ತುಮಕೂರು: ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾದರೆ ಸ್ತ್ರೀ ಶಕ್ತಿ -ಸ್ವಸಹಾಯ ಸಂಘಗಳ ಸಾಲ ಮನ್ನಾ ಮಾಡುವುದಲ್ಲದೆ, ವೃದ್ಧಾಪ್ಯ ವೇತನವನ್ನು ಐದು ಸಾವಿರ ರೂ.ಗಳಿಗೆ ಹೆಚ್ಚಿಸುವುದಾಗಿ ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಶಾಸಕ ಡಿ.ಸಿ.ಗೌರಿಶಂಕರ್ ರವರ ನೇತೃತ್ವದಲ್ಲಿ ಭಾನುವಾರ ಕ್ಷೇತ್ರದ ಜೆಡಿಎಸ್ ಮುಖಂಡರ ಹಾಗೂ ಕಾರ್ಯಕರ್ತರ ಸಮಾವೇಶ ಆಯೋಜಿಸಲಾಗಿದ್ದು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಳೆದ ಲೋಕಸಭಾ ಚುನಾವಣೆಯ ವೇಳೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಬಿ.ಸುರೇಶ್ ಗೌಡರಿಗೆ ತಕ್ಕ ಪಾಠ ಕಲಿಸಿ ಎಂದು ಶಾಸಕ ಡಿ.ಸಿ.ಗೌರಿಶಂಕರ್ ನೇತೃತ್ವದಲ್ಲಿ ಭಾನುವಾರ ಕ್ಷೇತ್ರದ ಜೆಡಿಎಸ್ ಮುಖಂಡರ ಹಾಗೂ ಕಾರ್ಯಕರ್ತರ ಸಮಾವೇಶ ಆಯೋಜಿಸಲಾಗಿದ್ದು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶಾಸಕ ಡಿ.ಸಿ.ಗೌರಿಶಂಕರ್ ಮೇಲಿನ ಪ್ರೀತಿ ವಿಶ್ವಾಸದ ಪ್ರತೀಕವಾಗಿ ಕ್ಷೇತ್ರದ ಮೂಲೆಮೂಲೆಯಿಂದ ಹಿರಿಯ ನಾಗರೀಕರು ಮಹಿಳೆಯರು ಹಾಗೂ ಯುವಕರು ಆಗಮಿಸಿದ್ದು, ಈ ಬಾರಿ ಗೌರಿಶಂಕರ್ ರವರ ಗೆಲುವು ನಿಶ್ಚಿತ ಎಂದರು.
ಮಾಜಿ ಸಿಎಂ ಕುಮಾರಸ್ವಾಮಿಯವರು ರಾಜ್ಯದ ರೈತರ, ಸಾಮಾನ್ಯ ಜನರ ಅಭ್ಯದಯಕ್ಕಾಗಿ ಪಂಚರತ್ನ ಯೋಜನೆಯನ್ನು ರೂಪಿಸಿ ಈಗಾಗಲೇ 85ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡುತ್ತಾ ಪಂಚರತ್ನ ಯೋಜನೆಗಳ ಬಗ್ಗೆ ಪ್ರಚಾರ ನಡೆಸುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ಆಶೀರ್ವಾದ ಮಾಡುವುದರ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ಶಾಸಕ ಗೌರಿಶಂಕರ್ ಕಂದಾಯ ಮಂತ್ರಿಗಳಾಗುತ್ತಾರೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಶಾಸಕ ಗೌರಿಶಂಕರ್ ಸಂಸ್ಕಾರವಂತ ಯುವಕ, ಕೋವಿಡ್ ನ ಸಂದರ್ಭದಲ್ಲಿ ರಾಜ್ಯದಲ್ಲಿ ಯಾವುದೇ ಶಾಸಕ ಮಾಡಿರದಂತಹ ಜನೋಪಯೋಗಿ ಕೆಲಸವನ್ನು ಮಾಡಿ ಕ್ಷೇತ್ರದ ಜನರ ಮನಗೆದ್ದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಗೌರಿಶಂಕರ್ ರವರ ಗೆಲುವು ಕ್ಷೇತ್ರದ ಜನರ ಗೆಲುವು ಎಂದು ತಿಳಿಸಿದರು.
ಶಾಸಕ ಡಿ.ಸಿ.ಗೌರಿಶಂಕರ್ ಮಾತನಾಡಿ, ನನ್ನ ಅವಧಿಯಲ್ಲಿ ಕ್ಷೇತ್ರಕ್ಕೆ 2,800ಕೋಟಿ ರೂಗಳ ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ವಿಶೇಷವಾಗಿ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡುವುದರ ಮೂಲಕ ವೃಷಭಾವತಿ ನೀರನ್ನು ತಾಲ್ಲೂಕಿಗೆ ತರುವ ಪ್ರಾಮಾಣಿಕ ಪ್ರಯತ್ನ ಮಾಡಿರುವುದಾಗಿ ತಿಳಿಸಿದರು.

ಮನಮೋಹನ್ ಸಿಂಗ್ ಕಾಲದಲ್ಲಿ 50 ರೂ.ಗಳನ್ನು ಹೆಚ್ಚಿಸಿದ್ದಕ್ಕೆ ತಲೆ ಮೇಲೆ ಸಿಲಿಂಡರ್ ಇಟ್ಟುಕೊಂಡು ಪ್ರತಿಭಟಿಸಿದ ಶೋಭಕ್ಕ, ಈಗ 1055 ಆಗಿದೆ ಈಗೇಕೆ ಪ್ರತಿಭಟಿಸುತ್ತಿಲ್ಲ, ಈ ಬೆಲೆ ಏರಿಕೆಯಿಂದ ತಾಯಂದಿರ ನೆಮ್ಮದಿ ಹಾಳು ಮಾಡಿದ್ದಲ್ಲದೆ, ಗಂಡಂದಿರಿಗೆ ಬಿ.ಪಿ., ಸುಗರ್ ಬರಿಸಿದ್ದೀರಿ, ಈಗ ಸಿಲಿಂಡರೂ ಇಲ್ಲ, ಒಲೆಯೂ ಇಲ್ಲ, ಈ ಮೊದಲು ಅಡಿಗೆ ಎಣ್ಣೆ 80ರೂ. ಇದ್ದಾಗ ಬೋಂಡಾ ಬಜ್ಜಿ ಮಾಡಿಕೊಂಡು ತಿನ್ನುತ್ತಿದ್ದರು, ಆದರೆ ಈಗ ಗ್ಯಾಸ್ ಉರಿತಾ ಇದೆ, ಎಣ್ಣೆ ಬಾಂಡಲಿಯಲ್ಲಿ ಎಣ್ಣೆ ಕುದಿಯುತಾ ಇದೆ, ಹಾಗೇಯೇ ದಿನ ನಿತ್ಯದ ಬದುಕು ಎಣ್ಣೆಯಂತೆ ಬಿಸಿಯಾಗಿ ಬದುಕನ್ನೇ ಕಿತ್ತುಕೊಂಡಿರುವ ನಿಮ್ಮ ಸರ್ಕಾರದ ವಿರುದ್ಧ ಯಾವಾಗ ಪ್ರತಿಭಟನೆ ಎಂದು ಗೌರಿಶಂಕರ್ ಲೇವಡಿ ಮಾಡಿದರು.
ಸದಾನಂದಗೌಡರೆ ನಿಮ್ಮ ಕುದುರೆ ಓಡಿಸುವ ಮೊದಲು ನಿಮಗೆ ದೈರ್ಯ ಇದ್ದರೆ ನಿಮ್ಮ ಪ್ರಧಾನಿಯ ಮುಂದೆ ಬೆಲೆ ಏರಿಕೆಯ ಕುದುರೆಯನ್ನು ಕಟ್ಟಿ ಹಾಕಿ ಎಂದು ಹೇಳಿ ಎಂದು ಸವಲಾಕಿದ ಗೌರಿ ಶಂಕರ್ ಅವರು, ಪ್ರಧಾನಿಯ ಮುಂದೆ ನಿಲ್ಲಲು ನಿಮಗೆ ತಾಕತ್ತಿಲ್ಲ, ನಮ್ಮ ಪಕ್ಷದ ನಾಯಕರಾದ ದೇವೇಗೌಡರೋಬ್ಬರು ಮಾತ್ರ ನಿಮ್ಮ ಪ್ರಧಾನಿಯನ್ನು ಗಟ್ಟಿಯಾಗಿ ಪ್ರಶ್ನಿಸ ಬಲ್ಲರು ಎಂದರು.
ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ಈ ರಾಜ್ಯ ಕಲ್ಯಾಣ ರಾಜ್ಯವಾಗಲಿದೆ ಎಂದು ಗೌರಿಶಂಕರ್ ಹೇಳಿದರು.
ಜೆಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜಿನಪ್ಪ, ರಾಜ್ಯ ವಕ್ತಾರ ಹಾಲನೂರು ಲೇಪಾಕ್ಷ, ಡಿ.ಸಿ.ವೇಣುಗೋಪಾಲ್, ಜಿ.ಫಾಲನೇತ್ರಯ್ಯ, ಎನ್.ಆರ್.ಹರೀಶ್, ಹಿರೇಹಳ್ಳಿ ಮಹೇಶ್, ಹಾಲನೂರು ಅನಂತ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.