ತುಮಕೂರು: ಹಿಂದು ಎಂಬುದು ಒಂದು ಜೀವನ ವಿಧಾನವೇ ಹೊರತು,ಅದು ಧರ್ಮವಲ್ಲ.ಲಿಂಗಾಯಿತ ಎಂಬುದು ಜಗಜ್ಯೋತಿ ಬಸವೇಶ್ವರರಿಂದ ಸ್ಥಾಪಿಸಲ್ಪಟ್ಟ ಧರ್ಮವಾಗಿದ್ದು,ವಚನ ಸಾಹಿತ್ಯವೇ ಧರ್ಮ ಗ್ರಂಥವಾಗಿದೆ ಎಂದು ಮಂಡರಗಿಯ ನಿಷ್ಕಲ ಮಠದ ಶ್ರೀ ನಿಜಗುಣಪ್ರಭುಸ್ವಾಮೀಜಿ ತಿಳಿಸಿದರು.
ನಗರದ ಶ್ರೀಸಿದ್ದಿವಿನಾಯಕ ಸಮುದಾಯಭವನದಲ್ಲಿ ಕರ್ನಾಟಕ ರಾಜ್ಯ ಲಿಂಗಾಯಿತ ಮಠಾಧೀಶರ ಒಕ್ಕೂಟದಿಂದ ಆಯೋಜಿಸಿದ್ದ ಬಸವ ಸಂಸ್ಕøತಿ ಆಭಿಯಾನದ ಅಂಗವಾಗಿ ಬೆಳಗಾವಿಯ ಶ್ರೀ ಡಾ.ಮಹಂತ ಪ್ರಭು ಸ್ವಾಮೀಜಿಗಳ ನೇತೃತ್ವದಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿಗಳೊಂದಿಗೆ ವಚನ ಸಂವಾದ ಕಾರ್ಯಕ್ರಮದಲ್ಲಿ ನಗರದ ಎಸ್.ಆರ್.ಎಸ್ ಕಾಲೇಜಿನ ವಿದ್ಯಾರ್ಥಿಯೊಬ್ಬಳ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು,ಬಸವಣ್ಣ ಲಿಂಗಾಯಿತರಿಗೆ ಸಿಮೀತವಲ್ಲ. ಸಕಲರಿಗೆ ಒಳಿತನ್ನೇ ಬಯಸುವುದೇ ನಿಜವಾದ ಧರ್ಮ,ಆದೇ ಬಸವ ಧರ್ಮ ಅಥವಾ ಲಿಂಗಾಯಿತ ಧರ್ಮ. ಹಾಗಾಗಿ ಲಿಂಗಾಯಿತ ಪ್ರತ್ಯೇಕ ಧರ್ಮ ಎಂದು ಸ್ಪಷ್ಟಪಡಿಸಿದರು.
ಮಠಕ್ಕೆ ಭಕ್ತರು ನೀಡುವ ಕಾಣಿಕೆ ಪಡೆಯುವ ಸಂದರ್ಭದಲ್ಲಿ ಇದು ಒಳ್ಳೆಯ ದಾರಿಯಲ್ಲಿ ಸಂಪಾದನೆ ಮಾಡಿದ್ದೆ ಇಲ್ಲವೇ ಎಂದು ಸ್ವಾಮೀಜಿಗಳು ಪ್ರಶ್ನೆ ಮಾಡಿದ್ದೀರ ಎಂಬ ವಿದ್ಯಾರ್ಥಿನಿಯೊಬ್ಬಳ ಪ್ರಶ್ನೆಗೆ ಉತ್ತರ ನೀಡಿದ ನಿಜಗುಣನಂದಶ್ರೀಗಳು, ಮಠಕ್ಕೆ ಕಾಣಿಕೆ ನೀಡುವ ಪ್ರತಿಯೊಬ್ಬರನ್ನು ಪ್ರಶ್ನಿಸಿ ಖಚಿತ ಪಡಿಸಿಕೊಳ್ಳುವುದು ಕಷ್ಟ ಸಾಧ್ಯ. ದಾನವು ಸತ್ಯ,ಶುದ್ದ ಕಾಯಕದಿಂದ ಕೂಡಿದ್ದರೆ ಅದು ಲಿಂಗಕ್ಕೆ ಅರ್ಪಿತ ಎಂದು ಬಸವಣ್ಣನವರೇ ಹೇಳಿದ್ದಾರೆ. ಆದರೆ ತಾಯಂದಿರು ಮನಸ್ಸು ಮಾಡಿ, ತಮ್ಮ ಗಂಡಂದಿರು ದುಡಿದು ತರುವ ಆದಾಯವನ್ನು ಇದು ಒಳ್ಳೆಯ ಮಾರ್ಗದಲ್ಲಿ ದುಡಿದ್ದೋ, ಇಲ್ಲವೋ ಎಂದು ಪ್ರಶ್ನಿಸಿದರೆ ದೇಶದಲ್ಲಿ ನಡೆಯುವ ಅರ್ಧದಷ್ಟು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬಹುದು.ಈ ನಿಟ್ಟಿನಲ್ಲಿ ತಾಯಂದಿರು ಮುನ್ನುಡಿ ಬರೆಯಬೇಕೆಂದರು.
ಲಿಂಗಾಯಿತ ಮಠಾಧೀಶರಲ್ಲಿ ತಾತ್ವಿಕ ಭಿನ್ನಾಭಿಪ್ರಾಯಗಳಿವೆ.ಹಾಗಾಗಿ ಸುಮಾರು 200ಕ್ಕೂ ಹೆಚ್ಚು ಲಿಂಗಾಯಿತ ಮಠಾಧೀಶರು ಬಸವ ಸಂಸ್ಕøತಿ ಅಭಿಯಾನದ ಹೆಸರಿನಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ, ಜನರಲ್ಲಿಗೆ ಸತ್ಯವನ್ನು ತಿಳಿಸುವ ಸಲುವಾಗಿ ಇಂತಹ ಅಭಿಯಾನ ನಡೆಸುತ್ತಿದ್ದೇವೆ.ಈ ಅಭಿಯಾನದ ಒಟ್ಟು ಉದ್ದೇಶ.ಲಿಂಗಾಯಿತ ಧರ್ಮಕ್ಕೆ ಬಸವಣ್ಣನೇ ಗುರು, ವಚನವೇ ಗ್ರಂಥ.ಕಸಾಯ ವಸ್ತ್ರ ತ್ಯಾಗದ ಸಂಕೇತ.ಇದನ್ನು ಇಂತಹವರೇ ಧರಿಸಬೇಕೆಂದಿನಿಲ್ಲ.ಜನರಲ್ಲಿ ವೈಜ್ಞಾನಿಕ, ವೈಚಾರಿಕ ಭಾವನೆಯನ್ನು ಮೂಡಿಸುವ ಸಲುವಾಗಿ, ಕಾಯಕ, ದಾಸೋಹದ ಮಹತ್ವವನ್ನು ಪ್ರಚುರ ಪಡಿಸುವ ಸಲುವಾಗಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.ಇದು 26ನೇ ಜಿಲ್ಲೆಯಾಗಿದೆ ಎಂದರು.
ತಸ್ಮೀಯ ಎಂಬ ಯುವತಿಯ ದಾಸೋಹ ಪರಿಕಲ್ಪನೆಯ ಮಹತ್ವ ಕುರಿತ ಪ್ರಶ್ನೆಗೆ ಉತ್ತರ ನೀಡಿದ ಕೂಡಲಸಂಗಮದ ಬಸವ ಧರ್ಮ ಪೀಠದ ಡಾ.ಗಂಗಾಮಾತಾಜಿ,ಸತ್ಯ,ಶುದ್ದ ಕಾಯಕದಿಂದ ಗಳಿಸಿದ್ದನ್ನು,ಇಲ್ಲದವರಿಗೆ ಹಂಚುವುದು ದಾಸೋಹ. ಅದು ಅನ್ನ,ಅಕ್ಷರ, ಆಶ್ರಯ ಎಲ್ಲವೂ ದಾಸೋಹದ ಪ್ರತೀಕವೇ ಆಗಿವೆ.ಹಾಗಾಗಿಯೇ ಸಾವಿರಾರು ಮಕ್ಕಳಿಗೆ ಅನ್ನ, ಅಕ್ಷರ, ಆಶ್ರಯ ನೀಡಿದ ಡಾ.ಶ್ರೀಶಿವಕುಮಾರಸ್ವಾಮೀಜಿಗಳನ್ನು ತ್ರಿವಿಧ ದಾಸೋಹಿ ಎಂದು ಕರೆಯಲಾಗುತಿತ್ತು.ಕಾಯಕ, ದಾಸೋಹ, ಅಂತರಜಾತಿ ವಿವಾಹಗಳಂತಹ ಕ್ರಾಂತಿಕಾರಿ ಕೆಲಸಗಳಿಂದ ವಿಚಲಿತರಾದ ಸಂಪ್ರದಾಯವಾದಿಗಳು, ಬಿಜ್ಜಳ ಮತ್ತು ಬಸವಣ್ಣನ ನಡುವೆ ವೈಮನಸ್ಸು ಉಂಟಾಗುವಂತೆ ಹುನ್ನಾರ ನಡೆಸಿದರು ಎಂದರು.
ಶರಣರು ಜನರನ್ನು ಅರ್ಥಿಕತೆಯನ್ನು ಹೆಚ್ಚಿಸುವ ಬದಲು, ಶಿಕ್ಷಣದ ಮೂಲಕ ಅರಿವನ್ನು ಹೆಚ್ಚಿಸುವ ಕೆಲಸ ಮಾಡಿದರು.ಮಠ ಮಾನ್ಯಗಳು ಐಟಿಐ, ಡಿಪ್ಲಮೋ ದಂತಹ ಶಾಲಾ, ಕಾಲೇಜುಗಳನ್ನು ತೆರೆದು ಜ್ಞಾನದ ಜೊತೆಗೆ, ಬದುಕಿಗೆ ದಾರಿ ಕಲ್ಪಿಸಿದರು,
ಜನ ಕಲ್ಯಾಣವೇ ಲಿಂಗಾಯಿತ ಧರ್ಮದ ಉದ್ದೇಶ.ಎಲ್ಲರೂ ಅಂಗೈಯಲ್ಲಿ ಇಷ್ಟಲಿಂಗವನ್ನಿಟ್ಟು ಪೂಜಿಸುವ ಅವಕಾಶ ಕಲ್ಪಿಸಿ, ಸಮಾಜದಲ್ಲಿ ಮೇಲು, ಕೀಳು, ಬಡವ, ಬಲ್ಲಿದ, ಹೆಣ್ಣು, ಗಂಡ ಎಂಬ ಭೇಧ ಭಾವ ಹೋಗಲಾಡಿಸಲು ಬಸವಾದಿ ಶರಣರು ಪ್ರಯತ್ನಿಸಿದ್ದರು ಎಂದು ಬಾಲ್ಕಿಯ ಡಾ.ಶ್ರೀಬಸವಲಿಂಗ ಪಟ್ಟದೇವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸವ ಸಂಸ್ಕøತಿ ಅಭಿಯಾನದ ತುಮಕೂರು ಜಿಲ್ಲಾಧ್ಯಕ್ಷರಾದ ಬೆಟ್ಟದಹಳ್ಳಿ ಗವಿಮಠದ ಶ್ರೀಚಂದ್ರಶೇಖರಸ್ವಾಮೀಜಿ ವಹಿಸಿದ್ದರು.ಗದಗದ ಡಾ.ಶ್ರೀತೊಂಟದ ಸಿದ್ದರಾಮ ಸ್ವಾಮೀಜಿ, ತಮ್ಮಡಿಹಳ್ಳಿಯ ಡಾ.ಶ್ರೀಅಭಿನವ ಮಲ್ಲಿಕಾರ್ಜುನಸ್ವಾಮೀಜಿ,ಬೆಳ್ಳಾವೆಯ ಶ್ರೀಕಾರದ ವೀರಬಸವ ಸ್ವಾಮೀಜಿ,ಯಳನಾಡು ಮಠದ ಶ್ರೀಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ,ಮಾಜಿ ಸಚಿವರಾದ ಸೊಗಡು ಶಿವಣ್ಣ,ವಿದ್ಯಾವಾಹಿನಿ ಸಂಸ್ಥೆಯ ಕಾರ್ಯದರ್ಶಿ ಎನ್.ಬಿ.ಪ್ರದೀಪ ಕುಮಾರ್, ರೂಪ್ಸಾ ಅಧ್ಯಕ್ಷ ಡಾ.ಹಾಲೇನೂರು ಲೇಪಾಕ್ಷ, ಕೆಂಪಣ್ಣಗೌಡರ್, ಡಾ.ಡಿ.ಎನ್.ಯೋಗೀಶ್ವರಪ್ಪ, ಸಾಗರನಹಳ್ಳಿ ಪ್ರಭು ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಾವಿರಾರು ವಿದ್ಯಾರ್ಥಿಗಳು ಸಂವಾದದಲ್ಲಿ ಪಾಲ್ಗೊಂಡಿದ್ದರು.