ಪಟೇಲರ ದೇಶಪ್ರೇಮ ಯುವಜನರಿಗೆ ಸ್ಫೂರ್ತಿಯಾಗಲಿ: ಸಚಿವ ಸೋಮಣ್ಣ

ತುಮಕೂರು: ಭಾರತದ ಒಕ್ಕೂಟ ವ್ಯವಸ್ಥೆಗೆ ಮೂಲ ಕಾರಣರಾಗಿರುವ ಸರ್ದಾರ್ ವಲ್ಲಭಾಭಾಯಿ ಪಟೇಲ್ ಅವರ ಕನಸಾದ ಐಕ್ಯ, ಬಲಿಷ್ಠ ಮತ್ತು ಸ್ವಾವಲಂಬಿ ಭಾರತವನ್ನು ನಿರ್ಮಾಣದ ಅವರ ಸಂಕಲ್ಪ ಯುವಜನರಿಗೆ ಸ್ಫೂರ್ತಿದಾಯಕವಾಗಲಿ. ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಲಿ ಎಂದು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.

ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮ ವಾರ್ಷಿಕೋತ್ಸವದ ಸ್ಮರಣಾರ್ಥ ಶುಕ್ರವಾರ ನಗರದ ವಿಶ್ವವಿದ್ಯಾಲಯ ಬಳಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಏಕತಾ ದಿವಸ್ ಆಚರಣೆ ಕಾರ್ಯಕ್ರಮದಲ್ಲಿ ವಲ್ಲಭಭಾಯಿ ಪಟೇಲರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಏಕತಾ ಮೆರವಣಿಗೆಗೆ ಚಾಲನೆ ನೀಡಿದರು. ಈ ವೇಳೆ ಸ್ವದೇಶಿ ಉತ್ಪನ್ನಗಳ ಬಳಕೆ, ಪ್ರೋತ್ಸಾಹ ಸಂಬಂಧ ಪ್ರತಿಜ್ಞಾವಿಧಿ ಬೋಧಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ವಿ.ಸೋಮಣ್ಣ, ಸ್ವಾತಂತ್ರ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ವಲ್ಲಭಭಾಯಿ ಪಟೇಲರು ಸ್ವಾತಂತ್ರ್ಯ ನಂತರ ಹರಿದುಹಂಚಿಹೋಗಿದ್ದ ಪ್ರದೇಶಗಳನ್ನು ದೇಶದಲ್ಲಿ ಏಕೀಕರಣಗೊಳಿಸುವ ಕಾರ್ಯದಲ್ಲಿ 550ಕ್ಕೂ ಹೆಚ್ಚು ರಾಜಪ್ರಭುತ್ವದ ರಾಜ್ಯಗಳನ್ನು ಭಾರತೀಯ ಒಕ್ಕೂಟಕ್ಕೆ ಸೇರಿಸುವ ಪ್ರಯತ್ನದಲ್ಲಿ ಸಫಲರಾದರು ಎಂದರು.

ಭಾರತದ ಮೊದಲ ಉಪ ಪ್ರಧಾನ ಮಂತ್ರಿಯಾಗಿ, ಗೃಹ ಸಚಿವರಾಗಿ ಅಖಿಲ ಭಾರತ ಸೇವಾ ವ್ಯವಸ್ಥೆಯನ್ನು ಬಲಿಷ್ಠವಾಗಿ ಸ್ಥಾಪನೆಯಾಗಲು ಕಾರಣರಾದರು. ಬಾರ್ಡೋಲಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ತಮ್ಮ ನಾಯಕತ್ವಕ್ಕಾಗಿ ಸರ್ದಾರ್ ಎಂಬ ಬಿರುದು ಪಡೆದರು. ಭಾರತ ರಾಷ್ಟ್ರೀಯ ಏಕೀಕರಣದ ಬಗ್ಗೆ ರಾಜೀಯಾಗದ ಅಜೇಯ ಮನೋಭಾವಕ್ಕಾಗಿ ಉಕ್ಕಿನ ಮನುಷ್ಯ ಎಂಬ ಬಿರುದು ಪಡೆದರು. ಸರ್ದಾರ್ ವಲ್ಲಭಭಾಯಿ ಪಟೆಲರ 150ನೇ ಜನ್ಮ ವಾರ್ಷಿಕೋತ್ಸವವನ್ನು ದೇಶಾದ್ಯಂತ ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತದೆ. ಈ ಅಭಿಯಾನವು ಯುವಕರಲ್ಲಿ ಏಕತೆ, ದೇಶಭಕ್ತಿ ಮತ್ತು ನಾಗರೀಕ ಜವಾಬ್ದಾರಿಯ ಮನೋಭಾವವನ್ನು ಉಂಟುಮಾಡುವುದರೊಂದಿಗೆ ಭಾರತದ ವಿಭಜಿತ ಪ್ರದೇಶಗಳನ್ನು ಒಂದೇ ರಾಷ್ಟ್ರವಾಗಿ ಏಕೀಕೃತಗೊಳಿಸಿದ ಪಟೇಲ್ ಅವರ ಪರಂಪರೆಯನ್ನು ಗೌರವಿಸಲಾಗುವುದು. ಈ ಅಭಿಯಾನದ ಮೂಲಕ ಯುವಕರನ್ನು ಸಾಮಾಜಿಕವಾಗಿ ಪಾಲ್ಗೊಳ್ಳುವಿಕೆಯಲ್ಲಿ ಏಕ ಭಾರತ್ ಆತ್ಮನಿರ್ಭರ ಭಾರತ್ ಎಂಬ ಆದರ್ಶಗಳನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸಲಾಗಿದೆ ಎಂದು ಸಚಿವ ವಿ.ಸೋಮಣ್ಣ ಹೇಳಿದರು.

