ತುಮಕೂರು : ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ವೃತ್ತಿ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ದೊರಕಿಸಿಕೊಟ್ಟ ಕನ್ನಡತನಕ್ಕೆ ಇದೀಗ 25 ವರ್ಷ ತುಂಬುತ್ತಿದೆ. ಈ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಲು ಜಿಲ್ಲಾಡಳಿತ ಸಜ್ಜಾಗಿದೆ.
ಖ್ಯಾತ ಸಾಹಿತಿ ಹಾಗೂ ಬರಹಗಾರ ಡಾ: ಬರಗೂರು ರಾಮಚಂದ್ರಪ್ಪ ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಕೈಗೊಂಡ ಪ್ರಾಧಿಕಾರದ ಪ್ರಮುಖ ನಿರ್ಧಾರಗಳಲ್ಲಿ 2001 ಜೂನ್ 4ರಂದು ವೃತ್ತಿಪರ ಶಿಕ್ಷಣ ಕೋರ್ಸುಗಳಿಗೆ ಆಯ್ಕೆಯಾಗುವ ರಾಜ್ಯದ ಅಭ್ಯರ್ಥಿಗಳಿಗೆ ಕನ್ನಡ ವ್ಯಾಸಂಗ ಮಾಡಿದಲ್ಲಿ ವಿಶೇಷ ಮೀಸಲಾತಿಯನ್ನು ಒದಗಿಸಿ ಸರ್ಕಾರ ಆದೇಶಿಸಿತ್ತು. ಇದರಿಂದ ರಾಜ್ಯದ ಹಲವಾರು ವಿದ್ಯಾರ್ಥಿಗಳು ಕನ್ನಡ ಮಾಧ್ಯಮ ವ್ಯಾಸಂಗ ಮಾಡಿ ವೃತ್ತಿಪರ ಕೋರ್ಸುಗಳಿಗೆ ಆಯ್ಕೆಯಾಗಿದ್ದರು. ಈ ಕ್ರಮಕ್ಕೆ ಇದೀಗ 25 ವರ್ಷಗಳು ಸಂದಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಮೀಸಲಾತಿಗೆ 25ರ ಸಂಭ್ರಮ ಕಾರ್ಯಕ್ರಮ ಆಯೋಜನೆಗೆ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ: ಜಿ. ಪರಮೇಶ್ವರ ಹಾಗೂ ತುಮಕೂರು ಜಿಲ್ಲಾಡಳಿತ ಚಿಂತನೆ ನಡೆಸಿದೆ.
ಈ ಸಂಬಂಧ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಗುರುವಾರ ತಮ್ಮ ಕಚೇರಿಯಲ್ಲಿ ಡಾ: ಬರಗೂರು ರಾಮಚಂದ್ರಪ್ಪ ಅವರೊಂದಿಗೆ ಚರ್ಚೆ ನಡೆಸಿದ್ದು, ಕಾರ್ಯಕ್ರಮ ರೂಪುರೇಷೆಗಳು ಹಾಗೂ ದಿನಾಂಕದ ಕುರಿತಾಗಿ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಸಧ್ಯದಲ್ಲೇ ತೀರ್ಮಾನಿಸಲು ನಿರ್ಧರಿಸಿದ್ದಾರೆ.
ಈ ಸಂದರ್ಭದಲ್ಲಿ ಡಾ: ಬರಗೂರು ರಾಮಚಂದ್ರಪ್ಪ ಅವರು, ತಮ್ಮ ಅವಧಿಯಲ್ಲಿ 2001 ಜೂನ್ 4ರಂದು ವೃತ್ತಿಪರ ಶಿಕ್ಷಣ ಕೋರ್ಸುಗಳಿಗೆ ಕನ್ನಡ ಮೀಸಲಾತಿ, 2002 ಅಕ್ಟೋಬರ್ 24ರಂದು ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಕನ್ನಡ ಮೀಸಲಾತಿ ಆದೇಶವನ್ನು ಸರ್ಕಾರ ನೀಡಿದೆ. ಇದರಿಂದ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ರಾಜ್ಯದ ಅಪಾರ ಪ್ರಮಾಣದ ವಿದ್ಯಾರ್ಥಿಗಳು ಸೌಲಭ್ಯಗಳನ್ನು ಪಡೆದು ಉತ್ತಮ ಸ್ಥಾನ ಹೊಂದಲು ಅವಕಾಶವಾಯಿತು. ಇದಲ್ಲದೆ, ತಮ್ಮ ಅವಧಿಯಲ್ಲಿ ಸಾಕಷ್ಟು ಕನ್ನಡಪರ ನಿರ್ಧಾರಗಳನ್ನು ತೆಗೆದುಕೊಂಡು ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ. ಅಂತೆಯೇ ಸರ್ಕಾರವು ತಮ್ಮ ವರದಿಯನ್ನು ಅಂಗೀಕರಿಸಿ ಸರ್ಕಾರಿ ಆದೇಶಗಳನ್ನು ಹೊರಡಿಸಿ ಕನ್ನಡಿಗರಿಗೆ ನೆರವಾಗಿರುವುದನ್ನು ಅವರು ಸ್ಮರಿಸಿದರು.
ವೃತ್ತಿಪರ ಕೋರ್ಸುಗಳಿಗೆ ಕನ್ನಡ ಮೀಸಲಾತಿ ಆದೇಶವನ್ನು ತಂದು 25 ವರ್ಷಗಳು ಸಂದಿರುವ ಈ ಸಂದರ್ಭದಲ್ಲಿ ತುಮಕೂರು ಜಿಲ್ಲಾಡಳಿತದಿಂದ ಕನ್ನಡ ಮೀಸಲಾತಿ ಬೆಳ್ಳಿ ಹಬ್ಬ ಆಚರಿಸಲು ಮುಂದಾಗುತ್ತಿರುವುದು ಪ್ರಶಂಸನೀಯ. ಇದು ಕನ್ನಡಿಗರ ಮುಂಬರುವ ಪೀಳಿಗೆಗೆ ಅತ್ಯಂತ ಸ್ಫೂರ್ತಿಯ ಗುರುತಾಗಲಿದೆ ಎಂದರು.