ತುಮಕೂರು: ಹೆಚ್.ಡಿ. ಕುಮಾರಸ್ವಾಮಿಯವರು ಮತ್ತೊಮ್ಮೆ ಈ ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂದು ಆಸೆ ಹೊಂದಿರುವ ಪಕ್ಷದ ಕಾರ್ಯಕರ್ತರು ಆ ಆಸೆ ಈಡೇರಲು ಪಕ್ಷವನ್ನು ಸದೃಢವಾಗಿ ಸಂಘಟಿಸಲು ಶ್ರಮಿಸಬೇಕು. ಮುಂಬರುವ ಚುನಾವಣೆಗಳಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದರೂ ಜೆಡಿಎಸ್ ಅನ್ನು ಪ್ರಬಲವಾಗಿ ಸಂಘಟಿಸಲು ಎಲ್ಲಾ ಕಾರ್ಯಕರ್ತರು ಸಂಕಲ್ಪ ಮಾಡಬೇಕು ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಹೆಚ್. ನಿಂಗಪ್ಪ ಮನವಿ ಮಾಡಿದರು.
ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಬುಧವಾರ ನಗರ ಕಾರ್ಯಕರ್ತರ ಸಭೆ ಹಾಗೂ ಮಾಜಿ ಸಚಿವ ದಿ. ಲಕ್ಷ್ಮೀನರಸಿಂಹಯ್ಯನವರ ಅಭಿಮಾನಿ ಬಳಗದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಲಕ್ಷ್ಮೀನರಸಿಂಹಯ್ಯನವರ ಅಭಿಮಾನಿಗಳು ಜೆಡಿಎಸ್ನ ಸದಸ್ಯರಾಗಿ ಪಕ್ಷದ ಬೆಳವಣಿಗೆಗೆ ಸಹಕರಿಸಬೇಕು ಎಂದು ವಿನಂತಿಸಿದರು.
ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡರ ನೇತೃತ್ವದಲ್ಲಿ, ಹೆಚ್.ಡಿ. ಕುಮಾರಸ್ವಾಮಿಯವರ ಮಾರ್ಗದರ್ಶನದಲ್ಲಿ ಜಿಲ್ಲೆಯಲ್ಲಿ ಜೆಡಿಎಸ್ ಭದ್ರಕೋಟೆಯಾಗಿದೆ. ಮುಂದಿನ ಚುನಾವಣೆಗಳಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಗಳು ಜಯ ಸಾಧಿಸಿ ಆಡಳಿತ ಚುಕ್ಕಾಣಿ ಹಿಡಿಯಬೇಕು. ಅದಕ್ಕಾಗಿ ಕಾರ್ಯಕರ್ತರು ಪಕ್ಷದ ಸಂಘಟನೆಗೆ ಶ್ರಮಿಸಬೇಕು. ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಜೆಡಿಎಸ್ ಪ್ರಬಲವಾಗಿ ಬೆಳೆದರೆ 2028ರ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಪಡೆದು ಕುಮಾರಸ್ವಾಮಿಯವರು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೆಚ್. ನಿಂಗಪ್ಪ ಹೇಳಿದರು.
ನಗರಸಭೆ ಮಾಜಿ ಅಧ್ಯಕ್ಷ ಟಿ.ಹೆಚ್. ಜಯರಾಮ್ ಮಾತನಾಡಿ, ಮುಂದಿನ ನಗರಪಾಲಿಕೆ ಚುನಾವಣೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಗಳು ಗೆದ್ದು ನಮ್ಮದೇ ಆಡಳಿತ ಸ್ಥಾಪನೆ ಆಗಲಿದೆ. ಸದ್ಯ ತುಮಕೂರು ನಗರಪಾಲಿಕೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಒಂದು ಖಾತೆ ಮಾಡಿಕೊಡಲೂ ಸತಾಯಿಸುತ್ತಾರೆ. ಇದರಿಂದ ನಗರದ ಜನ ರೋಸಿಹೋಗಿದ್ದಾರೆ, ಪಾಲಿಕೆ ಚುನಾವಣೆಗಾಗಿ ಕಾಯುತ್ತಿದ್ದಾರೆ. ನಮ್ಮದೇ ಪಕ್ಷದ ಆಡಳಿತ ಬಂದರೆ ಜನರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.
ಈ ಹಿಂದೆ ಹೆಚ್. ನಿಂಗಪ್ಪನವರು ಜಿಲ್ಲಾಧ್ಯಕ್ಷರಾಗಿದ್ದಾಗ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಪೈಕಿ 9ರಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲುವು ಪಡೆದಿದ್ದರು, ಬಹುತೇಕ ಸ್ಥಳೀಯ ಸಂಸ್ಥೆಗಳಲ್ಲಿ ಜೆಡಿಎಸ್ ಆಡಳಿತವಿತ್ತು. ಮತ್ತೆ ಅಂತಹ ಪರಿಸ್ಥಿತಿ ಸೃಷ್ಟಿಯಾಗಲು ನಾವೆಲ್ಲರೂ ಜಿಲ್ಲಾಧ್ಯಕ್ಷ ಹೆಚ್. ನಿಂಗಪ್ಪ ಅವರಿಗೆ ಶಕ್ತಿ ತುಂಬಿ ಪಕ್ಷ ಕಟ್ಟುವ ಕೆಲಸ ಮಾಡೋಣ ಎಂದರು.