ಜಿಲ್ಲಾಡಳಿತದ ವಿರುದ್ಧ ಸೋಮಣ್ಣ ಆಕ್ರೋಶ


ಸರ್ದಾರ್ ವಲ್ಲಭಭಾಯಿ ಪಟೇಲರ 150ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ದೇಶಾದ್ಯಂತ ದೇಶದ ಏಕತೆ, ಸಮಗ್ರತೆಗೆ ಬಗ್ಗೆ ಕಾರ್ಯಕ್ರಮಗಳು ನಡೆಯುತ್ತಿರುವಾಗ ಜಿಲ್ಲಾಡಳಿತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೆ ಕಡೆಗಣಿಸಿದೆ ಎಂದು ಸಚಿವ ಸೋಮಣ್ಣ ಆಕ್ರೋಶ ವ್ಯಕ್ತಪಡಿಸಿದರು.

ದೇಶವಿದ್ದರೆ ನಾವು, ಮೊದಲು ದೇಶ ಆಮೇಲೆ ಉಳಿದ ವಿಚಾರ. ದೇಶದ ವಿಚಾರದಲ್ಲಿ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ಕಾರ್ಯಕ್ರಮವೆಂಬ ಭೇದ ಮಾಡಬಾರದು. ಕಾರ್ಯಕ್ರಮದ ಬಗ್ಗೆ ತಾವು ಜಿಲ್ಲಾಧಿಕಾರಿಗಳಿಗೆ ಮೊದಲೇ ಮಾತನಾಡಿದ್ದೆ. ಅವರು ಭಾಗವಹಿಸದೆ ನಿರ್ಲಕ್ಷ ಮಾಡಿದ್ದಾರೆ. ಈ ಬಗ್ಗೆ ತಾವು ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರ ಬರೆಯುವುದಾಗಿ ಹೇಳಿದರು.

ಸಚಿವ ವಿ.ಸೋಮಣ್ಣ, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಬಿ.ಸುರೇಶ್‍ಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ, ತುಮಕೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ವೆಂಕಟೇಶ್ವರಲು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಂತರ ಆರಂಭವಾದ ಏಕತಾ ಮೆರವಣಿಗೆ ಶಿವಕುಮಾರಸ್ವಾಮೀಜಿ ವೃತ್ತ, ಭದ್ರಮ್ಮ ವೃತ್ತ, ಚಾಮುಂಡೇಶ್ವರಿ ದೇವಸ್ಥಾನದ ರಸ್ತೆ, ಕೆಇಬಿ ರಸ್ತೆ ಮೂಲಕ ಸಾಗಿ ವಿಶ್ವವಿದ್ಯಾಲಯದಲ್ಲಿ ಸಮಾಗಮಗೊಂಡಿತು. ರಾಷ್ಟ್ರಗೀತೆ ಹಾಡಿ ಕಾರ್ಯಕ್ರಮವನ್ನು ಪೂರ್ಣಗೊಳಿಸಲಾಯಿತು.

ಸಚಿವ ಸೋಮಣ್ಣ ಅವರೊಂದಿಗೆ ಶಾಸಕರಾದ ಜ್ಯೋತಿಗಣೇಶ್, ಸುರೇಶ್‍ಗೌಡ, ವಿಧಾನಪರಿಷ್ ಮಾಜಿ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವೈ.ಹೆಚ್.ಹುಚ್ಚಯ್ಯ, ರಾಜ್ಯ ರೈತಮೋರ್ಚಾ ಉಪಾಧ್ಯಕ್ಷ ಬ್ಯಾಟರಂಗೇಗೌಡ, ರಾಜ್ಯ ಕಾರ್ಯದರ್ಶಿ ಅಂಬಿಕಾ ಹುಲಿನಾಯ್ಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ್‍ಗೌಡ, ಕಾರ್ಯದರ್ಶಿ ಹೆಚ್.ಎಂ.ರವೀಶಯ್ಯ, ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷ ಕೆ.ವೇದಮೂರ್ತಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ನವಚೇತನ್, ಮಹಿಳಾ ಮೋರ್ಚಾ ಅಧ್ಯಕ್ಷೆ ಸುಮಿತ್ರಮ್ಮ, ನಗರ ಅಧ್ಯಕ್ಷ ಟಿ.ಕೆ.ಧನುಷ್, ವಿದ್ಯಾವಾಹಿನಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಪ್ರದೀಪ್‍ಕುಮಾರ್, ಮುಖಂಡರಾದ ಟಿ.ಹೆಚ್.ಹನುಮಂತರಾಜು, ಸಂದೀಪ್‍ಗೌಡ, ಭೈರಣ್ಣ, ವಿರೂಪಾಕ್ಷಪ್ಪ, ಸತ್ಯಮಂಗಲ ಜಗದೀಶ್, ಹೆಚ್.ಹನುಮಂತರಾಜು, ಅಕ್ಷಯ್ ಚೌಧರಿ, ಮಲ್ಲಿಕಾರ್ಜುನ್, ಮನೋಹರಗೌಡ, ಪುಟ್ಟರಾಜು, ಮಂಜುನಾಥ್, ಅಂಜನಮೂರ್ತಿ, ಮಲ್ಲಸಂದ್ರ ಶಿವಣ್ಣ, ಎನ್‍ಸಿಸಿ ಅಧಿಕಾರಿಗಳಾದ ರಾಮಲಿಂಗಾರೆಡ್ಡಿ, ಪ್ರದೀಪ್‍ಕುಮಾರ್ ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಸಂಘಸಂಸ್ಥೆಗಳ ಪ್ರಮುಖರು, ಸಾರ್ವಜನಿಕರು ಏಕತಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *