಭಾವಗಳ ಗದ್ದಲ, ತಾಂತ್ರಿಕ ಆರ್ಭಟದಿಂದ ಹಾಳಾಗುತ್ತಿರುವ ಮನುಷ್ಯ ಸಂಬಂಧ, ಜೀವನ ಶೈಲಿಯ ಬದಲಾವಣೆಯಿಂದಾಗಿ ಪ್ರಕೃತಿಯೊಂದಿಗಿನ ಸಂಬಂಧ ಕಡಿತ, ಸಾಮಾಜಿಕ ಮಾಧ್ಯಮಗಳು, ಜಾಲತಾಣಗಳಿಂದ ದಾರಿ ತಪ್ಪಿರುವ, ತಪ್ಪುತ್ತಿರುವ ಯುವಕರಿಂದ ರಾಷ್ಟ್ರ ನಿರ್ಮಾಣ ಸಾಧ್ಯವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪಾಶ್ಚಾತ್ಯ ಶಿಕ್ಷಣಕ್ಕೆ, ಸಂಸ್ಕøತಿಗೆ ಬಲಿಯಾಗಿ, ಮತ್ತೊಬ್ಬರ ನೋವಿಗೆ ಸ್ಪಂದಿಸದ ಯುವಪೀಳಿಗೆಯನ್ನು ಕಾಣುತ್ತಿದ್ದೇವೆ. ಮಹಾತ್ಮ ಗಾಂಧೀಜಿ ಹಾಗೂ ಸ್ವಾಮಿ ವಿವೇಕಾನಂದರಂತಹ ಚಿಂತನಾ ನಾಯಕತ್ವ ಬೇಕಿದೆ. ಒಳ್ಳೆಯ ಆಲೋಚನೆಗಳೆ ಗೆಲುವಿನ ಗುಟ್ಟು. ಸರ್ವರ ಒಳಿತು, ಸರ್ವರ ಗೆಲುವು ಎಂದು ಸಾರಿದ ಈ ಇಬ್ಬರು ಮಹನೀಯರ ಒಂದಂಶವನ್ನೂ ಬದುಕಿಗೆ ಇಂದಿನ ಸಮಾಜ ಅಳವಡಿಸಿಕೊಳ್ಳದಿರುವುದು ವಿಷಾದನೀಯ ಎಂದರು.
ಜಾತೀಯತೆ ಎಂದರೆ ಮೆಟ್ಟಿಲುಗಳಿಲ್ಲದ ಬಹುಮಹಡಿಯ ಕಟ್ಟಡ. ಅಲ್ಲಿ ಜಾತಿ ಧರ್ಮಗಳು ಆಯಾ ಅಂತಸ್ತಿನಲ್ಲಿ ಸಿಲುಕಿ ನರಳುತ್ತಿವೆ. ಬಹುತ್ವ ತತ್ವವನ್ನು ಉಳಿಸಿಕೊಳ್ಳುವುದರಲ್ಲಿ ಮಂದಿ ಸೋತಿದ್ದಾರೆ ಎಂದು ಗಾಂಧೀಜಿ ಅವರು ತಮ್ಮ ನಡೆಯಲ್ಲಿ, ವಿವೇಕಾನಂದರು ತಮ್ಮ ನುಡಿಯಲ್ಲಿ ಸಮಾಜಕ್ಕೆ ತಿಳಿಸಿದರು ಎಂದು ಹೇಳಿದರು.
ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಸ್ವಾಮಿ ಜಪಾನಂದಜೀ ಮಾತನಾಡಿ, ರಾಷ್ಟ್ರಗೀತೆಗೆ ಎದ್ದು ನಿಲ್ಲುವಷ್ಟು ತಾಳ್ಮೆಯಿಲ್ಲದ ಮಂದಿಯಿಂದ ರಾಷ್ಟ್ರ ನಿರ್ಮಾಣ ಸಾಧ್ಯವಿಲ್ಲ. ಈಗಿನ ಯುವಪೀಳಿಗೆಗೆ ಗಾಂಧೀಜಿ ಹಾಗೂ ವಿವೇಕಾನಂದರ ಉತ್ಕøಷ್ಟ ಚಿಂತನೆಗಳು ಹಳತಾಗಿರುವುದು ನೋವಿನ ಸಂಗತಿ ಎಂದರು.
ವಿವಿ ಕುಲಪತಿ ಪೆÇ್ರ. ಎಂ. ವೆಂಕಟೇಶ್ವರಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬುದ್ಧಿಯ ಹಸಿವನ್ನು ನೀಗಿಸುವುದು ಶಿಕ್ಷಣ ಸಂಸ್ಥೆಗಳ ಕರ್ತವ್ಯ. ಧ್ವನಿ ರಹಿತ, ಶೋಷಣೆಯ ಪರವಾದ, ಜವಾಬ್ದಾರಿ ರಹಿತವಾದ ಅಸತ್ಯ ಬದುಕನ್ನು ಸಾಗಿಸುತ್ತಿರುವವರಿಂದ ದೇಶ ಏನನ್ನೂ ನಿರೀಕ್ಷಿಸಬಾರದು ಎಂದರು.
ಕುಲಸಚಿವೆ ನಾಹಿದಾ ಜûಮ್ ಜûಮ್, ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನಕುಮಾರ್ ಕೆ., ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಪ್ರೊ. ಪ್ರಕಾಶ್ ಎಂ. ಶೇಟ್, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಘಟಕದ ನಿರ್ದೇಶಕ ಪ್ರೊ. ಬಸವರಾಜ ಜಿ., ಕೌಶಲ್ಯಾಭಿವೃದ್ಧಿ ಘಟಕದ ನಿರ್ದೇಶಕ ಪ್ರೊ. ಕೆ. ಜಿ. ಪರಶುರಾಮ ಉಪಸ್ಥಿತರಿದ್ದರು. ಉಪನ್ಯಾಸಕಿ ಆಶಾರಾಣಿ ಬಗ್ಗನಡು ನಿರೂಪಿಸಿದರು.