ನಗರಸಭೆ ಮಾಜಿ ಉಪಾಧ್ಯಕ್ಷ ಶ್ರೀನಿವಾಸ್ಪ್ರಸಾದ್ ಮಾತನಾಡಿ, ಶಾಸಕರಾಗಿ, ಪಕ್ಷದ ಅಧ್ಯಕ್ಷರಾಗಿ ಅಪಾರ ಅನುಭವ ಹೊಂದಿರುವ ಹೆಚ್. ನಿಂಗಪ್ಪನವರ ಅನುಭವ, ಮಾರ್ಗದರ್ಶನದೊಂದಿಗೆ ಜಿಲ್ಲೆಯಲ್ಲಿ ಜೆಡಿಎಸ್ ಅನ್ನು ಸದೃಢವಾಗಿ ಸಂಘಟನೆ ಮಾಡಬೇಕು. ರಾಜ್ಯದಲ್ಲಿ ಕುಮಾರಣ್ಣ ಮತ್ತೆ ಮುಖ್ಯಮಂತ್ರಿ ಆಗಲು ಶಕ್ತಿ ತುಂಬಬೇಕು ಎಂದು ತಿಳಿಸಿದರು.
ಮುಖಂಡ ಎಸ್. ಪುಟ್ಟೀರಪ್ಪ ಮಾತನಾಡಿ, ಸರಳ ಸಜ್ಜನಿಕೆಯ, ಜನಾನುರಾಗಿ ನಾಯಕರಾಗಿರುವ ಹೆಚ್. ನಿಂಗಪ್ಪನವರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಜೆಡಿಎಸ್ ಉತ್ತಮವಾಗಿ ಸಂಘಟನೆಯಾಗಲಿದೆ ಎಂಬ ಆಶಯ ವ್ಯಕ್ತಪಡಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಟಿ.ಸಿ. ಪ್ರಭಾಕರ್ ಮಾತನಾಡಿ, ಮಾಜಿ ಸಚಿವ ದಿ. ಲಕ್ಷ್ಮೀನರಸಿಂಹಯ್ಯನವರಿಗೂ ಹೆಚ್. ನಿಂಗಪ್ಪನವರಿಗೂ ಸಾಮ್ಯತೆ ಇದೆ. ಅವರಂತೆ ಇವರು ಕೂಡಾ ಸಾಮಾನ್ಯರೊಂದಿಗೆ ಸಾಮಾನ್ಯರಂತೆ ಬೆರೆತು ಸ್ಪಂದಿಸುವ ಗುಣ ಹೊಂದಿದ್ದಾರೆ. ನಾಯಕರ ಇಂತಹ ಗುಣ ಕಾರ್ಯಕರ್ತರಲ್ಲಿ ಉತ್ಸಾಹ ತುಂಬುತ್ತದೆ. ಇನ್ನು ಮುಂದೆ ಜಿಲ್ಲೆಯಲ್ಲಿ ಜೆಡಿಎಸ್ ಮತ್ತಷ್ಟು ಪ್ರಬಲವಾಗಿ ಬೆಳೆಯಲಿದೆ ಎಂದು ಹೇಳಿದರು.
ಜಿಲ್ಲಾ ಜೆಡಿಎಸ್ ಮಾಜಿ ಕಾರ್ಯಾಧ್ಯಕ್ಷ ಟಿ.ಆರ್. ನಾಗರಾಜು, ಮುಖಂಡರಾದ ಟಿ.ಎಲ್.ಕುಂಭಯ್ಯ, ಮಾಜಿ ನಗರಸಭಾ ಸದಸ್ಯ ಹೆಚ್.ಆರ್. ಹನುಮಂತರಾಯಪ್ಪ, ಮುಖಂಡರಾದ ಯೋಗಾನಂದಕುಮಾರ್, ಮುಜಾಹಿದ್ ಪಾಷಾ ಮೊದಲಾದವರು ಮಾತನಾಡಿದರು.
ಮುಖಂಡರಾದ ಗಂಗಣ್ಣ, ಸೋಲಾರ್ ಕೃಷ್ಣಮೂರ್ತಿ, ಟಿ.ಎಲ್.ಕುಂಭಯ್ಯ, ನಗರಪಾಲಿಕೆ ಮಾಜಿ ಸದಸ್ಯರಾದ ಮೋಹನ್ಕುಮಾರ್, ರಾಮಕೃಷ್ಣಪ್ಪ, ಬಾಲಕೃಷ್ಣ, ಟಿ.ಜಿ.ನರಸಿಂಹರಾಜು, ಮರಿಗಂಗಯ್ಯ, ಧರಣೇಂದ್ರಕುಮಾರ್, ಹೆಚ್ಡಿಕೆ ಮಂಜುನಾಥ್, ಶ್ರೀನಿವಾಸ್, ಲಕ್ಷ್ಮೀನರಸಿಂಹರಾಜು, ಎಸ್.ಡಿ.ಕೃಷ್ಣಪ್ಪ, ವಿಜಯ್ಗೌಡ, ಮಧುಗೌಡ, ಮಂಜುನಾಥ್, ಕುಸುಮಾ ಜಗನ್ನಾಥ್, ಲೀಲಾವತಿ, ರೇಖಾ, ತಾಹೇರಾ ಕುಲ್ಸಂ, ಯಶೋಧ, ನೀಲಮ್ಮ, ವಿ.ಲಕ್ಷ್ಮೀಶ್ಗೌಡ ಮೊದಲಾದವರು ಭಾಗವಹಿಸಿದ್ದರು.