36 ಸಾವಿರ ಕೋಟಿ ರೂ.ಗಳಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ- ಗೃಹ ಸಚಿವರು.

ಕೊರಟಗೆರೆ : ಸರ್ಕಾರ ರಚನೆಯಾದ ಬಳಿಕ 36 ಸಾವಿರ ಕೋಟಿ ರೂ. ಖರ್ಚು ಮಾಡಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದೇವೆ ಎಂದು ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ.ಪರಮೇಶ್ವರ್ ಹೇಳಿದರು.

ಅವರು ಬುಧವಾರ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಕೋರ ಹೋಬಳಿ ವ್ಯಾಪ್ತಿಯ, ಕೆಸ್ತೂರು, ದೇವಲಾಪುರ ಹಾಗೂ ಚಿಕ್ಕತೊಟ್ಲುಕೆರೆ ಗ್ರಾಮ‌ ಪಂಚಾಯಿತಿಗಳಲ್ಲಿ ಜನಸಂಪರ್ಕ ಸಭೆ ನಡೆಸಿ, ಜನರ ಕುಂದು-ಕೊರತೆಗಳನ್ನು ಆಲಿಸಿದರು. ಬಳಿಕ ಜನರಿಗೆ ಐದು ಗ್ಯಾರಂಟಿ ಯೋಜನೆಗಳ ಸವಲತ್ತು ಪತ್ರಗಳನ್ನು ವಿತರಿಸಿ ಮಾತನಾಡಿದರು.

ಕಳೆದ ಚುನಾವಣೆ ಸಂದರ್ಭದಲ್ಲಿ ಐದು ಗ್ಯಾರಂಟಿ ಯೋಜನೆಗಳ ಭರವಸೆಯನ್ನು ನಮ್ಮ ಪಕ್ಷ ನೀಡಿತ್ತು. ಅನೇಕರಿಗೆ ಗ್ಯಾರಂಟಿ ಕಾರ್ಡ್‌ಗಳ ಮೇಲೆ ಭರವಸೆ ಇರಲಿಲ್ಲ. ಮುಂಬರುವ ಆರ್ಥಿಕ ವರ್ಷದಲ್ಲಿ ಗ್ಯಾರಂಟಿ ಯೋಜನೆಗಳಿಗೆ 58 ಸಾವಿರ ಕೋಟಿ ರೂ. ಖರ್ಚಾಗಲಿದ್ದು, ಈ ಎಲ್ಲ ಜನಪರ ಯೋಜನೆಗಳು ಮುಂದುವರಿಯಲಿವೆ.

ನಮ್ಮ ಸರ್ಕಾರವನ್ನು ಟೀಕೆ ಮಾಡುವ ವಿಪಕ್ಷದವರಿಗೆ, ಎಂಟು ತಿಂಗಳ‌ ಅವಧಿಯಲ್ಲಿ ನಾವು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳೇ ಸೂಕ್ತ ಉತ್ತರ.

ಬಡತನ ನಿರ್ಮೂಲನೆಗೆ, ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಯೋಜನೆ ನೀಡುವುದಾಗಿ ಭರವಸೆ ನೀಡಿದ್ದೆವು. ಐದು ಗ್ಯಾರಂಟಿಗಳನ್ನು ಕೊಟ್ಟ ಮಾತಿನಂತೆ ಅನುಷ್ಟಾಗೊಳಿಸಿದ್ದೇವೆ. ಯಾವುದೇ ಟೀಕೆ ಟಿಪ್ಪಣಿ ಲೆಕ್ಕಿಸದೇ, ಬಡ ಜನರಿಗೆ ಕಾರ್ಯಕ್ರಮ ಕೊಟ್ಟಿದ್ದೆವೆ. ಈ ಯೋಜನೆಗಳಿಂದ ಸರ್ಕಾರದ ಬೊಕ್ಕಸಕ್ಕೆಯಾಗಲಿ, ಇತರೆ ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ.

ಬಡತನ ನಿರ್ಮೂಲನೆಗೆ ಯಾವುದೇ ಸರ್ಕಾರವಾಗಲಿ ಇಷ್ಟೊಂದು ಅನುದಾನ ಖರ್ಚು ಮಾಡಿಲ್ಲ. ಇದೇ ಮೊದಲ ಬಾರಿಗೆ ಬಡವರಿಗೆ ದೊಡ್ಡಮಟ್ಟದ ಸಹಾಯವಾಗಲು ಕೆಲಸ ಮಾಡಿರುವುದಕ್ಕೆ ಸಹಿಸದ ವಿಪಕ್ಷದವರು ಅನವಶ್ಯಕ ಟೀಕೆ ಮಾಡುತ್ತಿದ್ದಾರೆ.

