ತುಮಕೂರು : ಧುನಿಯಾ ವಿಜಯ್ ಅವರ ಲ್ಯಾಂಡ್ ಲಾರ್ಡ್ ಸಿನಿಮಾ ಭಾರತದ ಸಮಾಜದಲ್ಲಿರುವ ಅಸಮಾನತೆಯನ್ನು ತೊಲಗಿಸಲು ಭಾರತದ ಸಂವಿಧಾನದ ಸಮಾನತೆಯನ್ನು, ಈ ದೇಶದ ಸಂಸ್ಕøತಿಯನ್ನು ವಾಸ್ತವತೆಯನ್ನು ಎತ್ತಿ ಹಿಡಿದಿರುವುದರಿಂದ ಇಂದಿನ ಯುವಕರು ಜಾತ್ಯತೀತವಾಗಿ ಈ ಸಿನಿಮಾವನ್ನು ನೋಡಬೇಕೆಂದು ಜಾತ್ಯತೀತ ಯುವ ವೇದಿಕೆಯ ಕಾರ್ಯಾಧ್ಯಕ್ಷ ವಿರೂಪಾಕ್ಷ ಡ್ಯಾಗೇರಹಳ್ಳಿ ತಿಳಿಸಿದರು.
ಅವರು ಜನವರಿ 28ರ ಸಂಜೆ ತುಮಕೂರಿನ ಎಸ್.ಮಾಲ್ ನಲ್ಲಿ ವಿವಿಧ ಸಂಘಟನೆಗಳು ಲ್ಯಾಂಡ್ ಲಾರ್ಡ್ ಸಿನಿಮಾ ವೀಕ್ಷಣೆಯ ಮೂಲಕ ಬೆಂಬಲ ಸೂಚಿಸಿದ ಸಂದರ್ಭದಲ್ಲಿ ಮಾತನಾಡಿ, ಈ ಸಿನಿಮಾವನ್ನು ಜಾತ್ಯತೀತವಾಗಿ ಯುವ ಜನರು ಪ್ರೋತ್ಸಾಹಿಸಬೇಕೆಂದು ಮಾನವಿ ಮಾಡಿದ ವಿರೂಪಾಕ್ಷ ಡ್ಯಾಗೇರಹಳ್ಳಿ, ದುನಿಯಾ ವಿಜಯ್ ಅವರು ಈ ಸಿನಿಮಾವನ್ನು ಸವಾಲಾಗಿ ಸ್ವೀಕರಿಸಿ, ಈ ಹಿಂದೆ ನಡೆದಿರುವ ಭಾರತದ ವಾಸ್ತವವನ್ನು ಈ ಚಿತ್ರದಲ್ಲಿ ಎತ್ತಿ ಹಿಡಿಯಲಾಗಿದೆ, ಈ ದೇಶದ ಸಂವಿಧಾನ ಅಸಮಾನತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸಿನಿಮಾ ಮೂಲಕ ತೋರಿಸಲಾಗಿದೆ ಜನಪರ ಮನಸ್ಸುಗಳು ಈ ಸಿನಿಮಾವನ್ನು ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದರು.
ಡಾ.ದರ್ಶನ್ ಅವರು ಮಾತನಾಡಿ ಭಾರತದ ಇತಿಹಾಸದ ಬಗ್ಗೆ, ಅಸಮಾನತೆಯ ಬಗ್ಗೆ ಬೆಳಕನ್ನು ಚೆಲ್ಲಲಾಗಿದೆ, ಒಂದು ವಿಭಿನ್ನವಾದ ಪರಿಕಲ್ಪನೆಯನ್ನು ತೋರಿಸಲಾಗಿದೆ, ಇಂತಹ ಚಿತ್ರಗಳನ್ನು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ನೋಡುವ ಮೂಲಕ ಭಾರತದ ಇತಿಹಾಸವನ್ನು ತಿಳಿಯಬೇಕೆಂದು ತಿಳಿಸಿದರು.
ಕೆಪಿಸಿಸಿ ಕೋ-ಆರ್ಡಿನೇಟರ್ ಕೆ.ಎಸ್.ಗುರುಪ್ರಸಾದ್ ಮಾತನಾಡಿ, ಈ ತರಹ ಸಾಮಾಜಿಕ ಚಿತ್ರಗಳು ರಾಜಕುಮಾರ್, ವಿಷ್ಣುವರ್ಧನ್ ಕಾಲದಲ್ಲಿ ಜಮೀನ್ದಾರಿ ಪದ್ದತಿಯ ಸಾಮಾಜಿಕ óಶೋಷಣೆಯ ಚಿತ್ರಗಳು ಬರುತ್ತಿದ್ದವು, ಇತ್ತೀಚಿನ ದಿನಗಳಲ್ಲಿ ಅಂತ ಚಿತ್ರಗಳು ಕಣ್ಮರೆಯಾಗಿದ್ದವು, ಈಗ ದುನಿಯಾ ವಿಜಯ್ ಅವರ ಲ್ಯಾಂಡ್ ಲಾರ್ಡ್ ಮೂಲಕ ಒಂದು ಹೆಣ್ಣು ವಿದ್ಯೆ ಕಲಿತರೆ, ಸಂವಿಧಾನ ಜಾರಿಯಿಂದ ಆಗಿರುವ ಸಮಾಜದ ಬದಲಾವಣೆಯನ್ನು ತೋರಿಸಲಾಗಿದೆ ಈ ಹಿನ್ನಲೆಯಲ್ಲಿ ಹೆಚ್ಚು ಈ ಸಿನಿಮಾವನ್ನು ಪ್ರೋತ್ಸಾಹಿಸುವುದು ಅಗತ್ಯವಿದೆ ಎಂದು ಹೇಳಿದರು.
ಸಾಹಿತಿ ಹಾಗೂ ವಿಮರ್ಶಕರಾದ ರವಿಕುಮಾರ್ ನೀಹ ಮಾತನಾಡಿ, ಸಿನಿಮಾ ಎಂಬುದೇ ಒಂದು ಪ್ರಬಲ ಮಾಧ್ಯಮ, ಪ್ರಬಲ ಮಾಧ್ಯಮ ಸಾಮಾಜಿಕ ಕಾಳಜಿಯನ್ನಿಟ್ಟುಕೊಂಡು ಈ ಕಾಲದಲ್ಲಿ ಇಂತಹ ಸಿನಿಮಾ ಬಂದಿರುವುದು ಬಹಳ ಮುಖ್ಯವಾದದ್ದು, ಏಕೆಂದರೆ ಶತ ಶತಮಾನಗಳಿಂದ ತುಳಿತಕ್ಕೊಳಗಾದವರಿದ್ದಾರೆ, ಜಮೀನು ಇಲ್ಲದೆ ಬದುಕು ಕಟ್ಟಿಕೊಳ್ಳಲೇ ತಮ್ಮ ಜೀವವನ್ನು ಜೀತಕ್ಕಿಟ್ಟವರಿದ್ದಾರೆ, ದೇವದಾಸಿ ಪದ್ದತಿಯಿಂದ ನರಳಿರುವವರಿದ್ದಾರೆ ಇಂತಹವುದಕ್ಕೆಲ್ಲಾ ಸ್ವಾಭಿಮಾನ ತಂದುಕೊಟ್ಟವರು ಬಾಬಾ ಸಾಹೇಬ ಅಂಬೇಡ್ಕರ್.

ಅಂತಹ ಬಾಬಾ ಸಾಹೇಬ ಅಂಬೇಡ್ಕರ್ ಅವರ ಸಂವಿಧಾನವನ್ನು ಈ ಕಾಲಕ್ಕೆ ತಲುಪಿಸುವುದು ಹೇಗೆ, ಮಾಧ್ಯಮದ ಮೂಲಕ ತಲುಪಿಸುವುದು ಹೇಗೆ ಎಂಬುದು ದೊಡ್ಡ ಸವಾಲಾಗಿತ್ತು, ಆದರೆ ಈಗ ದುನಿಯಾ ವಿಜಯ್ ಎಂಬ ನಟ ಲ್ಯಾಂಡ್ ಲಾರ್ಡ್ ಎಂಬ ವಸ್ತುವನ್ನು ಆಯ್ದುಕೊಂಡು ಸಿನಿಮಾ ಮಾಡಿದ್ದಾರೆ, ಅವರ ಕಾಳಜಿ, ನಿದೇಶಕ ಜಡೇಶ್ ಹಂಪಿ ಇವರೆಲ್ಲಾ ಭೂಮಿಯ ಪ್ರಶ್ನೆಯನ್ನು ಎತ್ತಿದ್ದಾರೆ, ಇವತ್ತಿಗೂ ಸಹ ಅನೇಕ ಜನರಿಗೆ ಭೂಮಿ ಇಲ್ಲ, ಇದರಿಂದ ಸ್ವಾಭಿಮಾನದಿಂದ ಬದಕಲು ಸಾಧ್ಯವಾಗುತ್ತಿಲ್ಲ, ಜಾತಿ ಎಂಬುದು ಇವತ್ತಿಗೂ ಕೂಡ ಇದೆ, ಸ್ವಾಭಿಮಾನ ತರುವಂತಹವುದು, ಅವರಿಗೆಲ್ಲಾ ನೈತಿಕತೆ ಕೊಡುವಂತಹವುದು ಭೂಮಿ ಪಡೆಯಬೇಕೆಂಬುದು ಅವರ ದೊಡ್ಡ ಗುರಿ. ಲ್ಯಾಂಡ್ ಲಾರ್ಡ್ ಸಿನಿಮಾ ಇಂತಹವುದಕ್ಕೆ ಶಕ್ತಿಯಾಗಿ ಬಂದಿದೆ, ಇಂತಹ ಸಿನಿಮಾವನ್ನು ನೋಡ್ತಾರಾ ಎಂಬ ಪ್ರಶ್ನೆಯು ನಮ್ಮ ಮುಂದಿದೆ, ತಮಿಳುನಾಡಿನಲ್ಲಿ ನೋಡುತ್ತಾರೆ, ಆಂಧ್ರದಲ್ಲಿ ನೋಡ್ತಾರೆ, ಕರ್ನಾಟಕದಲ್ಲಿ ಇಂತಹ ವಿಷಯ ಎತ್ತಿಕೊಂಡು ಸಿನಿಮಾ ಮಾಡುವುದು ಕಡಿಮೆಯಾಗಿತ್ತು, ಲ್ಯಾಂಡ್ ಲಾರ್ಡ್ ಮೂಲಕ ಒಂದಷ್ಟು ಹೊಸ ಮುಖಗಳು ಇಂತಹ ವಿಷಯಗಳ ಮೇಲೆ ಸಿನಿಮಾಗಳು ಬಂದರೆ ಜನ ಸಾಮಾನ್ಯರ ಬದುಕು, ಸಾಮಾಜಿಕ ಕಾಳಜಿಯಂತಹ ನೈತಿಕತೆ ಸಿನಿಮಾಗಳು ಬರಲು ಈ ಸಿನಿಮಾ ಮುನ್ನುಡಿಯಾಗಿದೆ ಎಂದು ಹೇಳಿದರು.
ದಲಿತ ಹೋರಾಟಗಾರ ಕುಂದೂರು ಮುರಳಿ ಮಾತನಾಡಿದರು. ವಿವಧ ಸಂಘಟನೆಯ 200ಕ್ಕೂ ಜನ ಲ್ಯಾಂಡ್ ಲಾರ್ಡ್ ಸಿನಿಮಾ ವೀಕ್ಷಿಸಿದರು.