ತುಮಕೂರು: ಶ್ರೀ ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಸಾಹೇ) ಇದೇ ಪ್ರಥಮ ಬಾರಿಗೆ ತುಮಕೂರಿನಲ್ಲಿ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪುರುಷ ನೆಟ್ಬಾಲ್ ಚಾಂಪಿಯನ್ಶಿಪ್ ಪಂದ್ಯಾವಳಿಯನ್ನು ಇಂದಿನಿಂದ ನಾಲ್ಕು ದಿನಗಳ ಕಾಲ (ಮಾರ್ಚ್ 12ರಿಂದ 15ರವರೆಗೆ) ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಕ್ರೀಡಾಂಗಣದಲ್ಲಿ ಚಾಲನೆ ನೀಡಲಾಯಿತು.
ಪಂದ್ಯಾವಳಿಯನ್ನು ಕರ್ನಾಟಕ ಸರ್ಕಾರದ ಗೃಹ ಸಚಿವರು ಹಾಗೂ ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ ಜಿ ಪರಮೇಶ್ವರ ಅವರು ಧ್ವಜಾರೋಹಣ ನೆರವೆರಿಸುವುದರ ಮೂಲಕ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪುರುಷ ನೆಟ್ಬಾಲ್ ಚಾಂಪಿಯನ್ಶಿಪ್ ಪಂದ್ಯಾವಳಿಗೆ ಚಾಲನೆ ನೀಡಿದರು.

ಮಧ್ಯಪ್ರದೇಶದ ಏಕಲವ್ಯ ವಿಶ್ವವಿದ್ಯಾಲಯ, ತುಮಕೂರು, ರಾಣಿ ಚೆನ್ನಮ್ಮ, ಬೆಂಗಳೂರು, ಕರ್ನಾಟಕ, ದಾವಣಗೆರೆ, ಮಂಗಳೂರು ವಿಶ್ವವಿದ್ಯಾಲಯ, ಕೇರಳದ ಮಹಾತ್ಮಗಾಂಧಿ ವಿಶ್ವವಿದ್ಯಾಲಯ, ಶಾತವಾಹನ ವಿಶ್ವವಿದ್ಯಾಲಯ, ಆಂಧ್ರದ ವಿಶ್ವವಿದ್ಯಾಲಯ, ರಾಜಸ್ಥಾನ, ಪುಣೆ, ಒಡಿಶಾ, ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ರಾಜ್ಯಗಳ ವಿಶ್ವವಿದ್ಯಾಲಯಗಳು ಪಥ ಸಂಚಲನದ ಮೂಲಕ ಕಾರ್ಯಕ್ರಮಕ್ಕೆ ಮೆರುಗು ತಂದವು.
ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪುರುಷ ನೆಟ್ಬಾಲ್ ಚಾಂಪಿಯನ್ಶಿಪ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಗೃಹ ಸಚಿವರು ಹಾಗೂ ಸಾಹೇ ವಿವಿ ಕುಲಾಧಿಪತಿಗಳಾದ ಡಾ ಜಿ.ಪರಮೇಶ್ವರ, ಸಾಹೇ ವಿವಿಯಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟ ಆಯೋಜಿಸಲಾಗಿದ್ದು, ವಿವಿಧ ರಾಜ್ಯಗಳಿಂದ ಆಗಮಿಸಿರುವ ತಂಡಗಳಿಗೆ ಶುಭ ಕೋರಿದರು.
ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪುರುಷ ನೆಟ್ಬಾಲ್ ಚಾಂಪಿಯನ್ಶಿಪ್ ಆಯೋಜಿಸಿರುವುದು ಸಂತಸದ ವಿಷಯ. ಪಂದ್ಯಾವಳಿಗೆ 53 ತಂಡಗಳು ಆಗಮಿಸಿವೆ. ಕ್ರೀಡಾ ಅಂದ ಮೇಲೆ ಗೆಲುವು ಸೋಲು ಸಹಜ. ಆದರೆ ಕ್ರೀಡೆಯಲ್ಲಿ ಭಾಗವಹಿಸುವುದು ಬಹಳ ಮುಖ್ಯ. ಮೊದಲ ನಾಲ್ಕು ಗೆದ್ದ ತಂಡಗಳಿಗೆ ಬಹುಮಾನ ನೀಡಲಾಗುವುದು ಎಂದರು.

ಬಾಲ್ಯದಲ್ಲಿ ಆಟವಾಡಿದ ಆಟಗಳ ನೆನಪಾಗುತ್ತಿದೆ ಎಂದು ಅವರು ಅಂತರ್ ರಾಜ್ಯ ಒಲಂಪಿಕ್ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದ ನೆನಪುಗಳನ್ನು ಮೆಲುಕು ಹಾಕಿದರು. ಜೊತೆಗೆ ಕ್ರೀಡೆ ಎನ್ನುವಂತಹದ್ದು ಎಲ್ಲರನ್ನು ಒಟ್ಟುಗೂಡಿಸುತ್ತದೆ, ಇದು ಐಕ್ಯತೆಯ ಸಂಕೇತವಾಗಿದೆ ಎಂದು ಎಲ್ಲಾ ಕ್ರೀಡಾ ಪಟುಗಳಿಗು ಶುಭ ಹಾರೈಸಿದರು.