ಹಣಕಾಸಿನ ಲೆಕ್ಕಚಾರ ಇಟ್ಟುಕೊಂಡೇ ಚುನಾವಣೆ ಪ್ರಣಾಳಿಕೆಯಲ್ಲಿ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದೆವು. ಮಧ್ಯವರ್ತಿಗಳು ತಿನ್ನುವುದಕ್ಕೆ ಅವಕಾಶವಿಲ್ಲದಂತೆ ಮಾಡಿದ್ದೇವೆ. ಬಡವರಿಗೆ ಸೇರಬೇಕಾದ ಹಣ ಸೋರಿಕೆಯಾಗದಂತೆ ಅನುಷ್ಠಾನಗೊಳಿಸಿದ್ದೇವೆ.

ಕೃಷಿ ಕಾರ್ಮಿಕರು, ಕಟ್ಟಡ ಕಾರ್ಮಿಕರು ಸೇರಿದಂತೆ ಬಡಜನರು ಹಸಿವಿನಿಂದ ಇರಬಾರದು ಎಂಬ ಉದ್ದೇಶದಿಂದ ಅನ್ನಭಾಗ್ಯ ಯೋಜನೆ ಅನುಷ್ಠಾನಗೊಳಿಸಿದ್ದೇವೆ. 10 ಕೆ.ಜಿ ಅಕ್ಕಿಯನ್ನು ನೀಡಬೇಕೆಂಬುದು ಉದ್ದೇಶ. ನಿಮ್ಮ ತೆರಿಗೆ ಹಣವನ್ನು ನಿಮಗೆ ಕೊಡುವುದು ತಪ್ಪ. ಇದಕ್ಕೆಲ್ಲ ಟೀಕೆ‌ ಮಾಡಿದರೆ ಹೆದರುವುದಿಲ್ಲ.‌ ಮುಂದಿನ ಐದು ವರ್ಷದವರೆಗೆ ಗ್ಯಾರಂಟಿ ಯೋಜನೆಗಳನ್ನು ಮುಂದುವರೆಸುತ್ತೇವೆ.

ಮಹಿಳೆಯರ ಜೀವನವನ್ನು ಸರಳಗೊಳಿಸಿದ್ದೇವೆ. ವಿದ್ಯಾವಂತ ನಿರುದ್ಯೋಗ ಯುವಕರಿಗೆ ಕೆಲಸ ಸಿಗುವವರೆಗೆ ಸಹಾಯ ಮಾಡಿದ್ದೇವೆ. ನುಡಿದಂತೆ ನಡೆದುಕೊಂಡಿರುವುದು ತಪ್ಪೇ ಎಂದು ಪ್ರಶ್ನಿಸಿದರು.

ವಸಂತಾನರಸಾಪುರ ಕೈಗಾರಿಕೆ ಪ್ರದೇಶ ಇರುವುದರಿಂದ ಯುವಕರಿಗೆ ಉದ್ಯೋಗಾವಕಾಶಗಳು ಹೆಚ್ಚಿರುತ್ತವೆ. ನಮ್ಮ ಮಕ್ಕಳು ಐಟಿಐ, ಡಿಪ್ಲೋಮಾ ಕೋರ್ಸ್ ಕಲಿತರೆ, ಅವರಿಗೆ ಕೆಲಸ ಸುಲಭವಾಗಿ ಸಿಗುತ್ತದೆ. ಕೋರ ವ್ಯಾಪ್ತಿಯಲ್ಲಿ ಐಟಿಐ, ಡಿಪ್ಲೋಮಾ‌ ಕಾಲೇಜು ಆರಂಭಿಸಲಾಗುವುದು.

ಚುನಾವಣೆಯ ಪ್ರಣಾಳಿಕೆಯನ್ನು ನಾನೇ ಬರೆದಿದ್ದು. 2013ರ ನಮ್ಮ ಪಕ್ಷ ನೀಡಿದ್ದ 165 ಭರವಸೆಗಳ ಪೈಕಿ, 158 ಭರವಸೆಗಳನ್ನು ಈಡೇರಿಸಿತ್ತು. ಈ ಬಾರಿಯು ಸಹ ನಾವು ಕೊಟ್ಟ ಎಲ್ಲ ಭರವಸೆಗಳನ್ನು ಹಂತಹಂತವಾಗಿ ಈಡೇರಿಸುತ್ತೇವೆ.

