ತುಮಕೂರು: ಜಿಲ್ಲೆಯ ಪತ್ರಕರ್ತರಿಗೆ ಹಾಗೂ ಅವರ ಕುಟುಂಬದ ಸದಸ್ಯರಿಗೆ ಕೆನರಾ ಬ್ಯಾಂಕ್ನ ಶೂನ್ಯ ಬ್ಯಾಲೆನ್ಸ್ ಗಿಗ್ ಸ್ಟಾರ್ ಉಳಿತಾಯ ಬ್ಯಾಂಕ್ ಖಾತೆ ತೆರೆಯುವ ಅಭಿಯಾನಕ್ಕೆ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಚಾಲನೆ ನೀಡಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆ ಹಾಗೂ ಕೆನರಾ ಬ್ಯಾಂಕ್ ಸಹಯೋಗದಲ್ಲಿ ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಗಿಗ್ ಸ್ಟಾರ್ ಉಳಿತಾಯ ಖಾತೆ ತೆರೆಯುವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್, ಗಿಗ್ ಸ್ಟಾರ್ ಯೋಜನೆಯಲ್ಲಿ ಖಾತೆದಾರರಿಗೆ ಬ್ಯಾಂಕ್ 4 ಲಕ್ಷ ರೂ.ವರೆಗೆ ಅಪಘಾತ ವಿಮಾ ಸೌಲಭ್ಯ, 35 ಲಕ್ಷ ರೂ. ವರೆಗೆ ಗೃಹ ಸಾಲ ಅಲ್ಲದೆ, 2 ಲಕ್ಷ ರೂ. ವರೆಗೂ ವಾಹನ ಸಾಲಸೌಲಭ್ಯ ನೀಡುವ ಯೋಜನೆ ರೂಪಿಸಿದೆ. ಜಿಲ್ಲೆಯ ಪತ್ರಕರ್ತರು ಯೋಜನೆಯ ಪ್ರಯೋಜನ ಪಡೆಯುವಂತೆ ತಿಳಿಸಿದರು.
ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ನಂತಹ ಕನಿಷ್ಟ ದಾಖಲಾತಿಗಳನ್ನು ಸಲ್ಲಿಸಿ ಶೂನ್ಯ ಬ್ಯಾಲೆನ್ಸ್ ಉಳಿತಾಯ ಖಾತೆ ತೆರೆಯಬಹುದು. ಇಎಸ್ಐ, ಪಿಎಫ್ ಹೊಂದಿಲ್ಲದ ಪತ್ರಕರ್ತರೂ ಈ ಸೌಲಭ್ಯ ಪಡೆಯಬಹುದು. ತಾಲ್ಲೂಕು ಪತ್ರಕರ್ತರೂ ಇದರ ಪ್ರಯೋಜನ ಪಡೆಯಬೇಕು ಎಂದು ಹೇಳಿದರು.
ಕೆನರಾ ಬ್ಯಾಂಕ್ನ ವ್ಯವಸ್ಥಾಪಕ ರಾಕೇಶ್ ಶರ್ಮಾ ಮಾತನಾಡಿ, ಕಾರ್ಮಿಕರು, ಸ್ವತಂತ್ರೋದ್ಯೋಗಿಗಳು ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಗಿಗ್ ಸ್ಟಾರ್ ಉಳಿತಾಯ ಖಾತೆಯಾಗಿದೆ. ಇದು ಉಚಿತ ಡೆಬಿಟ್ ಕಾರ್ಡ್, ಸಾಲದ ಪ್ರಯೋಜನಗಳು ಮತ್ತು 6 ಲಕ್ಷ ರೂ. ವರೆಗೆ ವಿಮಾ ರಕ್ಷಣೆ ಒಳಗೊಂಡಿದೆ. ಆನ್ಲೈನ್ ಬ್ಯಾಂಕಿಂಗ್ ಮತ್ತು ಕೆವೈಸಿ ಸೌಲಭ್ಯಗಳನ್ನು ಒದಗಿಸುತ್ತದೆ ಎಂದು ಹೇಳಿದರು.
ಕೆನರಾ ಬ್ಯಾಂಕಿನ ವಿಭಾಗೀಯ ವ್ಯವಸ್ಥಾಪಕ ರವಿಕುಮಾರ್, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಲ್.ಯೋಗೇಶ್, ಪ್ರಧಾನ ಕಾರ್ಯದರ್ಶಿ ಟಿ.ಇ.ರಘುರಾಮ್, ಉಪಾಧ್ಯಕ್ಷರಾದ ಜಯನುಡಿ ಜಯಣ್ಣ, ದಶರಥ, ಖಜಾಂಚಿ ಸತೀಶ್ ಹಾರೋಗೆರೆ, ಕಾರ್ಯದರ್ಶಿ ನಂದೀಶ್, ನಿರ್ದೇಶಕರಾದ ಜಗನ್ನಾಥ್ ಕಾಳೇನಹಳ್ಳಿ, ಮಾರುತಿ ಗಂಗಹನುಮಯ್ಯ, ಸುರೇಶ್ ವತ್ಸ, ಯೋಗೇಶ್, ಮಂಜುನಾಥಗೌಡ, ಹೇಮಂತ್, ಎ.ಎನ್.ರಘು, ಜಯಣ್ಣ ಬೆಳಗೆರೆ, ಮಧು ಇಂಗಳದಾಳ್, ಸುಪ್ರೀತ್ ಹಾಗೂ ಹಲವು ಪತ್ರಕರ್ತರು ಭಾಗವಹಿಸಿದ್ದರು.