ಮಾರ್ಚ್ 25-ಒಳಮೀಸಲಾತಿಯಿಲ್ಲದೆ ನೇಮಕಾತಿ ವಿರೋಧಿಸಿ ಮಾದಿಗ ಸಮುದಾಯದಿಂದ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ

ತುಮಕೂರು- ಒಳ ಮೀಸಲಾತಿ ಇಲ್ಲದೆ ಸರಕಾರಿ ಉದ್ಯೋಗ ನೇಮಕ ಮಾಡಲು ಆದೇಶ ಹೊರಡಿಸಿರುವ ಸರಕಾರದ ಕ್ರಮವನ್ನು “ಮಾದಿಗ ಸಂಘಟನೆಗಳ ಒಕ್ಕೂಟ” ವಿರೋಧಿಸಿ,ಮಾ.25 ರಂದು ರಾಜ್ಯದ ಎಲ್ಲಾ 31 ಜಿಲ್ಲೆಯ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಬೃಹತ್ ಪ್ರತಿಭಟನೆ ಹಾಗೂ ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಹಾಕಲು ತೀರ್ಮಾನಿಸಿದೆ ಎಂದು ಪಾಲನಹಳ್ಳಿ ಮಠದ ಶ್ರೀಸಿದ್ದರಾಜು ಸ್ವಾಮಿಜಿಗಳು ತಿಳಿಸಿದ್ದಾರೆ.

ಮಾದಿಗ ಸಂಘಟನೆಗಳ ಒಕ್ಕೂಟದಿಂದ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,35 ವರ್ಷಗಳಿಂದ ರಾಜ್ಯಾದ್ಯಂತ ನಿರಂತರ ಹೋರಾಟ ನಡೆಸಿದ್ದೇವೆ. ಸುಪ್ರೀಂ ಕೋರ್ಟ್ ಪರಿಶಿಷ್ಟ ಮೀಸಲಾತಿ ವರ್ಗೀಕರಿಸಲು ರಾಜ್ಯ ಸರಕಾರಕ್ಕೆ ಅಧಿಕಾರವಿದೆ ಎಂದು ಐತಿಹಾಸಿಕ ತೀರ್ಪು ನೀಡಿತು ಹಾಗೂ ಸರಕಾರ ದತ್ತಾಂಶ ಸಂಗ್ರಹಿಸಿ ವರ್ಗೀಕರಿಸಲಿ ಎಂದು ಐತಿಹಾಸಿಕ ತೀರ್ಪು ನೀಡಿತು. ರಾಜ್ಯ ಸರಕಾರ ನಿ.ನ್ಯಾ,ನಾಗಮೋಹನ್ ದಾಸ್ ಆಯೋಗ ರಚಿಸಿ ವರದಿ ಪಡೆದು ಸಚಿವ ಸಂಪುಟದಲ್ಲಿ ಅನುಮೋಧಿಸಿತು. ಆ ನಂತರ ವಿಧಾನ ಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಮಸೂದೆ ಅಂಗೀಕರಿಸಿ ರಾಜ್ಯಪಾಲರ ಸಹಿ ನಂತರ ವಿಧೇಯಕವಾಗಿದೆ.ಆದರೆ ಸರಕಾರ ಯಾರೋ ಕೆಲವರು ಮಾಡುವ ವಿರೋಧವನ್ನು ಪರಿಗಣಿಸಿ, ಬಹುಸಂಖ್ಯಾತರಾಗಿರುವ ಮಾದಿಗರ ಹಿತವನ್ನು ಕಡೆಗಣಿಸುತ್ತಿದೆ.ಸರಕಾರದ ನಡೆಯನ್ನು ವಿರೋಧಿಸಿ ಮಾಚ್.25ರಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿಯ ಜೊತೆಗೆ, ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಮನೆ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಕೋಡಿಹಳ್ಳಿ ಆದಿ ಜಾಂಭವ ಮಠದ ಶ್ರೀಶಿವಮುನಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ,ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರ ಮಾದಿಗ ವಿರೋಧಿಯಾಗಿದೆ.ಕಾಂಗ್ರೆಸ್ ಸರಕಾರ ಆರಂಭದಿಂದಲು ಒಳಮೀಸಲಾತಿ ಸರಕಾರ ಹಾಗೂ ಮುಖ್ಯಮಂತ್ರಿ ಮಾನ್ಯ ಶ್ರೀ.ಸಿದ್ದರಾಮಯ್ಯನವರು ಒಳಮೀಸಲಾತಿ ವಿರೋಧಿಗಳ ರಾಜಕೀಯ ಒತ್ತಡದ ಪ್ರಭಾವಕ್ಕೆ ಒಳಗಾಗಿದ್ದಾರೆ. ಒಳಮೀಸಲಾತಿ ಜಾರಿ ಮಾಡಲು ವಿಶೇಷ ಸಚಿವ ಸಂಪುಟದ ದೀರ್ಘ ಚರ್ಚೆಯ ಅಗತ್ಯವಿಲ್ಲ. ಯಾವ ಕೋರ್ಟ್ ತಡೆಯಾಜ್ಞೆ ಹಾಗೂ ತಾಂತ್ರಿಕ ಅಡಚಣೆಗಳಿಲ್ಲ. ಅಡಚಣೆ ಇರುವುದು ಸರಕಾರದಲ್ಲಿ ಆದ್ದರಿಂದ ಮುಖ್ಯಮಂತ್ರಿಗಳು ಸಮರ್ಥ ಹಾಗೂ ನಿಷ್ಟುರ ನಿರ್ಧಾರ ಮಾಡಬೇಕಿದೆ.ಒಳಮೀಸಲಾತಿ ವಿರೋಧಿಗಳ ಷಡ್ಯಂತ್ರದಿಂದ ಸರಕಾರ ವಿಳಂಭ ಧೋರಣೆ ಅನುಸರಿಸಿದೆ. ಹಾಗಾಗಿ ಒಳಮೀಸಲಾತಿ ಜಾರಿ ವಿರುದ್ಧದ ಧ್ವನಿಗಟ್ಟಿಗೊಳಿಸಿ ಮತ್ತಷ್ಟು ಕಗ್ಗಂಟಾಗಿಸಿ ವಿವಾದವನ್ನು ಉಲ್ಲಣಗೊಳಿಸಿದೆ.ಸರಕಾರ ಮಾರ್ಚ್ 27 ರ ಸಚಿವ ಸಂಪುಟದ ಸಭೆಯಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ, ಆದಿಜಾಂಭವ ಸಮುದಾಯಕ್ಕೆ ಸೇರಿದ ಎಲ್ಲಾ ಮಠಾಧೀಶರು ಒಗ್ಗೂಡಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದರು.

ಆರ್.ಪಿ.ಐನ ರಾಷ್ಟ್ರೀಯ ಅಧ್ಯಕ್ಷ ಹಾಗೂ ಡಿಎಸ್‍ಎಸ್ ನ ರಾಜ್ಯಾಧ್ಯಕ್ಷ ಡಾ.ಎನ್.ಮೂರ್ತಿ ಮಾತನಾಡಿ,ಸಂವಿಧಾನ ವಿರೋಧಿಸುವವರು ಹಾಗೂ ಒಳ ಮೀಸಲಾತಿ ಬಿ.ಆರ್.ಅಂಬೇಡ್ಕರ್ ರವರಿಗೆ ಅಪಮಾನ ಮಾಡುತ್ತಿದ್ದಾರೆ. ಒಳಮೀಸಲಾತಿ ಜಾರಿ ಮಾಡದೆ ಉದ್ಯೋಗ ನೇಮಕಾತಿ ಮಾಡುವುದು ಅಸಂವಿಧಾನಿಕ, ಅವೈಜ್ಞಾನಿಕ ಹಾಗೂ ಕಾನೂನು ಬಾಹಿರವಾಗಿದೆ. ಒಳ ಮೀಸಲಾತಿಯಿಲ್ಲದೆ ಉದ್ಯೋಗ ನೇಮಕಾತಿ ಮಾಡುವುದು ಮಾದಿಗ ಸಮುದಾಯಕ್ಕೆ ಮರಣ ಶಾಸನವಾಗಿದೆ.ಉದ್ಯೋಗ ನೇಮಕಾತಿಗಳಲ್ಲಿ ಒಳಮೀಸಲಾತಿ ಅಳವಡಿಸಿ 101 ಪರಿಶಿಷ್ಟ ಜಾತಿಗಳಿಗೆ ಅಯಾ ಜಾತಿಗಳ ಜನಸಂಖ್ಯೆಗನುಗುಣವಾಗಿ ಉದ್ಯೋಗ ಹಂಚಿಕೆ ಮಾಡಿ ಸಾಮಾಜಿಕ ನ್ಯಾಯ ಕಲ್ಪಿಸಲಿ. ಆದ್ದರಿಂದ ಮಾದಿಗ ಹಾಗೂ ಸಂಬಂಧಿತ ಜಾತಿಗಳ 50ಕ್ಕೂ ಹೆಚ್ಚು ಸಂಘಟನೆಗಳು ಒಟ್ಟಿಗೆ ರಚಿಸಿರುವ ಮಾದಿಗ ಸಂಘಟನೆ ಒಕ್ಕೂಟದ ನೇತೃತ್ವದಲ್ಲಿ ಜಂಟಿಯಾಗಿ ಮಾರ್ಚ್ 25 ರಂದು ರಾಜ್ಯಾದ್ಯಂತ ಎಲ್ಲಾ 31 ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಭಾರಿ ಬೃಹತ್ ಪ್ರತಿಭಟನೆ ಹಾಗೂ ಬೆಂಗಳೂರಿನಲ್ಲಿ ಮೌರ್ಯವೃತ್ತ (ಗಾಂಧಿ ಪ್ರತಿಮೆ) ಗಾಂಧಿನಗರ ಇಲ್ಲಿಂದ ಬೆಳಗ್ಗೆ ಮುಖ್ಯಮಂತ್ರಿಗಳವರ ನಿವಾಸಕ್ಕೆ ಭಾರಿ ರ?ಯಾಲಿ ನಡೆಸಿ ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾದಿಗ ದಂಡೋರ ಮುಖಂಡರಾದ ಕೃಷ್ಣಪ್ಪ, ಗೌರವಾಧ್ಯಕ್ಷ ಕೇಶವಮೂರ್ತಿ, ಡಾ.ಭೀಮರಾಜು, ಪಿ.ಎನ್.ರಾಮಯ್ಯ, ಸಿದ್ದರಾಜು, ಮಂಜುನಾಥ್.ಜಿ.ಕೆ, ಭೈಲಹೊನ್ನಯ್ಯ, ಹುಸೇನಪ್ಪಸ್ವಾಮಿ, ಶಿವರಾಜ್ ಅಕ್ಕರಕ್ಕಿ ಮುನಿರಾಜು, ಜಗದೀಶ್, ಎ.ಸುನಿಲ್, ಹರಿನಾಥ್, ಎ.ನಾಗೇಶ್, ಚಂದ್ರಯ್ಯ, ಗೌರಮ್ಮ, ಲಕ್ಷ?ಮಮ್ಮ, ಮಂಜುನಾಥ್, ರಂಗನಾಥ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *