ದಾಸೋಹ ದಿನವನ್ನು ಸರ್ಕಾರ ಅರ್ಥಪೂರ್ಣಗಾಗಿ ಆಚರಣೆ ಮಾಡಲಿ-ಬಿ.ವೈ. ವಿಜಯೇಂದ್ರ

ತುಮಕೂರು- ನಡೆದಾಡುವ ದೇವರೆಂದೇ ನಾಡಿನ ಉದ್ದಗಲಕ್ಕೂ ಪ್ರಸಿದ್ದರಾಗಿದ್ದ ಲಕ್ಷಾಂತರ ಮಕ್ಕಳಿಗೆ ದಾರಿದೀಪವಾಗಿದ್ದ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಪುಣ್ಯಸ್ಮರಣೆಯ ದಿನವನ್ನು ದಾಸೋಹ ದಿನವೆಂದು ಘೋಷಣೆ ಮಾಡಲಾಗಿದ್ದು, ಸರ್ಕಾರ ಈ ದಿನವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಬೇಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಇಂದಿಲ್ಲಿ ಹೇಳಿದರು.

ನಗರದ ಸಿದ್ದಗಂಗಾ ಮಠಕ್ಕೆ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ 6ನೇ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ಭೇಟಿ ನೀಡಿ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಅಪೇಕ್ಷೆಯಂತೆ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶ್ರೀಗಳ ಪುಣ್ಯಸ್ಮರಣೆಯ ದಿನವನ್ನು ದಾಸೋಹ ದಿನ ಎಂದು ಘೋಷಣೆ ಮಾಡಿದ್ದರು. ಆದರೆ ದಾಸೋಹ ದಿನ ಘೋಷಣೆಗೆ ಮಾತ್ರ ಸಮೀತವಾಗಿದೆ. ಇದನ್ನು ಘೋಷಣೆ ಮಾಡಿದರೆ ಮಾತ್ರ ಸಾಕಾಗಲ್ಲ, ಅರ್ಥವಾಗಿ ಆಚರಿಸಬೇಕು. ಈ ಕಾರ್ಯ ಆಗಬೇಕು ಎಂಬುದು ಕೋಟ್ಯಂತರ ಭಕ್ತರ ಮನದಲ್ಲಿದೆ. ಮುಂದಿನ ದಿನಗಳಲ್ಲಿ ದಾಸೋಹ ದಿನ ಆಚರಣೆಯಾಗುತ್ತದೆ ಎನ್ನುವ ವಿಶ್ವಾಸ ತಮಗಿದೆ ಎಂದರು.

ಸರ್ಕಾರದ ಬಗ್ಗೆ ಟೀಕೆ ಮಾಡಲು ನಾನು ಹೋಗುವುದಿಲ್ಲ. ಭಗವಂತ ಯಾವಾಗ ಬುದ್ದಿ ಕೊಡುತ್ತಾನೋ ಆಗಲೇ ದಾಸೋಹ ದಿನ ಅರ್ಥಪೂರ್ಣವಾಗಿ ಆಚರಣೆ ಮಾಡಲಿ ಎಂದು ಅವರು ಹೇಳಿದರು.

ಶ್ರೀಗಳ ಹುಟ್ಟೂರಾದ ವೀರಾಪುರದಲ್ಲಿ ಅವರ 111 ಅಡಿ ಎತ್ತರದ ಪ್ರತಿಮೆ ನಿರ್ಮಿಸಲು ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದ ವೇಳೆ ಹಣ ನೀಡಿದ್ದರು. ಆ ಕೆಲಸ ಇನ್ನೂ ಪೂರ್ಣವಾಗದೆ ನೆನೆಗುದಿಗೆ ಬಿದ್ದಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ಗಮನ ಹರಿಸಿ ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಹಕಾರ ನೀಡಬೇಕು ಎಂದು ವಿಜಯೇಂದ್ರ ಮನವಿ ಮಾಡಿದರು.

ವೀರಾಪುರದಲ್ಲಿ ಭಕ್ತರ ಒತ್ತಾಸೆಯಂತೆ ಆದಷ್ಟು ಬೇಗ ಪುತ್ಥಳಿ ನಿರ್ಮಾಣ ಕಾರ್ಯವನ್ನು ಸರ್ಕಾರ ಪೂರ್ಣಗೊಳಿಸಲಿ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಶಾಸಕರ ಸುರೇಶ್‍ಗೌಡ, ಜ್ಯೋತಿಗಣೇಶ್, ಸಿದ್ದಗಂಗಾ ಆಸ್ಪತ್ರೆಯ ಡಾ. ಎಸ್. ಪರಮೇಶ್, ರುದ್ರೇಶ್, ಹೆಚ್.ಎನ್. ದೀಪಕ್, ಮರಿಯಣ್ಣ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *