ತುಮಕೂರು: ನಗರದ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರ 50ನೇ ಹುಟ್ಟುಹಬ್ಬವನ್ನು ಶಾಸಕರ ಅಭಿಮಾನಿ ಬಳಗ ಗುರುವಾರ ಶಾಸಕರ ಕಚೇರಿ ಆವರಣದಲ್ಲಿ ಏರ್ಪಡಿಸಿತ್ತು. ಸಾವಿರಾರು ಜನ ಬಂದು ಶಾಸಕರಿಗೆ ಶುಭಾ ಕೋರಿದರು.
ಹುಟ್ಟುಹಬ್ಬ ಆಚರಣೆಗಾಗಿ ವೇದಿಕೆ ಇಲ್ಲ, ಅನಗತ್ಯ ಭಾಷಣಗಳಿಲ್ಲ, ಕೇಕ್ ಕತ್ತರಿಸಿ ಹಂಚಲಿಲ್ಲ, ಹಾರ, ತುರಾಯಿ, ಮೈಸೂರು ಪೇಟ ತೊಡಿಸಲಿಲ್ಲ, ಪಟಾಕಿ ಸಿಡಿಸಿ ಸಂಭ್ರಮಿಸಲಿಲ್ಲ. ಆಡಂಬರದ ಆಚರಣೆಯ ಬದಲು ಸಮಾಜಮುಖಿ ಸೇವೆಗೆ ಹುಟ್ಟುಹಬ್ಬದ ಆಚರಣೆ ಸೀಮಿತವಾಗಿತ್ತು.
ಶಾಸಕರ ಅಭಿಮಾನಿ ಬಳಗದವರು ಮೊದಲಿಗೆ ಸೈನಿಕರ ಕಲ್ಯಾಣ ನಿಧಿಗೆ ಒಂದು ಲಕ್ಷ ರೂ.ಗಳ ದೇಣಿಗೆಯ ಚೆಕ್ ನೀಡುವ ಮೂಲಕ ಶಾಸಕರ ಜನ್ಮದಿನದ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಇದಕ್ಕೂ ಮೊದಲು ಶಾಸಕ ಜ್ಯೋತಿಗಣೇಶ್ ಅವರ ಮನೆಗೆ ಆಗಮಿಸಿದ್ದ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿಗಳ ಪಾದಪೂಜೆ ನೆರವೇರಿಸಿದ ಶಾಸಕರು, ಶ್ರೀಗಳ ಆಶೀರ್ವಾದ ಪಡೆದರು. ಜೊತೆ ಹುಟ್ಟುಹಬ್ಬದ ಸಂದರ್ಭದಲ್ಲಿ ತಂದೆ, ಮಾಜಿ ಸಂಸದ ಜಿ.ಎಸ್.ಬಸವರಾಜು ಹಾಗೂ ತಾಯಿಯ ಆಶೀರ್ವಾದ ಪಡೆದರು.
ಈ ದಿನ ಕಾರ್ಮಿಕರ ದಿನಾಚರಣೆಯೂ ಇದ್ದಿದ್ದರಿಂದ ಶಾಸಕರ ಅಭಿಮಾನಿ ಬಳಗವು ಶ್ರಮಿಕರಿಗೆ, ಕಾರ್ಮಿಕರಿಗೆ ವಿವಿಧ ಸವಲತ್ತುಗಳ ಸೇವಾಗೌರವ ಸಮರ್ಪಿಸಿದರು. ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶಾಸಕರಿಗೆ ಜನ್ಮದಿನದ ಶುಭಾಶಯ ಕೋರಿದರು. ಸರಳ, ಸಜ್ಜನಿಕೆ, ಎಲ್ಲರೊಂದಿಗೆ ಬೆರೆಯುವ ಗುಣಸ್ವಭಾವದ ಶಾಸಕ ಜ್ಯೋತಿಗಣೇಶ್ ಅವರು ಮತ್ತಷ್ಟು ಜನಪರ ಕೆಲಸ ಮಾಡಿ ನಗರದ ಜನರಿಗೆ ನೆರವಾಗಲಿ ಎಂದು ಆಶಿಸಿದರು.
ಇದೇ ಮೊದಲ ಬಾರಿಗೆ ಪಾರ್ಲಿಮೆಂಟ್ನಲ್ಲಿ ಬಸವ ಜಯಂತಿ ಆಚರಿಸಲಾಗಿದೆ. ಬಸವಣ್ಣನವರ ಅನುಭವ ಮಂಟಪದ ಕೆಲಸವನ್ನು ಸಂಸತ್ನಲ್ಲಿ ಮಾಡಲಾಗುತ್ತದೆ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದರು. ಈ ಮೂಲಕ ಬಸವಣ್ಣನ ತತ್ವ ಆದರ್ಶಗಳನ್ನು ವಿಶ್ವಕ್ಕೆ ಸಾರುವ ಕೆಲಸವನ್ನು ಭಾರತ ಸರ್ಕಾರ ಮಾಡುತ್ತಿದೆ ಎಂದರು.
ಕಾರ್ಮಿಕರು ಈ ದೇಶದ ಅಭಿವೃದ್ಧಿಯ ಶಕ್ತಿ, ವಿಶೇಷವಾಗಿ ಪೌರಕಾರ್ಮಿಕರ ಸೇವೆಯನ್ನು ಎಲ್ಲರೂ ಗೌರವಿಸಬೇಕು. ಮೋದಿಯವರು ಪೌರಕಾರ್ಮಿಕರ ಪಾದಪೂಜೆ ಮಾಡಿ ಅವರ ಸೇವೆಯನ್ನು ಗೌರವಿಸಿದ್ದಾರೆ ಎಂದು ಹೇಳಿದರು.
ಜಿಲ್ಲೆಯ ಶಾಸಕರು, ಮಾಜಿ ಶಾಸಕರು, ಬಿಜೆಪಿಯ ಹಲವಾರು ಮುಖಂಡರು, ಸಂಘಸಂಸ್ಥೆಗಳ ಪ್ರತಿನಿಧಿಗಳು, ವಿವಿಧ ಸಮಾಜಗಳ ಪ್ರಮುಖರು ಸೇರಿದಂತೆ ಸಾವಿರಾರು ಜನ ಆಗಮಿಸಿ ಶಾಸಕ ಜ್ಯೋತಿಗಣೇಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು. ಆಗಮಿಸಿದ್ದ ಎಲ್ಲರಿಗೂ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.
ಶಾಸಕರ ಹುಟ್ಟುಹಬ್ಬದ ಪ್ರಯುಕ್ತ ವಿವಿಧ ಸಾರ್ವಜನಿಕ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಆರೋಗ್ಯ ತಪಾಸಣಾ ಶಿಬಿರ, ಕೃತಕ ಕೈ, ಕಾಲು ಜೋಡಣಾ ಶಿಬಿರ, ರಕ್ತದಾನ ಶಿಬಿರ, ನೇತ್ರ ತಪಾಸಣೆ, ಬೀದಿಬದಿ ವ್ಯಾಪಾರಿಗಳಿಗೆ ನೆರಳಾಗಲು ಕೊಡೆ ವಿತರಣೆ, ಆಟೋ ಚಾಲಕರಿಗೆ ಸಮವಸ್ತ್ರ, ದಿನಪತ್ರಿಕೆ ವಿತರಕರಿಗೆ ಜರ್ಕಿನ್ ವಿತರಣೆ, ಗೋಶಾಲೆಗಳಿಗೆ ಮೇವು ವಿತರಿಸಲಾಯಿತು. ಪೌರಕಾರ್ಮಿಕರಿಗೆ ಗೃಹಬಳಕೆ ವಸ್ತುಗಳ ಹಂಚಿಕೆ, ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ವಿತರಣೆ ಮಾಡಲಾಯಿತು.
ಇದಲ್ಲದೆ, ಹಿರಿಯ ನಾಗರೀಕರಿಗೆ ಆಯುಷ್ಮಾನ್ ಕಾರ್ಡ್, ಕಟ್ಟಡ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯ ಕಾರ್ಡ್, ವಾಹನ ಚಾಲಕರಿಗೆ ವಿಮಾ ಯೋಜನೆಯ ಕಾರ್ಡ್ ವಿತರಿಸಲಾಯಿತು. ಅಭಿಮಾನಿಗಳು ನಗರದ ವಿವಿಧ ಬಡಾವಣೆಗಳಲ್ಲಿ ಅಲ್ಲಿನ ದೇವಸ್ಥಾನಗಳಲ್ಲಿ ಶಾಸಕರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ವಿವಿಧೆಡೆ ಗಿಡನೆಡುವ ಕಾರ್ಯಕ್ರಮ, ಗ್ರಂಥಾಲಯಗಳಿಗೆ ಪುಸ್ತಕ, ಪೀಠೋಪಕರಣ ವಿತರಣೆ ಸೇರಿದಂತೆ ವಿವಿಧ ಸೇವಾಕಾರ್ಯಕ್ರಮಗಳೊಂದಿಗೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರ ಜನ್ಮದಿನವನ್ನು ಸ್ಮರಣೀಯವಾಗಿಸಿದರು.
ಶಾಸಕರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಗರದ ಎಲ್ಲಾ 35 ವಾರ್ಡ್ಗಳ ವ್ಯಾಪ್ತಿಯಲ್ಲಿ ಅಭಿಮಾನಿಗಳು ಐದಾರು ದಿನಗಳಿಂದ ಸ್ಮಶಾನ, ಶಾಲಾ ಆವರಣ, ಉದ್ಯಾನವನ, ದೇವಸ್ಥಾನಗಳ ಆವರಣ, ಹೀಗೆ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮ ಹಮ್ಮಿಕೊಂಡು ಶಾಸಕರ ಜನ್ಮದಿನವನ್ನು ಸೇವಾಕಾರ್ಯವಾಗಿಸಿ ಸಂಭ್ರಮಿಸಿದರು.