ಮೊದಲ‌ ಸಂಪುಟ ಸಭೆಯಲ್ಲಿ 10 ಕೆ.ಜಿ. ನೀಡುವುದಾಗಿ ಭರವಸೆ ನೀಡಿದ್ದೆವು. ಕೇಂದ್ರ ಸರ್ಕಾರ ಇನ್ನೈದು ಕೆ‌.ಜಿ. ನೀಡಲಿಲ್ಲ. ಇದರ ಹಣವನ್ನು ನೀಡುತ್ತೇವೆ ಎಂದರು ಅಕ್ಕಿ ನೀಡಲಿಲ್ಲ. ಹೀಗಾಗಿ ಐದು ಕೆಜಿ ಅಕ್ಕಿಯ ಹಣವನ್ನು ಕಾರ್ಡ್‌ದಾರರ ಖಾತೆಗೆ ಹಾಕುತ್ತಿದ್ದೇವೆ.

ಜನರಿಗೆ ನೇರವಾಗಿ ಸರ್ಕಾರದ ಸವಲತ್ತು ತಲುಪುತ್ತಿರಲಿಲ್ಲ. ಹಣ ಹಿಡಿದುಕೊಳ್ಳುವುದು ಸರ್ಕಾರದ ಗಮನಕ್ಕೆ ಬಂದಿತ್ತು. ಹೀಗಾಗಿ ಮಹಿಳೆಯರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತಿದೆ.

ಕೋರ ಗ್ರಾಪಂ ವ್ಯಾಪ್ತಿಯಲ್ಲಿ 1380 ಮಹಿಳೆಯರು ಗೃಹಲಕ್ಷ್ಮೀ‌ ಯೋಜನೆಯ (ಮಾಸಿಕ 2 ಸಾವಿರ ರೂ.) ಸವಲತ್ತು ಪಡೆಯುತ್ತಿದ್ದಾರೆ. ತಾಂತ್ರಿಕ ಸಮಸ್ಯೆಯಿಂದ 6 ಮಹಿಳೆಯರಿಗೆ ಸೌಲಭ್ಯ ಸಿಕ್ಕಿಲ್ಲ. ಈ ಸಮಸ್ಯೆಯನ್ನು ಬಗೆಹರಿಸಲಾಗುವುದು.

ಗ್ಯಾರಂಟಿ ಯೋಜನೆ ಕೊಡುತ್ತಿರುವುದರಿಂದ ಅಭಿವೃದ್ಧಿ ಕಾಮಗಾರಿಗಳಾದ ರಸ್ತೆ, ಚರಂಡಿ, ಮನೆ ಕಟ್ಟಿಸಿಕೊಡುವುದಿಲ್ಲ ಎಂದು ವಿಪಕ್ಷದವರು ಅಪಪ್ರಚಾರ ಮಾಡಿದರು. ಯಾವ ಅಭಿವೃದ್ಧಿ ಕಾಮಗಾರಿಗಳು ಕುಂಠಿತವಾಗಿಲ್ಲ.

ಹಿಂದಿನ ಸರ್ಕಾರ ಹಣಕಾಸಿನ ಶಿಸ್ತು ಪಾಲಿಸಿರಲಿಲ್ಲ. ಹೀಗಾಗಿ ನಮ್ಮ ಸರ್ಕಾರಕ್ಕೆ ಅನುದಾನ ಹೊಂದಿಸುವಲ್ಲಿ ತೊಂದರೆಯಾಗಿದೆ. ಪ್ರಸಕ್ತ ವರ್ಷದ ಬಜೆಟ್‌ನಲ್ಲಿ ಜಿಲ್ಲೆಯ ಎತ್ತಿನಹೊಳೆ ಯೋಜನೆ, ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಗೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ.

ಜಿಲ್ಲೆಯಲ್ಲಿ 30 ಸಾವಿರ ಫಲಾನುಭವಿಗಳಿಗೆ ಸುಮಾರು 700 ಕೋಟಿ ರೂ. ಸವಲತ್ತು, ಅಭಿವೃದ್ಧಿ‌ ಕಾಮಗಾರಿಗಳನ್ನು ನೆರವೇರಿಸಿದ್ದೇವೆ. ಜನರ ಯಾವುದೇ ಕೆಲಸ ಕಾರ್ಯಗಳನ್ನು ಸರ್ಕಾರ ನಿಲ್ಲಿಸಿಲ್ಲ. ಇದನ್ನು ತಾವು‌ ಕಣ್ಣಾರೆ ಕಂಡಿದ್ದೀರಿ. ಯಾರಾದರೂ ಸರ್ಕಾರದ ಬಗ್ಗೆ ಅಪಪ್ರಚಾರ ಮಾಡಿದರೆ, ಈ ವಿಚಾರವನ್ನು ಅವರಿಗೆ ಎಚ್ಚರಿಸಬೇಕು.

ಅಕ್ಕಿ ರಾಂಪುರದಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಗ್ರಾಪಂ ಕಾರ್ಯಾಲಯ ಕಟ್ಟಿಸಿ ಕೊಡಲಾಗಿದೆ. ಅದೇರೀತಿ ಕೋರಾ ಗ್ರಾಪಂ ಕಾರ್ಯಾಲಯವನ್ನು ನಿರ್ಮಿಸಲಾಗುವುದು.‌ ಕಾರ್ಯಾಲಯವನ್ನು ಬೇರೆಡೆ ಸ್ಥಳಾಂತರಿಸಿ, ಪಂಚಾಯಿತಿಯಲ್ಲಿರುವ 37 ಲಕ್ಷ ರೂ. ಅನುದಾನದಿಂದ ಕಾಮಗಾರಿ ಆರಂಭಿಸಿ. ತದನಂತರ ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.

ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ನಿವೇಶನದ ಸಮಸ್ಯೆಯನ್ನು ಬಗೆ ಹರಿಸಲಾಗುವುದು. ಇಡೀ ತಾಲೂಕಿನಲ್ಲಿ 2 ಸಾವಿರ ಎಕರೆ ಭೂಮಿಯನ್ನು ಹಸ್ತಾಂತರಿಸಿದ್ದು, 40 ಸಾವಿರ ನಿವೇಶನಗಳಾಗುತ್ತವೆ. ಎಲ್ಲ ನಿವೇಶನ ರಹಿತರಿಗೂ ಹಂಚಿಕೆ‌ ಮಾಡಲಾಗವುದು. ಈ ಬಗ್ಗೆ ಯಾವುದೇ ರೀತಿಯ ಆತಂಕಬೇಡ.

ಪ್ರತಿ ಮಹಿಳೆಯರಿಗೆ ತಿಂಗಳಿಗೆ 5300 ರೂ. ಸಿಗುವಂತೆ ಮಾಡಲಾಗಿದೆ. ಇದನ್ನು ಹೀಗೆ ಮುಂದುವರಿಸುತ್ತೇವೆ. ಪಾರ್ಲಿಮೆಂಟ್ ಚುನಾವಣೆ ನಂತರ ನಿಲ್ಲಿಸಲಾಗುತ್ತದೆ ಎಂದು ಕೆಲವರು ವದಂತಿ ಹಬ್ಬಿಸಿದ್ದು, ಕಿವಿಗೊಡಬೇಡಿ. ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ. ಎಲ್ಲ ಅಭಿವೃದ್ಧಿ ಕಾರ್ಯಗಳು ಮುಂದುವರಿಯಲಿದ್ದು ಆತಂಕಬೇಡ.

ಎತ್ತಿನಹೊಳೆ ಯೋಜನೆಗೆ ಹಿಂದಿನ ಸರ್ಕಾರ‌ ಅನುದಾನ ನೀಡಿಲ್ಲ. ಹೀಗಾಗಿ‌ಕಾಮಗಾರಿ ನಿಂತಿತ್ತು. ಇದಕ್ಕೆ ಹಡಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿಯವರಿಗೆ ಮನವರಿಕೆ ಮಾಡಿದ್ದೇನೆ. ಎರಡು ವರ್ಷದೊಳಗೆ ಪೂರ್ಣಗೊಳಿಸಲಾಗುವುದು. 109 ಕುಡಿಯುವ ನೀರಿನ ಕೆರೆಗಳು ಭರ್ತಿಯಾಗಲಿವೆ. ಶಾಶ್ವತವಾಗಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ.

ಬಡ ಜನರ ಮಕ್ಕಳು ವಿದ್ಯಾವಂತರಾಗಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು. ರಾಜ್ಯದಲ್ಲಿ ಬಡತನ, ನಿರ್ಮೂಲನೆಯಾಗಬೇಕು, ಕಷ್ಟಗಳಿಂದ ದೂರ ಆಗಬೇಕು ಎಂಬುದು ಸರ್ಕಾರದ ಧ್ಯೇಯೋದ್ದೇಶ.

ಮೊಸಂಬಿ ಹಾರ: ದೇವಲಾಪುರ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ‌ ಶಾಲೆಯ ಕೊಠಡಿ ನಿರ್ಮಾಣಕ್ಕೆ ಶಂಕುಸ್ಥಾಪನೆ‌ ನೆರವೇರಿಸಿದರು. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು, ಗ್ರಾಮದ ಜನರು ಬೃಹತ್ ಆಕಾರದ ಮೋಸಂಬಿ ಹಾರ ಹಾಕಿ ಅತ್ಯಂತ ಆತ್ಮೀಯವಾಗಿ ಬರ ಮಾಡಿಕೊಂಡರು.

ಜಿಲ್ಲಾಧಿಕಾರಿ ಶುಭಾ ಕಲ್ಯಾಣ್, ಸಿಇಒ ಜಿ.ಪ್ರಭು, ಎಸ್‌ಪಿ ಅಶೋಕ್, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ತಾಲ್ಲೂಕು ಅಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *