ತುಮಕೂರು ನಗರದ ಕುಡಿಯುವ ನೀರಿನ ಮೂಲವಾದ ಬುಗುಡನಹಳ್ಳಿ ಕೆರೆಗೆ ಹೇಮಾವತಿ ನೀರು ಹರಿದ ಹಿನ್ನಲೆಯಲ್ಲಿ ತುಮಕೂರು ನಗರ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಮಹಾನಗರಪಾಲಿಕೆಯ ಸರ್ವಪಕ್ಷ ಸದಸ್ಯರುಗಳು ಹಾಗೂ ಮುಖಂಡರುಗಳೊಂದಿಗೆ ಕೆರೆಗೆ ಭೇಟಿ ನೀಡಿ ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಕಳೆದ 4 ವರ್ಷಗಳಿಂದ ತುಮಕೂರು ನಗರದ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಉಂಟಾಗದಂತೆ ನಿರಂತರವಾಗಿ ನಿಗದಿತ ಸಮಯದಲ್ಲಿ ಹೇಮಾವತಿ ನೀರು ಬುಗುಡನಹಳ್ಳಿ ಕೆರೆಗೆ ಬರುತ್ತಿದ್ದು, ವರ್ಷಕ್ಕೆ ಎರಡು ಬಾರಿ ಹೇಮಾವತಿ ನೀರು ಬಂದಿರುವುದನ್ನು ಸಹ ಈ ಸಂದರ್ಭದಲ್ಲಿ ಸ್ಮರಿಸಿದರು.
ತುಮಕೂರು ನಗರದ ಕುಡಿಯುವ ನೀರಿಗೆ ಯಾವುದೇ ತೊಂದರೆ ಉಂಟಾಗದಂತೆ ಹೇಮಾವತಿ ನೀರು ಹರಿಯಲು ಕಾರಣರಾದ ತುಮಕುರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ರವರಿಗೂ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್.ರಾಜಣ್ಣ ರವರಿಗೆ ತುಮಕೂರು ನಗರದ ನಾಗರೀಕರ ಪರವಾಗಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅಭಿನಂದನೆಯನ್ನು ಸಲ್ಲಿಸಿದರು.
ಈ ಭೇಟಿಯ ಸಂದರ್ಭದಲ್ಲಿ ತುಮಕೂರು ಮಹಾನಗರಪಾಲಿಕೆಯ ಮಾಜಿ ಮೇಯರ್ ಬಿ.ಜಿ.ಕೃಷ್ಣಪ್ಪ, ಉಪಮೇಯರ್ ಟಿ.ಕೆ.ನರಸಿಂಹಮೂರ್ತಿ, ವಿರೋಧ ಪಕ್ಷದ ನಾಯಕರಾದ ವಿಷ್ಣುವರ್ಧನ್, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ನಯಾಜ್ ಅಹಮದ್, ಲಕ್ಷ್ಮೀನರಸಿಂಹರಾಜು, ಮಲ್ಲಿಕಾರ್ಜುನ್, ಸಿ.ಎನ್.ರಮೇಶ್, ಮಂಜುನಾಥ್, ಮುಖಂಡರುಗಳಾದ ಇಂದ್ರಕುಮಾರ್, ಮನೋಹರ್ಗೌಡ, ಮಹೇಶ್ ಬಾಬು, ಪುಟ್ಟರಾಜು ಹಾಜರಿದ್ದರು.