ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರು 26 ಮಂದಿಯನ್ನು ಹತ್ಯೆ ಮಾಡಿದ ನಂತರ ಇಂಡಿಯಾ-ಪಾಕಿಸ್ತಾನದ ನಡುವೆ ಯುದ್ಧ ನಡೆಯುತ್ತಾ ಎಂಬುದೇ ದೇಶದ್ಯಾಂತ ಚರ್ಚೆ ನಡೆಯುತ್ತಾ ಇದೆ.
ಯುದ್ಧ ಎಂದರೇನು? ಯುದ್ಧ ಎಂದರೆ ತಮ್ಮ ಅಸ್ತಿತ್ವಕ್ಕಾಗಿ, ಅಧಿಕಾರಕ್ಕಾಗಿ ನಡೆಯುವ ದೊಡ್ಡ ಮಟ್ಟದ ಕಾಳಗವನ್ನು ಯುದ್ಧ ಎಂದು ಕರೆಯುತ್ತಾರೆ, ಈ ಯುದ್ಧ ಎಂಬುದು ಮನುಷ್ಯ ಸೃಷ್ಠಿಯಾದಗಿನಿಂದ ಒಂದಲ್ಲ ಒಂದು ರೀತಿಯಲ್ಲಿ ನಡೆಯುತ್ತಲೇ ಇದೆ, ರಾಮಾಯಾಣ, ಮಹಾಭಾರತದ ಯುದ್ಧಗಳು ಹೆಣ್ಣಿಗಾಗಿ ನಡೆದರೆ, ಬಹುತೇಕ ಯುದ್ಧಗಳು ಸಾಮ್ರಾಜ್ಯಕ್ಕಾಗಿ ನಡೆದಂತಹವುಗಳಾಗಿವೆ.

ಯುದ್ಧವೆಂಬುದು ಅಸ್ತಿತ್ವಕ್ಕಾಗಿ ನಡೆಯುವಂತಹವುದು, ಯುದ್ಧ ಎಂಬುದು ಇಂತಹ ವಿಷಯಕ್ಕೆ ನಡೆಯಬೇಕೆಂಬುದೂ ಇಲ್ಲ, ಇತ್ತೀಚಿನ ದಿನಗಳಲ್ಲಿ ಬಹುತೇಕ ಯುದ್ಧಗಳು ತೈಲಕ್ಕಾಗಿ, ಯುದ್ಧ ಸಾಮಗ್ರಿಗಳನ್ನು ಮಾರುವುದಕ್ಕಾಗಿ ಒಂದು ದೇಶವನ್ನು ಪ್ರಚೋದಿಸಿ ಮತ್ತೊಂದು ದೇಶದ ಮೇಲೆ ಯುದ್ದ ಸಾರಿರುವಂತಹವುದನ್ನು ಉಕ್ರೇನ್, ಪಾಲಿಸ್ತೇನಿಯಾ ಮುಂತಾದೆಡೆ ಈಗಲೂ ಯುದ್ಧ ನಡೆಯುತ್ತಿರುವುದನ್ನು ಕಾಣಬಹುದು.
ಎರಡನೇ ಮಹಾಯುದ್ಧದ ನಂತರ ವಿಶ್ವಸಂಸ್ಥೆ ಅಸ್ತಿತ್ವಕ್ಕೆ ಬಂದರೂ ವಿಶ್ವಸಂಸ್ಥೆ ಶಾಂತಿಯನ್ನು ಕಾಪಾಡುವಲ್ಲಿ ವಿಫಲವಾಗಿದೆ, ಬಲಿಷ್ಠ ರಾಷ್ಟ್ರಗಳು ವಿಶ್ವಸಂಸ್ಥೆಗೆ ಸೊಪ್ಪು ಹಾಕುವುದೇ ಇಲ್ಲ, ರಷ್ಯಾ, ಅಮೇರಿಕಾದಂತಹ ದೇಶಗಳು ಸಣ್ಣ-ಪುಟ್ಟ ದೇಶಗಳ ಮೇಲೆ ಯುದ್ಧವನ್ನು ಮಾಡುತ್ತಲೇ ಇರುತ್ತವೆ.
ಭಾರತ ದೇಶವು ಸಹ ಸ್ವಾತಂತ್ಯ ಪಡೆದ ನಂತರ ಪಾಕಿಸ್ತಾನ ಮತ್ತು ಚೀನಾದ ಮೇಲೆ ಯುದ್ಧವನ್ನು ಮಾಡಿದೆ, ಈ ಯುದ್ದಗಳು ನಡೆದ ಸಮಯದಲ್ಲಿ ತಂತ್ರಜ್ಞಾನ, ಯುದ್ದದ ವಿಧಾನಗಳು ಅಷ್ಟಾಗಿ ಆಧುನಿಕತೆ ಪಡೆದಿರಲಿಲ್ಲ, ಇದೀಗ ಆಧುನಿಕತೆ ಪಡೆದಂತೆ ಯುದ್ಧವು ಸಹ ಅಣುಬಾಂಬ್ (ನ್ಯೂಕ್ಲಿಯರ್ ಬಾಂಬ್) ಯುದ್ಧದ ಮಾತಿಗಳನ್ನು ಆಡುತ್ತಾ ಒಬ್ಬರ ಮೇಲೆ ಒಬ್ಬರು ಯುದ್ಧ ಮಾಡಲು ತುದಿಗಾಲ ಮೇಲೆ ಬಹುತೇಕರು ಸನ್ನದ್ಧರಾಗಿರುವಂತೆ ತೋರಿಸಿಕೊಳ್ಳುತ್ತಾರೆ, ಆದರೆ ಅಂತಹ ಯುದ್ಧವನ್ನು ಮಾಡಿದರೆ ಏನು ಪರಿಣಾಮ ಆಗಬಹದು ಎಂಬುದು ಆ ದೇಶಗಳಿಗೆ ತಿಳಿದಿದೆ.
ಈಗ ಪಹಲ್ಗಾಮ್ ನಲ್ಲಿ ಉಗ್ರರ ಹತ್ಯೆ ನಡೆದ ನಂತರ ಟಿವಿಗಳನ್ನು ಹಾಕಿದ ಕೂಡಲೇ ಪರದೆಯ ಮೇಲೆ ಯುದ್ಧ ಫಿಕ್ಸ್? ಎಂಬ ಪ್ರಶ್ನಾರ್ತಕ ಚಿಹ್ನೆ ಇಟ್ಟು ತೋರಿಸಲಾಗುತ್ತಿದೆ, ಈ ಟಿವಿ ಮಾಧ್ಯಗಳು ತೋರಿಸಿದಂತೆ, ಬಿಂಬಿಸಿದಂತೆ ಅಷ್ಟು ಸುಲಭವಾಗಿ ಯುದ್ಧ ನಡೆಯುತ್ತದೆಯೇ ಎಂಬುದು ಎಲ್ಲರ ಮುಂದಿರುವ ಪ್ರಶ್ನೆ.
ಇಂಡಿಯಾ-ಪಾಕಿಸ್ತಾನ ಯುದ್ಧ ನಡೆಯಬೇಕು ಪಾಕಿಸ್ತಾನಕ್ಕೆ ಮುಟ್ಟಿ ನೋಡಿಕೊಳ್ಳುವಂತೆ ಮಾಡಬೇಕು ಎಂದು ಹೇಳಲಾಗುತ್ತಿದೆ, ಹೌದು ಪಾಕಿಸ್ತಾನಕ್ಕೆ ಮುಟ್ಟಿ ನೊಡಿಕೊಳ್ಳುವಂತೆ ಮಾಡಬೇಕು ಎಂಬ ಮಾತು ಸರಿ ಇದೆ, ಉಗ್ರರನ್ನು ಸಲಹುತ್ತಿರುವ ಆ ದೇಶಕ್ಕೆ ಒಂದು ಪಾಠ ಕಲಿಸಲೇ ಬೇಕಿದೆ.
ಆದರೆ ಯುದ್ಧ ಅಷ್ಟು ಸಲೀಸಾಗಿ ಮಾಡಲು ಸಾಧ್ಯವೆ! ಯಾಕೆಂದರೆ ಯಾವುದೇ ಒಂದು ದೇಶದಲ್ಲಿ ಆಡಳಿತ ನಡೆಸುತ್ತಿರುವವರು ಯುದ್ಧವನ್ನು ಮಾಡಲು ಇಚ್ಚೆ ಪಡುವುದಿಲ್ಲ, ಏಕೆಂದರೆ ಅವರಿಗೆ ಆ ಕೆಲ ರಾಜತಾಂತ್ರಿಕ ಸಲಹೆಗಳಿರುತ್ತವೆ, ಯುದ್ದವನ್ನು ಘೋಷಣೆ ಮಾಡುವಾಗ ದೇಶದ ಹಿತ, ಜನರ ಹಿತದ ಜೊತೆಗೆ ಮತ್ತು ಅಂತರಾಷ್ಟ್ರೀಯ ಸಂಬಂಧಗಳನ್ನು ಅವಲೋಕನ ಮಾಡಬೇಕಾಗುತ್ತದೆ.
ಭಾರತ ಇನ್ನೂ ಮುಂದುವರೆಯುತ್ತಾ ಇರುವ ದೇಶವಾಗಿರುವುದರಿಂದ ಅಮೇರಿಕಾ, ರಷ್ಯಾ ದೇಶಗಳಂತೆ ದಿನ ಬೆಳಗಾಗುವುದರೊಳಗೆ ಯುದ್ಧವನ್ನು ಘೋಷಣೆ ಮಾಡುವುದು ಸಾಧ್ಯವಿಲ್ಲ, ಏಕೆಂದರೆ ಭಾರತದಂತಹ ದೇಶವು ಬಲಿಷ್ಠ ರಾಷ್ಟ್ರಗಳ ವಿಶ್ವಾಸ ಗಳಿಸುವುದಲ್ಲದೆ, ಯುದ್ಧದ ನಂತರ ಯಾವ ರಾಷ್ಟ್ರಗಳು ತಮ್ಮ ಯುದ್ಧ ಸಾಮಗ್ರಿಗಳನ್ನು ಮಾರಲು ಮುಂದಾಗಿ ಯಾವ ದೇಶವನ್ನು ಬೆಂಬಲಿಸುತ್ತವೆ, ಏನು ಮಾಡುತ್ತವೆ ಎಂಬುದನ್ನು ಹೇಳಲಾಗದು.
ಪಾಕಿಸ್ತಾನ ನಮ್ಮ ದೇಶದಷ್ಟು ಬಲಿಷ್ಠವಾಗಿರದೆ ಇರಬಹುದು, ಆದರೆ ಆ ದೇಶವನ್ನು ಯುದ್ಧ ಮಾರ್ಗಕ್ಕಿಂತ ಆ ದೇಶಕ್ಕೆ ಆರ್ಥಿಕ ಸವಲತ್ತನ್ನು ನೀಡುತ್ತಿರುವ ಚೀನಾ, ಅಮೇರಿಕಾದಂತಹ ದೇಶಗಳು ಆರ್ಥಿಕ ಸವಲತ್ತನ್ನು ನೀಡುವುದನ್ನು ನಿಲ್ಲಿಸುವಂತಹ ಒತ್ತಾಯವನ್ನು ಭಾರತ ಮಾಡದಲ್ಲಿ ಒಂದು ಯುದ್ಧದಲ್ಲಿ ಆಗುವ ನಷ್ಟಕ್ಕಿಂತ ಹೆಚ್ಚಿನದು ಆ ದೇಶದ ಜನರ ಮೇಲೆ ಆಗಲಿದೆ.
ಭಾರತ-ಪಾಕಿಸ್ತಾನ ಯುದ್ದವಾಗಿ ಭಾರತವೆ ಗೆದ್ದು, ಪಾಕಿಸ್ತಾನ ಸೋತರೂ ಆ ದೇಶಕ್ಕೆ ಬುದ್ದಿ ಬರುವುದು ಕಡಿಮೆ, ಏಕೆಂದರೆ ಅದಕ್ಕೆ ಯುದ್ದದ ನಂತರ ಅನುಕಂಪವೆಂಬಂತೆ ಆರ್ಥಿಕ ಸವಲತ್ತುಗಳು ಸಿಕ್ಕಲ್ಲಿ ಮತ್ತಷ್ಟು ಬಾಲ ಬಿಚ್ಚುವುದರಲ್ಲಿ ಅನುಮಾನವಿಲ್ಲ.
ಈಗ ಯುದ್ಧ ನಡೆಯುತ್ತಾ ಎಂಬುದೆ ದೊಡ್ಡ ಪ್ರಶ್ನೆಯಾಗಿರುವಾಗ, ಬಹುತೇಕ ಯುದ್ಧ ನಡೆಯುವುದಿಲ್ಲ, ಎರಡು ದೇಶಗಳ ಗಡಿ ಭಾಗದಲ್ಲಿ ಒಂದಷ್ಟು ದಿನ ಉದ್ವಿಗ್ನ ಸ್ಥಿತಿ ಮುಂದುವರೆಯಬಹುದು, ಯುದ್ಧ ನಡೆಯುವುದಾದರೆ ಈ ವೇಳೆಗೆ ನಡೆಯಬೇಕಾಗಿತ್ತು, ಯಾಕೆಂದರೆ ಬಿಸಿ ಇದ್ದಾಗಲೇ ಕಬ್ಬಿಣ ತಟ್ಟಬೇಕು ಎಂಬ ಗಾದೆ ಇದೆ.
ಈ ಹಿನ್ನಲೆಯಲ್ಲಿಯೇ ಪ್ರಧಾನಿಯವರು ಹಲವರು ಸುತ್ತಿನ ಹೈ ವೋಲ್ಟೇಜ್ ಮೀಟಿಂಗ್ಗಳನ್ನು ಮಾಡಿದ್ದು ಮೂರು ಸೈನ್ಯದ ತುಕಡಿಗಳ ಮುಖ್ಯಸ್ಥರ ಜೊತೆ ಮಾತುಕತೆ ನಡೆಸಿರುವುದು, ಯುದ್ಧ ನಡೆಯವುದೇ ಇಲ್ಲವೆ ಎಂಬುದನ್ನು ನಾವು-ನೀವು ಹೇಳಲು ಸಾಧ್ಯವಿಲ್ಲ ಏಕೆಂದರೆ ಯುದ್ಧವು ಶಾಂತಿ, ಆರ್ಥಿಕತೆಯನ್ನು ದಿವಾಳಿ ಮಾಡುವಂತಹವುದು.
ಕಾದು ನೋಡೋಣ…!
-ವೆಂಕಟಾಚಲ.ಹೆಚ್.ವಿ.