ತುಮಕೂರು: ಭಾರತದ ಸಹಕಾರಿ ಕ್ಷೇತ್ರದ ಬೆಳವಣಿಗೆ ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದು ಗೃಹ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ನಗರದ ಶಿಕ್ಷಣ ಭೀಷ್ಮ ಹೆಚ.ಎಂ.ಗಂಗಾಧರಯ್ಯ ಮೆಮೋರಿಯಲ್ ಹಾಲ್ನಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ತುಮಕೂರು ಜಿಲ್ಲಾ ಸಹಕಾರ ಯೂನಿಯನ್ ಸಹಯೋಗದಲ್ಲಿ ಆಯೋಜಿಸಿರುವ ಸಹಕಾರ ರತ್ನ ಪ್ರಶಸ್ತಿ ಪ್ರಧಾನ ಮತ್ತು ಹಾಲು ಸಂಗ್ರಹ ಕೇಂದ್ರಗಳಿಗೆ ಹೊಸ ತಂತ್ರಾಂಶ ಅವಳಡಿಕೆ ಮತ್ತು ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತಿದ್ದ ಅವರು, 1905ರಲ್ಲಿ ಉತ್ತರ ಕರ್ನಾಟಕದ ಗದುಗಿನ ಶಿವಾನಂದ ಪಾಟೀಲ್ ಪ್ರಾರಂಭಿಸಿದ ಈ ಆಂದೋಲನ ಇಂದು 8.50 ಲಕ್ಷ ಸಹಕಾರಿ ಸಂಘಗಳನ್ನು ಹೊಂದಿದೆ.ಆಂದೋಲನಕ್ಕೆ ಸಹಕರಿಸಿದ ಪಂಡಿತ ನೆಹರು, ಮಹಾತ್ಮಗಾಂಧಿಜೀ, ಕುರಿಯನ್ ಅವರುಗಳನ್ನು ಸ್ಮರಿಸಿಕೊಳ್ಳಬೇಕಿದೆ ಎಂದರು.
ನಮ್ಮ ಸರಕಾರದಲ್ಲಿ ಸಹಕಾರಿ ಕ್ಷೇತ್ರದಲ್ಲಿ ದುಡಿದ ಹಿರಿಯರಾದ ಕೆ.ಎನ್.ರಾಜಣ್ಣ ಅವರಿಗೆ ಸಹಕಾರ ಇಲಾಖೆಯನ್ನು ನೀಡಿದ್ದಾರೆ. ಅವರ ಕಾಲದಲ್ಲಿ ಸಹಕಾರಿ ಕ್ಷೇತ್ರದಲ್ಲಿ ಹಲವಾರು ಬದಲಾವಣೆಗಳನ್ನು ತರಲಿದ್ದಾರೆ.ಹಾಗೆಯೇ ಜಿ.ಟಿ.ದೇವೇಗೌಡರು ಸಹ ರೈತರ ಪರವಾಗಿ ಹೋರಾಟ ಮಾಡಿದವರು. ಸಹಕಾರ ಮಹಾಮಂಡಳದ ಅಧ್ಯಕ್ಷರಾಗಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಇವರಿರ್ವರ ನೇತೃತ್ವದಲ್ಲಿ ಸಹಕಾರಿ ಆಂದೋಲನ ಮತ್ತಷ್ಟು ಉಜ್ವಲವಾಗಿ ಬೆಳೆಗಲಿ ಎಂದು ಡಾ.ಜಿ.ಪರಮೇಶ್ವರ್ ಶುಭ ಹಾರೈಸಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ರಾಜ್ಯಾಧ್ಯಕ್ಷ ಜಿ.ಟಿ.ದೇವೇಗೌಡ ಮಾತನಾಡಿ,ದೇಶದಲ್ಲಿ ಉದಾರೀಕರಣ, ಖಾಸಗೀಕರಣ, ಜಾಗತೀಕರಣದ ಕಾಯ್ದೆಗಳು ಜಾರಿಯಾಗುವವರೆಗೂ ಜನರಿಗೆ ಬೇಕಾದ ಆಹಾರ ಪದಾರ್ಥ, ಬಟ್ಟೆ ಇನ್ನಿತರ ವಸ್ತುಗಳನ್ನು ಸೊಸೈಟಿಗಳ ಮೂಲಕವೇ ಪೂರೈಕೆ ಮಾಡಲಾಗುತ್ತಿತ್ತು.ಆದರೆ ಗ್ಯಾಟ್ ಒಪ್ಪಂದದ ಫಲವಾಗಿ ಬಹುರಾಷ್ಟ್ರೀಯ ಕಂಪನಿಗಳ ಪ್ರವೇಶದಿಂದ ಸಹಕಾರ ಕ್ಷೇತ್ರ ಕೊಂಚ ಹಿನ್ನೆಡೆಯಾದರೂ ಇಂದಿಗೂ ಗಟ್ಟಿಯಾಗಿದೆ. ಗ್ರಾಮೀಣ ಭಾಗದ ಜನರು ಸಹಕಾರಿ ಸಂಘಗಳಲ್ಲಿ ಷೇರು ಬಂಡವಾಳ ಹೂಡಬೇಕು.ಹಣವನ್ನು ಅನಗತ್ಯವಾಗಿ, ಅದ್ದೂರಿ ಕಾರ್ಯಕ್ರಮಗಳಿಗೆ ಖರ್ಚು ಮಾಡುವ ಬದಲು, ಮಂತ್ರ ಮಾಂಗಲ್ಯದಂತಹ ಸರಳ ಮದುವೆಗಳಿಗೆ ಮುಂದಾಗುವಂತೆ ಕರೆ ನಿಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಹಕಾರ ಸಚಿವರಾದ ಕೆ.ಎನ್.ರಾಜಣ್ಣ ಮಾತನಾಡಿ,ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಕೆಳಹಂತದ ನೌಕರರಿಗೆ ಸೇವಾ ಭದ್ರತೆ ಒದಗಿಸುವ ಉದ್ದೇಶದಿಂದ ಈಗಾಗಲೇ ಸಲ್ಲಿಸಿರುವ ಸಹಕಾರ ತಿದ್ದುಪಡಿ ಕಾಯ್ದೆಯಲ್ಲಿ ಪ್ರಾಸ್ತಾಪಿಸಿದ್ದೇನೆ.ಒಮ್ಮೆ ಜಾರಿಗೆ ಬಂದರೆ ರಾಜ್ಯದ ಹಾಲು ಉತ್ಪಾಧನಾ ಸಹಕಾರ ಸಂಘಗಳಲ್ಲಿ ಕಾರ್ಯದರ್ಶಿ ಯಾಗಿ ಕೆಲಸ ಮಾಡುತ್ತಿರುವ ಎಲ್ಲಾ ನೌಕರರಿಗೆ ಭದ್ರತೆ ದೊರೆಯಲಿದೆ.ಇದರ ಜೊತೆಗೆ ನನ್ನ ಐವತ್ತು ವರ್ಷದ ಅನುಭವನದಲ್ಲಿ ಕಾಯ್ದೆಗೆ ಸಾಕಷ್ಟು ತಿದ್ದುಪಡಿ ತಂದಿದ್ದೇನೆ.ಅವಕಾಶ ವಂಚಿತ ತಳ ಸಮುದಾಯಗಳಿಗೆ ಅವಕಾಶ ಸಿಗುವಂತೆ ಮಾಡಲಾಗಿದೆ. ಇಂದಲ್ಲಾ ನಾಳೆ ಕಾನೂನಿನ ಮಾನ್ಯತೆ ದೊರೆಯಲಿದೆ ಎಂದರು.
ಕೃಷಿಗೆ ಹಾಕಿದ ಬಂಡವಾಳ ವಾಪಸ್ ಬರುವ ಖಾತ್ರಿ ಇಲ್ಲ.ಬೇರೆ ವಸ್ತುಗಳಿಗೆ ಉತ್ಪಾಧಕರು ಬೆಲೆ ನಿಗಧಿ ಮಾಡಿದರೆ,ರೈತರ ಉತ್ಪನ್ನಗಳಿಗೆ ಬೆಲೆ ನಿಗಧಿ ಮಾಡುವವರು ಬೇರೆ.ಎಲ್ಲಿಯವರೆಗೆ ರೈತರ ಆರ್ಥಿಕವಾಗಿ ಸದೃಢರಾಗದಿದ್ದರೆ ಅದು ಸಾಧ್ಯವಿಲ್ಲ. ಹೈನುಗಾರಿಕೆ ರೈತರಿಗೆ ವರದಾನವಾಗಿದೆ.ಎನ್.ಡಿ.ಡಿ.ಬಿ.ಸಾಫ್ಟ್ವೇರ್ ಅಳವಡಿಕೆಯಿಂದ ಹೈನುಗಾರರಿಗೆ ಹೆಚ್ಚಿನ ಅನುಕೂಲವಾಗಲಿದೆ. ಕಾರ್ಯಕ್ರಮ ಆಯೋಜಿಸಿರುವ ಎಲ್ಲಾ ಸಹಕಾರಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ವೇದಿಕೆಯಲ್ಲಿ ಸಹಕಾರಿ ರತ್ನ ಪ್ರಶಸ್ತಿ ಪಡೆದ 18 ಜನರನ್ನು ಅಭಿನಂದಿಸಲಾಯಿತು.ಶಾಸಕರಾದ ಜಿ.ಬಿ.ಜೋತಿಗಣೇಶ್,ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಿ.ಜಿ.ವೆಂಕಟೇಗೌಡ,ಸಹಕಾರ ಮಹಾಮಂಡಳಿದ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಗಂಗಣ್ಣ,ತುಮಕೂರು ಹಾಲು ಒಕ್ಕೂಟದ ಎಂ.ಡಿ. ಶ್ರೀನಿವಾಸ್ ಜಿ.ಸಹಕಾರಿ ಧುರೀಣರಾದನ ಗಂಗಣ್ಣ, ಕಲ್ಲಹಳ್ಳಿ ದೇವರಾಜು, ಲಕ್ಷ್ಮಿನಾರಾಯಣ್,ಸಿಂಗದಹಳ್ಳಿರಾಜಕುಮಾರ್,ನಾರಾಯಣಗೌಡ,ನಾಗೇಶಬಾಬು,ಲಕ್ಷ್ಮಿನಾರಾಯಣ್,ಸಿದ್ದಲಿಂಗೇಗೌಡ,ಕಾಂತರಾಜು, ತುಮುಲ್ ಆಡಳಿತಾಧಿಕಾರಿ ಉಮೇಶ್, ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸನ್ ಮತ್ತಿತರರು ಉಪಸ್ಥಿತರಿದ್ದರು.