ಕೆ.ಎನ್.ರಾಜಣನವರಿಗೆ ತಮ್ಮ ಹೇಳಿಕೆಗಳೇ ಮುಳುವಾದವೆ …

ಸಿದ್ದರಾಮಯ್ಯನವರ ಸಂಪುಟದಲ್ಲಿ ಸಹಕಾರಿ ಸಚಿವರಾಗಿದ್ದ ಕೆ.ಎನ್.ರಾಜಣ್ಣ ಅವರು ಸಚಿವರಾದ ದಿನದಿಂದಲೇ ಹೈಕಮಾಂಡ್‍ಗೆ ಮುಜಗರ ತರುವ ರೀತಿಯಲ್ಲೆ ತಮ್ಮ ಹೇಳಿಕೆಗಳನ್ನು ನೀಡುತ್ತಿದ್ದರು.

ಮೊದಲಿಗೆ 5ಜನರನ್ನು ಡಿಸಿಎಂ ಮಾಡಿ ಅವರಿಗೆ ಮುಕ್ತ ಅವಕಾಶ ನೀಡಬೇಕು ಅಂತ ಹೇಳಿಕೆಯನ್ನು ನೀಡಿದ್ದರು. ಆ ನಂತರ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಗುವ ಬಗ್ಗೆಯೂ ಹೇಳಿಕೆ ನೀಡಿದ್ದರು. 

ಸಾಮಾನ್ಯವಾಗಿ ಜಿಲ್ಲಾ ಉಸ್ತುವಾರಿ ಸಚಿವರೇ ಸ್ವಾತಂತ್ರೋತ್ಸವದ ದಿನದಂದು ಧ್ವಜಾರೋಹಣವನ್ನು ಮಾಡುತ್ತಾರೆ. ಆದರೆ, ಹಾಸನ ಉಸ್ತುವಾರಿ ಆಗಿರುವ ಕೆಎನ್ ರಾಜಣ್ಣ ಅವರಿಗೆ ಧ್ವಜಾರೋಹಣದ ಜವಾಬ್ದಾರಿಯನ್ನು ನೀಡಿರಲಿಲ್ಲ. ಆಗಲೇ, ಕೆಲವೊಂದು ಗುಸುಗುಸು ಸುದ್ದಿಗಳು ಹರಿದಾಡುತ್ತಿದ್ದವು. ಈಗ, ವಿಧಾನಮಂಡಲದ ಅಧಿವೇಶನ ಆರಂಭದ ದಿನದಿಂದೇ ರಾಜೀನಾಮೆಯನ್ನು ನೀಡಿದ್ದಾರೆ.

ಹೈಕಮಾಂಡ್ ಸೂಚನೆಯ ಹಿನ್ನಲೆಯಲ್ಲಿ ಸಚಿವ ಕೆಎನ್ ರಾಜಣ್ಣ ರಾಜೀನಾಮೆಯನ್ನು ನೀಡಿದ್ದಾರೆ ಎನ್ನುವುದು ಸದ್ಯಕ್ಕೆ ಸಿಕ್ಕಿರುವ ಮಾಹಿತಿ. ಇನ್ನೊಂದು ಕಡೆ, ಬಿಜೆಪಿಯ ನಾಯಕ ಮತ್ತು ಕೇಂದ್ರ ಸಚಿವ ವಿ.ಸೋಮಣ್ಣನವರನ್ನು ರಾಜಣ್ಣ ಹೊಗಳಿದ್ದರು. ಸೋಮಣ್ಣ ಅವರು ತುಮಕೂರು ಲೋಕಸಭಾ ಕ್ಷೇತ್ರದ ಸಂಸದರು. ಕೆಎನ್ ರಾಜಣ್ಣ ರಾಜೀನಾಮೆಯ ನಿರ್ಧಾರಕ್ಕೆ ಏಳು ಕಾರಣಗಳು ಎಂದು ಹೇಳಲಾಗುತ್ತಿದೆ:

ರಾಜ್ಯದಲ್ಲಿ ಹನಿಟ್ರ್ಯಾಪ್ ಹಗರಣ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ತನ್ನ ಮತ್ತು ತನ್ನ ಪುತ್ರನ ಮೇಲೆ ಹನಿಟ್ರ್ಯಾಪ್ ಪ್ರಯತ್ನ ನಡೆದಿತ್ತು ಎಂದು ವಿಧಾನಸಭೆಯಲ್ಲೇ ಸಚಿವ ರಾಜಣ್ಣ ಹೇಳಿದ್ದರು. ಇದು, ವಿಪಕ್ಷವಾದ ಬಿಜೆಪಿಗೆ ದೊಡ್ಡ ಅಸ್ತ್ರವನ್ನು ಕೊಟ್ಟಂತಾಗಿತ್ತು. ಇದನ್ನು ವಿಧಾನಸಭೆಯಲ್ಲಿ ಯಾಕೆ ಪ್ರಸ್ತಾಪ ಮಾಡಬೇಕಿತ್ತು, ಹೈಕಮಾಂಡ್ ಬಳಿ ಬಂದು ದೂರು ಕೊಡಬಹುದಿತ್ತಲ್ಲವೇ ಎನ್ನುವುದು ಹೈಕಮಾಂಡ್ ಸಿಟ್ಟಿಗೆ ಕಾರಣವಾಗಿತ್ತು.

ಸಿದ್ದರಾಮಯ್ಯನವರ ಆಪ್ತರಾಗಿದ್ದರೂ, ಸಚಿವರಾಗಿದ್ದರೂ ಹನಿಟ್ರ್ಯಾಪ್ ಪ್ರಯತ್ನ ನಡೆದಿದ್ದರೂ ನಿರೀಕ್ಷಿತ ಬೆಂಬಲ ಸಚಿವರಿಂದ ಸಿಕ್ಕಿರಲಿಲ್ಲ, ಇದು ಕೂಡಾ ಅವರ ಕೋಪಕ್ಕೆ ಕಾರಣವಾಗಿತ್ತು. ಇದರ ಜೊತೆಗೆ, ಈ ವಿಚಾರದ ತನಿಖೆಯಲ್ಲಿ ಯಾವುದೇ ಪ್ರಗತಿ ಕಾಣಿಸದ ಹಿನ್ನಲೆಯಲ್ಲಿ ರಾಜಣ್ಣ, ಹಲವು ಬಾರಿ ಮುಖ್ಯಮಂತ್ರಿಗಳ ಬಳಿ ಅಸಮಾಧಾನವನ್ನು ತೋಡಿಕೊಂಡಿದ್ದರು. ಹನಿಟ್ರ್ಯಾಪ್ ಪ್ರಯತ್ನ ಯಾವ ಸಚಿವರಿಂದ ಆಗಿರಬಹುದು ಎನ್ನುವುದು ಸಾರ್ವಜನಿಕ ವಲಯದಲ್ಲಿ ದೊಡ್ದ ಚರ್ಚೆಯಾಗಿತ್ತು.

ಸಚಿವರು ಮತ್ತು ಶಾಸಕರ ನಡುವಿನ ಸಂವಹನದ ಕೊರತೆಯ ಹಿನ್ನಲೆಯಲ್ಲಿ ಹೈಕಮಾಂಡ್ ಸೂಚನೆಯ ಮೇರೆಗೆ, ಎಐಸಿಸಿ ಉಸ್ತುವಾರಿ ರಣದೀಪ್ ಸುರ್ಜೇವಾಲ ಎಲ್ಲರ ಜೊರೆಗೆ ಮಾತುಕತೆಯನ್ನು ನಡೆಸಿದ್ದರು. ಶಾಸಕರು, ಸಚಿವರು, ಡಿಸಿಎಂ, ಸಿಎಂ ಜೊತೆ, ಉಸ್ತುವಾರಿಯು ಸಭೆಯನ್ನು ನಡೆಸಿದ್ದರು. ಇಷ್ಟೇ ಅಲ್ಲದೇ, ಸರ್ಕಾರಕ್ಕೆ ಸಂಬಂಧ ಪಟ್ಟ ಮಾಹಿತಿಗಳನ್ನು ನೇರವಾಗಿ ಅಧಿಕಾರಿಗಳಿಂದ ಸುರ್ಜೇವಾಲ ಪಡೆದುಕೊಳ್ಳುತ್ತಿದ್ದರು ಎಂದು ಬಹಿರಂಗವಾಗಿಯೇ, ಸಚಿವ ರಾಜಣ್ಣ ಆಕ್ರೋಶ ಹೊರಹಾಕಿದ್ದರು. ಇದು, ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿರುವ ಸಾಧ್ಯತೆಯಿದೆ.

ಸ್ವಾತಂತ್ರ್ಯೋತ್ಸವದ ದಿನದಂದು ಧ್ವಜಾರೋಹಣ ಮಾಡುವುದು ಎಲ್ಲಾ ಸಚಿವರಿಗೆ ಹೆಮ್ಮೆಯ ವಿಷಯ. ಈ ಬಾರಿಯ ಪಟ್ಟಿಯಲ್ಲಿ ಮೊದಲು ಅವರ ಹೆಸರು ಇತ್ತು. ಆದರೆ, ಇದ್ದಕ್ಕಿದ್ದಂತೆಯೇ ಪರಿಷ್ಕೃತ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿತ್ತು. ಅದರಲ್ಲಿ, ರಾಜಣ್ಣ ಬದಲಿಗೆ, ಹಾಸನದಲ್ಲಿ ಕೃಷ್ಣ ಭೈರೇಗೌಡರಿಗೆ ಅವಕಾಶವನ್ನು ನೀಡಲಾಗಿತ್ತು. ಇದು, ಕೂಡಾ ಸಚಿವರ ರಾಜೀನಾಮೆ ಕಾರಣವಾದ ಅಂಶ ಎಂದು ಹೇಳಲಾಗುತ್ತಿದೆ.

ಲೋಕಸಭಾ ಚುನಾವಣೆ, ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎನ್ನುವುದು ವಿಪಕ್ಷದ ನಾಯಕ ರಾಹುಲ್ ಗಾಂಧಿಯ ಆರೋಪವಾಗಿತ್ತು. ಇನ್ನು, ಕರ್ನಾಟಕದಲ್ಲೂ ಅದೇ ರೀತಿ ಆಗಿದೆ ಎಂದು ರಾಹುಲ್, ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಯನ್ನು ನಡೆಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಕೆಎನ್ ರಾಜಣ್ಣ, ಮತದಾರರ ಪಟ್ಟಿ ಸಿದ್ದವಾಗಿದ್ದೇ ಕಾಂಗ್ರೆಸ್ ಕಾಲದಲ್ಲಿ ಎಂದಿದ್ದರು. ಇದು, ಕಾಂಗ್ರೆಸ್ಸಿಗೆ ತೀವ್ರ ಮುಜುಗರವನ್ನು ತಂದಿತ್ತು. ಈ ಹಿನ್ನಲೆಯಲ್ಲಿ, ಕಾಂಗ್ರೆಸ್ ಹೈಕಮಾಂಡ್ ರಾಜೀನಾಮೆಗೆ ಸೂಚಿಸಿರಬಹುದು.
: ತಮ್ಮ ಜಿಲ್ಲೆಯಿಂದಲೇ ಲೋಕಸಭೆಗೆ ಆಯ್ಕೆಯಾಗಿರುವ ವಿ.ಸೋಮಣ್ಣನವರನ್ನು ಸಹಕಾರ ಸಚಿವರು ಮುಕ್ತಕಂಠದಿಂದ ಹೊಗಳಿದ್ದರು. ಬಿಜೆಪಿ ವಿರುದ್ದ ಕಾಂಗ್ರೆಸ್ ಬೀದಿಗಿಳಿದು ಹೋರಾಟವನ್ನು ನಡೆಸುತ್ತಿದೆ. ಇಂತಹ ಸಮಯದಲ್ಲಿ ಬಿಜೆಪಿಯ ಕೇಂದ್ರ ಸಚಿವರೊಬ್ಬರನ್ನು ಹೊಗಳಿರುವುದು ಕಾಂಗ್ರೆಸ್ಸಿಗೆ ಮುಜುಗರವನ್ನು ತಂದೊಡ್ಡಿತ್ತು. ಈ ಹಿನ್ನಲೆಯಲ್ಲಿಯೂ, ಕಾಂಗ್ರೆಸ್ ಹೈಕಮಾಂಡ್, ಅವರ ರಾಜೀನಾಮೆಯನ್ನು ಪಡೆದಿರಬಹುದು.
ಹಾಸನ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಹುದ್ದೆ

ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಸಭೆ ನಡೆದಿತ್ತು. ಹಾಸನ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎನ್ನುವ ಚರ್ಚೆ ಆರಂಭವಾಯಿತು. ಆ ವೇಳೆ, ಅದನ್ನು ನಾನು ನಿರ್ಧರಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ನೀವೇ ನಿರ್ಧರಿಸುವುದಾದರೆ, ಜಿಲ್ಲಾ ಉಸ್ತುವಾರಿಯಾಗಿ ನಾನ್ಯಾಕೆ ಇರಬೇಕು ಎಂದು ಸಭೆಯಿಂದಲೇ ರಾಜಣ್ಣ ಹೊರ ನಡೆದಿದ್ದರು. ಇದು, ಸಿಎಂ ಮತ್ತು ರಾಜಣ್ಣ ನಡುವಿನ ಬಿರುಕಿಗೆ ಕಾರಣವಾಗಿ, ರಾಜೀನಾಮೆಯನ್ನು ನೀಡಿರಬಹುದು ಎಂದು ಹೇಳಲಾಗುತ್ತಿದೆ.

Leave a Reply

Your email address will not be published. Required fields are marked *