ನರೇಗಾ ಯೋಜನೆಯಡಿ ಗ್ರಾಮೀಣಾಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ : ಕೆ.ಟಿ. ಅನಿಲ್ ಕುಮಾರ್

ತುಮಕೂರು : ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಗ್ರಾಮೀಣ ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಕೆ.ಟಿ. ಅನಿಲ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.

 ನಗರದ ಹೊರವಲಯದ ಹಿರೇಹಳ್ಳಿ ಸ್ಟೇಟ್ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ಸಭಾಂಗಣದಲ್ಲಿಂದು ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮೀಣಾಭಿವೃದ್ಧಿಯಲ್ಲಿ ನರೇಗಾ ಯೋಜನೆ ಮುಖ್ಯ ಪಾತ್ರವಹಿಸುತ್ತಿದ್ದು, ನರೇಗಾ ಕಾಮಗಾರಿಯಲ್ಲಿ ತೊಡಗಿದ ಕೂಲಿಕಾರ್ಮಿಕರಿಗೆ ಸಕಾಲಕ್ಕೆ ಕೂಲಿ ಪಾವತಿಸಿ ಜಿಲ್ಲೆಯಲ್ಲಿ ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಮಾತನಾಡಿ, ಜಿಲ್ಲೆಯ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ದೃಷ್ಟಿಕೋನದಿಂದ ಗ್ರಾಮ ಪಂಚಾಯಿತಿ ಸಮಗ್ರ ದರ್ಶನ ಎಂಬ ವಿಶೇಷ ಅಭಿಯಾನದ ಮೂಲಕ ಈಗಾಗಲೇ 196.52 ಕೋಟಿ ರೂ.ವೆಚ್ಚದಲ್ಲಿ ಚರಂಡಿ, ರಸ್ತೆ, ಗ್ರಾಮ ಪಂಚಾಯಿತಿ ಕಟ್ಟಡ, ಸಂಜೀವಿನಿ ಭವನ, ಗ್ರಾಮೀಣ ಗೋದಾಮು, ಶಾಲಾ ಆವರಣ ಗೋಡೆ, ಶೌಚಾಲಯ, ಆಟದ ಮೈದಾನ ಅಂಗನವಾಡಿ ಕಟ್ಟಡ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ ಕೈಗೊಂಡಿರುವ 1161 ಶಾಲಾ ಕಾಂಪೌಂಡ್, 874 ಶೌಚಾಲಯ, 945 ಆಟದ ಮೈದಾನ ಕಾಮಗಾರಿಗಳು ಪ್ರಗತಿಯಲ್ಲಿದೆ ಎಂದು ತಿಳಿಸಿದರು.

 ನೈಜವಾಗಿ ಕೆಲಸ ಮಾಡುತ್ತಿರುವ ನರೇಗಾ ಕಾರ್ಮಿಕರಿಗೆ ಕೆಲವು ತೊಡಕುಗಳು ಉಂಟಾಗುತ್ತಿರುವ ಬಗ್ಗೆ ಮತ್ತು ನರೇಗಾ ಯೋಜನೆ ಅನುμÁ್ಠನದಲ್ಲಿ ಎದುರಾಗುವ ಸಮಸ್ಯೆಗಳ ಕುರಿತು ಹೆಚ್ಚುವರಿ ಕಾರ್ಯದರ್ಶಿಗಳಿಗೆ ತಿಳಿಸಿದರು.

 ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ಮೂಲಕ ಕಂಪ್ಯೂಟರ್ ತರಬೇತಿ, ಛಾಯಾಚಿತ್ರೀಕರಣ, ಚಿಪ್ಸ್ ತಯಾರಿಕೆ, ಟೈಲರಿಂಗ್, ಮೊಬೈಲ್ ರಿಪೇರಿ, ಅಗರಬತ್ತಿ ತಯಾರಿಕೆ ಸೇರಿದಂತೆ ಸ್ವಯಂ ಉದ್ಯೋಗ ಕೈಗೊಳ್ಳಲು 509 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದೆ ಎಂದು ತರಬೇತಿ ಸಂಸ್ಥೆಯ ನಿರ್ದೇಶಕ ವಾದಿರಾಜ್ ಸಭೆಗೆ ಮಾಹಿತಿ ನೀಡಿದರು. 

ನಂತರ ಕೊರಟಗೆರೆ ತಾಲೂಕು ನೀಲಗೊಂಡನಹಳ್ಳಿ ಗ್ರಾ.ಪಂ ವ್ಯಾಪ್ತಿಯಲ್ಲಿರುವ ಕಾವೇರಿ ಸಂಜೀವಿನಿ ಒಕ್ಕೂಟದ ಮಹಿಳೆಯರೊಂದಿಗೆ ಸ್ವಯಂ ಉದ್ಯೋಗ ಸ್ಥಾಪನೆಯ ಗುರಿ ಮತ್ತು ಸವಾಲುಗಳ ಕುರಿತು ಚರ್ಚಿಸಿ ಸಂಜೀವಿನಿ ಸಂಘದ ವತಿಯಿಂದ ಸ್ಥಾಪಿಸಲಾದ ಹಪ್ಪಳ ಉತ್ಪಾದನೆ ತಯಾರಿಕಾ ಯಂತ್ರವನ್ನು ವೀಕ್ಷಿಸಿದರಲ್ಲದೆ, ನರೇಗಾ ಯೋಜನೆಯಡಿ ನಿರ್ಮಾಣವಾಗಿರುವ ಭೋಜನಾಲಯ, ವಾಲಿಬಾಲ್ ಆಟದ ಮೈದಾನ, ಸಂಜೀವಿನಿ ಕಟ್ಟಡಗಳನ್ನು ವೀಕ್ಷಿಸಿದ ಅವರು, ಸಂಜೀವಿನಿ ಮಾಸಿಕ ಸಂತೆಗೆ ಭೇಟಿ ನೀಡಿ ಸಂಜೀವಿನಿ ಸ್ವಸಹಾಯ ಸಂಘಗಳ ಮಹಿಳೆಯರು ತಯಾರಿಸುತ್ತಿರುವ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದರು.

ನಂತರ ಮಧುಗಿರಿ ತಾಲೂಕು ಗರಣಿ ಗ್ರಾಮ ಪಂಚಾಯಿತಿಯ ಪುಲಮಾಚಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಿರ್ಮಾಣವಾಗಿರುವ ಶಾಲಾ ಕಾಂಪೌಂಡ್ ಮತ್ತು ಶೌಚಾಲಯ ಕಾಮಗಾರಿ ವೀಕ್ಷಿಸಿದರು.

ಈ ಸಂದರ್ಭದಲ್ಲಿ ಎನ್‍ಆರ್‍ಎಲ್‍ಎಂ ಅಭಿಯಾನ ನಿರ್ದೇಶಕರಾದ ವಿದ್ಯಾ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯುಕ್ತ ಪವನ್ ಕುಮಾರ್ ಮಾಲಪಾಟಿ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಶೈಲ ದಿಡ್ಡಿಮನಿ, ನರೇಗಾ ರಾಜ್ಯ ಸಂಯೋಜಕ ವೇಣುಗೋಪಾಲ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಅಭಿವೃದ್ಧಿ, ಜಿಲ್ಲಾ ಪಂಚಾಯಿತಿ ಯೋಜನೆ ನಿರ್ದೇಶಕರು, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *